ಗದಗ: ಅಪರಾಧಿಕ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬನನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಗಜೇಂದ್ರಗಡ ನಿವಾಸಿ ಮಂಜುನಾಥ ತಂದೆ ಕಮಲಪ್ಪ ಮಾಳೋತ್ತರ ಎಂಬಾತನನ್ನು ಗದಗ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಜುನಾಥ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ನ್ಯಾಯಾಂಗ ಬಂಧನಕ್ಕೆ ಹೋಗಿ ಬಂದರೂ ತನ್ನ ಸ್ವಭಾವದಲ್ಲಿ ಸುಧಾರಣೆಯಾಗದೇ ಅಪರಾಧಿಕ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಈತನ ದುರ್ವರ್ತನೆಯನ್ನು ನಿಯಂತ್ರಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಯವರು ಗಡಿಪಾರು ಪ್ರಸ್ತಾವನೆ ಸಲ್ಲಿಸಿದ್ದರು.
ಈ ಗಡಿಪಾರು ಅರ್ಜಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ಬಳಿಕ ಮಂಜುನಾಥನನ್ನು ಗದಗ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಮಂಜುನಾಥ ವಿರುದ್ಧ ಕೊಲೆ, ಸಾಕ್ಷಿನಾಶ, ಅಪರಾಧಿಕ ಸಂಚು ಹಾಗೂ ಕಳ್ಳತನದಂತಹ ಅಪರಾಧಗಳ ಅಡಿಯಲ್ಲಿ ಕೆಳಕಂಡ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
1)ಗಜೇಂದ್ರಗಡ ಪೊಲೀಸ್ ಠಾಣೆ — ಗುನ್ನಾ ನಂ. 275/2018; ಕಲಂ 302, 201, 120(ಬಿ) ಹಾಗೂ 109 ಐಪಿಸಿ.
2)ಸವದತ್ತಿ ಪೊಲೀಸ್ ಠಾಣೆ — ಗುನ್ನಾ ನಂ. 70/2026; ಕಲಂ 303(2) ಬಿಎನ್ಎಸ್–2023.
3)ಸವದತ್ತಿ ಪೊಲೀಸ್ ಠಾಣೆ — ಗುನ್ನಾ ನಂ. 296/2026; ಕಲಂ 303(2) ಬಿಎನ್ಎಸ್–2023.
4)ಸವದತ್ತಿ ಪೊಲೀಸ್ ಠಾಣೆ — ಗುನ್ನಾ ನಂ. 340/2026; ಕಲಂ 303(2) ಬಿಎನ್ಎಸ್–2023.
ಕಾನೂನುಬಾಹಿರ ಚಟುವಟಿಕೆಗಳಿಗೆ ಪೊಲೀಸ್ ಎಚ್ಚರಿಕೆ
ಗದಗ ಜಿಲ್ಲೆಯಲ್ಲಿ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಇದು ಎಚ್ಚರಿಕೆಯಾಗಿದೆ. ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾವುದೇ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.



