ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸವು ಧಾರ್ಮಿಕ ಆಚರಣೆ, ಭಕ್ತಿ ಹಾಗೂ ಸತ್ಕಾರ್ಯಗಳಿಗೆ ವಿಶೇಷವಾದ ಮಾಸ. ಪುರಾಣ ಪ್ರವಚನಗಳ ಮೂಲಕ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಬೇಕು ಎಂದು ನೀಲಗುಂದದ ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗ ದೇವರು ಹೇಳಿದರು.
ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಪುರಾಣಗಳು ಕೇವಲ ಧಾರ್ಮಿಕ ಕಥೆಗಳಲ್ಲ. ಅವು ಸತ್ಯ, ಧರ್ಮ, ನೀತಿ ಹಾಗೂ ಸಂಸ್ಕಾರದ ಸಂದೇಶ ನೀಡುತ್ತವೆ. ಆಧುನಿಕ ಜೀವನಶೈಲಿಯ ನಡುವೆ ಯುವಜನತೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮರೆಯದೆ, ಹಿರಿಯರು ಪಾಲಿಸಿಕೊಂಡು ಬಂದ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಬೇಕು ಎಂದರು.
ಶ್ರಾವಣದಲ್ಲಿ ಪುರಾಣ ಶ್ರವಣ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜತೆಗೆ ಉತ್ತಮ ವಿಚಾರಗಳು ಬದುಕಿನಲ್ಲಿ ಮೂಡುತ್ತವೆ. ಸಮಾಜದಲ್ಲಿ ಒಗ್ಗಟ್ಟು ಹಾಗೂ ಪರಸ್ಪರ ಗೌರವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಜಯಲಕ್ಷ್ಮಿ ಗಡ್ಡದೇವರ ಮಠ ಕಾರ್ಯಕ್ರಮ ಉದ್ಘಾಟಿಸಿದರು. ಬಳಗದ ಅಧ್ಯಕ್ಷೆ ಸುವರ್ಣಭಾಯಿ ಬಹದ್ದೂರ್ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮಿ ಮಾಂತ ಶೆಟ್ಟರ್ ಹಾಗೂ ಎಸ್.ಎಫ್. ಆದಿ ಮುಖ್ಯ ಅತಿಥಿಗಳಾಗಿದ್ದರು. ಪ್ರಭು ಏಕಿಕೊಪ್ಪ ಪುರಾಣ ಪ್ರವಚನ ನಡೆಸಿಕೊಟ್ಟರು.
ಎಸ್.ಎಂ. ವಿರಕ್ತಮಠ ವೇದಘೋಷ ನೆರವೇರಿಸಿದರು. ಶಾರಕ್ಕಾ ಮಹಾಂತ ಶೆಟ್ಟರ್ ಸ್ವಾಗತಿಸಿದರು. ಎಸ್.ಎನ್. ಹುಲ್ಲಣ್ಣನವರ್ ಪುಷ್ಪಾರ್ಪಣೆ ಹಾಗೂ ಮಾಲಾರ್ಪಣೆ ನೆರವೇರಿಸಿದರು. ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು, ಬಳಗದ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
“ಪುರಾಣಗಳು ಜೀವನದ ಮೌಲ್ಯ, ಸತ್ಯ, ಧರ್ಮ, ನೀತಿ ಹಾಗೂ ಸಂಸ್ಕಾರದ ಸಂದೇಶವನ್ನು ನೀಡುತ್ತವೆ. ಇವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ.”
— ಶ್ರೀ ಪ್ರಭುಲಿಂಗ ದೇವರು, ಗುದ್ನೇಶ್ವರ ಮಠ, ನೀಲಗುಂದ



