ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಜಿಲೆಟಿನ್ ಹಾಗೂ ವೈಯರ್ ಪತ್ತೆಯಾದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸುವಂತೆ ಮಾಜಿ ಸಚಿವ ಬಿ. ಶ್ರೀರಾಮುಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ದೇಶದ ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಕಿಡಿಕಾರಿದರು.
“ಬೇರೆ ದೇಶಗಳಿಗೆ ಹೋದಾಗ ಪ್ರಧಾನಿ ಮೋದಿಗೆ ವಿಶೇಷ ಭದ್ರತೆ ಸಿಗುತ್ತದೆ. ಆದರೆ ಕರ್ನಾಟಕಕ್ಕೆ ಬಂದಾಗಲೇ ಭದ್ರತಾ ವೈಫಲ್ಯ ಏಕೆ? ಮೋದಿ ಅವರನ್ನು ಕೇವಲ ಬಿಜೆಪಿ ಪ್ರಧಾನಿಯಾಗಿ ನೋಡದೆ, ದೇಶದ ಪ್ರಧಾನಿಯಾಗಿ ಗೌರವಿಸಬೇಕು” ಎಂದು ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಭೇಟಿ ಮುನ್ನ ತುರ್ತು ಆಧಾರದಲ್ಲಿ 100ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳ ವರ್ಗಾವಣೆ ನಡೆದಿರುವುದನ್ನೂ ಪ್ರಶ್ನಿಸಿದ ಅವರು, “ಪ್ರಧಾನಿ ಕಾರ್ಯಕ್ರಮದ ಸಮಯದಲ್ಲೇ ಜಿಲೆಟಿನ್ ಮತ್ತು ವೈಯರ್ ಪತ್ತೆಯಾಗಿರುವುದು ಅತ್ಯಂತ ಗಂಭೀರ ವಿಚಾರ. ಮೋದಿ ಅವರಿಗೆ ಏನಾದರೂ ಆಗಿದ್ದರೆ ಯಾರು ಹೊಣೆ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಾದರೆ ಎನ್ಐಎ ತನಿಖೆ ಅಗತ್ಯ ಎಂದು ಆಗ್ರಹಿಸಿದ ಶ್ರೀರಾಮುಲು, “ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ವಿರುದ್ಧ ಅಸಹನೆ ಬಂದಿದೆ” ಎಂದು ಆರೋಪಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ನೀಡಿದ್ದ ‘ಮಿತ ಬಳಕೆ’ ಕರೆ ಕುರಿತು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ವಿಶ್ವ ಮಟ್ಟದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಆರ್ಥಿಕ ಸ್ಥಿರತೆಗೆ ಜನರು ಮಿತವಾಗಿ ಬಳಕೆ ಮಾಡಬೇಕು ಎಂಬ ಜವಾಬ್ದಾರಿಯುತ ಸಂದೇಶವನ್ನೇ ಮೋದಿ ನೀಡಿದ್ದಾರೆ” ಎಂದರು.
“ಮನಮೋಹನ್ ಸಿಂಗ್ ಮತ್ತು ಚಿದಂಬರಂ ಅವರ ಕಾಲದಲ್ಲೂ ಇದೇ ರೀತಿಯ ಆರ್ಥಿಕ ಎಚ್ಚರಿಕೆ ನೀಡಲಾಗಿತ್ತು. ಈಗ ಮೋದಿ ಹೇಳಿದಾಗ ಮಾತ್ರ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ಆರ್ಥಿಕ ಜವಾಬ್ದಾರಿ ಅರಿವಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಭಾರತದ ಜಾಗತಿಕ ಗೌರವ ಹೆಚ್ಚಲು ಮೋದಿ ನಾಯಕತ್ವವೇ ಕಾರಣ ಎಂದು ಹೇಳಿದ ಶ್ರೀರಾಮುಲು, “ಅಮೆರಿಕ, ಇಸ್ರೇಲ್, ಇರಾಕ್ ಯುದ್ಧಗಳ ನಡುವೆಯೂ ಭಾರತಕ್ಕೆ ತೈಲ ಪೂರೈಕೆ ನಿರಂತರವಾಗಿರುವುದು ಮೋದಿ ರಾಜತಾಂತ್ರಿಕತೆಯ ಫಲ” ಎಂದು ಶ್ಲಾಘಿಸಿದರು.



