ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಪರಂಪರೆಯಲ್ಲಿ ಜ್ಞಾನ, ವಿದ್ಯೆಗೆ ಅತ್ಯಂತ ಮಹತ್ವವಿದೆ. ಗುರುವಿನಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭಿಸುವ ಪರಂಪರೆ ಗುರುಕುಲ ಕಾಲದಿಂದಲೂ ಇದ್ದು, ಮಂಗಲಾ ಬಚಪನ್ ಶಾಲೆಯಲ್ಲಿ ಗುರುವಿನಿಂದ ಮಕ್ಕಳಿಗೆ ಅಕ್ಷರ ಕಲಿಕೆ ಆರಂಭಿಸಿದ್ದು ಉತ್ತಮ ಕಾರ್ಯ ಎಂದು ಗದಗ-ಕಪ್ಪತ್ತಗುಡ್ಡ ನಂದಿವೇರಿ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.
ಅವರು ವಿದ್ಯಾನಗರದಲ್ಲಿನ ಮಂಗಲಾ ಬಚಪನ್ ಪ್ಲೇ ಸ್ಕೂಲ್ನಲ್ಲಿ ಶುಕ್ರವಾರ ಶಾಲಾ ಆರಂಭದಲ್ಲಿ ಮಕ್ಕಳಿಗೆ `ಅಕ್ಷರ ಅಭ್ಯಾಸ’ ಆರಂಭಿಸುವ ಮೂಲಕ ಆಶೀರ್ವದಿಸಿ ಮಾತನಾಡಿದರು.
ನಗರದಲ್ಲಿ ಡಾ. ಅಮರೇಶ ನಾಶಿ ಅವರು ಆರಂಭಿಸಿರುವ ಈ ಚಿಕ್ಕ ಮಕ್ಕಳ ಶಾಲೆ ಅತ್ಯಂತ ಆಧುನಿಕವಾಗಿದೆ. ಆಟದೊಂದಿಗೆ ಪಾಠದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಪಾಲಕರೂ ಕೂಡಾ ತಮ್ಮ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಶಿಕ್ಷಕರ ಮೇಲೆ ಬಿಡದೇ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಬೇಕು. ಮಂಗಲಾ ಬಚಪನ್ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಉನ್ನತೋನ್ನತ ಹುದ್ದೇಗೇರಲಿ ಎಂದು ಬಯಸುತ್ತೇನೆ ಎಂದರು.
ಮಂಗಲಾ ಬಚಪನ್ ಶಾಲೆಯ ಕಾರ್ಯದರ್ಶಿ ಸರ್ವಮಂಗಲಾ ಎ.ನಾಶಿ ಶಾಲೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಅಮರೇಶ ಕೆ.ನಾಶಿ ಸಾಂದರ್ಭಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಹಿರಿಯರಾದ ರೇವಣಸಿದ್ದಪ್ಪ ಯಳಮಲಿ, ಪತ್ರಕರ್ತ ಹಾಗೂ ಹವ್ಯಾಸಿ ರಂಗಕರ್ಮಿ ಮೌನೇಶ ಚಿ. ಬಡಿಗೇರ(ನರೇಗಲ್ಲ), ಹಿರಿಯರಾದ ವಸಂತ ಸೂಗೂರ, ಸುನೀಲ ದಿವಾಕರ, ಶಾಲಾ ಕೋಆರ್ಡಿನೇಟರ್ ನೇತ್ರಾವತಿ ವಿಣೇಕರ್, ಬೆಲ್ಲದ, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮುಕ್ತಾ ಸೂಗೂರ ಪ್ರಾರ್ಥಿಸಿದರು. ಅಚ್ಚುತಾ ಮುಂಡರಗಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.