ಬೆಂಗಳೂರು: ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಸರ್ಕಾರದ ಕ್ರಮದ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯೆ ನೀಡಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
“ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ದೇಶಾದ್ಯಂತ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿಯವರೇ, ನಿಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದತ್ತ ಒಮ್ಮೆ ನೋಡಿ,” ಎಂದು ಟೀಕಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದು ಯಾವ ಸಂವಿಧಾನದ ನಿಯಮ ಎಂದು ಪ್ರಶ್ನಿಸಿದ ಅವರು, “ಮೊದಲು ಕರ್ನಾಟಕ ಸರ್ಕಾರಕ್ಕೆ ಸಂವಿಧಾನದ ಪಾಠ ಮಾಡಿ,” ಎಂದು ಆಗ್ರಹಿಸಿದರು.ಈ ಕ್ರಮವನ್ನು ಮಾಧ್ಯಮಗಳನ್ನು ಪಂಜರದಲ್ಲಿ ಇಡುವ ಪ್ರಯತ್ನ ಎಂದು ಟೀಕಿಸಿದ ನಿಖಿಲ್ ಕುಮಾರಸ್ವಾಮಿ, ಇದನ್ನು “ತುರ್ತು ಪರಿಸ್ಥಿತಿಯ ಮುಂದುವರಿದ ಭಾಗ” ಎಂದು ಕಿಡಿಕಾರಿದರು.



