ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದ ಮುಗ್ಧ ರೈತ ಸೋಮಪ್ಪ ಲಮಾಣಿ ಜಮೀನಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ದೈಹಿಕವಾಗಿ ಹಲ್ಲೆ ನಡೆಸಿ, ಲಂಬಾಣಿ ಜನಾಂಗವನ್ನು ನಿಂದಿಸಿ ಸುಳ್ಳು ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ರೈತನ ಪರವಾಗಿ ಹೋರಾಟ ನಡೆಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಅವರಿಗೆ ದಲಿತ ಮಿತ್ರ ಮಂಡಳಿ ಸದಸ್ಯರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮಿತ್ರ ಮಂಡಳಿಯ ಸಂಚಾಲಕ ಕುಮಾರ ನಡಗೇರಿ, ಪಿಎಸ್ಐ ಈರಣ್ಣ ರಿತ್ತಿ ಮತ್ತು ಸಂಗಡಿಗರು ಸೋಮಪ್ಪ ಲಮಾಣಿ ಮೇಲೆ ನಡೆಸಿದ ದೈಹಿಕ ಹಲ್ಲೆಯಿಂದಾಗಿ ಸೋಮಪ್ಪ ಲಮಾಣಿಯ ಆರೋಗ್ಯ ಹದಗೆಟ್ಟಿದೆ. ಈ ಹಿಂದೆ ಈರಣ್ಣ ರಿತ್ತಿ ಅವರನ್ನು ಬೆಳಗಾವಿಗೆ ವರ್ಗಾಯಿಸಲಾಗಿತ್ತು. ವರ್ಗಾವಣೆಗೆ ಕಾರಣವಾಗಿದ್ದ ಹಿಂದೂಗಳು, ಹಿಂದೂ ಸಂಘಟನೆಗಳ ಮೇಲೆ ಪಿಎಸ್ಐ ಈರಣ್ಣ ರಿತ್ತಿ ಕೆಂಡ ಕಾರುತ್ತಿದ್ದಾರೆ. ಹೇಗಾದರೂ ಇವರ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದರು.
ಶಿರಹಟ್ಟಿ ತಾಲೂಕಿನಲ್ಲಿಯೇ ಸರಕಾರಿ ಸೇವೆಯೊಂದಿಗೆ ಲಕ್ಷಾಂತರ ರೂಪಾಯಿ ಆದಾಯ ಇರುವ ಮರಳು ಮಾಫಿಯಾ, ಅಕ್ರಮ ಅಕ್ಕಿ, ಇಸ್ಪೀಟ್, ಜೂಜಾಟ ಸೇರಿದಂತೆ ಅಕ್ರಮಗಳಿಗೆ ಪರೋಕ್ಷವಾಗಿ ಸಹಾಯ-ಸಹಕಾರ ನೀಡುವ ಮೂಲಕ ಈರಣ್ಣ ರಿತ್ತಿ ಲಕ್ಷಾಂತರ ರೂಪಾಯಿ ಕಮಾಯಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಹಲ್ಲೆಗೊಳಗಾಗಿರುವ ಸೋಮಪ್ಪ ಲಮಾಣಿ, ಗಂಗವ್ವ ಲಮಾಣಿ, ಸತೀಶ ಕುಂಭಾರ, ಸದಾನಂದ ಗುರ್ಲಹೊಸೂರ, ಶಿವಯೋಗಿ ಹಿರೇಮಠ, ಈರಣ್ಣ ಗಾಣಿಗೇರ, ವಿನಾಯಕ ಹುಯಿಲಗೋಳ, ಸಾಗರ ಹುಯಿಲಗೋಳ, ಕೃಷ್ಣಾ ಹುಯಿಲಗೋಳ, ಪಂಚಾಕ್ಷರಿ ಸಾಲಿಮಠ, ಹುಲಿಗೆಪ್ಪ ವಾಲ್ಮೀಕಿ, ಅನಿಲ ಮುಳ್ಳಾಳ, ವಿಶಾಲ ಗೋಕಾವಿ, ಈಶ್ವರ ಕಾಟವಾ ಮುಂತಾದವರಿದ್ದರು.
ಬಾಕ್ಸ್
ಪರಿಶಿಷ್ಟ ಜಾತಿಯ ರೈತ ಸೋಮಪ್ಪ ಲಮಾಣಿ ಮೇಲೆ ಈರಣ್ಣ ರಿತ್ತಿಯಿಂದ ನಡೆದ ದೌರ್ಜನ್ಯ ಖಂಡಿಸಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಯಲ್ಲಿ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಪಾಲ್ಗೊಂಡು ಅನ್ಯಾಯವನ್ನು ಖಂಡಿಸುವಂತೆ ಮಂಡಳಿ ಸದಸ್ಯರು ವಿನಂತಿಸಿದರು.



