ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಕೇಂದ್ರದಲ್ಲಿರುವ ಜೆ.ಟಿ. ಕಾಲೇಜ್ ಎದುರಿನ ರಸ್ತೆಯು ಗದಗ-ಬೆಟಗೇರಿ ಅವಳಿ ನಗರವನ್ನು ಜೋಡಿಸಿದ ಪ್ರಮುಖ ರಸ್ತೆಯಾಗಿದ್ದು, ಸದರಿ ಕಾಲೇಜಿಗೆ ಹೊಂದಿದ ತಿರುವಿನಿಂದ ರೇಲ್ವೆ ಒಳ ಸೇತುವೆ ಸೇರುವ ರಸ್ತೆಯು ತಿರುವಿನುದ್ದಕ್ಕೂ ತಗ್ಗುಗಳ ಆಗರವಾಗಿದೆ. ನಿತ್ಯವೂ ಕಾಲೇಜಿಗೆ ಸಹಸ್ರಾರು ವಿದ್ಯಾರ್ಥಿಗಳು ಸಂಚರಿಸುತ್ತಲಿದ್ದು, ಸಾರ್ವಜನಿಕರ ಸಂಚಾರವನ್ನು ಹಿಂಸೆಗೀಡುಮಾಡಿದೆ ಎಂದು ಎಂದು ಸಾರ್ವಜನಿಕರ ಕುಂದು-ಕೊರತೆಗಳ ನಿವಾರಣಾ ಕೇಂದ್ರದ ಜಿಲ್ಲಾ ಅಧ್ಯಕ್ಷರಾದ ಎಮ್. ಸಲೀಮ್ಅಹ್ಮದ್ ಮಾಳೇಕೊಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಷ್ಟು ತೀವ್ರಗತಿಯಲ್ಲಿ ರಸ್ತೆ ಹಾಳಾಗಲು ಕಳಪೆ ಕಾಮಗಾರಿಯೇ ಕಾರಣ. ಗದಗ-ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ರಸ್ತೆಯನ್ನು ಕೂಡಲೇ ಉತ್ತಮ ಗುಣಮಟ್ಟದಲ್ಲಿ ನಿರ್ಮಿಸದಿದ್ದಲ್ಲಿ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಎಮ್. ಸಲೀಮ್ಅಹ್ಮದ್ ಮಾಳೇಕೊಪ್ಪ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಧುರೀಣರಾದ
ರಾಮು ಕೆಂಚಗುಂಡಿ, ನೇಕಾರ ಕಾರ್ಮಿಕ ಧುರೀಣ ಬಶೀರಅಹ್ಮದ ಮುಳಗುಂದ, ಅಲ್ಪ ಸಂಖ್ಯಾತ ಧುರೀಣ ಮುಸ್ತಾಖ್ಅಹ್ಮದ್ ಮುಲ್ಲಾ, ದಲಿತ ಧುರೀಣ ಫಕೀರಪ್ಪ ದೊಡ್ಡಮನಿ, ತೌಫೀಖ್ ಮಜ್ಜಗಿ, ಅಸ್ಲಮ್ ಖಾದರನವರ ಇತರರು ಹಾಳಾದ ರಸ್ತೆಯ ಪೋಟೋದೊಂದಿಗೆ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪ್ರತಿಭಟನಾ ನೋಟೀಸ್ನಲ್ಲಿ ಎಚ್ಚರಿಸಿದ್ದಾರೆ.