ವಿಜಯಸಾಕ್ಷಿ ಸುದ್ದಿ, ಗದಗ
ಮೇ.2ರಂದು ಶಿರಹಟ್ಟಿ ಠಾಣಾ ವ್ಯಾಪ್ತಿಯ ಕಡಕೋಳ ಹೊಸಳ್ಳಿ ರಸ್ತೆಯ ಜಮೀನೊಂದರ ಬಳಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಘಟನೆಯ ವಿವರ
2017ರ ಮೇ ತಿಂಗಳ 2ರಂದು ಮದ್ಯಾಹ್ನ 2-30ರ ಸುಮಾರಿಗೆ ಆರೋಪಿ ಶಿವಪುತ್ರಪ್ಪ ಉಡಚಪ್ಪ ಗೊಜನೂರು, ಸದರಿ ಪ್ರಕರಣದ ದೂರುದಾರಳಿಗೆ `ನೀನು ನನ್ನೊಟ್ಟಿಗೆ ಮಲಗು, ನಿನಗೆ ಎಷ್ಟು ದುಡ್ಡು ಕೇಳಿದರೂ ಕೊಡುತ್ತೇನೆ, ನಿನ್ನ ಗಂಡ ಸರಿಯಿಲ್ಲ, ನಿಮ್ಮ ಜಾತಿಯವರು ಯಾರು ಕರೆದರೂ ಬರುತ್ತೀರಿ’ ಇತ್ಯಾದಿ ಕೆಟ್ಟ ಶಬ್ಧಗಳಿಂದ ಜಾತಿ ನಿಂದನೆ ಮಾಡಿದ್ದಲ್ಲದೇ ಫಿರ್ಯಾದಿಯ ಕಪಾಳಕ್ಕೆ ಹೊಡೆದು ಕೈ ಹಿಡಿದೆಳೆದು ಬಲಾತ್ಕಾರ ನಡೆಸಿದ್ದಲ್ಲದೇ, ಈ ಸಂಗತಿಯನ್ನು ಗಂಡನಿಗಾಗಲೀ, ಬೇರೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ, ಕೊಲೆ ಮಾಡುತ್ತೇನೆ ಎಂದು ಜೀವಬೆದರಿಕೆ ಹಾಕಿರುವ ಬಗ್ಗೆ ಆರೋಪಿತ ಶಿವಪುತ್ರಪ್ಪ ವಿರುದ್ಧ ಅಂದಿನ ಪೊಲೀಸ್ ಉಪ ಅಧೀಕ್ಷಕ ವಿಜಯಕುಮಾರ್ ತಳವಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಸಾಕ್ಷಿಗಳ ವಿಚಾರಣೆ ನಡೆಸಿದ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ. ಎಸ್. ಶೆಟ್ಟಿ ಅವರು ಸದರಿ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಮಂಗಳವಾರ ಅಂತಿಮ ತೀರ್ಪು ನೀಡಿದ್ದು, ಶಿವಪುತ್ರಪ್ಪ ಉಡಚಪ್ಪ ಗೊಜನೂರು ಇವನಿಗೆ ಕಲಂ: 323 ಭಾದಂಸಂ ಅಡಿಯಲ್ಲಿ 6 ತಿಂಗಳ ಸಾದಾ ಸಜೆ, ಮತ್ತು 376(1) ಭಾದಂಸಂ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಹಾಗೂ 50.ಸಾವಿರ ರೂ. ದಂಡ, ಕಲಂ: 504 ಭಾದಂಸಂ ಅಡಿಯಲ್ಲಿ 1 ವರ್ಷ ಸಾದಾ ಶಿಕ್ಷೆ, ಕಲಂ: 3(1)(ಆರ್)(ಎಸ್) ಪ.ಜಾ/ಪ.ಪಂ ಕಾಯ್ದೆ ಅಡಿಯಲ್ಲಿ 2 ವರ್ಷ ಶಿಕ್ಷೆ ಹಾಗೂ 10.ಸಾವಿರ ರೂ. ದಂಡ, ಕಲಂ 3(2)(ವಿಎ) ಪ.ಜಾ/ಪ.ಪಂ ಕಾಯ್ದೆ ಅಡಿಯಲ್ಲಿ 1 ವರ್ಷ ಶಿಕ್ಷೆ ಹಾಗೂ 10 ಸಾವಿರ.ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸವಿತಾ. ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ಮಾಡಿಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.