ಬೆಂಗಳೂರು: ಬಿಡುಗಡೆಗೆ ಕೇವಲ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ‘ಬಾಸ್’ ಚಿತ್ರ ಮತ್ತೊಮ್ಮೆ ಕಾನೂನು ವಿವಾದಕ್ಕೆ ಸಿಲುಕಿದೆ. ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಚಿತ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು, ಬಿಡುಗಡೆಗೆ ತಡೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ವಿ. ಲವ ನಿರ್ದೇಶನದ ಹಾಗೂ ತನಿಷ್ ಶಿವಣ್ಣ ಅಭಿನಯದ ‘ಬಾಸ್’ ಸಿನಿಮಾ ಆರಂಭದಿಂದಲೇ ಸುದ್ದಿಯಲ್ಲಿದೆ. ಚಿತ್ರದ ಟೀಸರ್ನಲ್ಲಿ ‘ನೈಜ ಘಟನೆಗಳ ಆಧಾರಿತ ಸಿನಿಮಾ’ ಎಂದು ಉಲ್ಲೇಖಿಸಿದ್ದರಿಂದ, ಇದು ದರ್ಶನ್ ಸುತ್ತಲಿನ ವಿವಾದಾತ್ಮಕ ಪ್ರಕರಣವನ್ನು ಆಧರಿಸಿದೆ ಎಂಬ ಚರ್ಚೆ ಜೋರಾಗಿತ್ತು.
ಈ ಹಿಂದೆ ವಿಜಯಲಕ್ಷ್ಮಿ ದರ್ಶನ್ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಮನವಿ ಮಾಡಿದ್ದರು. ಆದರೆ ಆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ, ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿರುವುದಾಗಿ ಹೇಳಿಕೊಂಡಿತ್ತು.
ಇದೀಗ ಪ್ರಕರಣ ಹೊಸ ತಿರುವು ಪಡೆದಿದ್ದು, ಹೈಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿದೆ. ಜೂನ್ 17ರಂದು ನಡೆಯಲಿರುವ ವಿಚಾರಣೆಯಲ್ಲಿ ನ್ಯಾಯಾಲಯದ ತೀರ್ಪು ಹೊರಬೀಳುವ ಸಾಧ್ಯತೆ ಇದೆ.
ಜೂನ್ 19ರಂದು ಸಿನಿಮಾ ಬಿಡುಗಡೆಗೆ ಸಿದ್ಧತೆ ಪೂರ್ಣಗೊಂಡಿದೆ. ಪ್ರಚಾರ ಅಭಿಯಾನ, ಜಾಹೀರಾತುಗಳು ಮತ್ತು ವಿತರಣೆ ಕಾರ್ಯಗಳನ್ನೂ ಚಿತ್ರತಂಡ ಮುಗಿಸಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಕೂಡ ಲಭಿಸಿದೆ.
ಆದರೆ ಚಿತ್ರದಲ್ಲಿನ ಪಾತ್ರಗಳು, ಘಟನೆಗಳು ಹಾಗೂ ಟೀಸರ್ನ ನಿರೂಪಣೆ ದರ್ಶನ್ ಪ್ರಕರಣದೊಂದಿಗೆ ಹೋಲಿಕೆ ಹೊಂದಿವೆ ಎಂಬ ವಾದ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡುವ ಆದೇಶದ ಮೇಲೆ ‘ಬಾಸ್’ ಚಿತ್ರದ ಬಿಡುಗಡೆ ಮತ್ತು ಮುಂದಿನ ಭವಿಷ್ಯ ಅವಲಂಬಿತವಾಗಿದೆ.



