ವಿಜಯಸಾಕ್ಷಿ ಸುದ್ದಿ, ಗದಗ: ಕೆಎಸ್ಆರ್ಟಿಸಿ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಯ ಕಣ್ಣಿನ ಆರೋಗ್ಯ ಕಾಪಾಡುವ ಮೂಲಕ ಸುರಕ್ಷಿತ ರಸ್ತೆ ಸಂಚಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಡಾ. ಮೆಹರವಾಡೆ ಕಣ್ಣಿನ ಆಸ್ಪತ್ರೆ ಹಾಗೂ ಮಾ. ಕುಷ್ಮಾಂಡಾ ಟ್ರಸ್ಟ್ ವತಿಯಿಂದ ‘ಮಿಷನ್ ನೇತ್ರ ಯಾತ್ರೆ’ ಅಭಿಯಾನವನ್ನು ಗದಗ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಸಲಾಯಿತು.
ಅಭಿಯಾನದಡಿ ಜಿಲ್ಲೆಯ ಎಲ್ಲ ಕೆಎಸ್ಆರ್ಟಿಸಿ ಡಿಪೋಗಳಲ್ಲಿ ಉಚಿತ ಸಮಗ್ರ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್ಗಳು, ಆಡಳಿತ ಸಿಬ್ಬಂದಿ ಸೇರಿದಂತೆ ಡಿಪೋದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕಣ್ಣಿನ ಪರೀಕ್ಷೆ ನಡೆಸಲಾಯಿತು.
ದೀರ್ಘಕಾಲ ವಾಹನ ಚಾಲನೆ, ಧೂಳು, ಬಿಸಿಲು ಹಾಗೂ ನಿರಂತರ ಕೆಲಸದ ಒತ್ತಡದಿಂದ ಉಂಟಾಗುವ ದೃಷ್ಟಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ಉದ್ದೇಶದಿಂದ ಅನುಭವಿ ನೇತ್ರ ತಜ್ಞರು ಮತ್ತು ಆಪ್ಟೊಮೆಟ್ರಿಸ್ಟ್ಗಳು ಆಧುನಿಕ ಉಪಕರಣಗಳ ಮೂಲಕ ತಪಾಸಣೆ ನಡೆಸಿದರು. ಈ ವೇಳೆ ಹಲವರಲ್ಲಿ ದೃಷ್ಟಿದೋಷ, ಆರಂಭಿಕ ಹಂತದ ಮೋತಿಬಿಂದು, ಡ್ರೈ ಐ, ಅಲರ್ಜಿ ಹಾಗೂ ವಯೋಸಹಜ ಕಣ್ಣಿನ ಸಮಸ್ಯೆಗಳು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆ ನೀಡಲಾಯಿತು.
ದೃಷ್ಟಿದೋಷ ಹೊಂದಿದ್ದ ಸಿಬ್ಬಂದಿಗೆ ಅಗತ್ಯ ಪವರ್ನ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. ಕನ್ನಡಕ ಧರಿಸಿದ ಬಳಿಕ ರಸ್ತೆ ಸೂಚನಾ ಫಲಕಗಳನ್ನು ಸ್ಪಷ್ಟವಾಗಿ ಗುರುತಿಸಲು ಹಾಗೂ ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಅನುಕೂಲವಾಗಿದೆ ಎಂದು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಕಣ್ಣಿನ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮವೂ ನಡೆಯಿತು. ನಿಯಮಿತ ಕಣ್ಣಿನ ತಪಾಸಣೆಯ ಮಹತ್ವ, ವೈದ್ಯರ ಸಲಹೆಯಂತೆ ಕನ್ನಡಕ ಬಳಕೆ, ವಾಹನ ಚಾಲನೆಯ ವೇಳೆ ಕಣ್ಣಿನ ಒತ್ತಡ ಕಡಿಮೆ ಮಾಡಿಕೊಳ್ಳುವ ವಿಧಾನಗಳು, ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣದಿಂದ ದೃಷ್ಟಿ ರಕ್ಷಣೆ ಸೇರಿದಂತೆ ಹಲವು ವಿಷಯಗಳ ಕುರಿತು ಸಿಬ್ಬಂದಿಗೆ ಅರಿವು ಮೂಡಿಸಲಾಯಿತು.
ಉತ್ತಮ ದೃಷ್ಟಿಯು ಸುರಕ್ಷಿತ ವಾಹನ ಚಾಲನೆಯ ಮೂಲಾಧಾರವಾಗಿದ್ದು, ಈ ಅಭಿಯಾನದ ಮೂಲಕ ಕೆಎಸ್ಆರ್ಟಿಸಿ ಸಿಬ್ಬಂದಿಯ ಆರೋಗ್ಯದ ಜೊತೆಗೆ ಸಾವಿರಾರು ಪ್ರಯಾಣಿಕರ ಸುರಕ್ಷತೆಯನ್ನೂ ಪರೋಕ್ಷವಾಗಿ ಕಾಪಾಡುವ ಕಾರ್ಯ ನಡೆದಿದೆ. ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿಯೂ ಇಂತಹ ಸಮುದಾಯ ನೇತ್ರ ಆರೈಕೆ ಕಾರ್ಯಕ್ರಮಗಳನ್ನು ವಿಸ್ತರಿಸುವುದಾಗಿ ಡಾ. ಮೆಹರವಾಡೆ ಕಣ್ಣಿನ ಆಸ್ಪತ್ರೆ ತಿಳಿಸಿದೆ.



