ವಿಜಯಸಾಕ್ಷಿ ಸುದ್ದಿ, ಗದಗ;
ಹಾಡುಹಗಲೇ ಯುವಕನ ಮೇಲೆ ನಾಲ್ಕು ಜನರ ತಂಡವೊಂದು ಲಾಂಗ್, ಮಚ್ಚು ಸೇರಿದಂತೆ ಮಾರಕಾಸ್ತ್ರದಿಂದ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸರು ರೌಡಿ ಶೀಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪುರಸಭೆ ಸದಸ್ಯ ಪರಾರಿಯಾಗಿದ್ದಾರೆ.
ಅಬ್ದುಲ್ ಮೈನುದ್ದೀನ ಆಡೂರ, ನಿಜಾಮ್ ಮೈನುಸಾಬ್ ಚಂಗಾಪೂರಿ, ಹಜ್ಜು ಅಲಿಯಾಸ್ ಹಜರತ್ ರಿಯಾಜ್ ಅಹ್ಮದ್ ಶಿರೂರ ಎಂಬುವವರನ್ನು ಬಂಧಿಸಲಾಗಿತ್ತು, ಫಿರ್ದೋಸ್ ಮೈನುದ್ದಿನ ಆಡೂರ ಎಂಬುವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿರುವ ಮಾರಕಾಸ್ತ್ರ, ಹಾಗೂ ಕಾರ ಜಪ್ತಿ ಮಾಡಲಾಗಿದೆ.
ಆಸ್ತಿಗೆ ಸಂಬಂಧಿಸಿದಂತೆ ವಿವಾದ ಇದ್ದು, ಅದೇ ಸೇಡಿನಿಂದ ಮೊನ್ನೆ ಶನಿವಾರ ಅ.23 ರಂದು ಹಾಡುಹಗಲೇ, ಬೈಕ್ ಮೇಲೆ ಮನೆಯತ್ತ ಹೊರಟಿದ್ದ ನೂರ ಅಹ್ಮದ್ ಮಕಾನದಾರನನ್ನು ಅಡ್ಡಗಟ್ಟಿ ಲಾಂಗ್, ಮಚ್ಚು ಹಾಗೂ ಕೊಡ್ಲಿಯಿಂದ ಬಂಧಿತ ಆರೋಪಿಗಳು ದಾಳಿ ಮಾಡಿದ್ದರು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಂಭೀರ ಗಾಯಗೊಂಡಿದ್ದ ನೂರ ಅಹ್ಮದ ಮಕಾನದಾರ ಎಂಬಾತ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಲಾಗಿತ್ತು.
ಇದನ್ನೂ ಓದಿ ಹಾಡುಹಗಲೇ ಮೂವರಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ಬೆಚ್ಚಿದ ಜನ
ಹಾಡುಹಗಲೇ ನಡೆದ ಈ ಕೃತ್ಯದಿಂದಾಗಿ ಪೊಲೀಸರ ಮೇಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಪಿಎಸ್ಐ ಡಿ ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ.