ಜನರಿಗೆ ಹಗಲಿನಲ್ಲಿ ಚುಕ್ಕೆ ತೋರಿಸುವ ಕೆಲಸವನ್ನು ಕಾಂಗ್ರೆಸ್ ಕೈಬಿಡಬೇಕು. ಇಂಥ ಹುಸಿ ಭರವಸೆಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ರಾಜು ಕುರಡಗಿ ಹೇಳಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಗದಗ
ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಬುರುಡೆ ಬಿಡುತ್ತಿರುವ ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸದನದಲ್ಲಿ ಕತ್ತಲೆಯಲ್ಲೇ ಬಜೆಟ್ ಮಂಡನೆ ಮಾಡಿದ್ದನ್ನು ಮರೆತಿದೆ. ಆದರೆ ರಾಜ್ಯದ ಜನರಿಗೆ ಈ ಸಂಗತಿ ನೆನಪಿನಲ್ಲಿದ್ದು, ಅಧಿಕಾರದಾಸೆಗೆ ಇಲ್ಲಸಲ್ಲದ ಆಮಿಷ ತೋರಿಸುವುದರಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರಾದ ರಾಜು ಕುರಡಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಆಡಳಿತದಲ್ಲೇ ಲೋಡ್ ಶೆಡ್ಡಿಂಗ್ ಎಂಬ ಭೂತ ಹುಟ್ಟಿಕೊಂಡಿದ್ದು. ರೈತ ಸಮೂಹ ಲೋಡ್ ಶೆಡ್ಡಿಂಗ್ನಿಂದ ನಾನಾ ಕಷ್ಟ ಅನುಭವಿಸಿತು. ರಾಜ್ಯದ ಎಲ್ಲಾ ಎಸ್ಕಾಂಗಳನ್ನು ವಿನಾಶದ ಅಂಚಿಗೆ ತಳ್ಳಿ ಇಡೀ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನೇ ಹದಗೆಡಿಸಿದ್ದ ಕಾಂಗ್ರೆಸ್ನಿಂದ ಇಂಥ ಕೊಡುಗೆ ಸಿಗಬಹುದು ಎಂದು ನಿರೀಕ್ಷಿಸುವಷ್ಟು ಜನರು ದಡ್ಡರಲ್ಲ.
ಬಿಜೆಪಿ ಸರ್ಕಾರ ಬಂದನಂತರ 6000 ಕೋಟಿ ರೂಪಾಯಿ ಖರ್ಚು ಮಾಡಿ ಎಸ್ಕಾಂಗಳನ್ನು ಬಲಪಡಿಸಿದೆ. ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಿದ್ಯುತ್ ಸಚಿವರಾಗಿದ್ದಾಗ ವಿದ್ಯುತ್ ಕೇಳಿದ ರೈತನನ್ನು ಬಂಧನಕ್ಕೆ ಒಳಪಡಿಸಿದ್ದನ್ನು ಜನರು ಮರೆತಿಲ್ಲ. ಹೀಗಿರುವಾಗ ಜನರಿಗೆ ಹಗಲಿನಲ್ಲಿ ಚುಕ್ಕೆ ತೋರಿಸುವ ಕೆಲಸವನ್ನು ಕಾಂಗ್ರೆಸ್ ಕೈಬಿಡಬೇಕು. ಇಂಥ ಹುಸಿ ಭರವಸೆಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.