ಜೀವನಾಡಿ ಎತ್ತುಗಳೊಂದಿಗೆ `ಕಾರ ಹುಣ್ಣಿಮೆ’

0
Celebrating the first festival of monsoon in rural areas
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಉತ್ತಮ ಮುಂಗಾರು ಮಳೆ-ಬೆಳೆಗಾಗಿ ಆಚರಿಸುವ ಮುಂಗಾರು ಪ್ರಾರಂಭದ ರೈತರ ಮೊದಲ ಹಬ್ಬ ಕಾರಹುಣ್ಣಿಮೆ. ಈ ಹಬ್ಬವನ್ನು ರೈತ ಸಮುದಾಯ ಶುಕ್ರವಾರ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸಿದರು.

Advertisement

ಹಬ್ಬದ ದಿನ ಬೆಳಿಗ್ಗೆ ಎತ್ತುಗಳ ಮೈ ತೊಳೆದು ಎಳ್ಳೆಣ್ಣೆ, ಮಜ್ಜಿಗೆ, ಅರಿಶಿಣಪುಡಿ, ಉಪ್ಪು, ತತ್ತಿಯನ್ನು ಗೊಟ್ಟ ಹಾಕುತ್ತಾರೆ. ಇದು ತಮ್ಮ ಜೀವನಾಡಿ ಎತ್ತುಗಳಿಗೆ ಯಾವುದೇ ರೋಗ-ರುಜಿನಾದಿಗಳು ತಗುಲದಿರಲೆಂದು ಮಾಡುವ ಪದ್ಧತಿ. ಬಳಿಕ ಎತ್ತುಗಳ ಕೊಂಬುಗಳನ್ನು ಪಾಲಿಶ್ ಮಾಡಿ, ಬಣ್ಣ ಹಚ್ಚಿ ಕೋಡಿನ ತುದಿಗೆ ತಾಮ್ರದ ಕೊಂಬೆಣಸು ಹಾಕಿ ರಿಬ್ಬನ್, ಬಲೂನ್ ಕಟ್ಟುತ್ತಾರೆ. ಕೊರಳಿಗೆ ಗಜ್ಜೆಪಟ್ಟಿ ಕಟ್ಟಿ ಶೃಂಗರಿಸುತ್ತಾರೆ.

ಗೋಧೂಳಿ ಸಮಯದಲ್ಲಿ ವಿಶೇಷವಾಗಿ ಅಲಂಕಾರ ಮಾಡಿದ ಎತ್ತು, ಹೋರಿಗಳನ್ನು ರೈತರು ಊರ ಅಗಸಿ ರಸ್ತೆಯಲ್ಲಿ ಓಡಿಸುತ್ತಾ ಅದರ ಹಿಂದೆ ತಾವೂ ಓಡಿ ಸಂತಸಪಟ್ಟರು. ತಮ್ಮ ಎತ್ತುಗಳ ಮೈಮೇಲೆ ರಾಮದೂತ, ಭೂಮಿತಾಯಿ ಚೊಚ್ಚಲ ಮಗ, ಪುಣ್ಯಕೋಟಿ, ಮನೆದೇವ್ರು, ರಾಜಕುಮಾರ, ಒಡಹುಟ್ಟಿದವರು, ಮುಂಗಾರು ಮಳೆ, ನಮ್ಮ ಬಸವ ಹೀಗೆ ಬರೆದು ತಮ್ಮ ಪ್ರೀತಿ ಮೆರೆದರು. ಯಾವ ಎತ್ತುಗಳು ಮೊದಲು ಕೊಬ್ಬರಿ ಸರ ಹರಿದು ಮುಂದೆ ಓಡುತ್ತವೆಯೋ ಆ ಎತ್ತುಗಳು ಕರಿ ಹರಿದಂತೆ. ಇದು ಈ ಹಬ್ಬ ಆಚರಿಸುವ ಸಂಪ್ರದಾಯ.

Celebrating the first festival of monsoon in rural areas

ಬಿಳಿ ಎತ್ತು ಕರಿ ಹರಿದರೆ ಹಿಂಗಾರು ಉತ್ತಮ ಎಂತಲೂ, ಕರಿ ಎತ್ತು ಕರಿ ಹರಿದರೆ ಮುಂಗಾರು ಉತ್ತಮ ಎಂತಲೂ ಭಾವಿಸುತ್ತಾರೆ.

ಲಕ್ಷ್ಮೇಶ್ವರದಲ್ಲಿ ದೇಸಾಯಿಬಣ, ಹುಲಗೇರಿ ಬಣ, ಪೇಠಬಣ, ಹಿರೇಬಣದ ಅಗಸಿ ಬಾಗಿಲಲ್ಲಿ ಕರಿ ಹರಿಯುವ ಹಬ್ಬ ಆಚರಿಸಲಾಯಿತು. ನಂತರ ಪಟ್ಟಣದ ಆರಾಧ್ಯದೈವ ಸೋಮೇಶ್ವರನ ಸನ್ನಿಧಿಯಲ್ಲಿ ಮುಳಗುಂದ ಮನೆತನದ ಬಿಳಿ ಎತ್ತು ಕರಿ ಹರಿಯಿತು. ಎತ್ತು ಓಡಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು, ಮಕ್ಕಳು ಸೇರಿದ್ದರು. ಕರಿ ಹರಿದ ಎತ್ತುಗಳ ಜತೆ ನೂರಾರು ಎತ್ತುಗಳನ್ನು ಸೇರಿಸಿ ಸಂಜೆ ಸೋಮೇಶ್ವರ ತೇರಿನಮನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯವೈಭವದೊಂದಿಗೆ ಮೆರವಣಿಗೆ ಮಾಡಲಾಯಿತು.

ಸೊಪ್ಪಿನಕೇರಿ ಓಣಿಯ ಯುವಕರು ಈ ವರ್ಷ ಕರಿ ಓಡುವ ಹಬ್ಬದಲ್ಲಿ ಪಾಲ್ಗೊಂಡ ವಿಶೇಷ ಅಲಂಕಾರಿಕ ಎತ್ತುಗಳಿಗೆ ಬಹುಮಾನ ನೀಡಿ ಪುರಸ್ಕರಿಸಿದರು. ಈ ಸ್ಫರ್ಧೆಯಲ್ಲಿ ಮುತ್ತು ಗೊಜನೂರ ಅವರ ಎತ್ತು ಪ್ರಥಮ, ಲಕ್ಷ್ಮೇಶ್ವರ ರಾಮಧೂತ ದ್ವಿತೀಯ, ಬಸವರಾಜ ಉಮಚಗಿ ಅವರ ಎತ್ತುಗಳಿಗೆ ತೃತೀಯ ಬಹುಮಾನ ನೀಡಲಾಯಿತು.


Spread the love

LEAVE A REPLY

Please enter your comment!
Please enter your name here