ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ವೇಗದ ಬದುಕಿನಲ್ಲಿ ಹೆಚ್ಚುತ್ತಿರುವ ಒತ್ತಡ, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಜೀವನಶೈಲಿ ಕಾಯಿಲೆಗಳಿಗೆ ಯೋಗವೇ ಪರಿಣಾಮಕಾರಿ ಪರಿಹಾರ ಎಂದು ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಜುಬೇದಾ ತಿಗಳೇರ ಹೇಳಿದರು.
ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ಆಯುಷ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆರಂಭಗೊಂಡ ಯೋಗ ಮತ್ತು ಯೋಗಾಸನ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಈಶ್ವರೀಯ ವಿಶ್ವ ವಿದ್ಯಾಲಯದ ಆವರಣಕ್ಕೆ ಕಾಲಿಟ್ಟ ಕ್ಷಣದಿಂದಲೇ ಪ್ರಶಾಂತ ವಾತಾವರಣ ಅನುಭವವಾಗುತ್ತದೆ. ಇಂತಹ ಶಾಂತ ವಾತಾವರಣದಲ್ಲಿ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಸಮಾಜದಲ್ಲಿ ದಿನದಿಂದ ದಿನಕ್ಕೆ ಒತ್ತಡ, ಬಿಪಿ, ಶುಗರ್ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಯೋಗದ ಮಹತ್ವವನ್ನು ಜನರಿಗೆ ತಲುಪಿಸುವ ಕಾರ್ಯ ಅತ್ಯಂತ ಶ್ಲಾಘನೀಯ” ಎಂದು ಅವರು ಹೇಳಿದರು.
ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕ ಮಾತನಾಡಿ, ಯೋಗವು ದಿವ್ಯ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಗದಗದ ಜನತೆ ಆರೋಗ್ಯವಂತರಾಗಿ, ಒತ್ತಡಮುಕ್ತವಾಗಿ, ಪ್ರೀತಿ, ಸ್ನೇಹ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಬಸವೇಶ್ವರ ನಗರ, ಸಿದ್ಧರಾಮೇಶ್ವರ ನಗರ ಹಾಗೂ ಬೆಟಗೇರಿ ಹೊಸಪೇಟೆ ಚೆಕ್ಪೋಸ್ಟ್ನಲ್ಲಿರುವ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಜೂನ್ 30ರವರೆಗೆ ಪ್ರತಿದಿನ ಬೆಳಿಗ್ಗೆ 6ರಿಂದ 7.30ರವರೆಗೆ ಉಚಿತವಾಗಿ ಯೋಗ ಮತ್ತು ಯೋಗಾಸನ ತರಬೇತಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುತ್ತಿಗೆದಾರ ಆಂಜನೇಯ ಕಟಗಿ ಮಾತನಾಡಿ, ಸಿದ್ಧರಾಮೇಶ್ವರ ನಗರದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯ ನಿರಂತರವಾಗಿ ನಡೆಸುತ್ತಿರುವ ಸೇವಾ ಕಾರ್ಯಗಳಿಂದ ಸುತ್ತಮುತ್ತಲಿನ ಜನರ ಬದುಕು ಮತ್ತು ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಹೇಳಿದರು.
“ಬ್ರಹ್ಮಾಕುಮಾರಿಯರ ತ್ಯಾಗ, ತಪಸ್ಸು, ನಿಸ್ವಾರ್ಥ ಸೇವಾ ಮನೋಭಾವ ಮತ್ತು ಸದಾ ಮುಖದಲ್ಲಿರುವ ಮಂದಹಾಸ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ. ಈ ಯೋಗ ಶಿಬಿರದಲ್ಲಿ ಮೊದಲು ನಾನು ಭಾಗವಹಿಸಿ, ಮತ್ತಷ್ಟು ಜನರನ್ನು ಭಾಗವಹಿಸುವಂತೆ ಪ್ರೇರೇಪಿಸುತ್ತೇನೆ” ಎಂದು ತಿಳಿಸಿದರು. ಇದೇ ವೇಳೆ ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲ ಅವರನ್ನು ಸ್ಮರಿಸಿದರು.
ಆಯುಷ್ಯ ಇಲಾಖೆ ನಿಯೋಜಿಸಿದ್ದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಪರಿಣಿತರಾದ ನೀಲಾಂಬಿಕಾ ಚವುಡಿ ಹಾಗೂ ವಸಂತ ಹಲಗಿ ಅವರು ಆಸನ ಮತ್ತು ಪ್ರಾಣಾಯಾಮದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಬಿ.ಕೆ. ಸಾವಿತ್ರಿ ನಿರೂಪಿಸಿದರು. ಬಿ.ಕೆ. ರೇಖಾ ವಂದಿಸಿದರು.
“ರೋಗಮುಕ್ತ, ಒತ್ತಡಮುಕ್ತ ಸಮಾಜ ನಿರ್ಮಾಣಕ್ಕೆ ಯೋಗವೇ ದಿವ್ಯ ಮಾರ್ಗ”
ಡಾ. ಜುಬೇದಾ ತಿಗಳೇರ
ಜಿಲ್ಲಾ ಆಯುಷ್ಯ ಅಧಿಕಾರಿ



