ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ನಲ್ಲಿ ಹಾಡಹಗಲೇ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠಳ ಭೀಕರ ಹತ್ಯೆ ಇಡೀ ರಾಜ್ಯದ ಜನತೆ ಮತ್ತು ವಿದ್ಯಾರ್ಥಿಗಳಿಗೆ ಆಘಾತ ನೀಡಿದೆ. ಈ ಕೃತ್ಯವನ್ನು ಸಾರ್ವಜನಿಕವಾಗಿ ತೀವ್ರವಾಗಿ ಖಂಡಿಸುತ್ತೇವೆ ಎಂದು ತಾಲೂಕ ಜಂಗಮ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಇದರಲ್ಲಿ ಯಾವುದೇ ರಾಜಕೀಯ, ಜಾತಿಯ ಬಣ್ಣ ಬಳಿಯದೆ ನಿಷ್ಪಕ್ಷಪಾತ ತನಿಖೆ ಕೈಗೊಂಡು ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡುವದು ಅವಶ್ಯವಾಗಿದೆ. ನೇಹಾ ಹಿರೇಮಠ ಅವರ ಕುಟುಂಬದ ದುಃಖದಲ್ಲಿ ಇಡೀ ರಾಜ್ಯದ ಜನತೆ ಇದೆ. ನಿರಂಜನ ಹಿರೇಮಠ ಅವರ ಕುಟುಂಬಕ್ಕೆ ನ್ಯಾಯ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಈ ವೇಳೆ ಶಿವಯೋಗಿ ಗಡ್ಡದೇವರಮಠ, ರವಿ ಪುರಾಣಿಕಮಠ, ಎಂ.ಕೆ. ಕಳ್ಳಿಮಠ, ಮಹೇಶ್ವರಯ್ಯ ಹಿರೇಮಠ, ಶಿದ್ದಲಿಂಗೇಶ ಗೋಲಗೇರಿಮಠ, ಗಿರೀಶ ಕಲ್ಮಠ, ಪ್ರವೀಣ ಕುಲಕರ್ಣಿ, ಸೋಮಯ್ಯ ಕಲ್ಮಠ, ಗಂಗಾಧರ ಶಿಗ್ಲಿಮಠ, ಶಂಕ್ರಯ್ಯ ಹಿರೇಮಠ ಸೇರಿದಂತೆ ಸಂಘದ ತಾಲೂಕಿನ ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು. ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು.