ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಯೋಗ ಸಹಕಾರಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಗೆ, ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ವಿಶ್ವ ಸಂಸ್ಥೆ ಮನ್ನಣೆ ನೀಡಿತು. ಇಂದು ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳು, ಕೋಟ್ಯಾಂತರ ಜನರು ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ.
ಯೋಗ ವೈಯಕ್ತಿಕವಾಗಿ ಲಾಭಧಾಯವಾಗಿದೆ. ಯೋಗ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಪ್ರತಿನಿತ್ಯ ಯೋಗ ಮಾಡುವರಿಗೆ ಕೊರೊನಾ ಹೆಚ್ಚಾಗಿ ಬಾಧಿಸಿಲ್ಲ. ಇದು ನನ್ನ ವೈಯಕ್ತಿಕ ಅನುಭವವೂ ಆಗಿದೆ.
ಕೋವಿಡ್ ಸಾಂಕ್ರಮಿಕ ಹಿನ್ನಲೆಯಲ್ಲಿ ವರ್ಚುಯಲ್ ಮೂಲಕ ಯೋಗ ದಿನಾಚರಣೆ ಚಾಲನೆ ನೀಡಲಾಗಿದೆ. ಸೀಮಿತ ಸಂಖ್ಯೆಯಲ್ಲಿ ಧ್ಯಾನ ಮಂದಿರದಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಈ ಬಾರಿ ಯೋಗ ದಿನಾಚರಣೆ ಘೋಷವಾಕ್ಯ “ಮನೆಯಲ್ಲಿ ಇದ್ದೇ ಯೋಗ ಮಾಡಿ”(Be with Yoga, Be at Home) ಆಗಿದೆ. ಜನರು ಪ್ರತಿನಿತ್ಯ ಯೋಗ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಹುಬ್ಬಳ್ಳಿ ಧಾರವಾಡ ಜನತೆಗೆ ಯೋಗ ಹಾಗೂ ಧಾನ್ಯದ ಮಹತ್ವ ಸಾರಲು ಪಿರಾಮಿಡ್ ಧಾನ್ಯಮಂದಿರವನ್ನು ನಿರ್ಮಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಜಿ.ಪಂ. ಸಿ.ಇ.ಓ ಡಾ.ಬಿ.ಸುಶೀಲ, ಹು-ಧಾ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಯಶವಂತ ಮದೀನಕರ್, ಜಿಲ್ಲಾ ಆಯುಷ್ಯಾಧಿಕಾರಿ ಡಾ.ಮೀನಾಕ್ಷಿ, ತಹಶಿಲ್ದಾರರ ಶಶಿಧರ ಮಾಡ್ಯಾಳ ಭಾಗವಹಸಿದ್ದರು.
ಯೋಗ ಶಿಕ್ಷಕ ಸಂಗಮೇಶ್ ನಿಂಬರಗಿ ಅವರ ತಂಡ ರಾಷ್ಟ್ರೀಯ ಆಯುಷ್ಯ ಮಾರ್ಗಸೂಚಿಗಳ ಅನುಸಾರ ನಿಗದಿ ಪಡಿಸಲಾದ ಯೋಗಾಸನಗಳ ಕ್ರಮಗಳ ಕುರಿತು ಪ್ರಾತ್ಯಕ್ಷತೆ ನೀಡಿ, ಅವುಗಳ ಉಪಯೋಗ ತಿಳಿಸಿದರು.