20.9 C
Gadag
Monday, October 2, 2023

ಬಿಜೆಪಿಗೆ ಸೇರ್ತಿನಿ ಅಂದ್ರೆ ತಾಲೂಕುಗಳನ್ನೇ ಜಿಲ್ಲೆ ಮಾಡ್ತಾರೆ: ತಂಗಡಗಿ ವ್ಯಂಗ್ಯ

Spread the love

ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಚುನಾವಣೆಯಲ್ಲಿ ಗೆಲ್ಲಲಿ, ಶರಣಾಗತಿ ಆಗ್ತೇವೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಈಗ ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆ ನೀಡುವ ಅಗತ್ಯ ಇರಲಿಲ್ಲ. ಆನಂದ್ ಸಿಂಗ್ ಸಂತೋಷಕ್ಕಾಗಿ ಬಳ್ಳಾರಿ ಇಬ್ಭಾಗ ಮಾಡುವ ಹುನ್ನಾರವಿದು. ಬೇರೆ ಪಕ್ಷದವರು ಬಿಜೆಪಿಗೆ ಸೇರೋದಾದ್ರೆ ತಾಲೂಕುಗಳನ್ನೇ ಜಿಲ್ಲೆಯನ್ನಾಗಿ‌ ಮಾಡ್ತಾರೆ ಬಿಜೆಪಿಯವರು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ರವಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನಾಯಕರನ್ನು ಹುಟ್ಟು ಹಾಕುವ, ಬೆಳೆಸುವ ಸಾಮರ್ಥ್ಯ ಇಲ್ಲ. ಅದು ಕೇವಲ ಕಾಂಗ್ರೆಸ್‌ಗೆ ಮಾತ್ರ ಇರೋದು. ವಲಸೆ ಹೋದವರನ್ನೇ ಮಂತ್ರಿಗಳನ್ನಾಗಿ ಮಾಡಿದೆ ಬಿಜೆಪಿ. ಮೂಲ ಬಿಜೆಪಿಯವರು ಎಷ್ಟು ಜನ ಮಂತ್ರಿಗಳಿದ್ದಾರೆ ಲೆಕ್ಕ ಹಾಕಿ ನೋಡೋಣ? ಎಂದು ಅವರು ಪ್ರಶ್ನಿಸಿದರು.

ಹಾಗೆ ಬೇರೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದವರೆಲ್ಲ ಇವಿಎಂ ಮಷೀನ್ ದೋಷದಿಂದ ಗೆದ್ದಿದ್ದಾರೆ. ಶಿರಾದಲ್ಲಿ ಜಯಚಂದ್ರ ಅವರಿಗೆ ಜನಬೆಂಬಲ ಇತ್ತು. ಆದರೂ ಅಲ್ಲೂ ಬಿಜೆಪಿ ಗೆದ್ದಿದೆ ಅಂದ್ರೆ ಏನರ್ಥ? ದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಬಳಸಿ ಗೆಲ್ಲಲಿ. ಹಾಗೊಂದು ವೇಳೆ ಗೆದ್ದರೆ ಬಿಜೆಪಿಗೆ ನಾವು ಶರಣಾಗತಿ ಆಗುತ್ತೇವೆ. ಮುಂಬರುವ ಮಸ್ಕಿ ಚುನಾವಣೆಯಲ್ಲೂ ಇವಿಎಂ ಬಳಸಿದರೆ ನಮಗೆ ಫಲಿತಾಂಶದ ಬಗ್ಗೆ ಅನುಮಾನ ಇರುತ್ತೆ ಎಂದು ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ 10-15 ವರ್ಷಗಳಿಂದ ಚುನಾವಣೆ ನೋಡುತ್ತಿರಬಹುದು. ನಾನು 19ನೇ ವಯಸ್ಸಿನಲ್ಲಿ ಕಾಲೇಜು ದಿನಗಳಲ್ಲೇ ಚುನಾವಣೆ ಎದುರಿಸಿದವನು. ಅವರು ಇಲ್ಲಿಗೆ ಬರೋದು ಜಿಲ್ಲೆಯ ಅಭಿವೃದ್ಧಿ ಮಾಡುವುದಕ್ಕಲ್ಲ, ಬದಲಾಗಿ ಸೂಟ್‌ಕೇಸ್ ಒಯ್ಯಲಿಕ್ಕೆ. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿ ಬೈತಾರೆ. ಆನಂತರ ಬೇರೊಂದು ಜಾಗದಲ್ಲಿ ಅವರನ್ನು ಕರೆಸಿಕೊಂಡು ಗಂಟುಮೂಟೆ ಕಟ್ತಾರೆ. ನಿಜವಾಗಲೂ ಅಧಿಕಾರಿಗಳು ತಪ್ಪು ಮಾಡಿದ್ದರೆ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿಯನ್ನಾದರೂ ಅಮಾನತು ಮಾಡಬೇಕಿತ್ತಲ್ಲವೇ? ಎಂದು ಅವರು ಅನುಮಾನ ಪಟ್ಟರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಲತಿ ನಾಯಕ್, ಶೈಲಜಾ ಹಿರೇಮಠ, ಅಕ್ಬರ್ ಪಲ್ಟಾನ್, ಗುರು ಹಲಗೇರಿ, ಮುತ್ತುರಾಜ ಕುಷ್ಟಗಿ ಮತ್ತಿತರರು ಇದ್ದರು

ಬಣ್ಣ ಬಯಲಾಗುತ್ತೆ: ಹಿಟ್ನಾಳ

ಕೊಪ್ಪಳ: ಬಿಜೆಪಿ ಆಡಳಿತ ಜನರಿಗೆ ರೋಸಿ ಹೋಗಿದೆ. ಈಗಾಗಲೇ ಜನರಿಗೆ ಬಿಜೆಪಿ ಬಂಡವಾಳ ಗೊತ್ತಾಗಿದೆ. ಇನ್ನೂ ಎರಡು-ಮೂರು ತಿಂಗಳಲ್ಲಿ ಬಿಜೆಪಿ ಬಣ್ಣ ಬಯಲಾಗಲಿದೆ. ಬಿಜೆಪಿ ಸೇರುವವರ ಸಂಖ್ಯೆ ಜಾಸ್ತಿಯಾಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರು ಹರಿವು ಹೆಚ್ಚುತ್ತಿದೆ. ಕೆಲವೇ ತಿಂಗಳು ಕಾದು ನೋಡಿ, ಗೊತ್ತಾಗುತ್ತೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ ನೀಡಿ ಸಂಚಲನ ಮೂಡಿಸಿದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!