ವಿಜಯಸಾಕ್ಷಿ ಸುದ್ದಿ, ರೋಣ : ಕರ್ನಾಟಕ ರಾಜ್ಯ ನಿವೃತ್ತ ಸಂಘದ ತಾಲೂಕಾ ಘಟಕಕ್ಕೆ ಅತಿ ಶೀಘ್ರದಲ್ಲಿ ನಿವೇಶನ ಒದಗಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುವುದು ಎಂದು ಖನಿಜ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ ಅಂಜುಮನ್ ಸಂಸ್ಥೆಯ ಶಾದಿಮಹಲ್ನಲ್ಲಿ ಜರುಗಿದ ರಾಜ್ಯ ಸರಕಾರ ನಿವೃತ್ತ ನೌಕರರ ಸಂಘದ ತಾಲೂಕಾ ಘಟಕ ಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರದ ಅಡಿಯಲ್ಲಿ ತಮ್ಮ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ನೌಕರರು ತಾಲೂಕಿನಲ್ಲಿ ಸಂಘಟನೆ ಕಟ್ಟಿದ್ದು ಸ್ವಾಗರ್ತರ್ಹ. ಸಂಘಟನೆಯಿದ್ದರೆ ನಿಮಗೆ ಸಿಗಬೇಕಾದ ಸೌಲಭ್ಯಗಳು ಸಕಾಲಕ್ಕೆ ದೊರೆಯುತ್ತವೆ ಎಂದರು.
ಸರಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿ 80 ವರ್ಷಗಳನ್ನು ಪೂರೈಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಿದ್ದು ಅತ್ಯಂತ ಮಾದರಿಯಾಗಿದೆ. ಹಿರಿಯ ಜೀವಗಳನ್ನು ಗೌರವಿಸಬೇಕು ಎನ್ನುವುದು ಹಿಂದಿನ ನೌಕರರು ಜ್ಞಾಪಿಸುತ್ತಿದ್ದರು ಎಂದು ಮೆಲಕು ಹಾಕಿದ ಶಾಸಕರು, ಈಗಿನ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ನಿವೃತ್ತ ನೌಕರರ ಸಲಹೆಗಳನ್ನು ಸ್ವೀಕರಿಸಬೇಕು ಮತ್ತು ಶಿಸ್ತಿನಿಂದ
ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ತಾವು ಸಲ್ಲಿಸಿರುವ ಬೇಡಿಕೆಗಳನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ನಿಮಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಾನ್ನಿಧ್ಯವನ್ನು ಗುರುಪಾದ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ.ಎಸ್. ಖತೀಬ ವಹಿಸಿದ್ದರು. ಬಾವಾಸಾಬ ಬೆಟಗೇರಿ, ವ್ಹಿ.ಬಿ. ಸೋಮನಕಟ್ಟಿಮಠ, ಎಲ್.ಎಸ್. ಹಂಚಿನಾಳ, ಸಿ.ಬಿ. ರಡ್ಡೆರ, ವಾಯ್.ಡಿ. ಗಾಣಿಗೇರ, ಸಿ.ಎಸ್. ದಾನಪ್ಪಗೌಡ್ರ ಸೇರಿದಂತೆ ನಿವೃತ್ತ ನೌಕರರು ಪಾಲ್ಗೊಂಡಿದ್ದರು.