HomeCrime Newsಕದ್ದ ಹಣದಲ್ಲಿ ಬಡವರಿಗೆ ಸಹಾಯ, ಸ್ನೇಹಿತರಿಗೆ ಗ್ರ್ಯಾಂಡ್ ಪಾರ್ಟಿ! ಬೆಂಗಳೂರಿನ ‘ಖತರ್ನಾಕ್’ ಮನೆಗಳ್ಳ ಅರೆಸ್ಟ್

ಕದ್ದ ಹಣದಲ್ಲಿ ಬಡವರಿಗೆ ಸಹಾಯ, ಸ್ನೇಹಿತರಿಗೆ ಗ್ರ್ಯಾಂಡ್ ಪಾರ್ಟಿ! ಬೆಂಗಳೂರಿನ ‘ಖತರ್ನಾಕ್’ ಮನೆಗಳ್ಳ ಅರೆಸ್ಟ್

For Dai;y Updates Join Our whatsapp Group

ಬೆಂಗಳೂರು, ಆಗಸ್ಟ್ 25: ಕಳ್ಳತನ ಮಾಡುತ್ತಿದ್ದ ಹಣದಲ್ಲಿ ಬಡವರಿಗೆ ಸಹಾಯ ಮಾಡಿ, ಸ್ನೇಹಿತರಿಗೆ ಅದ್ಧೂರಿ ಪಾರ್ಟಿ ನೀಡುತ್ತಿದ್ದ ಆರೋಪದ ಮೇಲೆ ಖತರ್ನಾಕ್ ಮನೆಗಳ್ಳ ಶಿವರಸನ್ (34)ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ವಾಸವಿದ್ದ ಶಿವರಸನ್ ಬೆಳಗಿನ ಜಾವ ಬೀಗ ಹಾಕಿದ್ದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದ್ದು, ಬಂಧನದ ಬಳಿಕ 8 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯಿಂದ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೋಕಿಗಾಗಿ ಕಳ್ಳತನಕ್ಕೆ ಇಳಿದ ಕಲಾವಿದ

ಮೂಲತಃ ಕಲಾವಿದನಾಗಿ ಕೆಲಸ ಮಾಡುತ್ತಿದ್ದ ಶಿವರಸನ್, ಐಷಾರಾಮಿ ಜೀವನದ ಆಸೆಗೆ ಕಳ್ಳತನದ ಹಾದಿ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆತ, ಬೆಳಗಿನ ಜಾವ ಬೈಕ್‌ನಲ್ಲಿ ಸಂಚರಿಸಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.

ಕದ್ದ ಹಣದ ಒಂದು ಭಾಗವನ್ನು ಆಟೋ ಚಾಲಕರು ಹಾಗೂ ಬಡವರಿಗೆ ನೀಡುತ್ತಿದ್ದ ಶಿವರಸನ್, ಅವರ ಮೂಲಕವೇ ಬೀಗ ಹಾಕಿರುವ ಮನೆಗಳ ಮಾಹಿತಿ ಸಂಗ್ರಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನದ ಹಣದಲ್ಲೇ ಸ್ನೇಹಿತರಿಗೆ ಗ್ರ್ಯಾಂಡ್ ಪಾರ್ಟಿ ನೀಡುತ್ತಿದ್ದ ಎನ್ನಲಾಗಿದೆ.

ಆರೋಪಿಯ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

8 ಮನೆಗಳ್ಳತನ ಪ್ರಕರಣಗಳು ಪತ್ತೆ

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬೇಗೂರು ಪೊಲೀಸರು ಶಿವರಸನ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂರು, ರಾಮಮೂರ್ತಿನಗರದ ಎರಡು ಹಾಗೂ ಆಲವಳ್ಳಿ, ಹೊಸಕೋಟೆ (ಹನಗೊಂಡನಹಳ್ಳಿ) ಮತ್ತು ಕೆ.ಆರ್.ಪುರಂ ವ್ಯಾಪ್ತಿಯ ತಲಾ ಒಂದು ಮನೆಗಳ್ಳತನ ಪ್ರಕರಣಗಳು ಸೇರಿ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ.

ಬಂಧಿತನಿಂದ 196 ಗ್ರಾಂ ಚಿನ್ನ ಹಾಗೂ 4 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಹಿಂದಿನ ಕೃತ್ಯಗಳು ಹಾಗೂ ಇತರ ಪ್ರಕರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img