ಮುಂಬೈ: ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟಾರ್ಗೆಟ್ ಆಗಿದ್ದ ಗಾಯಕ ಅದ್ನಾನ್ ಸಮಿ, ಟ್ರೋಲರ್ಸ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಬದುಕಿನ ಬಗ್ಗೆ ನಿರ್ಧಾರ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅದ್ನಾನ್ ಸಮಿ, ‘ನಾನು ನನ್ನ ಮನಸ್ಸಿಗೆ ಸರಿಯೆನಿಸುವುದನ್ನೇ ಮಾಡುತ್ತೇನೆ. ಸೋಶಿಯಲ್ ಮೀಡಿಯಾ ಜನರು ಏನು ಹೇಳುತ್ತಾರೆ ಎಂಬುದರ ಆಧಾರದ ಮೇಲೆ ನಾನು ಬದುಕುವುದಿಲ್ಲ. ನನ್ನ ಬಗ್ಗೆ ತೀರ್ಪು ಕೊಡುವ ಅಧಿಕಾರ ದೇವರಿಗೆ ಮಾತ್ರ ಇದೆ’ ಎಂದು ಹೇಳಿದ್ದಾರೆ.
‘ಇಂದಿನ ಸೋಶಿಯಲ್ ಮೀಡಿಯಾ ಸಂಸ್ಕೃತಿ ಜನರನ್ನು ಹಿನ್ನೆಲೆ ತಿಳಿಯದೇ ತೀರ್ಪು ಕೊಡಲು ಪ್ರೇರೇಪಿಸುತ್ತದೆ. ಒಂದು ಫೋಟೋ ನೋಡಿ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವೇ ಇಲ್ಲ. ನನ್ನನ್ನು ಟೀಕಿಸುವವರಲ್ಲಿ ಹೆಚ್ಚಿನವರು ನನ್ನ ಕೆಲಸವನ್ನೇ ಸರಿಯಾಗಿ ತಿಳಿದಿಲ್ಲ’ ಎಂದು ಅವರು ಹೇಳಿದ್ದಾರೆ.
ಮೋಹನ್ ಭಾಗವತ್ ಅವರನ್ನು ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡ ಅದ್ನಾನ್ ಸಮಿ, ‘ಅವರೊಂದಿಗೆ ನಡೆದ ಮಾತುಕತೆ ಬಹಳ ಉತ್ತಮ ಅನುಭವವಾಗಿತ್ತು. ಆರ್ಎಸ್ಎಸ್ ಬಗ್ಗೆ ಜನರಲ್ಲಿ ಇರುವ ಹಲವು ತಪ್ಪು ಕಲ್ಪನೆಗಳನ್ನು ಅವರು ಬಹಳ ಸರಳವಾಗಿ ವಿವರಿಸಿದರು’ ಎಂದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಹಂಚಿಕೊಂಡಿದ್ದ ಫೋಟೋಗಳಲ್ಲಿ ಮೋಹನ್ ಭಾಗವತ್ ಅವರನ್ನು ‘ಸುಸಂಸ್ಕೃತ ಮತ್ತು ಉದಾತ್ತ ವ್ಯಕ್ತಿ’ ಎಂದು ಹೊಗಳಿದ್ದ ಅದ್ನಾನ್ ಸಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಈಗ ಅದಕ್ಕೆ ನೇರ ಉತ್ತರ ನೀಡಿರುವ ಅವರು, ‘ನಾನು ಯಾರನ್ನೂ ಇತರರ ಅಭಿಪ್ರಾಯ ಆಧರಿಸಿ ನಿರ್ಣಯಿಸುವುದಿಲ್ಲ’ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.



