ಗದಗ: ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಡೆದ ಚುನಾವಣಾ ಸಂದರ್ಭಗಳು ಹಾಗೂ ವಿವಿಧ ಜಾತ್ರೆ–ಹಬ್ಬಗಳ ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಶ್ರೇಷ್ಠ ಸೇವೆ ಸಲ್ಲಿಸಿದ್ದಕ್ಕಾಗಿ ೨೦೨೫ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಗದಗ ಜಿಲ್ಲಾ ಬೋಧಕರು ಕಿರಣ್ ಕುಮಾರ್ ಕಟಗಿ ಅವರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ.
ಚುನಾವಣೆಗಳಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಅವರು ತೋರಿದ ನಿಷ್ಠೆ, ಜವಾಬ್ದಾರಿ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸಮರ್ಥ ನಿರ್ವಹಣೆ ಗಮನಾರ್ಹವಾಗಿದೆ. ವಿವಿಧ ಜಾತ್ರೆ ಹಾಗೂ ಹಬ್ಬಗಳ ವೇಳೆ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಪರಿಣಾಮಕಾರಿ ಸಹಕಾರ ನೀಡುವಲ್ಲಿ ಅವರ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಾಧನೆಗೆ ಜಿಲ್ಲಾ ಸಮದೇಶಕರು, ಗೃಹರಕ್ಷಕ ದಳದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಕಿರಣ್ ಕುಮಾರ್ ಕಟಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಜಿಲ್ಲೆಯ ಗೃಹರಕ್ಷಕ ದಳದ ಪರವಾಗಿ ಈ ಗೌರವ ದೊರೆತಿರುವುದು ಹೆಮ್ಮೆಯ ವಿಷಯವಾಗಿದ್ದು, ಇತರರಿಗೆ ಪ್ರೇರಣೆಯಾಗಿದೆ.



