ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಿ, ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದುತ್ವನಿಷ್ಠರು ಗದಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ರಾಷ್ಟ್ರಧ್ವಜವನ್ನು ಗೌರವದಿಂದ ಹಾರಿಸಿದ ಬಳಿಕ ಅದನ್ನು ರಸ್ತೆ, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ಘಟನೆಗಳು ನಡೆಯುತ್ತಿವೆ. ಕಾಗದದ ಧ್ವಜಗಳು ಶೀಘ್ರ ಮಣ್ಣಿನಲ್ಲಿ ಸೇರಿಕೊಂಡರೆ, ಪ್ಲಾಸ್ಟಿಕ್ ಧ್ವಜಗಳು ಸುಲಭವಾಗಿ ನಾಶವಾಗದೆ ಪರಿಸರಕ್ಕೂ ಹಾನಿ ಉಂಟುಮಾಡುವುದರ ಜತೆಗೆ ರಾಷ್ಟ್ರಧ್ವಜದ ಗೌರವಕ್ಕೂ ಧಕ್ಕೆ ತರುತ್ತವೆ ಎಂದು ಸಮಿತಿ ತಿಳಿಸಿದೆ.
ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ತಯಾರಿಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಸರ್ಕಾರಿ ಮಾರ್ಗಸೂಚಿ ಮತ್ತು ಕಾನೂನುಗಳಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಂಗಡಿಗಳು, ಶಾಲಾ-ಕಾಲೇಜುಗಳ ಸುತ್ತಮುತ್ತ ಹಾಗೂ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಧ್ವಜಗಳ ಮಾರಾಟ ನಡೆಯದಂತೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತ್ರಿವರ್ಣ ವಿನ್ಯಾಸದ ಮಾಸ್ಕ್ಗಳ ಮಾರಾಟ ಹಾಗೂ ಬಳಕೆಯ ಬಗ್ಗೆಯೂ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ರಾಷ್ಟ್ರಧ್ವಜದ ಬಣ್ಣಗಳು ಅಥವಾ ಧ್ವಜದ ವಿನ್ಯಾಸವನ್ನು ಅಗೌರವವಾಗುವ ರೀತಿಯಲ್ಲಿ ಬಳಸುವುದನ್ನು ತಡೆಯಲು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜದ ಗೌರವ ಮತ್ತು ಸೂಕ್ತ ನಿರ್ವಹಣೆ ಕುರಿತು ಅರಿವು ಮೂಡಿಸಬೇಕು ಎಂದು ಆಗ್ರಹಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಕಾಶ ಕೋಟಿ, ವಿನಾಯಕ ಕೆ., ಭೀಮರಾಜ ದೊಡ್ಡಮನಿ, ಡಾ. ರವೀಂದ್ರ ನಂದಿ, ಲಕ್ಷ್ಮೀ ನಂದಿ, ಪ್ರವೀಣ ಬೆನ್ನೂರ, ವಸಂತ ಕುಲಕರ್ಣಿ, ಕರಿಸೋಮನಗೌಡ್ರು, ನಿರಂಜನ ನಾರಾಯಣಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಪ್ಲಾಸ್ಟಿಕ್ ಧ್ವಜಗಳ ಮಾರಾಟವನ್ನು ತಡೆದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.”
— ವೆಂಕಟರಮಣ ನಾಯಕ್, ಜಿಲ್ಲಾ ಸಮನ್ವಯಕ, ಹಿಂದೂ ಜನಜಾಗೃತಿ ಸಮಿತಿ, ಗದಗ



