ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಜ್ಯದಲ್ಲಿಯ ಮಠಗಳು ಮತ್ತು ಪೀಠಾಧಿಪತಿಗಳಾದವರಿಗೆ ರಾಜಕೀಯ ಪ್ರವೇಶ ನಿಷಿದ್ಧ. ಅವರು ಕೇವಲ ಧರ್ಮಪ್ರಚಾರ ಮಾಡಬೇಕು. ದಿಂಗಾಲೇಶ್ವರ ಸ್ವಾಮೀಜಿಗಳು ಬಾಲೇಹೊಸೂರಿನಲ್ಲಿ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿದ್ದರಿಂದ ಅವರನ್ನು ಶಿರಹಟ್ಟಿ ಮಠಕ್ಕೆ ಕರೆತರುವುದರ ಮೂಲಕ ಸಿದ್ಧಗಂಗಾ ಹಾಗೂ ಸುತ್ತೂರು ಮಠದಂತೆ ಶಿರಹಟ್ಟಿ ಮಠವು ಆಗಬೇಕೆನ್ನುವ ಆಸೆಯಿತ್ತು. ಇದೀಗ ಧಾರವಾಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಘೋಷಣೆ ಮಾಡಿದ್ದು ಸರಿಯಲ್ಲ. ಆದ್ದರಿಂದ, ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.
ಅವರು ಶುಕ್ರವಾರ ಶಿರಹಟ್ಟಿಯ ಶಿಕ್ಷಕರ ಭವನದಲ್ಲಿ ಭಕ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡಿ, ದಿಂಗಾಲೇಶ್ವರ ಸ್ವಾಮೀಜಿ ಈ ಹಿಂದೆ ಮಾಜಿ ಸಚಿವ ಸಿ.ಸಿ. ಪಾಟೀಲ ಅವರೊಂದಿಗೂ ಸಹ ವಿನಾಕಾರಣ ಸುದ್ದಿಯಲ್ಲಿದ್ದರು. ಇತ್ತೀಚೆಗೆ ಗದಗನ ತೋಂಟದಾರ್ಯ ಮಠದ ವಿಷಯದಲ್ಲೂ ಸಹ ವ್ಯತಿರಿಕ್ತ ನಿಲುವನ್ನು ಹೊಂದಿರುವುದು ಸರಿಯಲ್ಲ.
ಹುಬ್ಬಳ್ಳಿಯಲ್ಲಿ ಸಿದ್ದರಾಮ ಶ್ರೀಗಳ ಸುವರ್ಣಮಹೋತ್ಸವದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಬಹುದಿತ್ತು. ಈಗ ಯಾಕೆ ಚುನಾವಣೆಗೆ ನಿಲ್ಲತ್ತಿದ್ದಾರೆ? ಶಿರಹಟ್ಟಿಯ ಫಕೀರೇಶ್ವರ ಮಠ ಭಾವೈಕ್ಯತೆಯ ಮಠವಾಗಿದ್ದು, ಇಲ್ಲಿ ಎಲ್ಲ ಜಾತಿ-ಜನಾಂಗದ ಭಕ್ತರಿದ್ದಾರೆ. ಆದ್ದರಿಂದ ದಿಂಗಾಲೇಶ್ವರ ಸ್ವಾಮೀಜಿಗಳು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕು. ಸ್ಪರ್ಧಿಸುವುದೇ ಆದರೆ ಪೀಠತ್ಯಾಗ ಮಾಡಿ ಸ್ಪರ್ಧಿಸಲಿ ಎಂದರು.
ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ದಿಂಗಾಲೇಶ್ವರ ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡಬಾರದು. ಭಕ್ತರ ಮನಸ್ಸು ನೋಯಿಸುವ ಕೆಲಸವನ್ನು ಶ್ರೀಗಳು ಮಾಡಬಾರದು. ಈ ಬಗ್ಗೆ ಅಂತಿಮವಾಗಿ ಹಿರಿಯ ಶ್ರೀಗಳಾದ ಸಿದ್ದರಾಮ ಶ್ರೀಗಳ ಜೊತೆಗೆ ಚರ್ಚಿಸಿ ಮತ್ತೊಮ್ಮೆ ನಮ್ಮೆಲ್ಲರ ನಿಲುವನ್ನು ತಿಳಿಸಲಾಗುವುದು ಎಂದರು.
ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದ್ರಗೌಡ್ರ, ಸಣ್ಣವೀರಪ್ಪ ಹಳ್ಳೆಪ್ಪನವರ, ಚಂದ್ರಕಾಂತ ನೂರಶೆಟ್ಟರ, ಬಿ.ಡಿ. ಪಲ್ಲೇದ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಬಸವಾಜ ತುಳಿ, ಯಲ್ಲಪ್ಪ ಇಂಗಳಗಿ, ಶಿವು ಕಲ್ಯಾಣಿ, ಮಹೇಶ ಕಲ್ಲಪ್ಪನವರ, ಅಶೋಕ ವರವಿ, ಎಂ.ಸಿ.ಹಿರೇಮಠ, ಚನ್ನವೀರಪ್ಪ ಕಲ್ಯಾಣಿ, ಸಂದೀಪ ಕಪ್ಪತ್ತನವರ, ಸುಧೀರ ಜಮಖಂಡಿ, ಸುರೇಶ ಹವಳದ, ಶಿವರಾಜಗೌಡ ಪಾಟೀಲ, ಅಕ್ಬರಸಾಬ ಯಾದಗಿರಿ, ಜಗದೀಶ ತೇಲಿ, ಶರಣು ಹೊಸೂರ, ಬಸವರಾಜ ವಡವಿ ಮುಂತಾದವರು ಉಪಸ್ಥಿತರಿದ್ದರು.
ಎ.18ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಶ್ರೀಗಳು ಹೇಳಿದ್ದು, ಕಾವಿ ಬಟ್ಟೆ ಬಿಟ್ಟು ಚುನಾವಣೆ ಎದುರಿಸಲಿ. ಮತದಾರ ಪ್ರಭುಗಳು ಅಂತಿಮ ನಿರ್ಣಯ ಮಾಡುತ್ತಾರೆ. ಆದ್ದರಿಂದ ಈ ಕೂಡಲೇ ಶ್ರೀಗಳು ತಮ್ಮ ನಿಲುವನ್ನು ಬದಲಾಯಿಸಿ ಚುನಾವಣೆಯಿಂದ ಹಿಂದೆ ಸರಿಯಬೇಕು. ಇಲ್ಲದೇ ಹೋದಲ್ಲಿ ನಮ್ಮ ನಿಲುವನ್ನು ಸಹ ತೆಗೆದುಕೊಳ್ಳಲಾಗುವುದು ಎಂದು ಗಂಗಣ್ಣ ಮಹಾಂತಶೆಟ್ಟರ ಹೇಳಿದರು.



