HomeEntertainmentಸೆ.25ಕ್ಕೆ ‘ಕಾಮನ್ ಮ್ಯಾನ್ ನಾನೇ ಸಿಎಂ’ ತೆರೆಗೆ

ಸೆ.25ಕ್ಕೆ ‘ಕಾಮನ್ ಮ್ಯಾನ್ ನಾನೇ ಸಿಎಂ’ ತೆರೆಗೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಸುರಭಿ ಫಿಲಂಸ್‌ನ ‘ಕಾಮನ್ ಮ್ಯಾನ್ ನಾನೇ ಸಿಎಂ’ ಚಿತ್ರ ಸೆ.25ರಂದು ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ಕಥೆ ರಚನಾಕಾರ ಡಾ. ಎನ್. ನರಸಿಂಹಮೂರ್ತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಯೊಬ್ಬ ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿ ಹುದ್ದೆಗೇರಿದರೆ ಏನೆಲ್ಲ ಬದಲಾವಣೆ ತರಬಹುದು ಎಂಬುದನ್ನು ವಿಭಿನ್ನ ಕಥಾಹಂದರದ ಮೂಲಕ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ಚಿತ್ರದ ನಾಯಕ ವೃತ್ತಿಯಲ್ಲಿ ವಕೀಲನಾಗಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆ. ಬಳಿಕ ಸಮಾಜದಲ್ಲಿ ಸುಧಾರಣೆ ತರಲು ಆತ ಕೈಗೊಳ್ಳುವ ಪ್ರಯತ್ನಗಳು ಹಾಗೂ ಎದುರಾಗುವ ಸನ್ನಿವೇಶಗಳನ್ನು ಕುತೂಹಲಕರವಾಗಿ ಕಟ್ಟಿಕೊಡಲಾಗಿದೆ ಎಂದು ಹೇಳಿದರು.

‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೋರ್ವ ನಟಿಯೂ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಸಾಯಿಪ್ರಕಾಶ್ ನಿರ್ದೇಶನ ಮಾಡಿದ್ದು, ಇದು ಅವರ ನಿರ್ದೇಶನದ 106ನೇ ಚಿತ್ರವಾಗಿದೆ. ವಿನಯ ಚಂದ್ರ ಸಂಗೀತ ನಿರ್ದೇಶನ, ಜೆ.ಜಿ. ಕೃಷ್ಣ ಹಾಗೂ ದೀಪಕ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.

ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಬಹುದಾಗಿದ್ದು, ಕಲಾಪೋಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುವ ಮೂಲಕ ಕಲಾವಿದರು ಹಾಗೂ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಟಿ ಸೋನಾ ಲದ್ವಾ ಮಾತನಾಡಿ, ತಾವು ಮೂಲತಃ ರಾಣೆಬೆನ್ನೂರಿನವರಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ತಮ್ಮನ್ನು ಚಿತ್ರದಲ್ಲಿ ನಟಿಸಲು ಡಾ. ನರಸಿಂಹಮೂರ್ತಿ ಅವರು ಅವಕಾಶ ನೀಡಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದರು.

ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಮಾತನಾಡಿ, ಡಾ. ಎನ್. ನರಸಿಂಹಮೂರ್ತಿ ಅವರು ಬಡತನದಲ್ಲಿ ಬೆಳೆದು ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಆದಾಯದ ಶೇ.40ರಷ್ಟನ್ನು ಸಮಾಜಕ್ಕಾಗಿ ವ್ಯಯಿಸುತ್ತಿದ್ದಾರೆ. ಅವರ ಜೀವನ ಚರಿತ್ರೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಆತ್ಮಚರಿತ್ರೆ ಹೊರತರುವ ಚಿಂತನೆ ಕದಂಬ ಸೈನ್ಯದ್ದಾಗಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕದಂಬ ಸೈನ್ಯದ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ, ರಾಜ್ಯ ಸಮಿತಿ ಸದಸ್ಯ ಲಕ್ಷ್ಮಣ ಎಲೆಕೇರಿ ಚನ್ನಪಟ್ಟಣ, ಬನಶಂಕರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಬಸೆಟ್ಟೆಪ್ಪ ನೂರೊಂದಪ್ಪ ಹುಂಡೇಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೋಟ್

“ಒಬ್ಬ ಸಾಮಾನ್ಯ ಮನುಷ್ಯ ರಾಜಕಾರಣಕ್ಕೆ ಬರುವುದು ಸುಲಭವಲ್ಲ. ಸಮಾಜದಲ್ಲಿ ಎದುರಾದ ಅವಮಾನವನ್ನೇ ಅವಕಾಶವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆಗೇರುವ ಕಥೆ ಚಿತ್ರದಲ್ಲಿದೆ. ಇದು ವಿಭಿನ್ನ ಕಥೆಯಾಗಿದ್ದು, ಮನರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ.”

– ಡಾ. ಎನ್. ನರಸಿಂಹಮೂರ್ತಿ, ನಿರ್ಮಾಪಕ ಹಾಗೂ ಕಥೆ ರಚನಾಕಾರ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img