Home Blog Page 13

ಟ್ರಿಬಲ್ ಹಣದ ಆಮಿಷ, ಅಧಿಕಾರಿಗಳ ನಕಲಿ ವೇಷ! 24 ಲಕ್ಷ ದೋಚಿದ ಗ್ಯಾಂಗ್ ಬಯಲು

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿನಿಮಾವನ್ನೇ ಮೀರಿಸುವ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಹೆಸರಿನಲ್ಲಿ ಅಧಿಕಾರಿಗಳಂತೆ ನಟಿಸಿ 24 ಲಕ್ಷ ರೂ. ಹಣ ದೋಚಲಾಗಿದೆ.

ಈ ಪ್ರಕರಣದಲ್ಲಿ ಕೃಷ್ಣಕುಮಾರ್ ನೇತೃತ್ವದ 12 ಮಂದಿಯ ಗ್ಯಾಂಗ್ ಭಾಗಿಯಾಗಿದ್ದು, ಇದುವರೆಗೆ 9 ಆರೋಪಿಗಳನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ದೋಚಿದ ಹಣ ವಶಪಡಿಸಿಕೊಳ್ಳಲಾಗಿದೆ.

ಶಂಕರಪ್ಪ ಎಂಬುವರಿಗೆ ಹಣವನ್ನು ಮೂರರಷ್ಟು ಮಾಡಿಕೊಡುವುದಾಗಿ ಹೇಳಿ ಕರೆಸಿಕೊಂಡ ಆರೋಪಿಗಳು, ಖಾಸಗಿ ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟು ಹಣ ಕಸಿದುಕೊಂಡಿದ್ದಾರೆ.

ಆಘಾತಕಾರಿ ಸಂಗತಿ ಏನೆಂದರೆ, ದರೋಡೆ ಬಳಿಕ ಎ1 ಆರೋಪಿ ಕೃಷ್ಣಕುಮಾರ್ ತಾನೇ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಆದರೆ ಪೊಲೀಸರ ಕಠಿಣ ವಿಚಾರಣೆಯಲ್ಲಿ ಅವನೇ ಸಂಚಿನ ಸೂತ್ರಧಾರ ಎಂಬುದು ಬಹಿರಂಗವಾಗಿದೆ.

ಜೈಲಿನಲ್ಲೇ ಇರುವ ದರ್ಶನ್‌ಗೆ ಕೋರ್ಟ್ ರಿಲೀಫ್: ಲೈಸೆನ್ಸ್ ಅಮಾನತು ಕ್ರಮಕ್ಕೆ ತಾತ್ಕಾಲಿಕ ತಡೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಜಾಮೀನು ರದ್ದಾದ ಬಳಿಕ ಅವರ ಗನ್ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಪೀಠ ಅಮಾನತು ಕ್ರಮಕ್ಕೆ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದ್ದು, ಇದರಿಂದ ದರ್ಶನ್‌ಗೆ ಸಣ್ಣ ಮಟ್ಟಿನ ಕಾನೂನು ಬಲ ದೊರಕಿದೆ. ಆದರೂ ಅವರು ಇನ್ನೂ ಜೈಲಿನಲ್ಲೇ ಇದ್ದು, ಪ್ರಕರಣದ ವಿಚಾರಣೆ ಮುಂದುವರಿಯುತ್ತಿದೆ.

ಅಭಿಮಾನಿಗಳು ದರ್ಶನ್ ಬಿಡುಗಡೆಗಾಗಿ ಕಾಯುತ್ತಿದ್ದರೂ, ಸದ್ಯಕ್ಕೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಪ್ರಕರಣದ ಮುಂದಿನ ಹಂತಗಳತ್ತ ಎಲ್ಲರ ಗಮನ ನೆಟ್ಟಿದೆ.

ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ವಿಚಾರ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು..?

0

ಬೆಂಗಳೂರು: “ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ವಿಚಾರ ಚರ್ಚೆಯಲ್ಲಿದೆ. ಪೋಷಕರಿಂದಲೂ ಈ ಬಗ್ಗೆ ಒತ್ತಡವಿದೆ. ಅನೇಕ ದೇಶಗಳಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ‌ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.

ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ವಿಚಾರವಾಗಿ ಕೇಳಿದಾಗ, “ನಮ್ಮ ಶಾಲೆಗಳಲ್ಲೂ ಮೊಬೈಲ್ ಬ್ಯಾನ್ ಮಾಡಿದ್ದೇವೆ. ಯಾವ ರೀತಿ ಮೊಬೈಲ್ ಬಳಕೆ ದುರುಪಯೋಗವಾಗುತ್ತಿದೆ ಎಂದು ಬಹಿರಂಗಗೊಳಿಸಲು ಆಗುವುದಿಲ್ಲ. ಅದಕ್ಕೆ ಈ ವಿಚಾರವಾಗಿ ಚರ್ಚೆ ನಡೆಸಲಾಗುತ್ತಿದೆ” ಎಂದರು.

ಸಚಿವ ಮಹದೇವಪ್ಪ ಅವರು ದಲಿತ ಸಿಎಂ ವಿಚಾರ ಮಂಡಿಸಿರುವ ಬಗ್ಗೆ ಕೇಳಿದಾಗ, “ಅವರು ನಮ್ಮ ರಾಷ್ಟ್ರೀಯ ನಾಯಕರು. ಅವರಿಗೆ ಇಲ್ಲಿಂದಲೇ ನಮಸ್ಕಾರ” ಎಂದರು. ರಾಷ್ಟ್ರೀಯ ನೀರು ಗುಣಮಟ್ಟ ಪ್ರಮಾಣಿತ ಸಂಸ್ಥೆಯು ಬೆಂಗಳೂರು ಕೆರೆಗಳ ನೀರು ಕುಡಿಯಲು ಅರ್ಹವಲ್ಲ ಎಂದು ನೀಡಿರುವ ವರದಿ ಬಗ್ಗೆ ಕೇಳಿದಾಗ,

“ಬೆಂಗಳೂರಿನ ಕೆರೆ ನೀರನ್ನು ಕುಡಿಯಲು ಹಾಗೂ ಸ್ನಾನಕ್ಕೆ ಬಳಸಿ ಎಂದು ಸರ್ಕಾರ ಹೇಳಿಲ್ಲ. ಈ ಕೆರೆಗಳು ಇರುವುದು ಅಂತರ್ಜಲ ಹೆಚ್ಚಳ ಮಾಡಲು. ತಿಪ್ಪಗೊಂಡನಹಳ್ಳಿ ಕೆರೆ ನೀರನ್ನು ಬಿಡ್ಬ್ಯೂ ಎಸ್ ಎಸ್ ಬಿಯಿಂದ ಶುದ್ದಿ ಮಾಡಲಾಗುತ್ತಿದೆ. ಬೆಂಗಳೂರಿನ ಕೆರೆಗಳ ನೀರು ಕುಡಿಯಲು, ಸ್ನಾನ‌ಮಾಡಲು ಅಲ್ಲ” ಎಂದರು.

ವಿಬಿ ಗ್ರಾಮ್ ಜೀ ವಿಚಾರವಾಗಿ ಕೇಳಿದಾಗ, “ವಿಬಿ ಗ್ರಾಮ್ ಜೀ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾಗೂ ಯಾವುದೇ ನಿರ್ದೇಶನ ನೀಡಿಲ್ಲ. ಈ ಹಿಂದೆ ಕೂಲಿ ಮಾಡಿದವರಿಗೂ ಹಣ ಬಿಡುಗಡೆ ಮಾಡಿಲ್ಲ. ಕಾಯ್ದೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಕೂಲಿ ಕಾರ್ಮಿಕರು, ಬಡವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ನರೇಗಾ ಬಚಾವ್ ಆದೋಂಲನ ಹೋರಾಟ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು‌.

ಆನ್‌ಲೈನ್ ಗೇಮ್ ವ್ಯಸನಕ್ಕೆ ಮತ್ತೊಂದು ಬಲಿ: ವೃದ್ಧೆ ಹತ್ಯೆ ಮಾಡಿ ಚಿನ್ನ ದೋಚಿದ ಯುವಕ ಅರೆಸ್ಟ್

0

ದಾವಣಗೆರೆ: ಜಿಲ್ಲೆಯಲ್ಲಿ ಆನ್‌ಲೈನ್ ಗೇಮ್ ವ್ಯಸನದಿಂದ ಭೀಕರ ಅಪರಾಧ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ಸಾಲ ತೀರಿಸಲು ವೃದ್ಧೆಯನ್ನೇ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ಪ್ರಕರಣವು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಫೆಬ್ರವರಿ 2ರಂದು ನಡೆದ ಈ ಘಟನೆ ಇದೀಗ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಗ್ರಾಮದಲ್ಲಿ ವಾಸವಾಗಿದ್ದ 64 ವರ್ಷದ ವೃದ್ಧೆ ಕಮಲಮ್ಮ ಅವರ ಮನೆಗೆ ನುಗ್ಗಿದ ಆರೋಪಿಯು ಅವರನ್ನು ಹತ್ಯೆ ಮಾಡಿ ಸುಮಾರು 8.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ತನಿಖೆಯಲ್ಲಿ ಆರೋಪಿಯ ಗುರುತು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ನಿವಾಸಿ ಅಭಿಷೇಕ (23) ಬಂಧಿತ ಆರೋಪಿ. ಆನ್‌ಲೈನ್ ಗೇಮ್ ವ್ಯಸನದಿಂದ ಆತ 20 ರಿಂದ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದನು ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಸಾಲಗಾರರ ಒತ್ತಡದಿಂದ ತಪ್ಪಿಸಿಕೊಳ್ಳಲು ಆತ ಮನೆ ಬಿಟ್ಟು ಬಸ್ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದ. ನಂತರ ಹಬ್ಬದ ಸಮಯದಲ್ಲಿ ಚಿನ್ನಾಭರಣ ಧರಿಸಿ ದೇವಸ್ಥಾನಕ್ಕೆ ಬಂದಿದ್ದ ಕಮಲಮ್ಮ ಅವರನ್ನು ಗುರಿಯಾಗಿಸಿಕೊಂಡಿದ್ದಾನೆ. ಮನೆ ಹಿಂಬಾಗಿಲಿನಿಂದ ಒಳನುಗ್ಗಿ, ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ ಚಿನ್ನ ದೋಚಿದ್ದಾನೆ ಎಂದು ಆರೋಪಿಸಲಾಗಿದೆ.

ದೋಚಿದ ಚಿನ್ನವನ್ನು ಶಿಕಾರಿಪುರದ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಹಣ ಪಡೆದು ಮತ್ತೆ ಆನ್‌ಲೈನ್ ಗೇಮ್ ಆಡಲು ಬಳಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ದಾವಣಗೆರೆ ಎಸ್‌ಪಿ ಎಚ್.ಟಿ. ಶೇಖರ್ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಮತ್ತೆ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ! ತನಿಖೆ ಚುರುಕು

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇರುವ ಎರಡು ಪ್ರಮುಖ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಮೂಲಕ ಬಂದಿದೆ. ಧೌಲಾ ಕುವಾನ್‌ನ ಆರ್ಮಿ ಪಬ್ಲಿಕ್ ಸ್ಕೂಲ್ ಹಾಗೂ ಲೋಧಿ ರಸ್ತೆಯ ಏರ್ ಫೋರ್ಸ್ ಬಾಲ್ ಭಾರತಿ ಸ್ಕೂಲ್ ಗಳಿಗೆ ಸ್ಫೋಟ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆದರಿಕೆ ಇ-ಮೇಲ್ ಬಂದ ತಕ್ಷಣ ಶಾಲಾ ಆಡಳಿತ ಮಂಡಳಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಎರಡೂ ಶಾಲೆಗಳನ್ನು ತಕ್ಷಣವೇ ಖಾಲಿ ಮಾಡಿಸಲಾಯಿತು. ಬಳಿಕ ಪೊಲೀಸ್, ಬಾಂಬ್ ನಿಷ್ಕ್ರಿಯಗೊಳಿಸುವ ದಳ, ಡಾಗ್ ಸ್ಕ್ವಾಡ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶಾಲಾ ಆವರಣದ ಸಂಪೂರ್ಣ ಪರಿಶೀಲನೆ ನಡೆಸಿದರು.

12ನೇ ತರಗತಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ನಾಲ್ಕು ದಿನಗಳ ಅಂತರದಲ್ಲಿ ಇದು ಎರಡನೇ ಬೆದರಿಕೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಭದ್ರತಾ ಕಾರಣಗಳಿಂದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ದೆಹಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಎರಡೂ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಧಮಕಿ ಬಂದಿರುವುದನ್ನು ದೃಢಪಡಿಸಿದರು. ಸೈಬರ್ ಸೆಲ್ ಸಹಾಯದಿಂದ ಇ-ಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಈ ಘಟನೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.

 ಮೆಟ್ರೋ ದರ ಏರಿಕೆ ಬಗ್ಗೆ ಮತ್ತೆ ಚರ್ಚೆ: ಡಿಕೆಶಿಗೆ ಆಡಿಟ್‌ ರಿಪೋರ್ಟ್‌ ಸಲ್ಲಿಕೆ ಮಾಡಲಿರೋ BMRCL!

0

ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದ್ದರೂ, ಇದೀಗ ಮತ್ತೆ ದರ ಪರಿಷ್ಕರಣೆ ವಿಚಾರ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ಬಾರಿ ನಿಗದಿಯಾಗಿದ್ದ 5% ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಮೆಟ್ರೋ ಖರ್ಚು-ವೆಚ್ಚಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಎಂಆರ್ಸಿಎಲ್ ಗೆ ಸೂಚನೆ ನೀಡಿದ್ದರು.

ಇದೀಗ ಬಿಎಂಆರ್ಸಿಎಲ್ ಆಂತರಿಕ ಆಡಿಟ್ ಪೂರ್ಣಗೊಳಿಸಿದ್ದು, ಮೆಟ್ರೋ ನಿರ್ವಹಣೆ, ಕಾರ್ಯಾಚರಣೆ ವೆಚ್ಚ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗಿದೆ. ಆಡಿಟ್ ವರದಿಯನ್ನು ಡಿಸಿಎಂ ಗಮನಕ್ಕೆ ತರಲು ಸಂಸ್ಥೆ ಮುಂದಾಗಿದೆ.

ಆಡಿಟ್ ಪೂರ್ಣಗೊಂಡ ಹಿನ್ನೆಲೆ ಮತ್ತೆ ದರ ಏರಿಕೆ ಚರ್ಚೆ ಜೋರಾಗಿದೆ. ಆರಂಭದಲ್ಲಿ ನಿಗದಿಯಾಗಿದ್ದ 5% ಏರಿಕೆಯನ್ನು 1% ಅಥವಾ 2%ಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ದರದಲ್ಲಿ ಹೆಚ್ಚಳವಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುತ್ತಿಲ್ಲ.

ಹೊಸ ದರ ನಿಗದಿ ಮಾಡಲು ಪ್ರತ್ಯೇಕ ಸಮಿತಿ ರಚನೆ ಅಗತ್ಯವಿದೆ. ಈ ಸಂಬಂಧ ಮೆಟ್ರೋ ಬೋರ್ಡ್ ಸಭೆಯ ದಿನಾಂಕ ನಿಗದಿ ಮಾಡುವಂತೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಮನವಿ ಮಾಡಲು ಮುಂದಾಗಿದ್ದಾರೆ. ಬೋರ್ಡ್ ಸಭೆಯ ಬಳಿಕ ಅಂತಿಮ ದರ ಏರಿಕೆ ಅಥವಾ ಇಳಿಕೆ ಕುರಿತು ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ.

ಬಿಜೆಪಿ ಜೊತೆ ರಾಜಿ ಡಿಕೆಶಿ ಮಾಡಿಕೊಂಡಿದ್ರೆ ಇಷ್ಟೊತ್ತಿಗೆ ಎಲ್ಲಿರುತ್ತಿದ್ದರೋ ಗೊತ್ತಿಲ್ಲ: ಹೆಚ್. ಸಿ. ಬಾಲಕೃಷ್ಣ

0

ರಾಮನಗರ: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕು ಎಂಬ ಬೇಡಿಕೆ ಇನ್ನೂ ತಣ್ಣಗಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ನಾಯಕನಿಗೆ ಅವಕಾಶ ನೀಡಬೇಕು ಎಂದು ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಮಾಗಡಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಇತರ ಕೆಲ ನಾಯಕರಂತೆ ಬಿಜೆಪಿ ಜೊತೆ ರಾಜಿ ಡಿಕೆಶಿ ಮಾಡಿಕೊಂಡಿದ್ರೆ ಇಷ್ಟೊತ್ತಿಗೆ ಎಲ್ಲಿರುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ತೊರೆದಿಲ್ಲ ಎಂದು ಹೇಳಿದರು.

1994ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಆ ವೇಳೆ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂದಾಗ ಹಲವರು ಆ ಪಕ್ಷಕ್ಕೆ ಸೇರಿದರು. ಆದರೆ ಶಿವಕುಮಾರ್ ಯಾವುದೇ ಕಾರಣಕ್ಕೂ ಜೆಡಿಎಸ್ ಸೇರಲಿಲ್ಲ ಎಂದು ವಿವರಿಸಿದರು.

ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭ ಅವರನ್ನು ಪ್ರಕರಣದಲ್ಲಿ ಭಾಗಿಯಾದರೆಂದು ಆರೋಪಿಸಿ ಜೈಲಿಗೆ ಕಳುಹಿಸಲಾಯಿತು. ಇಷ್ಟೆಲ್ಲ ಸವಾಲುಗಳ ನಡುವೆಯೂ ಅವರು ಕಾಂಗೆಸ್ ಪಕ್ಷದಲ್ಲೇ ಉಳಿದುಕೊಂಡಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.

ಹೀಗಾಗಿ ನಮ್ಮ ನಾಯಕರಿಗೂ ಅವಕಾಶ ನೀಡಬೇಕು ಎಂದು ನಾವು ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ. ಡಿ.ಕೆ. ಶಿವಕುಮಾರ್ ಸಿಎಂ ಆದರೆ ನಮ್ಮ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಅದು ನಮ್ಮ ಸ್ವಾರ್ಥವೂ ಹೌದು ಎಂದು ಹೇಳಿದ್ದಾರೆ.

ಒಳ ಮೀಸಲಾತಿ ಗೊಂದಲ ನಿವಾರಣೆಗೆ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು

0

ಬೆಂಗಳೂರು: ಒಳ ಮೀಸಲಾತಿ ಗೊಂದಲ ನಿವಾರಣೆ ಮಾಡುವಂತೆ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ್ ಕಾರಜೋಳ ನೇತೃತ್ವದಲ್ಲಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಯಿತು.

ದೂರು ಸಲ್ಲಿಸಿದ ಬಳಿಕ ಮಾತನಾಡಿದ ಕಾರಜೋಳ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಸಮರ್ಪಕವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದರು. “25-30 ವರ್ಷಗಳ ಹೋರಾಟದ ನಂತರವೂ ನ್ಯಾಯ ಸಿಗಲಿಲ್ಲ. ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ,” ಎಂದು ಅವರು ಕಿಡಿಕಾರಿದರು.

ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ನಾಗಮೋಹನ್ ದಾಸ್ ಹಾಗೂ ಮಾಧುಸ್ವಾಮಿ ವರದಿಗಳನ್ನು ಜಾರಿಗೆ ತರಲಿಲ್ಲ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯ ಆದೇಶ ಪಾಲಿಸಬೇಕಿತ್ತು, ಆದರೆ ಚರ್ಚೆ ಇಲ್ಲದೆ ಬಿಲ್ ಪಾಸ್ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸಿಎಂ–ಕೇಂದ್ರ ಸಚಿವರ ಜಟಾಪಟಿ: ಸಾಮಾಜಿಕ ನ್ಯಾಯ ವಿಚಾರದಲ್ಲಿ ಸಿದ್ದರಾಮಯ್ಯ ಪರ ಪರಮೇಶ್ವರ್ ಬ್ಯಾಟಿಂಗ್

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ಜಟಾಪಟಿಯ ನಡುವೆ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸಿಎಂ ನಿಲುವುಗಳನ್ನು ಗೃಹಸಚಿವ G. ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

“ಸಿದ್ದರಾಮಯ್ಯರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದಾರೆ. ಅವರ ಸಂಪೂರ್ಣ ರಾಜಕೀಯ ಜೀವನವೇ ಸಾಮಾಜಿಕ ನ್ಯಾಯದ ಸಿದ್ಧಾಂತದಡಿ ಸಾಗಿದದ್ದು. ಇದರಲ್ಲಿ ಹೊಸದೇನೂ ಇಲ್ಲ. ಅವರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ,” ಎಂದು ಅವರು ಸಿಎಂ ಪರವಾಗಿ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯರು ಮೊದಲಿಗೆ ಜೆಡಿಎಸ್ ಪಕ್ಷದಲ್ಲಿ ಇದ್ದು, ಅಧ್ಯಕ್ಷರಾಗಿದ್ದರು. ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಅವರಿಬ್ಬರ ನಡುವಿನ ವಾಕ್ಸಮರದ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆ ಸಂದರ್ಭಗಳಲ್ಲಿ ಏನಾಯಿತೋ ನಮಗೆ ತಿಳಿದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಇದೇ ವೇಳೆ, ಪವರ್ ಶೇರಿಂಗ್ ಗೊಂದಲದ ನಡುವೆಯೇ ‘ದಲಿತ ಸಿಎಂ’ ವಿಚಾರ ಪ್ರಸ್ತಾಪಿಸಿದ ಸಿಎಂ ಆಪ್ತ ಸಚಿವ ಮಹದೇವಪ್ಪ ವಿರುದ್ಧ ಡಿ.ಕೆ. ಸುರೇಶ್ ಸೇರಿದಂತೆ ಕೆಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ದಲಿತರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪಕ್ಷವೇ. ಯಾವಾಗ ದಲಿತ ಸಿಎಂ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ವಿಪಕ್ಷಗಳು ತಮ್ಮ ದೋಷಗಳನ್ನು ಮುಚ್ಚಿಕೊಳ್ಳಲು ದಲಿತ ಸಿಎಂ ವಿಚಾರವನ್ನು ಮುಂದಿಟ್ಟಿವೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಸೈಬರ್ ವಂಚನೆ: ಸ್ನೇಹಿತನ ಖಾತೆ ಬಳಸಿ ₹7 ಕೋಟಿ ವರ್ಗಾವಣೆ

0

ಬೆಂಗಳೂರು: ಸ್ನೇಹಿತನ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡು ಬರೋಬ್ಬರಿ 7 ಕೋಟಿ ರೂ. ಸೈಬರ್ ವಂಚನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆಯುಷ್ ಎಂಬಾತ ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಹೇಳಿ,

ವಿದ್ಯಾರ್ಥಿಯೊಬ್ಬರಿಂದ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾನೆ. ಸ್ನೇಹಿತನ ಮೇಲೆ ನಂಬಿಕೆ ಇಟ್ಟು ವಿದ್ಯಾರ್ಥಿ ತನ್ನ ಪಾಸ್‌ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಿಮ್ ಕಾರ್ಡ್ ನೀಡಿದ್ದಾನೆ ಎಂದು ತಿಳಿದುಬಂದಿದೆ.

ನಂತರ ವಿದ್ಯಾರ್ಥಿಗೆ ಬ್ಯಾಂಕ್‌ನಿಂದ ಕರೆ ಬಂದು, ಅವರ ಖಾತೆಯ ಮೂಲಕ ಸೈಬರ್ ವಂಚನೆ ನಡೆದಿದ್ದು 7 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ. ತಕ್ಷಣವೇ ಬ್ಯಾಂಕ್ ಅಧಿಕಾರಿಗಳು ವಿದ್ಯಾರ್ಥಿಯ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.

ಈ ಸಂಬಂಧ ವಂಚನೆಗೊಳಗಾದ ವಿದ್ಯಾರ್ಥಿ ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಯುಷ್ ಹಾಗೂ ಇತರರು ಸೇರಿಕೊಂಡು ಈ ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ವಂಚನೆಗೊಳಗಾದ ವಿದ್ಯಾರ್ಥಿ ಮತ್ತು ಆಯುಷ್ ಕಳೆದ ಒಂದು ವರ್ಷದಿಂದ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ.

error: Content is protected !!