Home Blog Page 14

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರರಿಗೆ ಸ್ವಾಗತ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷ ರೆಹಾನ್ ರಝಾ ಐನಾಪುರ ಉಪಸ್ಥಿತರಿದ್ದರು.

ಗುಟ್ಕಾ, ತಂಬಾಕು ನಿಷೇಧ ಹಿಂಪಡೆಯದಂತೆ ಸಿಎಂಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾರ್ವಜನಿಕ ಆರೋಗ್ಯ ಹಾಗೂ ಯುವಜನರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗುಟ್ಕಾ ಮತ್ತು ತಂಬಾಕು ನಿಷೇಧವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಆಗ್ರಹಿಸಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ, ಲಕ್ಷ್ಮೇಶ್ವರ ಮಹಿಳಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ವಿವಿಧ ಮಹಿಳಾ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ತಂಬಾಕು ಉತ್ಪನ್ನಗಳ ಬಳಕೆಯಿಂದ ಯುವಜನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದ್ದು, ಅನೇಕ ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ. ಆದ್ದರಿಂದ ತಂಬಾಕು ಲಾಬಿ ಅಥವಾ ವ್ಯಾಪಾರಿ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯದೆ ನಿಷೇಧವನ್ನು ಕಟ್ಟುನಿಟ್ಟಾಗಿ ಮುಂದುವರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಂದಿನ ಪೀಳಿಗೆಯ ಆರೋಗ್ಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಗುಟ್ಕಾ ಮತ್ತು ತಂಬಾಕು ನಿಷೇಧವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಈ ವೇಳೆ ಬಳಗದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಜಯಲಕ್ಷ್ಮೀ ಗಡ್ಡದೇವರಮಠ, ಜಯಲಕ್ಷ್ಮೀ ಮಹಾಂತಶೆಟ್ಟರ, ರಾಜೇಶ್ವರಿ ಪಾಟೀಲ, ರಮೇಶ ನವಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ಹಜ್ ಟಿಕೆಟ್‌ಗಾಗಿ’ ರಸ್ತೆಯಲ್ಲೇ ಭಿಕ್ಷಾಟನೆ

ವಿಜಯಸಾಕ್ಷಿ ಸುದ್ದಿ, ಗದಗ: “ಅಮ್ಮಾ… ಧರ್ಮ ಮಾಡಿ ತಾಯಿ… ದಯವಿಟ್ಟು ಇಲ್ಲ ಅನ್ನಬೇಡಿ… ನಿಮ್ಮ ಧರ್ಮ ನಿಮ್ಮನ್ನು, ನಿಮ್ಮ ಕುಟುಂಬವನ್ನು ಕಾಪಾಡುತ್ತದೆ… ಚಿಲ್ಲರೆ ಇಲ್ಲ ಅಂತ ಮಾತ್ರ ಹೇಳಬೇಡಿ… ದೇವರು ನಿಮಗೆ ಎಷ್ಟು ಶಕ್ತಿ ಕೊಟ್ಟಿದ್ದಾನೋ ಅಷ್ಟನ್ನಾದರೂ ಕೊಡಿ…”

ಇದು ರಸ್ತೆಯಲ್ಲಿ ಸಾಮಾನ್ಯ ಭಿಕ್ಷುಕರೊಬ್ಬರು ಕೇಳಿದ ಮಾತಲ್ಲ. ಬದಲಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿ, ಶಿವರಾಮಕೃಷ್ಣ ಸೇವಾ ಟ್ರಸ್ಟ್ ಸಂಚಾಲಕ ರಾಜೂ ಖಾನಪ್ಪನವರ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ನಡೆಸಿದ ವಿನೂತನ ಪ್ರತಿಭಟನೆಯ ದೃಶ್ಯವಿದು.

ಸಚಿವರಿಗೆ ಹಜ್ ಯಾತ್ರೆಗೆ ತೆರಳುವ ಆಸೆಯಿದ್ದರೆ, ಅದಕ್ಕಾಗಿ ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ವಿಮಾನದ ಟಿಕೆಟ್ ಕೊಡಿಸುತ್ತೇವೆ ಎಂಬ ವ್ಯಂಗ್ಯದ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗದಗ ನಗರದ ಹುಯಿಲಗೋಳ ನಾರಾಯಣರಾವ ವರ್ತುಲದಲ್ಲಿ ಶಿವರಾಮಕೃಷ್ಣ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಕೈಯಲ್ಲಿ ಪಾತ್ರೆಗಳನ್ನು ಹಿಡಿದು ಸಾರ್ವಜನಿಕರಿಂದ ಭಿಕ್ಷೆ ಸಂಗ್ರಹಿಸಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಅತ್ಯುತ್ತಮ ಧರ್ಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ತಮಗೂ ಹಜ್ ಯಾತ್ರೆಗೆ ತೆರಳುವ ಆಸೆಯಿದೆ ಎಂದು ಹೇಳಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೆ, ಮಠ-ಮಂದಿರಗಳಿಗೆ ಹೋಗುವುದಿಲ್ಲ ಹಾಗೂ ಅಲ್ಲಿಗೆ ಹೋಗುವ ಅಗತ್ಯವಿಲ್ಲ ಎಂಬರ್ಥದಲ್ಲಿ ಸಚಿವರು ಮಾತನಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಯಾಗಿರುವ ಸಚಿವರು ಎಲ್ಲ ಧರ್ಮಗಳ ನಂಬಿಕೆ, ಆಚರಣೆ ಹಾಗೂ ಧಾರ್ಮಿಕ ಕೇಂದ್ರಗಳನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಆಗ್ರಹಿಸಿದರು.

ಭಿಕ್ಷಾಟನೆಯಲ್ಲೇ ವ್ಯಂಗ್ಯದ ಪ್ರತಿಭಟನೆ!

ಪ್ರತಿಭಟನೆಯ ಪ್ರಮುಖ ಆಕರ್ಷಣೆಯಾಗಿದ್ದು ಕಾರ್ಯಕರ್ತರ ವಿನೂತನ ಭಿಕ್ಷಾಟನೆ. ಸಾಮಾನ್ಯವಾಗಿ ಸಾಮಾಜಿಕ ಸೇವೆ ಅಥವಾ ನೆರವಿಗಾಗಿ ಭಿಕ್ಷೆ ಸಂಗ್ರಹಿಸುವ ಬದಲು, ಸಚಿವರ ಹೇಳಿಕೆಯನ್ನು ವ್ಯಂಗ್ಯಾತ್ಮಕವಾಗಿ ಖಂಡಿಸಲು ಕಾರ್ಯಕರ್ತರು ಈ ವಿಶಿಷ್ಟ ಮಾರ್ಗವನ್ನು ಅನುಸರಿಸಿದರು.

ಸಚಿವರಿಗೆ ನಿಜವಾಗಿಯೂ ಹಜ್ ಯಾತ್ರೆಗೆ ಹೋಗುವ ಆಸೆಯಿದ್ದರೆ, ನಾವು ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತೇವೆ. ಅದೇ ಹಣದಲ್ಲಿ ಅವರಿಗೆ ವಿಮಾನದ ಟಿಕೆಟ್ ಮಾಡಿಸಿಕೊಡುತ್ತೇವೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಈ ಮೂಲಕ ಧಾರ್ಮಿಕ ವಿಚಾರಗಳ ಕುರಿತು ರಾಜಕಾರಣಿಗಳು ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು ಎಂಬ ಸಂದೇಶವನ್ನು ಕಾರ್ಯಕರ್ತರು ರವಾನಿಸಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ನಡೆದ ಈ ವಿನೂತನ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆಯಿತು. ಸುಮಾರು 200ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಮಹಾಂತೇಶ ಪಾಟೀಲ, ವೆಂಕಟೇಶ ದೊಡ್ಡಮನಿ, ಹುಲುಗಪ್ಪ ವಾಲ್ಮೀಕಿ, ಶಿವಯೋಗಿ ಹಿರೇಮಠ, ಮಹಾಬಲೇಶ್ವರ ಶೆಟ್ಟರ, ಈರಪ್ಪ ಹೆಬಸೂರು, ಸುನಿಲ್ ಮುಳ್ಳಾಳ, ಕಿರಣ ಹಿರೇಮಠ, ಕುಮಾರ ಮಿಟ್ಟಿಮಠ, ಅಶೋಕ ಬಜಂತ್ರಿ, ಕುಮಾರ ನಡಗೇರಿ, ಮಂಜು ಗುಡಿಮನಿ, ಭರತ್ ಲದ್ದಿ, ಈರಣ್ಣ ವಾಲ್ಮೀಕಿ, ಅಭಿಷೇಕ ಕುರ್ತಕೋಟಿ, ಶಿವಕುಮಾರ ಲದ್ದಿ, ಬಸವರಾಜ ಬನ್ನಿಮರದ, ಕೃಷ್ಣ ಹಂಡಿ, ಶರಣಪ್ಪ ಲಕ್ಕುಂಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಠ-ಮಂದಿರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಅವುಗಳೊಂದಿಗೆ ಜನರ ಭಾವನೆ, ಸಂಸ್ಕೃತಿ ಹಾಗೂ ಪರಂಪರೆ ಬೆಸೆದುಕೊಂಡಿವೆ. ಅವುಗಳ ಕುರಿತು ಯಾರೂ ಲಘುವಾಗಿ ಮಾತನಾಡಬಾರದು. ಸಚಿವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಬೇಕು ಅಥವಾ ಹಿಂಪಡೆಯಬೇಕು. ಸಚಿವರಿಗೆ ನಿಜವಾಗಿಯೂ ಹಜ್ ಯಾತ್ರೆಗೆ ತೆರಳುವ ತವಕವಿದ್ದರೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಭಿಕ್ಷಾಟನೆ ನಡೆಸಿ ವಿಮಾನದ ಟಿಕೆಟ್ ಖರೀದಿಸಿ ಕೊಡುತ್ತೇವೆ.

— ರಾಜೂ ಖಾನಪ್ಪನವರ, ಹಿಂದೂ ಸಂಘಟನೆಗಳ ಮುಖಂಡ

ಕಪ್ಪತ್ತಗುಡ್ಡದಲ್ಲಿ ನಂದಿಬಸವೇಶ್ವರನ ಜಾತ್ರಾ ವೈಭವ

0

ವಿಜಯಸಾಕ್ಷಿ ಸುದ್ದಿ, ಡಂಬಳ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಡೋಣಿ ಗ್ರಾಮದ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ನಂದಿಬಸವೇಶ್ವರ ಜಾತ್ರಾ ಮಹೋತ್ಸವವು ಭಕ್ತಿಸಾಗರದ ನಡುವೆ ವಿವಿಧ ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ಜರುಗಿತು.

ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠವು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪರಿಸರ ಸಂರಕ್ಷಣೆ ಮತ್ತು ಜಾಗೃತಿಗೆ ವಿಶೇಷ ಆದ್ಯತೆ ನೀಡುತ್ತಿರುವುದು ಜಾತ್ರೆಯ ಪ್ರಮುಖ ವೈಶಿಷ್ಟ್ಯವಾಗಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಉಳಿಸಿ ಬೆಳೆಸುವ ಸಂದೇಶವನ್ನು ಸಾರಲಾಯಿತು.

ಮಠದ ವತಿಯಿಂದ ವರ್ಷವಿಡೀ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳ ಎರಡನೇ ಭಾನುವಾರ ಪರಿಸರ ಪ್ರಿಯರಿಗೆ ಕಪ್ಪತ್ತಗುಡ್ಡದ ವಿಶೇಷತೆಗಳು ಹಾಗೂ ಬಂಗಾರಕೊಳ್ಳದ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಪರಿಸರ ಉತ್ಸವ, ಪರಿಸರ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಹಾಗೂ ಪ್ರದರ್ಶನ ಕಾರ್ಯಕ್ರಮಗಳಿಗೆ ಮಠದ ವತಿಯಿಂದ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಪ್ಪತ್ತಗುಡ್ಡದಲ್ಲಿರುವ ಅಪರೂಪದ ಗಿಡಮೂಲಿಕೆಗಳು ಮತ್ತು ಸಸ್ಯ ಸಂಪತ್ತಿನ ಸಂರಕ್ಷಣೆಯ ಬಗ್ಗೆಯೂ ಭಕ್ತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಗುಡ್ಡದ ತಪ್ಪಲು ಪ್ರದೇಶಗಳಲ್ಲಿನ ಗಿಡಮೂಲಿಕೆಗಳನ್ನು ಅನಗತ್ಯವಾಗಿ ಕೀಳದಂತೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಪರಿಸರ ಉತ್ಸವದ ಮಹತ್ವವನ್ನು ಆಗಮಿಸಿದ ಭಕ್ತರಿಗೆ ತಿಳಿಸಲಾಯಿತು. ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದ ರಥೋತ್ಸವದಲ್ಲಿ ವಿವಿಧ ಜಿಲ್ಲೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠ ಹಾಗೂ ಗದಗ ಮಠ ಸ್ಥಾಪನೆಯಾಗಿ ಸುಮಾರು 300 ವರ್ಷಗಳ ಇತಿಹಾಸವಿದ್ದು, ಕಪ್ಪತ್ತಗುಡ್ಡ ಪ್ರದೇಶದಲ್ಲಿ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.

ಪುರಾಣಗಳ ಪ್ರಕಾರ, ನಂದಿವೇರಿ ಬಸವಣ್ಣನನ್ನು ಶಿವನ ವಾಹನವೆಂದು ನಂಬಲಾಗಿದ್ದು, ಕೈಲಾಸದಿಂದ ಶಿವ-ಪಾರ್ವತಿಯರು ನಂದಿಯ ಮೂಲಕ ಈ ಕ್ಷೇತ್ರಕ್ಕೆ ಆಗಮಿಸಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಶಿವ, ಪಾರ್ವತಿ ಹಾಗೂ ದೇವಾನುದೇವತೆಗಳ ಪವಿತ್ರ ಸಾನ್ನಿಧ್ಯ ಹೊಂದಿರುವ ಕ್ಷೇತ್ರವೆಂದು ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠ ಭಕ್ತರ ನಂಬಿಕೆಯ ಕೇಂದ್ರವಾಗಿದೆ.

ಜಾತ್ರಾ ಮಹೋತ್ಸವವು ಧಾರ್ಮಿಕ ಭಕ್ತಿ, ಸಂಪ್ರದಾಯ ಹಾಗೂ ಪರಿಸರ ಕಾಳಜಿಯ ಸಂದೇಶವನ್ನು ಒಂದೇ ವೇದಿಕೆಯಲ್ಲಿ ಸಾರುವ ಮೂಲಕ ವಿಶೇಷವಾಗಿ ಗಮನ ಸೆಳೆಯಿತು.

ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿದರೆ ಉತ್ತಮ ಮಳೆ-ಬೆಳೆಯೊಂದಿಗೆ ಆರೋಗ್ಯಯುತ ಜೀವನ ಸಾಧ್ಯವಾಗಲಿದೆ.
— ಪರಮಪೂಜ್ಯ ಶಿವಕುಮಾರ ಸ್ವಾಮೀಜಿ, ನಂದಿವೇರಿ ಸಂಸ್ಥಾನಮಠ

 

ವರ್ಷವಿಡೀ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಉತ್ತಮವಾಗಿರಲು ಸಾಧ್ಯ ಎಂಬ ಸಂದೇಶವನ್ನು ಶಿವಕುಮಾರ ಸ್ವಾಮೀಜಿಗಳು ನೀಡುತ್ತಿರುವುದು ಅತ್ಯಂತ ಅಮೂಲ್ಯವಾದ ಕಾರ್ಯವಾಗಿದೆ.
— ಬಾಲಚಂದ್ರ ಜಾಬಶೆಟ್ಟಿ, ಮಠದ ಭಕ್ತರು, ರಾಮದುರ್ಗ

ಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ಆರೋಪ; KUDA ನೇಮಕಾತಿಯಲ್ಲಿ ಗೋಲ್‌ಮಾಲ್?

0

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದ ಅವ್ಯವಹಾರದ ಆರೋಪದ ಬೆನ್ನಲ್ಲೇ ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೂ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ.

ಟೆಂಡರ್ ಪ್ರಕ್ರಿಯೆ ನಡೆಸದೆ ಹಾಗೂ ಸರ್ಕಾರದ ಅನುಮೋದನೆ ಪಡೆಯದೆ ಹೆಚ್ಚುವರಿ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದು ಲೆಕ್ಕಪತ್ರ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

2025-26ನೇ ಸಾಲಿನಲ್ಲಿ ಪ್ರಾಧಿಕಾರದಲ್ಲಿ ಒಟ್ಟು ಏಳು ಮಂದಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ ನಾಲ್ವರು ಗ್ರೂಪ್‌-ಡಿ ಸಿಬ್ಬಂದಿ, ಓರ್ವ ಚಾಲಕ, ಓರ್ವ ಕಂಪ್ಯೂಟರ್ ಆಪರೇಟರ್ ಹಾಗೂ ಓರ್ವ ಕ್ಲೀನರ್ ಸೇರಿದ್ದಾರೆ.

ಆದರೆ, ಈ ಏಳು ಹುದ್ದೆಗಳ ಪೈಕಿ ಕೇವಲ ಮೂರು ಹುದ್ದೆಗಳಿಗೆ ಮಾತ್ರ ಮಂಜೂರಾತಿ ಇತ್ತು ಎಂದು ಲೆಕ್ಕಪತ್ರ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ನಾಲ್ಕು ಹುದ್ದೆಗಳಿಗೆ ಸರ್ಕಾರದ ಅನುಮೋದನೆ ಪಡೆಯದೆ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚುವರಿ ಸಿಬ್ಬಂದಿಗೆ ₹19 ಲಕ್ಷ ಪಾವತಿ:

ಏಳು ಮಂದಿ ಸಿಬ್ಬಂದಿಗೆ ಒಟ್ಟು ₹27 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಾವತಿಸಲಾಗಿದೆ ಎನ್ನಲಾಗಿದೆ. ಈ ಪೈಕಿ ಮಂಜೂರಾತಿ ಇಲ್ಲದ ಹೆಚ್ಚುವರಿ ಹುದ್ದೆಗಳಿಗೆ ಸುಮಾರು ₹19 ಲಕ್ಷ ಪಾವತಿಸಿರುವುದು ಪರಿಶೋಧನೆಯಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಈ ಮೊತ್ತವನ್ನು ವಸೂಲಿ ಮಾಡುವಂತೆ ಪರಿಶೋಧನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಟೆಂಡರ್ ಪ್ರಕ್ರಿಯೆ ನಡೆಸದೆ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿರುವುದು ಹಾಗೂ ಸರ್ಕಾರದ ಅನುಮೋದನೆ ಇಲ್ಲದೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿರುವ ಆರೋಪಗಳು ಇದೀಗ ಪ್ರಾಧಿಕಾರದ ಕಾರ್ಯವೈಖರಿ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ಆರೋಪ:

ಈಗಾಗಲೇ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಸುಮಾರು ₹8.89 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ತನಿಖೆಯನ್ನು ಕೊಪ್ಪಳ ನಗರ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್, ಅವರ ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಮಾಜಿ ಆಯುಕ್ತ ಯೋಗಾನಂದ ಅವರಿಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೂ ನಿಯಮ ಉಲ್ಲಂಘನೆಯ ಆರೋಪ ಬೆಳಕಿಗೆ ಬಂದಿರುವುದು ಪ್ರಾಧಿಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಅಗತ್ಯ ಬಿದ್ದರೆ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ, ನಿವೇಶನ ಹಂಚಿಕೆ ಅವ್ಯವಹಾರದ ಆರೋಪದ ಬಳಿಕ ಇದೀಗ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲೂ ಅಕ್ರಮದ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಉದ್ಯೋಗಕ್ಕಾಗಿ ಗುಳೆ ಹೋಗುವುದು ತಪ್ಪಿಸಿ : ಗ್ರಾಮದಲ್ಲೇ ಕೆಲಸ ಕಲ್ಪಿಸುವ ಭರವಸೆ: ಸಂತೋಷ್ ಲಾಡ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಉದ್ಯೋಗ ಅರಸಿ ಗ್ರಾಮೀಣ ಜನರು ಗುಳೆ ಹೋಗಬೇಕಾದ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ವಿಬಿಜಿ-ರಾಮ್-ಜಿ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳನ್ನು ಗ್ರಾಮದಲ್ಲಿಯೇ ಕೈಗೆತ್ತಿಕೊಂಡು ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ಒದಗಿಸಲಾಗುವುದು ಎಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ಧಾರವಾಡ ತಾಲೂಕಿನ ಕಲಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆ ಹಾಗೂ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಬಿಜಿ-ರಾಮ್-ಜಿ ಯೋಜನೆಗೆ ಸಂಬಂಧಿಸಿದಂತೆ ಯೋಜನಾ ಅನುಮೋದನೆ ಹಾಗೂ ಕಾಮಗಾರಿಗಳಿಗೆ ಅಧಿಕೃತ ಮಂಜೂರಾತಿ ದೊರೆತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಅಗತ್ಯವಿಲ್ಲ. ಗ್ರಾಮದ ಜನರಿಗೆ ಇದೇ ಊರಿನಲ್ಲಿಯೇ ನಿಯಮಿತವಾಗಿ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೈತರು ಹಾಗೂ ಕೂಲಿಕಾರರಿಗೆ ಭರವಸೆ ನೀಡಿದರು.

ಗ್ರಾಮಗಳ ಅಭಿವೃದ್ಧಿಗೆ ಯುವಜನತೆ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರವೇ ಜನರ ಬಳಿಗೆ ಬಂದಿದೆ. ಗ್ರಾಮ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಯುವಕರು, ಸಾರ್ವಜನಿಕರು ಮತ್ತು ಊರಿನ ಮುಖಂಡರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಾರ್ವಜನಿಕರು ಸಲ್ಲಿಸಿರುವ ಪ್ರಮುಖ ಹಾಗೂ ತುರ್ತು ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ನಿಗದಿತ ಅವಧಿಯಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಸಾರ್ವಜನಿಕರ ಮೇಲ್ವಿಚಾರಣೆಯೂ ಅಗತ್ಯ ಎಂದು ಹೇಳಿದರು.

ಮೂಲಸೌಕರ್ಯದಿಂದ ಶಿಕ್ಷಣದವರೆಗೆ ಭರವಸೆ

ಗ್ರಾಮದ ಸ್ಮಶಾನಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ ಹಾಗೂ ಹಾಳಾಗಿರುವ ಗ್ರಾಮೀಣ ರಸ್ತೆಗಳನ್ನು ತಕ್ಷಣವೇ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಂಗವಿಕಲರಿಗೆ ಸ್ವಯಂ ಉದ್ಯೋಗಕ್ಕಾಗಿ ಅಂಗಡಿ ಸೌಲಭ್ಯ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಲಾ ಶೌಚಾಲಯಗಳ ನಿರ್ಮಾಣ, ಮಾದರಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ಅನುದಾನ ಹಾಗೂ ಕಲಕೇರಿ ಗ್ರಾಮದಲ್ಲಿ ನೂತನ ಕಾಲೇಜು ಸ್ಥಾಪನೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಲಕೇರಿ ಗ್ರಾಮದಲ್ಲಿ ಹೊಸ ಬ್ಯಾಂಕ್ ಶಾಖೆ ಹಾಗೂ ಪಶುಸಂಗೋಪನಾ ಆಸ್ಪತ್ರೆ ಸ್ಥಾಪನೆಗೆ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಲಾಗಿದೆ ಎಂದರು.

ಗ್ರಾಮೀಣ ಯುವಕರನ್ನು ಸಂಘಟಿಸಲು ಹಾಗೂ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಭಾರತ ಜೋಡೋ’ ಯುವ ಸಂಘಗಳ ಯೋಜನೆಯಡಿ ಅರ್ಹ ಯುವ ಸಂಘಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯ ಸದುಪಯೋಗ ಪಡೆಯುವಂತೆ ಸಚಿವರು ಕರೆ ನೀಡಿದರು.

ಜನಪ್ರತಿನಿಧಿಗಳು ಜನಸೇವಕರು. ಗ್ರಾಮಗಳ ಸಮಸ್ಯೆ ಪರಿಹಾರಕ್ಕೆ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ತಪ್ಪಿಸಿ, ಗ್ರಾಮದಲ್ಲಿಯೇ ಕೆಲಸ ಹಾಗೂ ಅಭಿವೃದ್ಧಿಯ ಅವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ.

— ಸಂತೋಷ್ ಎಸ್. ಲಾಡ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು

ಸ್ಲಂ ನಿವಾಸಿಗಳ ಭರವಸೆ ಈಡೇರಿಸಿ: ಸರ್ಕಾರಕ್ಕೆ ಸ್ಲಂ ಜನಾಂದೋಲನ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ೨೦೨೩ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸ್ಲಂ ಪ್ರದೇಶಗಳಿಗೆ ‘ಶ್ರಮಿಕ ನಿವಾಸ ಪ್ರದೇಶ’ ಎಂದು ನಾಮಕರಣ ಮಾಡಿ, ವಸತಿ ಯೋಜನೆ ಹಾಗೂ ಹಕ್ಕುಪತ್ರ ವಿತರಣೆ ಮಾಡುವ ಭರವಸೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ವಸತಿರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ‘ನಗರ ಲ್ಯಾಂಡ್ ಬ್ಯಾಂಕ್’ ಯೋಜನೆ ಜಾರಿಗೊಳಿಸುವುದರೊಂದಿಗೆ ಪ್ರತಿಯೊಂದು ಬಡ ಕುಟುಂಬಕ್ಕೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಡವರು ಸ್ವತಃ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ರೂ. ೩.೫ ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ರೂ. ೧.೫ ಲಕ್ಷ ಸಬ್ಸಿಡಿ ನೀಡಬೇಕು. ಜಿಲ್ಲಾ ಕೇಂದ್ರಗಳಲ್ಲಿ ನಿವೇಶನ ಹಂಚಿಕೆ ಮಾಡುವಾಗ ಘೋಷಿತ ಹಾಗೂ ಅಘೋಷಿತ ಕೊಳಚೆ ಪ್ರದೇಶದ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ, ಮೌಲಾಸಾಬ ಎಸ್. ಗಚ್ಚಿ, ಶರಣಪ್ಪ ಸೂಡಿ, ಪರವೀನ್‌ಬಾನು ಹವಾಲ್ದಾರ, ಪುಷ್ಪಾ ಬಿಜಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ಯಾಕ್ಸ್‌ಗಳ ಬಲವರ್ಧನೆಗೆ ವಿಶೇಷ ತರಬೇತಿ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆಸಿಸಿ ಬ್ಯಾಂಕ್ ಧಾರವಾಡದ ಸಂಯುಕ್ತ ಆಶ್ರಯದಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ವಿಶೇಷ ತರಬೇತಿ ಶಿಬಿರ ನಡೆಯಿತು.

ಪಟ್ಟಣದ ನಾಟಕ ಕಲಾಬ್ರಹ್ಮ ಶ್ರೀ ಎಚ್. ವೆಂಕುಬರಾವ ಕಲಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದಗೌಡ ವಿ. ಪಾಟೀಲ ಉದ್ಘಾಟಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸಿ ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಸಹಕಾರ ಸಂಘಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಣ ದುರುಪಯೋಗ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ದೇಶಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಸಿಸಿ ಬ್ಯಾಂಕ್ ನಿರ್ದೇಶಕ ಮಾಳಪ್ಪ ಗು. ನಿಂಗಜ್ಜನವರ ಅವರು, ಸಹಕಾರ ಸಂಘಗಳು ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಮಾದರಿ ಸಂಘಗಳ ಕಾರ್ಯವೈಖರಿಯಿಂದ ಇತರ ಸಂಸ್ಥೆಗಳು ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಎ. ಬಂಡೆಣ್ಣವರ ಮಾತನಾಡಿ, ಪ್ಯಾಕ್ಸ್‌ಗಳು ಆರ್ಥಿಕವಾಗಿ ಸಬಲಗೊಂಡು ಲಾಭದಾಯಕವಾಗಿ ಕಾರ್ಯನಿರ್ವಹಿಸಿದರೆ ಸಹಕಾರ ಚಳುವಳಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ ಮತ್ತು ಜವಾಬ್ದಾರಿಗಳು, ಸಹಕಾರಿ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳು, ಬಹುಸೇವಾ ಕೇಂದ್ರಗಳಾಗಿ ಪ್ಯಾಕ್ಸ್‌ಗಳ ಪರಿವರ್ತನೆ ಹಾಗೂ ಸಹಕಾರ ಸಂಘಗಳ ಪ್ರಗತಿ ಕುರಿತು ಶಂಕರ ಎಸ್. ಕರಬಸಣ್ಣವರ, ವಿಶ್ವನಾಥ ಎಚ್. ಲಮಾಣಿ ಹಾಗೂ ಜಗದೀಶಗೌಡ ಎಂ. ಪಾಟೀಲ ಉಪನ್ಯಾಸ ನೀಡಿದರು.

ಶಿರಹಟ್ಟಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸಿ. ಕೂಸನೂರಮಠ, ಕೆಸಿಸಿ ಬ್ಯಾಂಕ್‌ನ ವಿಶ್ವನಾಥ ಎಚ್. ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗದಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.

ಬದುಕಿನ ಅನುಭವಗಳಿಗೆ ಅಕ್ಷರರೂಪ ನೀಡಿದ ಸಾಹಿತಿ ಆಯ್ಕೆ ಕಮ್ಮಾರ

ಸಾಹಿತ್ಯವೆಂದರೆ ಕೇವಲ ಪದಗಳ ಜೋಡಣೆಯಲ್ಲ, ಅದು ಬದುಕಿನ ಅನುಭವಗಳ ಅಭಿವ್ಯಕ್ತಿ, ಸಮಾಜದ ನೋವು–ನಲಿವುಗಳ ಪ್ರತಿಬಿಂಬ ಹಾಗೂ ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆ. ಇಂತಹ ಸಾರ್ಥಕ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಸಾಹಿತಿ ಆಯ್ಕೆ ಕಮ್ಮಾರ ಅವರ ಬದುಕು–ಬರಹ ಗಮನಾರ್ಹವಾಗಿದೆ.

ಆಯ್ಕೆ ಕಮ್ಮಾರ ಅವರ ಸಾಹಿತ್ಯಯಾನವು ಬದುಕಿನ ನೆಲಮೂಲದ ಅನುಭವಗಳಿಂದ ರೂಪುಗೊಂಡಿದೆ. ಸುತ್ತಲಿನ ಸಮಾಜ, ಜನಜೀವನ, ಸಂಬಂಧಗಳ ಸೂಕ್ಷ್ಮತೆ, ಗ್ರಾಮೀಣ ಬದುಕಿನ ಸೊಗಡು, ಸಾಮಾಜಿಕ ಬದಲಾವಣೆಗಳು ಹಾಗೂ ಮಾನವೀಯ ಮೌಲ್ಯಗಳು ಅವರ ಬರಹಗಳಿಗೆ ಜೀವಂತಿಕೆಯನ್ನು ನೀಡಿವೆ. ಸಾಮಾನ್ಯರ ಬದುಕಿನ ಅಸಾಮಾನ್ಯ ಸಂಗತಿಗಳನ್ನು ಗುರುತಿಸಿ ಅವುಗಳಿಗೆ ಅಕ್ಷರರೂಪ ನೀಡುವ ಗುಣ ಅವರ ಸಾಹಿತ್ಯದ ವಿಶೇಷತೆಯಾಗಿದೆ.

ಸಾಹಿತಿಯೊಬ್ಬನಿಗೆ ಸಮಾಜದ ಬಗ್ಗೆ ಕಾಳಜಿ ಇರಬೇಕು. ಜನರ ಬದುಕಿನ ನೋವು–ನಲಿವುಗಳನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮನಸ್ಸು ಇರಬೇಕು. ಈ ಗುಣಗಳು ಆಯ್ಕೆ ಕಮ್ಮಾರ ಅವರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಅವರ ಬರಹಗಳು ಓದುಗರನ್ನು ಕೇವಲ ಮನರಂಜಿಸುವುದಷ್ಟೇ ಅಲ್ಲದೆ ಚಿಂತನೆಗೆ ಹಚ್ಚುತ್ತವೆ ಹಾಗೂ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸುತ್ತವೆ.

ಅವರ ಸಾಹಿತ್ಯದಲ್ಲಿ ಭಾಷೆಯ ಸರಳತೆ ಮತ್ತು ಭಾವದ ಗಾಢತೆ ವಿಶೇಷವಾಗಿ ಗಮನ ಸೆಳೆಯುತ್ತದೆ. ಅಲಂಕಾರಿಕ ಭಾಷೆಯ ಹಿಂದೆ ಓಡದೆ, ಓದುಗರ ಮನಸ್ಸಿಗೆ ನೇರವಾಗಿ ತಲುಪುವ ರೀತಿಯಲ್ಲಿ ವಿಚಾರಗಳನ್ನು ಕಟ್ಟಿಕೊಡುವುದು ಅವರ ಬರಹದ ವೈಶಿಷ್ಟ್ಯವಾಗಿದೆ. ಸ್ಥಳೀಯ ಬದುಕಿನ ಭಾಷೆ, ಜನಪದೀಯ ಸಂವೇದನೆ ಹಾಗೂ ನಿತ್ಯಜೀವನದ ಅನುಭವಗಳು ಅವರ ಸಾಹಿತ್ಯಕ್ಕೆ ಸಹಜವಾದ ಸೊಗಡನ್ನು ನೀಡಿವೆ.

ನಾಲ್ಕು ದಶಕಗಳ ನಿಸ್ವಾರ್ಥ ಶಿಕ್ಷಣ ಸೇವೆ

ಆಯ್ಕೆ ಕಮ್ಮಾರ ಅವರ ಬದುಕು ಅವರ ಬರಹದಷ್ಟೇ ಪ್ರೇರಣಾದಾಯಕವಾಗಿದೆ. ಸಾಹಿತ್ಯದ ಮೇಲಿನ ಆಸಕ್ತಿ, ನಿರಂತರ ಓದು, ಸಮಾಜದ ಬಗ್ಗೆ ಇರುವ ಕಾಳಜಿ ಹಾಗೂ ಬರವಣಿಗೆಯ ಮೇಲಿನ ಶ್ರದ್ಧೆ ಅವರನ್ನು ಒಬ್ಬ ಸೃಜನಶೀಲ ಸಾಹಿತಿಯಾಗಿ ರೂಪಿಸಿವೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪ್ರತಿಭೆಯ ಜೊತೆಗೆ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಅಧ್ಯಯನ ಅಗತ್ಯ. ಈ ಗುಣಗಳೇ ಅವರ ಸಾಹಿತ್ಯಿಕ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿವೆ.

ಸಾಹಿತ್ಯದ ಜೊತೆಗೆ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಗೃಹಪಾಠ ಶಿಕ್ಷಕರಾಗಿ ೪೦ ವರ್ಷಗಳ ಕಾಲ ಬಡ ಮಕ್ಕಳಿಗೆ ಉಚಿತವಾಗಿ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳನ್ನು ಬೋಧಿಸಿರುವುದು ಅವರ ಬದುಕಿನ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ.

ಸೌಹಾರ್ದದ ಸಂದೇಶ ಸಾರಿದ ಬಹುಮುಖ ಪ್ರತಿಭೆ

ಭಾವೈಕ್ಯತೆಯನ್ನೇ ಪ್ರೀತಿಸುವ ಆಯ್ಕೆ ಕಮ್ಮಾರ ಅವರು ಮಣಕವಾಡದ ಮಹಿಮಾ ಪುರುಷ ಶ್ರೀ ಗುರುಮೃತ್ಯುಂಜಯ ಅವರ ಹೆಸರಿನಲ್ಲಿ ‘ಸೌಹಾರ್ದ ಮಹಾಮನೆ ವೇದಿಕೆ’ಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ನಿರಂತರವಾಗಿ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಅನೇಕ ನಾಟಕಗಳನ್ನು ರಚಿಸಿರುವ ಅವರು ನಟ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಣಕವಾಡದ ಶ್ರೀ ಗುರುಮೃತ್ಯುಂಜಯ ಮಹಾಸ್ವಾಮಿಗಳನ್ನು ತಮ್ಮ ಆರಾಧ್ಯ ದೈವವಾಗಿಸಿಕೊಂಡಿರುವ ಅವರು, ಅವರ ಕುರಿತು ‘ಮಣಕವಾಡದ ಮಾಣಿಕ್ಯ’, ‘ಮಣಕವಾಡದ ಸಿರಿ’ ಹಾಗೂ ‘ಮೃತ್ಯುಂಜಯ ಮಹಾತ್ಮೆ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ, ಮಣಕವಾಡದ ಮೃತ್ಯುಂಜಯ ಅಜ್ಜನ ಕುರಿತು ಭಾಮಿನಿ ಷಟ್ಪದಿ ಪುರಾಣ ರಚಿಸುವ ಸಿದ್ಧತೆಯಲ್ಲಿದ್ದಾರೆ.

ಪುಟ್ಟರಾಜ ಗುರುವರ್ಯರ ಕುರಿತು ‘ಭೂಲೋಕದ ಭಗವಂತ’, ‘ಮರೆಯಾದ ಧ್ರುವತಾರೆ’ ಹಾಗೂ ‘ಕೃತಪುರ ರತ್ನ’ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕೇನಕೊಪ್ಪದ ಚನ್ನವೀರಶರಣರ ಕುರಿತು ‘ಪರಂಜ್ಯೋತಿ’, ಸಿದ್ಧಗಂಗಾಶ್ರೀಗಳ ಕುರಿತು ‘ಮೇರುಪರ್ವತ’ ಸೇರಿದಂತೆ ೨೭ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಹೆಗ್ಗಳಿಕೆ ಅವರದ್ದಾಗಿದೆ.

ಪ್ರಶಸ್ತಿಗಳ ಬೆನ್ನತ್ತಿದ ಸಾಹಿತ್ಯ ಸಾಧನೆ

ಸಾಹಿತ್ಯ, ಶಿಕ್ಷಣ, ರಂಗಭೂಮಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಸಂತಕವಿ, ಸಾಮರಸ ಕವಿ, ಸದ್ಭಾವನಾ ಪ್ರಶಸ್ತಿ, ಬಂಗಾರಚುಕ್ಕಿ ಪ್ರಶಸ್ತಿ ಹಾಗೂ ಭಾವೈಕ್ಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.

ಸಾಹಿತ್ಯವು ಸಮಾಜಕ್ಕೆ ಕನ್ನಡಿ ಮಾತ್ರವಲ್ಲ, ದಾರಿದೀಪವೂ ಹೌದು. ಸಮಾಜದಲ್ಲಿನ ಅಸಮಾನತೆ, ಅಜ್ಞಾನ, ಮೌಢ್ಯ ಹಾಗೂ ಅನ್ಯಾಯಗಳ ಕುರಿತು ಚಿಂತಿಸುವಂತೆ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಮಾನವೀಯತೆ, ಸಹಬಾಳ್ವೆ, ಪ್ರೀತಿ, ಸಹಾನುಭೂತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತಿಯ ಪಾತ್ರ ಮಹತ್ವದ್ದಾಗಿದೆ. ಆಯ್ಕೆ ಕಮ್ಮಾರ ಅವರ ಬರಹಗಳು ಈ ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿಯೇ ಅರ್ಥಪೂರ್ಣವಾಗುತ್ತವೆ.

ವೇಗದ ತಂತ್ರಜ್ಞಾನ ಯುಗದಲ್ಲಿಯೂ ಹೊಸ ತಲೆಮಾರಿನ ಓದುಗರನ್ನು ಸಾಹಿತ್ಯದತ್ತ ಸೆಳೆಯುವುದು ಇಂದಿನ ಸಾಹಿತಿಗಳ ಮುಂದಿರುವ ದೊಡ್ಡ ಸವಾಲಾಗಿದೆ. ಓದುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಬದುಕಿನ ವಾಸ್ತವತೆಗಳನ್ನು ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಬರಹಗಳು ಈ ಕಾರ್ಯಕ್ಕೆ ನೆರವಾಗುತ್ತವೆ. ಈ ದೃಷ್ಟಿಯಿಂದ ಆಯ್ಕೆ ಕಮ್ಮಾರ ಅವರ ಸಾಹಿತ್ಯಿಕ ಪ್ರಯತ್ನಗಳು ವಿಶೇಷ ಮಹತ್ವ ಪಡೆದುಕೊಳ್ಳುತ್ತವೆ.

ಒಟ್ಟಿನಲ್ಲಿ, ಆಯ್ಕೆ ಕಮ್ಮಾರ ಅವರ ಬದುಕು ಮತ್ತು ಬರಹಗಳು ಸಾಹಿತ್ಯವೆಂಬುದು ಬದುಕಿನಿಂದ ಹುಟ್ಟಿ ಮತ್ತೆ ಬದುಕನ್ನೇ ಶ್ರೀಮಂತಗೊಳಿಸುವ ಪ್ರಕ್ರಿಯೆ ಎಂಬುದನ್ನು ಸಾರುತ್ತವೆ. ಅವರ ಸಾಹಿತ್ಯಸೇವೆ ಇನ್ನಷ್ಟು ವಿಸ್ತಾರವಾಗಲಿ, ಹೊಸ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ದೊರೆಯಲಿ ಹಾಗೂ ಅವರ ಬರಹಗಳು ಮುಂದಿನ ಪೀಳಿಗೆಗೂ ಮೌಲ್ಯಯುತ ಸಂದೇಶ ನೀಡಲಿ ಎಂಬುದು ಸಾಹಿತ್ಯಾಸಕ್ತರ ಆಶಯವಾಗಿದೆ.

ಸೆಪ್ಟೆಂಬರ್ ೫ರಂದು ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಆಯ್ಕೆ ಕಮ್ಮಾರ ಅವರ ಕುರಿತು ಆಯೋಜಿಸಿರುವ ‘ಬದುಕು–ಬರಹ’ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹವಾಗಿದೆ. ಸಾಹಿತ್ಯದ ಪಯಣದಲ್ಲಿ ಅವರು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ, ಕನ್ನಡ ನಾಡು–ನುಡಿಯ ಸೇವೆಯಲ್ಲಿ ಅವರ ಲೇಖನಿ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.

ಪ್ರೊ. ಶ್ರೀಶೈಲ ಬಡಿಗೇರ

ಪುಟಾಣಿ ಮಕ್ಕಳೊಂದಿಗೆ ಬೆರೆತು ನಲಿದ ಮುಪ್ಪಿನ ಬಸವಲಿಂಗ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುಟಾಣಿ ಮಕ್ಕಳ ನಡುವೆ ಕುಳಿತು ಅವರ ಮಾತುಗಳನ್ನು ಆಲಿಸಿ, ಮುಗ್ಧ ನಗುವಿಗೆ ಮನಸಾರೆ ನಕ್ಕು, ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದ ಹಾಲಕೆರೆಯ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಆತ್ಮೀಯ ಕ್ಷಣಗಳು ಸಮೀಪದ ನಿಡಗುಂದಿಕೊಪ್ಪದ ಶ್ರೀಮಠದ ಆವರಣದಲ್ಲಿ ವಿಶೇಷ ಗಮನ ಸೆಳೆದವು.

ನಿಡಗುಂದಿಕೊಪ್ಪದ ಶ್ರೀಮಠಕ್ಕೆ ಆಗಮಿಸಿದ್ದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಪೀಠಾಧಿಪತಿ ಅಭಿನವ ಚನ್ನಬಸವ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಶ್ರೀ ಚನ್ನಚೇತನ ಗುರುಕುಲ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತರು.

ಶಾಲೆಗೆ ಶ್ರೀಗಳು ಆಗಮಿಸುತ್ತಿದ್ದಂತೆ ಪುಟಾಣಿ ಮಕ್ಕಳು ಕುತೂಹಲದಿಂದ ಅವರ ಸುತ್ತ ಸೇರಿದರು. ಮಕ್ಕಳೊಂದಿಗೆ ಸಂವಾದ ನಡೆಸಿದ ಶ್ರೀಗಳು, ಅವರ ಮುಗ್ಧ ಮಾತುಗಳನ್ನು ಆಲಿಸಿ, ಪ್ರತಿಭೆ ಹಾಗೂ ಚುರುಕುತನ ಕಂಡು ಸಂತಸಪಟ್ಟರು.

“ವಿದ್ಯೆ ಕಲಿಯುವುದಷ್ಟೇ ಶಿಕ್ಷಣವಲ್ಲ, ಸಂಸ್ಕಾರ, ಶಿಸ್ತು ಹಾಗೂ ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ” ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಶ್ರೀಗಳು, ಉತ್ತಮವಾಗಿ ಓದಿ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬೆಳೆಯುವಂತೆ ಆಶೀರ್ವದಿಸಿದರು.

ಮಕ್ಕಳೊಂದಿಗೆ ಶ್ರೀಗಳು ಬೆರೆತ ಕ್ಷಣಗಳು ಶಾಲಾ ಆವರಣದಲ್ಲಿ ವಿಶೇಷ ಸಂತಸ ಮೂಡಿಸಿದವು. ತಮ್ಮ ನಡುವೆ ಕುಳಿತು ಪ್ರೀತಿಯಿಂದ ಮಾತನಾಡಿದ ಶ್ರೀಗಳ ಸರಳತೆ ಕಂಡು ಪುಟಾಣಿ ಮಕ್ಕಳು ಹರ್ಷಗೊಂಡರು. ಶ್ರೀಗಳ ಸಾನ್ನಿಧ್ಯದಿಂದ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವೂ ಮೂಡಿತು.

ನಿಡಗುಂದಿಕೊಪ್ಪದ ಶ್ರೀಮಠದ ಪೀಠಾಧಿಪತಿ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಶ್ರೀ ಚನ್ನಚೇತನ ಗುರುಕುಲ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವಿವಿಧ ಆಯಾಮಗಳನ್ನು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳಿಗೆ ಪರಿಚಯಿಸಿದರು.

ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭವನ್ನು ಸ್ಮರಿಸಿದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಶಾಲೆಯು ಉತ್ತರೋತ್ತರ ಅಭಿವೃದ್ಧಿ ಕಾಣಲಿ. ಇಲ್ಲಿ ಕಲಿಯುವ ಮಕ್ಕಳ ಭವಿಷ್ಯ ಉಜ್ವಲವಾಗಲಿ. ಶ್ರೀ ಚನ್ನಬಸವೇಶ್ವರ ಹಾಗೂ ಶ್ರೀ ಅನ್ನದಾನೇಶ್ವರರ ಆಶೀರ್ವಾದ ಸದಾಕಾಲ ಶಾಲೆಯ ಮೇಲಿರಲಿ ಎಂದು ಹಾರೈಸಿದರು.

ಮಕ್ಕಳ ನಡುವೆ ಕೆಲಕಾಲ ಕಳೆದ ಶ್ರೀಗಳ ಆತ್ಮೀಯ ಭೇಟಿ ಗುರು-ಶಿಷ್ಯರ ಸಂಬಂಧಕ್ಕೆ ಮಮತೆಯ ಸ್ಪರ್ಶ ನೀಡಿದಂತಿತ್ತು. ಶ್ರೀಗಳ ಆಶೀರ್ವಾದ ಹಾಗೂ ಪುಟಾಣಿ ಮಕ್ಕಳ ಮುಗ್ಧ ನಗು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮನದಲ್ಲಿ ಬಹುಕಾಲ ಉಳಿಯುವ ಸ್ಮರಣೀಯ ಕ್ಷಣಗಳಾದವು.

ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.