ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕಲ್ಯಾಣ ಚಾಲುಕ್ಯರಸರ ಕಾಲದಲ್ಲಿ ನಿರ್ಮಾಣವಾದ ಇಲ್ಲಿಯ ಐತಿಹಾಸಿಕ ಹಾಲಗೊಂಡ ಬಸವೇಶ್ವರರ ಶತಮಾನ ರಥೋತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರ ಸಂಜೆ ಸಾವಿರಾರು ಭಕ್ತಾಧಿಗಳ ಭಕ್ತಿ ಭಾವದ ಮಧ್ಯೆ ಅದ್ದೂರಿಯಾಗಿ ಜರುಗಿತು.
ಬಜಾರ ರಸ್ತೆಯಲ್ಲಿ ಸಾಗಿದ ರಥೋತ್ಸವಕ್ಕೆ ಅಡ್ನೂರ ಬ್ರಹ್ಮನ್ಮಠದ ಶಿವಾಚಾರ್ಯರು ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ತೇರಿಗೆ ಉತ್ತತ್ತಿ ಎಸೆದು ತಮ್ಮ ಭಕ್ತಿಯ ಸಂಕಲ್ಪವನ್ನು ಅರ್ಪಿಸಿದರು. ರಥೋತ್ಸವದಲ್ಲಿ ಭಾಗಿಯಾದ ಡೊಳ್ಳು ಕಲಾ ತಂಡದ ಡೊಳ್ಳು ಕುಣಿತದ ಪ್ರದರ್ಶನವು ಮನ ಸೆಳೆಯಿತು. ಶ್ರೀ ಕೃಷ್ಣ, ಬಸವೇಶ್ವರರು, ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ಮರುಳ ಸಿದ್ದೇಶ್ವರರು, ಮಾರುತಿ, ಮಹಾಂತೇಶ್ವರ, ಮಲ್ಲಿಕಾರ್ಜುನ, ಲೆಕ್ಕದ ವೀರೇಶ್ವರ, ನಾಗಲಿಂಗೇಶ್ವರ, ಅನ್ನದಾನೀಶ್ವರರು, ಪಂಚಾಚಾರ್ಯರು ಸೇರಿದಂತೆ ನಾಡಿನ ಹಲವಾರು ಶಿವ ಶರಣರ ಭಾವಚಿತ್ರಗಳ ಮೆರವಣಿಗೆಯು ಜನ ಮನ ಸೆಳೆಯಿತು.
ಗ್ರಾಮದ 11 ವಾರ್ಡ್ಗಳ 13 ಭಜನಾ ಕಲಾ ತಂಡಗಳು ತಮ್ಮ ಇಷ್ಟ ದೇವರ ಭಾವಚಿತ್ರ ಮೆರವಣಿಗೆಯೊಂದಿಗೆ ತತ್ವ ಪದ, ಜಾನಪದ, ಸುಗ್ಗಿ ಪದ, ಭಕ್ತಿ ಪದಗಳನ್ನು ಹಾಡುತ್ತಾ ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರವನ್ನು ಸಂಭ್ರಮಿಸಿದರು. ಗ್ರಾಮ ಪಂಚಾಯಿತಿಯು ಪ್ರತಿ ಭಜನಾ ಸಂಘಕ್ಕೆ ಸಂಪ್ರದಾಯದಂತೆ ಡಗ್ಗಾ ವಾದ್ಯ ಹಾಗೂ 10 ಕೆ.ಜಿ ಬೆಲ್ಲವನ್ನು ಕೊಡುಗೆಯಾಗಿ ನೀಡಿದರು.
ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನಪೂರ್ಣೇಶ್ವರಿ ಸತ್ಸಂಗ ಸಮಿತಿಯ ಆಶ್ರಯದಲ್ಲಿ, ರಾಘವೇಂದ್ರ ಕೊಪ್ಪಳ ಗುರೂಜಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾ ಮೃತ್ಯುಂಜಯ ಹೋಮ ನೆರವೇರಿತು. ಈ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿ ಪೂಜೆ, ಸತ್ಸಂಗದೊಂದಿಗೆ ಭಜನಾ ಕಾರ್ಯಕ್ರಮಗಳು ನೆರವೇರಿದವು. ಇದಕ್ಕೂ ಮುನ್ನ ಬಸವೇಶ್ವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರದೊAದಿಗೆ ರುದ್ರಾಭಿಷೇಕ, ನಂತರ ಮಹಾ ಅನ್ನಸಂತರ್ಪಣೆ ನೆರವೇರಿತು.
“ಸರ್ವ ಧರ್ಮದವರು ಪಾಲ್ಗೊಂಡು ಶತಮಾನ ಕಂಡ ಐತಿಹಾಸಿಕ ಹಾಲಗೊಂಡ ಬಸವೇಶ್ವರ ಜಾತ್ರೆಯನ್ನು ಭಕ್ತಿ ಭಾವದಿಂದ ಆಚರಿಸಿ ಯಶಸ್ವಿಗೊಳಿಸಿದ್ದು, ಸಾವಿರಾರು ಭಕ್ತರು ತನು-ಮನ-ಧನದಿಂದ ಭಾಗವಹಿಸಿದ್ದಾರೆ”
ಮಹೇಶ ಮುಸ್ಕಿನಭಾವಿ-ಜಾತ್ರಾ ಕಮಿಟಿ ಅಧ್ಯಕ್ಷರು.
ನಜೀರ ಅಹ್ಮದ ಕಿರೀಟಗೇರಿ.
ಹಾಲಗೊಂಡ ಬಸವೇಶ್ವರ ಜಾತ್ರಾ ಕಮಿಟಿ ಕಾರ್ಯದರ್ಶಿ.