Home Blog Page 10

ಏಕಾಏಕಿ ಹೊತ್ತಿಕೊಂಡ ಬೆಂಕಿ: 400ಕ್ಕೂ ಅಧಿಕ ಹತ್ತಿ ಚೀಲಗಳು ಸುಟ್ಟುಕರಕಲು!

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ 400ಕ್ಕೂ ಅಧಿಕ ಹತ್ತಿ ಚೀಲಗಳು ಸುಟ್ಟು ಕರಕಲಾಗಿರುವ ಘಟನೆ ಜರುಗಿದೆ.

ಘಟನೆಯಲ್ಲಿ ನಾಗಯ್ಯ ಮಿಣಜಗಿ ಎಂಬ ರೈತನಿಗೆ ಸೇರಿದ್ದ ಹತ್ತಿ ಚೀಲಗಳು ಬೆಂಕಿಗಾಹುತಿಯಾಗಿದೆ. ಹಳೆಯ ಪಾಳುಬಿದ್ದ ಶಾಲೆಯ ಕಟ್ಟಡದಲ್ಲಿ ನಾಗಯ್ಯ ಅವರು ಹತ್ತಿ ಚೀಲಗಳನ್ನು ಸಂಗ್ರಹಸಿಟ್ಟಿದ್ದರು.

ಏಕಾಏಕಿ ಹತ್ತಿ ಚೀಲಗಳಿಗೆ ಬೆಂಕಿ ಆವರಿಸಿದ ಪರಿಣಾಮ 400ಕ್ಕೂ ಅಧಿಕ ಚೀಲಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾಲ್ಡೀವ್ಸ್‌ನಲ್ಲಿ ಸ್ಪೀಡ್ ಬೋಟ್ ಅಪಘಾತ: ರೇಮಂಡ್ಸ್ ಮುಖ್ಯಸ್ಥ ಗೌತಮ್ ಸಿಂಘಾನಿಯಾಗೆ ಗಾಯ, ಇಬ್ಬರು ಭಾರತೀಯರು ನಾಪತ್ತೆ

0

ಮಾಲೆ: ಮಾಲ್ಡೀವ್ಸ್‌ನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಸ್ಪೀಡ್ ಬೋಟ್ ಮಗುಚಿ ಬಿದ್ದ ಪರಿಣಾಮ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಗಾಯಗೊಂಡಿದ್ದು, ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದಾರೆ.

ಶುಕ್ರವಾರ ಮುಂಜಾನೆ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಪಲ್ಟಿಯಾಗಿದ್ದು, ದೋಣಿಯಲ್ಲಿ ಒಟ್ಟು ಏಳು ಮಂದಿ ಇದ್ದರು ಎಂದು ತಿಳಿದು ಬಂದಿದೆ.

ಅಪಘಾತದ ನಂತರ ಗೌತಮ್ ಸಿಂಘಾನಿಯಾ ಅವರನ್ನು ತಕ್ಷಣ ರಕ್ಷಿಸಿ ಏರ್ ಲಿಫ್ಟ್ ಮೂಲಕ ಮುಂಬೈಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಮಾಲ್ಡೀವ್ಸ್ ಅಧಿಕಾರಿಗಳ ಪ್ರಕಾರ, ದೋಣಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐದು ಭಾರತೀಯರು ಇದ್ದರು. ಅಪಘಾತದ ವೇಳೆ ರಷ್ಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಇವರಲ್ಲಿ ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ ಖ್ಯಾತ ರ‍್ಯಾಲಿ ಚಾಲಕ ಹರಿ ಸಿಂಗ್ ಕೂಡ ಸೇರಿದ್ದಾರೆ.

ಸ್ಥಳೀಯ ಪೊಲೀಸ್ ಹಾಗೂ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಅಲೆಗಳ ಅಬ್ಬರದಿಂದ ಹುಡುಕಾಟ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಣಿಗಲ್ ಚುನಾವಣೆ ಕೇಸ್: ಬ್ಯಾಲೆಟ್ ಪೇಪರ್ ಅಕ್ರಮ ಆರೋಪ – ಶಾಸಕ ರಂಗನಾಥ್ ಬಂಧನಕ್ಕೆ ಛಲವಾದಿ ಒತ್ತಾಯ!

ಬೆಂಗಳೂರು: ಕುಣಿಗಲ್ ಸೊಸೈಟಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಶಾಸಕ ರಂಗನಾಥ್ ಅವರನ್ನು ತಕ್ಷಣ ಬಂಧಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಜಿಬಿಎ ಚುನಾವಣೆಯಲ್ಲಿ ಸರ್ಕಾರವೇ ಬ್ಯಾಲೆಟ್ ಪೇಪರ್ ಅಕ್ರಮಕ್ಕೆ ಕೈ ಹಾಕುತ್ತಿದೆ ಎಂದು ತೀವ್ರ ಆರೋಪಿಸಿದರು. ಕುಣಿಗಲ್ ಸಂತೆ ಮಾತೂರ್‌ನಲ್ಲಿ ನಡೆದ ಸೊಸೈಟಿ ಚುನಾವಣೆಯಲ್ಲಿ, ಅಧಿಕಾರಿಯೊಬ್ಬರು ಸ್ವತಃ ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಿ ನಂತರ ಬಾಕ್ಸ್‌ಗೆ ಹಾಕಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

“ನಮ್ಮ ಏಜೆಂಟ್ ಆ ಅಧಿಕಾರಿಯನ್ನು ಹಿಡಿದುಕೊಟ್ಟಿದ್ದರೂ, ಪೊಲೀಸರು ಆರೋಪಿಯನ್ನು ಬಂಧಿಸದೇ ತಪ್ಪಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆಯೇ FIR ದಾಖಲಿಸಲಾಗಿದೆ. ಅಕ್ರಮ ಮಾಡಿದವರ ವಿರುದ್ಧ ಕ್ರಮವೇ ಇಲ್ಲ. ಇದು ಯಾವ ರೀತಿಯ ನ್ಯಾಯ?” ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂತಹ ಮಾಲ್‌ಪ್ರಾಕ್ಟೀಸ್ ಸಾಮಾನ್ಯವಾಗಿದೆ ಎಂದು ಟೀಕಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ತಪ್ಪು ಆರೋಪದಲ್ಲಿ ಪ್ರಕರಣ ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕ ರಂಗನಾಥ್ ಈ ಅಕ್ರಮದ ಹಿಂದೆ ಇದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಅವರು, “ತಕ್ಷಣ ಬಂಧನ ಮಾಡಬೇಕು. ಇಲ್ಲದಿದ್ದರೆ ಈ ವಿಷಯವನ್ನು ಸದನದಲ್ಲಿ ಎತ್ತಿ ರಾಜ್ಯ ಮಟ್ಟದಲ್ಲಿ ಬಹಿರಂಗ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

IPL 2026: RCB ಟಿಕೆಟ್ ಹಂಟ್ ಶುರು! ಚಿನ್ನಸ್ವಾಮಿಯಲ್ಲಿ ಪಂದ್ಯಗಳಿಗೆ ಭಾರೀ ಕ್ರೇಜ್ – ಮೆಟ್ರೋ ಫ್ರೀ!

0

ಬೆಂಗಳೂರು: 2026ರ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಲ್ಲಿ ಟಿಕೆಟ್ ಕ್ರೇಜ್ ಗರಿಗೆದರಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತವರಿನ ಪಂದ್ಯಗಳಿಗೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದರಿಂದ, ಟಿಕೆಟ್‌ಗಳಿಗೆ ಭಾರೀ ಬೇಡಿಕೆ ನಿರೀಕ್ಷೆಯಾಗಿದೆ.

ಆರ್‌ಸಿಬಿ ಮ್ಯಾನೆಜ್‌ಮೆಂಟ್ ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಿಸಿದೆ. ಟಿಕೆಟ್‌ಗಳು ಕೇವಲ ಆರ್‌ಸಿಬಿ ಅಧಿಕೃತ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ ಮಾತ್ರ ಲಭ್ಯವಿರಲಿವೆ. ಮೊದಲ ಹಂತದಲ್ಲಿ ಸದಸ್ಯರಿಗೆ ಅವಕಾಶ ನೀಡಲಾಗುತ್ತದೆ, ನಂತರ ಸಾರ್ವಜನಿಕರಿಗೆ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಮಾರ್ಚ್ 28ರಂದು ಚಿನ್ನಸ್ವಾಮಿ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಮೊದಲ ಪಂದ್ಯ ಆಡಲಿದ್ದು, ಏಪ್ರಿಲ್ 5ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳಿಗೆ ಈ ಬಾರಿ ವಿಶೇಷ ಸೌಲಭ್ಯ – RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ! ಈ ಕುರಿತು ಸಿದ್ಧತೆಗಳು ನಡೆಯುತ್ತಿವೆ.

ಇತ್ತೀಚೆಗೆ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಸುರಕ್ಷತೆ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಗೇಟ್‌ಗಳು, ಎಂಟ್ರಿ-ಎಕ್ಸಿಟ್ ಮಾರ್ಗಗಳು ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ವಿಶೇಷ ಪ್ಲಾನ್ ಸಿದ್ಧಪಡಿಸಲಾಗಿದೆ. ಗರುಡಮಾಲ್, ಸೇಂಟ್ ಜೋಸೆಫ್ ಶಾಲೆಗಳು ಮತ್ತು ಫ್ರೀಡಂಪಾರ್ಕ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ.

ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳಿಂದ ಟಿಕೆಟ್ ಖರೀದಿಸಬೇಡಿ ಎಂದು ಆರ್‌ಸಿಬಿ ಎಚ್ಚರಿಕೆ ನೀಡಿದ್ದು, ಕಳೆದ ವರ್ಷದ ₹2,300 ರಿಂದ ₹42,000ರವರೆಗೆ ಟಿಕೆಟ್ ದರ ಇರಬಹುದೆಂಬ ನಿರೀಕ್ಷೆ ಇದೆ.

ಬೈ ಎಲೆಕ್ಷನ್| ನಾಳೆ ಬೆಳಗ್ಗೆ ಒಳಗೆ ಕಾಂಗ್ರೆಸ್ ಟಿಕೆಟ್ ಘೋಷಣೆ – ರಣದೀಪ್ ಸುರ್ಜೇವಾಲಾ!

ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆ ಬೆಳಗ್ಗೆಯೊಳಗೆ ಘೋಷಿಸಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಕುರಿತು ವ್ಯಾಪಕವಾಗಿ ಚರ್ಚೆ ನಡೆಸಲಾಗಿದ್ದು, ಯಾವುದೇ ಕಾರ್ಯಕರ್ತರ ಅಭಿಪ್ರಾಯವನ್ನು ನಿರ್ಲಕ್ಷಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಶುಕ್ರವಾರ ತಡರಾತ್ರಿವರೆಗೂ ಚರ್ಚೆ ನಡೆದಿದ್ದು, ಎಲ್ಲಾ ಮಟ್ಟದ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ ಎಂದರು.

ಇನ್ನೊಂದೆಡೆ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರತಿಕ್ರಿಯಿಸಿ, ಟಿಕೆಟ್ ಆಕಾಂಕ್ಷಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸುರ್ಜೇವಾಲಾ ಮತ್ತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ವೀಕ್ಷಕರು ಕ್ಷೇತ್ರಗಳಿಗೆ ಭೇಟಿ ನೀಡಿ ಸರ್ವೇ ನಡೆಸಿ ವರದಿ ಸಲ್ಲಿಸಿದ್ದು, ಎಲ್ಲಾ ಸಮುದಾಯಗಳ ಮನವಿಗಳನ್ನು ಪರಿಗಣಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ಪಕ್ಷದ ಉದ್ದೇಶ ಎಂದು ಅವರು ಹೇಳಿದರು.

ಸಿಲಿಂಡರ್‌ಗಳ ಮೇಲೆ ಕಳ್ಳರ ಕಣ್ಣು: 2 ತುಂಬಿದ ಗ್ಯಾಸ್ ಹೊತ್ತೊಯ್ದ ಖದೀಮರು!

ಬೆಂಗಳೂರು: ಇರಾನ್-ಇಸ್ರೆಲ್ ಸಂಘರ್ಷದ ಪರಿಣಾಮ ರಾಜ್ಯದಲ್ಲಿ ಸಿಲಿಂಡರ್ ಅಭಾವ ತಲೆದೋರಿದೆ.

ಈ ನಡುವೆಯೇ ಯುಗಾದಿಯಂದು 2 ಗೃಹ ಬಳಕೆ ಸಿಲಿಂಡರ್‌ಗಳನ್ನು ಪುಂಡರು ಕದ್ದು ಎಸ್ಕೇಪ್ ಆಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಬೇಗೂರು ಬಳಿಯ ಆರ್‌ಸಿ ಲೇಔಟ್‌ನ ವಿಶ್ವಪ್ರಿಯ ಅಪಾರ್ಟ್ಮೆಂಟ್‌ನಲ್ಲಿ ಜರುಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಎಫೆಕ್ಟ್ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಇದರ ಎಫೆಕ್ಟ್ ಭಾರತ ದೇಶದ ಮೇಲೂ ಇದ್ದು, ಸಿಲಿಂಡರ್ ಬಳಕೆಯಲ್ಲಿ ಮಿತವ್ಯಯ ಉಂಟಾಗಿದೆ. ರಾಜ್ಯದಲ್ಲಿ ಸಿಲಿಂಡರ್‌ಗಾಗಿ ಜನರು ಪರದಾಡುವಂತಾಗಿದೆ. ಇಂತಹ ಹೊತ್ತಲ್ಲಿ ಬೆಂಗಳೂರಿನ ಬೇಗೂರಿನಲ್ಲಿ ಯುಗಾದಿ ಹಬ್ಬದ ದಿನವೇ ಅಪಾರ್ಟ್ಮೆಂಟ್‌ಗೆ ನುಗ್ಗಿದ ಇಬ್ಬರು ಅಪರಿಚಿತ ಯುವಕರು, ಎರಡು ಗೃಹಬಳಕೆ ಸಿಲಿಂಡರ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.

ಗುರುವಾರ ಮಧ್ಯಾಹ್ನದ ಹೊತ್ತಿಗೆ ಹೆಲ್ಮೆಟ್ ಧರಿಸಿ ಇಬ್ಬರು ಯುವಕರು ಬೈಕ್‌ನಲ್ಲಿ ಬಂದಿದ್ದರು. ಒಬ್ಬ ಹೊರಗೆ ನಿಂತಿದ್ದ ಮತ್ತೊಬ್ಬ ಬೈಕ್ ಸಮೇತ ಒಳಗೆ ಹೋಗಿ ಎರಡು ಸಿಲಿಂಡರ್‌ಗಳನ್ನು ಕಳವು ಮಾಡಿ ಹಾಡಹಗಲೇ ಯಾರಿಗೂ ಅನುಮಾನ ಬಾರದಂತೆ ಎಸ್ಕೇಪ್ ಆಗಿದ್ದಾರೆ. ಸಿಲಿಂಡರ್ ಕಳ್ಳತನದ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಮನೆ ಮಾಲೀಕರು ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಹೆಚ್‌ಪಿ ಗ್ಯಾಸ್ ಟ್ಯಾಂಕರ್‌ನಲ್ಲಿ ಏಕಾಏಕಿ ಗ್ಯಾಸ್ ಸೋರಿಕೆ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಕ್ರಾಸ್ ಬಳಿ ಅವಘಡ ಸಂಭವಿಸಿದೆ.

ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ಹೆಚ್‌ಪಿ ಗ್ಯಾಸ್ ಟ್ಯಾಂಕರ್‌ನಲ್ಲಿ ಏಕಾಏಕಿ ಗ್ಯಾಸ್ ಸೋರಿಕೆಯಾಗಿದೆ. ಬೃಹತ್ ವಾಹನದಲ್ಲಿ 18 ಟನ್ ಹೆಚ್‌ಪಿ ಗ್ಯಾಸ್ ಧಾರವಾಡಕ್ಕೆ ತರಲಾಗುತಿತ್ತು. ಈ ವೇಳೆ ಕಲಘಟಗಿ ಸಮೀಪದಲ್ಲಿ ಗ್ಯಾಸ್ ಸೋರಿಕೆ ಆಗುತ್ತಿರುವುದು ಕಂಡುಬಂದಿದೆ. ಹೀಗಾಗಿ ವಾಹನವನ್ನು ನಿಲ್ಲಿಸಿದ ಚಾಲಕ ಸಂಬಂಧಪಟ್ಟ ಕಂಪನಿಗೆ ವಿಷಯ ತಿಳಿಸಿದ್ದಾನೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಮೊದಲಿಗೆ ಕಲಘಟಗಿ, ಯಲ್ಲಾಪುರ ಮಾರ್ಗದಲ್ಲಿ ಸಂಚಾರ ನಿಷೇಧ ಮಾಡಿದ್ದಾರೆ. ಎರಡು ಕಿಲೊಮೀಟರ್ ಅಂತರದಲ್ಲಿ ಜನರ ಸಂಚಾರಕ್ಕೂ ಸಹ ನಿಷೇಧ ಹೇರಲಾಗಿದೆ.

ಸದ್ಯ ಸ್ಥಳಕ್ಕೆ ಮತ್ತೊಂದು ಟ್ಯಾಂಕರ್ ತಂದು ಅದರಲ್ಲಿ ಉಳಿದ ಗ್ಯಾಸ್ ವರ್ಗಾವಣೆ ಮಾಡಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಅತ್ಯಂತ ಸೂಕ್ಷ್ಮವಾಗಿ ತಜ್ಞರ ನೇತೃತ್ವದಲ್ಲಿ ಗ್ಯಾಸ್ ತುಂಬಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಜೂಜಾಟ‌ದ ವೇಳೆ ಪೋಲೀಸರ ದಾಳಿ: ತಪ್ಪಿಸಿಕೊಳ್ಳುವ ಭರದಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿ ಸಾವು!

ಹಾಸನ: ಯುಗಾದಿ ಹಬ್ಬ ಬಂತು ಅಂದ್ರೆ ಸಾಕು ಜೂಜಾಡುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಪೊಲೀಸರಿಗೆ ಗೊತ್ತಾಗಬಾರದು ಅಂತ ಕದ್ದುಮುಚ್ಚಿ ಆಟ ಆಡೋದು ಕಾಮನ್.

ಆದ್ರೆ ಇಲ್ಲಿ ಪೊಲೀಸರ ಕಣ್ತಪ್ಪಿಸಿ ಜೂಜಾಡುತ್ತಿದ್ದಾಗ ಖಾಕಿಯ ದಿಢೀರ್ ಎಂಟ್ರಿ ದುರಂತಕ್ಕೆ ದಾರಿಮಾಡಿಕೊಟ್ಟಿದೆ. ಎಸ್, ಅರಸೀಕೆರೆ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಜೂಜಾಡುವ ವೇಳೆ ಪೊಲೀಸರು ದಾಳಿ ನಡೆಸಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. 34 ವರ್ಷದ ಪ್ರವೀಣ್ ಮೃತಪಟ್ಟ ವ್ಯಕ್ತಿ.

ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಪಕ್ಕದ ತಾವರೆಹಳ್ಳಿ ನಿರ್ಜನ ಪ್ರದೇಶದಲ್ಲಿ ಯುವಕರ ಗುಂಪು ಜೂಜಾಡುತ್ತಿದ್ದರು. ಜೂಜಾಟದ ವಿಷಯ ತಿಳಿದು ಜಾವಗಲ್ ಪೊಲೀಸರು ದಾಳಿ‌ ಮಾಡಿದ್ದಾರೆ. ಈ ವೇಳೆ ಸ್ಥಳದಿಂದ‌ ತಪ್ಪಿಸಿಕೊಳ್ಳಲು‌ ಜೂಜಾಡುತ್ತಿದ್ದ ಯುವಕರು ಓಡಿದ್ದಾರೆ. ಮೂರ್ಛೆ ರೋಗದಿಂದ ಬಳಲುತ್ತಿದ್ದ ಪ್ರವೀಣ್ ಓಡುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಶಂಕಿಸಿಲಾಗಿದೆ.

ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹಾಸನದ ಹಿಮ್ಸ್‌ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಇನ್ನೂ ಅಚ್ಚರಿ ಎಂಬಂತೆ ಶವದ ಮೇಲೆ ರಕ್ತದ ಕಲೆಗಳಿರುವ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಚುರುಕು ತನಿಖೆ ಕೈಗೊಂಡಿದ್ದಾರೆ.

ಬಾಕಿ ನೀರಿನ ಬಿಲ್ ಪಾವತಿಸದ ಗ್ರಾಹಕರಿಗೆ ಗುಡ್ ನ್ಯೂಸ್: ಬಡ್ಡಿ ಮನ್ನಾ ಯೋಜನೆ ಜಾರಿ!?

ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಎಸ್, ಬೆಂಗಳೂರು ಜಲಮಂಡಳಿಯು ಬಾಕಿ ನೀರಿನ ಬಿಲ್ ಪಾವತಿಸದ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಏಪ್ರಿಲ್‌ನಿಂದ ಮೂರು ತಿಂಗಳ ಅವಧಿಗೆ ಶೇ100ರಷ್ಟು ಬಡ್ಡಿ ಮನ್ನಾ ಯೋಜನೆ ಜಾರಿಗೆ ತರಲಾಗಿದೆ.

ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಈ ಅವಧಿಯಲ್ಲಿ ಗ್ರಾಹಕರು ತಮ್ಮ ಬಾಕಿ ನೀರಿನ ಬಿಲ್ ಪಾವತಿಸಿದರೆ ಶೇ100ರಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಗೃಹ, ವಾಣಿಜ್ಯ ಹಾಗೂ ಕೈಗಾರಿಕಾ ಸೇರಿದಂತೆ ಎಲ್ಲಾ ವರ್ಗದ ಗ್ರಾಹಕರಿಗೂ ಈ ಸೌಲಭ್ಯ ಅನ್ವಯವಾಗಲಿದೆ. ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯ ಎಲ್ಲಾ ಬಳಕೆದಾರರು ಇದರ ಪ್ರಯೋಜನ ಪಡೆಯಬಹುದು. ಈ ವಿಶೇಷ ಅವಕಾಶವನ್ನು ಮುಂದಿನ ಮೂರು ತಿಂಗಳಲ್ಲಿ ಬಳಸಿಕೊಳ್ಳುವಂತೆ ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ.

ಭೀಕರ ಅಪಘಾತ: ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4ರ ಬಾಲಕಿ ಸಾವು!

ಬೆಂಗಳೂರು: ಬೆಂಗಳೂರಿನ ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ಭೀಕರ ಅಪಘಾತ ಸಂಭವಿಸಿದೆ.

ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು 4 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. 4 ವರ್ಷದ ನಿಶಿಕಾ ಮೃತ ಬಾಲಕಿ. ಯುಗಾದಿ ಹಬ್ಬ ಮುಗಿಸಿ ತಾಯಿ-ಮಗಳು ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ತೆರಳುತ್ತಿದ್ದರು. ಎರಡನೇ ಮಗು ಕಂಕುಳಲ್ಲಿ ಹಾಗೂ ಮೊದಲ ಮಗುವಿನ ಕೈ ಹಿಡಿದು ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಲಾರಿ ಏಕಾಏಕಿ ಮಗುವಿನ ಮೇಲೆ ಹರಿದಿದೆ.

ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಗು ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನಿಸಲಾಗಿದೆ.

ಕಣ್ಣೆದುರು ಮಗುವಿನ ಸಾವು ಕಂಡ ಹೆತ್ತ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ

error: Content is protected !!