ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಸಿಐಡಿ ಮುಂದೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ನೀಡಿರುವ ಹೇಳಿಕೆಗಳು ಇದೀಗ ಮಹತ್ವ ಪಡೆದುಕೊಂಡಿವೆ. ಪ್ರಶ್ನೆಪತ್ರಿಕೆ ಸಿದ್ಧತೆ ಹಾಗೂ ಪರಿಶೀಲನೆಗೆ ಸಂಬಂಧಿಸಿದಂತೆ ಗ್ಯಾನೇಂದ್ರ ಹಲವು ಮಹತ್ವದ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಸಿಐಡಿ ವಿಚಾರಣೆ ವೇಳೆ, 6 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಿದ್ದುದಾಗಿ ಗ್ಯಾನೇಂದ್ರ ಹೇಳಿಕೆ ನೀಡಿದ್ದಾರೆ. ಪ್ರಶ್ನೆಪತ್ರಿಕೆಗಳು ಮುದ್ರಣಗೊಳ್ಳುವ ಮುನ್ನವೇ ಅವುಗಳನ್ನು ಮನೆಯಲ್ಲಿ ಪರಿಶೀಲಿಸುತ್ತಿದ್ದುದು ಕರ್ತವ್ಯ ಲೋಪಕ್ಕೆ ಕಾರಣವಾಗಿದೆ ಎಂದು ಅವರು ಒಪ್ಪಿಕೊಂಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.
ಆದರೆ ಇದೇ ವಿಚಾರದಲ್ಲಿ ಗ್ಯಾನೇಂದ್ರ ನೀಡಿರುವ ಮತ್ತೊಂದು ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರಶ್ನೆಪತ್ರಿಕೆ ಪರಿಶೀಲನೆಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಬಸವರಾಜ್ ಪದೇಪದೇ ಮನೆಗೆ ಬರುತ್ತಿದ್ದನೆಂದೂ, ತಮಗೆ ಅರಿವಿಲ್ಲದಂತೆಯೇ ಬಸವರಾಜ್ ಪ್ರಶ್ನೆಪತ್ರಿಕೆಯಲ್ಲಿದ್ದ ಮಾಹಿತಿ ಬರೆದುಕೊಂಡು ಹೋಗಿದ್ದಾನೆಂದೂ ಗ್ಯಾನೇಂದ್ರ ಹೇಳಿದ್ದಾರೆ. ಈ ಬಗ್ಗೆ ತಾವು ಸರಿಯಾಗಿ ಗಮನ ಹರಿಸಿರಲಿಲ್ಲ ಎಂದ ಅವರು, ಯಾವುದೇ ಲೋಪ ಆಗಿದ್ದರೂ ಅದಕ್ಕೆ ಬಸವರಾಜ್ ಕಾರಣ ಎಂದೂ, ಆತ ಪ್ರಶ್ನೆಪತ್ರಿಕೆ ಕದ್ದಿರುವುದು ಈಗ ಗೊತ್ತಾಗಿದೆ ಎಂದೂ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಮನೆಯಲ್ಲೇ ಪರಿಶೀಲಿಸಿದ ವಿಚಾರವೂ ತನಿಖೆಯ ಪ್ರಮುಖ ಅಂಶವಾಗಿ ಪರಿಣಮಿಸಿದೆ. ಪ್ರಶ್ನೆಪತ್ರಿಕೆ ಸಂಬಂಧಿತ ವಿಚಾರಣೆ ಮುಂದುವರಿಸಿರುವ ಸಿಐಡಿ ಅಧಿಕಾರಿಗಳು, ಇಂದು ಗ್ಯಾನೇಂದ್ರ ಅವರನ್ನು ಅವರ ಮನೆಗೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಮಹಮದ್ ಸುಹೇಲ್ ಬಳಿಕ ಇನ್ನೂ 7 ಅಭ್ಯರ್ಥಿಗಳು ಸಿಐಡಿ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಂಧನದ ಭಯದಿಂದ ಅಭ್ಯರ್ಥಿಗಳು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಅಭ್ಯರ್ಥಿಗಳ ವಿಚಾರಣೆಯಲ್ಲಿ, ಅಕ್ರಮ ನೇಮಕಾತಿಗೆ ಒಬ್ಬೊಬ್ಬ ಅಭ್ಯರ್ಥಿಯಿಂದ ವಿಭಿನ್ನ ಮೊತ್ತದ ಹಣ ಪಡೆಯಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಕೆಲವು ಅಭ್ಯರ್ಥಿಗಳು 80 ಲಕ್ಷ ರೂಪಾಯಿವರೆಗೆ, ಇನ್ನೂ ಕೆಲವರು ಸುಮಾರು 40 ಲಕ್ಷ ರೂಪಾಯಿವರೆಗೆ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಇವರಲ್ಲಿ ಕೆಲವರು ಮುಂಗಡ ಹಣ ನೀಡಿದ್ದರೆ, ಮತ್ತಷ್ಟು ಅಭ್ಯರ್ಥಿಗಳು ಸಂಪೂರ್ಣ ಹಣ ಪಾವತಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಮದ್ ಸುಹೇಲ್ ಬಳಿಕ 7 ಅಭ್ಯರ್ಥಿಗಳಿಂದ ಬಂದಿದೆ ಎನ್ನಲಾದ ಈ ಹೇಳಿಕೆಗಳು ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವದ ಸುಳಿವು ನೀಡಿವೆ.



