ಬೆಂಗಳೂರು: ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಕ್ಕೆ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದೆ. ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಸೌತರ್ನ್ ರೈಲ್ವೆ ನಿರ್ಧರಿಸಿದೆ.
ಪ್ರಸ್ತುತ 8 ಬೋಗಿಗಳೊಂದಿಗೆ ಸಂಚರಿಸುತ್ತಿರುವ ಈ ರೈಲನ್ನು 16 ಬೋಗಿಗಳಿಗೆ ವಿಸ್ತರಿಸಲಾಗುತ್ತಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ. ಹೊಸ 16 ಬೋಗಿಗಳ ರೇಕ್ ಅನ್ನು ಜುಲೈ ಮೊದಲ ವಾರದಲ್ಲಿ ಸೇವೆಗೆ ಪರಿಚಯಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್ನಲ್ಲಿ ಆರಂಭವಾದ ಈ ರೈಲು ಸೇವೆಗೆ ಏಳು ತಿಂಗಳ ಬಳಿಕ ಮೊದಲ ಬಾರಿಗೆ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ.
ಓಣಂ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 21 ಮತ್ತು 22ರ ಪ್ರಯಾಣದ ಟಿಕೆಟ್ಗಳು ಬುಕ್ಕಿಂಗ್ ಆರಂಭವಾದ ಕೆಲವೇ ಸಮಯದಲ್ಲಿ ವೇಟಿಂಗ್ ಲಿಸ್ಟ್ಗೆ ತಲುಪಿದ್ದವು. ಹಬ್ಬದ ದಿನಗಳು ಹಾಗೂ ದೀರ್ಘ ವಾರಾಂತ್ಯಗಳಲ್ಲಿ ಈ ರೈಲಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ನಿರ್ಧರಿಸಿದೆ.
ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕೇರಳ ಮೂಲದ ಪ್ರಯಾಣಿಕರಿಂದ ಈ ರೈಲಿಗೆ ನಿರಂತರ ಉತ್ತಮ ಸ್ಪಂದನೆ ಸಿಗುತ್ತಿದೆ. ಹೆಚ್ಚುವರಿ ಬೋಗಿಗಳ ಸೇರ್ಪಡೆಯಿಂದ ಹಬ್ಬದ ಸಮಯದ ಪ್ರಯಾಣಿಕರ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.
ಈ ಬದಲಾವಣೆಯೊಂದಿಗೆ ರೈಲಿನ ಒಟ್ಟು ಆಸನ ಸಾಮರ್ಥ್ಯ 530ರಿಂದ 1,128ಕ್ಕೆ ಏರಿಕೆಯಾಗಲಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಪ್ರಯಾಣಿಕರಿಗೆ ಅವಕಾಶ ದೊರೆಯಲಿದೆ. ವಾರದಲ್ಲಿ ಆರು ದಿನ ರೈಲು ಸಂಚರಿಸುವುದರಿಂದ, ಒಂದು ದಿಕ್ಕಿನಲ್ಲಿ ವಾರಕ್ಕೆ 6,768 ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.
630 ಕಿಲೋಮೀಟರ್ ದೂರದ ಬೆಂಗಳೂರು–ಎರ್ನಾಕುಲಂ ಮಾರ್ಗವನ್ನು ಈ ವಂದೇ ಭಾರತ್ ರೈಲು ಕೇವಲ 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತಿದ್ದು, ಮಾರ್ಗ ಮಧ್ಯೆ ಒಂಬತ್ತು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಮಾಡುತ್ತದೆ ಎಂದು ವರದಿಯಾಗಿದೆ.



