Home Blog Page 17

ಯುವನಿಧಿಯಿಂದ ಹೊಸ ಭರವಸೆ

ರಾಜ್ಯದ ಯುವ ಸಮುದಾಯದ ಆರ್ಥಿಕ ಭದ್ರತೆ ಹಾಗೂ ಉದ್ಯೋಗ ಅನ್ವೇಷಣೆಯ ಅವಧಿಯಲ್ಲಿ ಸಹಾಯ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಪ್ರಮುಖ ಯೋಜನೆಯಾಗಿದೆ. ಪದವಿ ಹಾಗೂ ಡಿಪ್ಲೋಮಾ ಪೂರೈಸಿದ ಯುವಕರಿಗೆ ಉದ್ಯೋಗ ದೊರಕುವವರೆಗೂ ಆರ್ಥಿಕ ನೆರವು ನೀಡುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಹಾಗೂ ಸ್ವಾವಲಂಬಿ ಜೀವನಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಯೋಜನೆಯ ಮೂಲ ಆಶಯವಾಗಿದೆ.

ಶಿಕ್ಷಣ ಪೂರ್ಣಗೊಳಿಸಿದ ಅನೇಕ ಯುವಕರು ಉದ್ಯೋಗ ಹುಡುಕುವ ಅವಧಿಯಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾರೆ. ಈ ಸಮಸ್ಯೆಯನ್ನು ಮನಗಂಡ ಸರ್ಕಾರ, ಯುವಕರಿಗೆ ಮಧ್ಯಂತರ ಆರ್ಥಿಕ ನೆರವು ಒದಗಿಸಿ, ಉದ್ಯೋಗ ಹುಡುಕುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಯುವನಿಧಿ ಯೋಜನೆಯನ್ನು ರೂಪಿಸಿದೆ. ಉದ್ಯೋಗ ಸಿಗುವವರೆಗೂ ಯುವಕರಿಗೆ ಕನಿಷ್ಠ ಆರ್ಥಿಕ ಭದ್ರತೆ ಒದಗಿಸುವ ಮೂಲಕ ಅವರು ಕೌಶಲ್ಯಾಭಿವೃದ್ಧಿ, ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯತ್ತ ಗಮನ ಹರಿಸಲು ನೆರವಾಗುವುದು ಯೋಜನೆಯ ಉದ್ದೇಶ.

ಯುವನಿಧಿ ಯೋಜನೆಯಡಿ ಅರ್ಹ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಶಿಕ್ಷಣ ಪೂರ್ಣಗೊಂಡು 6 ತಿಂಗಳಾದರೂ ಉದ್ಯೋಗ ದೊರಕದ ಯುವಕರಿಗೆ ಈ ನೆರವು ಲಭ್ಯವಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇರುವುದರಿಂದ ಪಾರದರ್ಶಕತೆ ಕಾಪಾಡಲಾಗಿದೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯದ ನಿವಾಸಿಯಾಗಿರಬೇಕು. ಪದವಿ ಅಥವಾ ಡಿಪ್ಲೋಮಾ ಶಿಕ್ಷಣವನ್ನು ರಾಜ್ಯದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು. ನಿರುದ್ಯೋಗಿಯಾಗಿ ನೋಂದಾಯಿಸಿಕೊಂಡಿರುವ ಯುವಕರು ಆನ್‌ಲೈನ್ ಮೂಲಕ ಸೇವಾ ಕೇಂದ್ರಗಳು ಅಥವಾ ಸರ್ಕಾರದ ಪೋರ್ಟಲ್ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು.

ಯುವನಿಧಿ ಕೇವಲ ಆರ್ಥಿಕ ನೆರವಲ್ಲ; ಇದು ಯುವಕರಿಗೆ ಮಾನಸಿಕ ಧೈರ್ಯ ನೀಡುವ ಯೋಜನೆಯಾಗಿದೆ. ಕುಟುಂಬದ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡುವುದರ ಜೊತೆಗೆ, ಯುವಕರು ತಮ್ಮ ವೃತ್ತಿಜೀವನದ ಗುರಿ ಸಾಧನೆಗೆ ಹೆಚ್ಚಿನ ಗಮನ ಹರಿಸಲು ಸಹಕಾರಿ ಆಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಇದು ಪ್ರೇರಣೆ ನೀಡುತ್ತಿದೆ.

ಯೋಜನೆ ಜಾರಿಗೆ ಬಂದ ಬಳಿಕ ಯುವ ಸಮುದಾಯದಲ್ಲಿ ಆಶಾವಾದ ಮೂಡಿದೆ. ನಿರುದ್ಯೋಗದಿಂದ ಉಂಟಾಗುವ ನಿರಾಶೆ ಮತ್ತು ಆತಂಕವನ್ನು ಕಡಿಮೆ ಮಾಡುವಲ್ಲಿ ಯುವನಿಧಿ ಮಹತ್ವದ ಪಾತ್ರ ವಹಿಸುತ್ತಿದೆ. ಶಿಕ್ಷಣ ಪಡೆದ ಯುವಕರು ಉದ್ಯೋಗದತ್ತ ಕೇಂದ್ರೀಕರಿಸುವ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಇದು ಪೂರಕವಾಗಿದೆ.

ಸರಿಯಾದ ರೀತಿಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಂಡರೆ ಯುವಕರು ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಲು ಇದು ಪರಿಣಾಮಕಾರಿ ಸಾಧನವಾಗಬಹುದು. ಯೋಜನೆಯ ಬಗ್ಗೆ ಜಾಗೃತಿ ಹೆಚ್ಚಿಸಿ, ಅರ್ಹ ಯುವಕರಿಗೆ ತಲುಪುವಂತೆ ಮಾಡುವಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ.

ಯುವಕರಿಗೆ ಶಿಕ್ಷಣದ ಬಳಿಕದ ನಿರುದ್ಯೋಗ ಅವಧಿ ಅತ್ಯಂತ ಸೂಕ್ಷ್ಮ ಹಂತ. ಈ ಸಮಯದಲ್ಲಿ ಆರ್ಥಿಕ ಬೆಂಬಲ ನೀಡುವ ಮೂಲಕ ಅವರ ಆತ್ಮವಿಶ್ವಾಸ ಉಳಿಸುವುದು ಸರ್ಕಾರದ ಜವಾಬ್ದಾರಿ. ಯುವನಿಧಿ ಯೋಜನೆ ಯುವಕರಿಗೆ ಕೇವಲ ಹಣಕಾಸು ನೆರವಲ್ಲ, ಅವರ ಕನಸುಗಳನ್ನು ಸಾಕಾರಗೊಳಿಸುವ ಭರವಸೆಯಾಗಿದೆ.

-ಎಚ್.ಕೆ. ಪಾಟೀಲ.
ಗದಗ ಜಿಲ್ಲಾ ಉಸ್ತುವಾರಿ ಸಚಿವರು.

ಬಾಕ್ಸ್:

ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅಡಿಯಲ್ಲಿ ಜನವರಿ-2024ರಿಂದ ಸೆಪ್ಟೆಂಬರ್ 2025ರವರೆಗೆ 6356 ಅರ್ಜಿ ಸ್ವೀಕೃತವಾಗಿದೆ. ಅದರಲ್ಲಿ 4048 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 15.30 ಕೋಟಿ ರೂ. ವರ್ಗಾವಣೆಯಾಗಿದೆ. ಆ ಪೈಕಿ ತಾಲೂಕುವಾರು ಡಿಬಿಟಿ ಮೂಲಕ ವರ್ಗಾವಣೆಗೊಂಡ ಫಲಾನುಭವಿಗಳ ವಿವರ: ಗದಗ-1432, ಗಜೇಂದ್ರಗಡ-432, ಲಕ್ಷೆ್ಮೀಶ್ವರ-373, ಮುಂಡರಗಿ-485, ನರಗುಂದ-372, ರೋಣ-612, ಶಿರಹಟ್ಟಿ-342. ಡಿಬಿಟಿ ಮೂಲಕ ಬಾಕಿ ಉಳಿದಿರುವ 2308 ಅಭ್ಯರ್ಥಿಗಳು ಯುವನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ.

  • ಯುವರಾಜ್ ಎಲಿಗಾರ.
    ಅಪ್ರೆಂಟಿಸ್, ವಾರ್ತಾ ಮತ್ತು ಸಾ.ಸಂ. ಇಲಾಖೆ, ಗದಗ.

ಮಂಗಳೂರು| ಮಾದಕವಸ್ತು ಮಾರಾಟ ಮಾಡಲು ಯತ್ನ; ಸಿಸಿಬಿ ಬಲೆಗೆ ಬಿದ್ದ ಮೂವರು ಪೆಡ್ಲರ್‌ಗಳು!

0

ಮಂಗಳೂರು: ಮಂಗಳೂರಿನಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ MDMA ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಬೆಂಗಳೂರಿನಿಂದ ತರಿಸಿಕೊಂಡು ತಲಪಾಡಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳ ಮೇಲೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಉಳ್ಳಾಲದ ಮುಸ್ತಫಾ ಸೀದಿಯಬ್ಬ (34), ಮೈಯದ್ದಿ (28), ಮೊಹಮ್ಮದ್ ಶಿಫಾನ್ (28) ಅವರನ್ನು ಬಂಧಿಸಿದ್ದು, ಬಂಧಿತರಿಂದ 11.90 ಲಕ್ಷ ಮೌಲ್ಯದ 118.13 ಗ್ರಾಂ MDMA ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ಸ್ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯಕ್ಕೆ ಪೋಲೀಸರು ಮುಂದಾಗಿದ್ದಾರೆ.

ಪ್ರಜ್ವಲ್ ರಿತ್ತಿಗೆ ಗೌರವ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕೃಷ್ಣನ ಭಕ್ತನಾದ ತಿಮ್ಮಪ್ಪನು ತಮ್ಮ ಬಾಲ್ಯದಲ್ಲಿ ಹೊಲದಲ್ಲಿ ನೆಲ ಅಗೆಯುತ್ತಿದ್ದಾಗ ಬಂಗಾರ ತುಂಬಿದ ಕೊಡ ದೊರೆತು, ಆ ಬಂಗಾರವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಜನರ ಹಿತಕ್ಕಾಗಿ ಬಳಸಿದ ಫಲವಾಗಿ ತಿಮ್ಮಪ್ಪನಿಗೆ ಕನಕದಾಸನೆಂದು ಪ್ರಸಿದ್ಧಿಯಾದಂತೆ ಗ್ರಾಮದ ಬಾಲಕ ಪ್ರಜ್ವಲ್ ತನ್ನ ಮನೆಯ ಪಾಯ ತೆಗೆಯುವಾಗ ದೊರೆತ ಬಂಗಾರದ ನಿಧಿಯನ್ನು ಸರಕಾರಕ್ಕೆ ನೀಡಿ ನಿಸ್ವಾರ್ಥತೆ ಮೆರೆದು ಆಧುನಿಕ ಕನಕನೆನಿಸಿಕೊಂಡಿದ್ದಾನೆ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪ್ರಭಾರಿ ಬೀರಲಿಂಗದೇವರು ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಇಲ್ಲಿಯ ಪ್ರಜ್ವಲ್ ರಿತ್ತಿಯವರ ಮನೆಗೆ ಭೇಟಿ ನೀಡಿ ಪ್ರಜ್ವಲ್‌ನನ್ನು ಸನ್ಮಾನಿಸಿ ಮಾತನಾಡಿದ ಶ್ರೀಗಳು, ಪ್ರಜ್ವಲ್‌ನಂತಹ ವಿದ್ಯಾರ್ಥಿಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದ್ದು, ಅವನ ಪ್ರಾಮಾಣಿಕತೆಗೆ ಸರಕಾರ ಸೂಕ್ತವಾಗಿ ಗೌರವಿಸಿ ಅವರ ಬಡತನಕ್ಕೆ ನೆರವಾಗಬೇಕು ಎಂದರು.

ಸತ್ಯಪ್ಪ ಗುರಿಕಾರ, ವನಿತಾ ಗುರಿಕಾರ, ರವಿಚಂದ್ರ ಅಬ್ಬಿಗೇರಿ, ಸಾಹಿತಿ ಬಸವರಾಜ ಗರ್ಜಪ್ಪನವರ, ಮಠದ ವ್ಯವಸ್ಥಾಪಕ ಯಮನೂರಪ್ಪ ಹಾಜರಿದ್ದರು.

ಶಿವತತ್ವವು ತ್ಯಾಗ, ಸಮತೆಯ ಪ್ರತೀಕ: ರತ್ನಾ ಸೋಮರೆಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಗದಗ ಜಿಲ್ಲಾ ರೆಡ್ಡಿ ಮಹಿಳಾ ಸಮಾಜದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಮಹತ್ವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಿವರಾತ್ರಿಯ ಹಿನ್ನೆಲೆಯನ್ನು ಕುರಿತು ಹಿರಿಯರಾದ ರತ್ನಾ ಸೋಮರೆಡ್ಡಿ ಮಾತನಾಡಿ, ಮಹಾಶಿವರಾತ್ರಿ ಕೇವಲ ಒಂದು ಹಬ್ಬವಲ್ಲ. ಅದು ಆತ್ಮಪರಿಶೀಲನೆ, ಉಪವಾಸ, ಜಾಗರಣೆ ಮತ್ತು ಶಿವನಾಮ ಸ್ಮರಣೆಯ ಮೂಲಕ ಮನಸ್ಸಿನ ಶುದ್ಧೀಕರಣಕ್ಕೆ ದಾರಿ ತೋರುವ ಪವಿತ್ರ ದಿನವಾಗಿದೆ. ಶಿವತತ್ವವು ತ್ಯಾಗ, ಸಮತೆ, ಸಹಿಷ್ಣುತೆ ಮತ್ತು ಶಾಂತಿಯ ಸಂಕೇತವಾಗಿದ್ದು, ಇಂದಿನ ಯುವಪೀಳಿಗೆಗೆ ನೈತಿಕ ದಾರಿದೀಪವಾಗಬಹುದು. ಶಿವರಾತ್ರಿಯ ಉಪವಾಸವು ದೇಹದ ಶುದ್ಧೀಕರಣಕ್ಕೆ ಮಾತ್ರವಲ್ಲ, ಮನೋನಿಗ್ರಹ ಮತ್ತು ಆತ್ಮಸಾಧನೆಗೆ ಸಹಾಯಕವಾಗುತ್ತದೆ ಎಂದರು.

ಆಶ್ರಮದ ಗುರುಗಳು ಶಿವರಾತ್ರಿಯ ಪೌರಾಣಿಕ ಹಿನ್ನೆಲೆ ಮತ್ತು ಅದರ ತಾತ್ವಿಕ ಅರ್ಥವನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಭಜನೆ, ಕೀರ್ತನೆ ಮತ್ತು ಶಿವನಾಮ ಸ್ಮರಣೆ ನಡೆಯಿತು.

ಕಾರ್ಯಕ್ರಮದಲ್ಲಿ ರಾಜೇಶ್ವರಿ ಶಿರೋಳ ಶಿವರಾತ್ರಿಯ ವೈಶಿಷ್ಟ್ಯತೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರೂಪಾ ತಿರ್ಲಾಪೂರ ಕಾರ್ಯಕ್ರಮವನ್ನು ನೆರವೇರಿಸಿದರು. ವೀಣಾ ತಿರ್ಲಾಪೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಯಶೋಧ ಗದ್ದಿಕೇರಿ, ಸುಮಾ ಶಿವನಗೌಡ, ಶೈಲಜಾ ಕವಲೂರ್, ಆಶಾ ಹೋದರ ಗೌಡರ್ ಸೇರಿದಂತೆ ರೆಡ್ಡಿ ಬಳಗದ ಮಹಿಳೆಯರು ಉಪಸ್ಥಿತರಿದ್ದರು.

ರಣವೀರ್ ಸಿಂಗ್‌ಗೆ ಮತ್ತೆ ಬೆದರಿಕೆ; ಈ ಬಾರಿ ಸಿಬ್ಬಂದಿ-ಮ್ಯಾನೇಜರ್‌ಗಳಿಗೂ ಅಪಾಯ

0

ಬಾಲಿವುಡ್ ನಟ ರಣವೀರ್ ಸಿಂಗ್ ಮೇಲೆ ಮತ್ತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ನೀಡಿರುವ ಘಟನೆ ನಡೆದಿದೆ.

ಈ ಬಾರಿ ಗ್ಯಾಂಗ್ ಕೇವಲ ರಣವೀರ್ ಅವರನ್ನು ಮಾತ್ರ ಗುರಿಯಾಗಿಸಲು ಹೊರಟಿಲ್ಲ, ಅವರ ಸಿಬ್ಬಂದಿ ಮತ್ತು ಮ್ಯಾನೇಜರ್‌ಗಳು ಕೂಡ ಅಪಾಯದಲ್ಲಿ ಇದ್ದಾರೆ ಎಂದು ಎಚ್ಚರಿಸಲಾಗಿದೆ. ಫೆಬ್ರವರಿ 10 ರಂದು ಮೊದಲ ವಾಟ್ಸಾಪ್ ವಾಯ್ಸ್ ನೋಟ್‌ನಲ್ಲಿ 1 ಕೋಟಿ ರೂ. ಬೇಡಿಕೆಯಾದದ್ದು ಮತ್ತು ಇದೀಗ ಬಂದ ಎರಡನೇ ವಾಯ್ಸ್ ನೋಟ್‌ನಲ್ಲಿ ಮಾತು ತಪ್ಪಿದರೆ ಶಿಕ್ಷೆ ಏನು ಎಂಬುದನ್ನು ಸೂಚಿಸಲಾಗಿದೆ.

ಗ್ಯಾಂಗ್ ಲೈನ್‌ನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿಯ ಹೆಸರನ್ನೂ ಉಲ್ಲೇಖಿಸಿದ್ದು, ಅವರಿಗೆ ಸಹ ಬೆದರಿಕೆ ನೀಡಲಾಗಿದೆ. ಪ್ರಸ್ತುತ, ದೀಪಿಕಾ ಪಡುಕೋಣೆ ಮತ್ತು ರಣವೀರ್ ವಾಸಿಸುವ ಅಪಾರ್ಟ್‌ಮೆಂಟ್‌ಗೆ ಸಶಸ್ತ್ರ ಗಾರ್ಡ್‌ಗಳು ನಿಯೋಜಿಸಲ್ಪಟ್ಟಿದ್ದು, ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ದಾಳಿ; ಸಿಬ್ಬಂದಿ ಗಂಭೀರ!

0

ಬೆಂಗಳೂರು:- ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ ಸಿಬ್ಬಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಶಾಂತಪ್ಪ ಗಾಯಗೊಂಡ ಪ್ರಾಣಿ ಪಾಲಕ. ಸದ್ಯ ಶಾಂತಪ್ಪರನ್ನ ಜಿಗಣಿಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಬಗ್ಗೆ ಶಾಂತಪ್ಪ ಪತ್ನಿ ಜಯಮ್ಮ ಪ್ರತಿಕ್ರಿಯಿಸಿದ್ದು, ಬನ್ನೇರುಘಟ್ಟ ಝೂನಲ್ಲಿ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಡೆಮ್ಮೆ ದಾಳಿಯಿಂದ ಗಾಯಗೊಂಡಿದ್ದರು. ಇದೀಗ ಚಿರತೆ ದಾಳಿ ಮಾಡಿದೆ. ಮನೆಗೆ ಆಧಾರವಾಗಿದ್ದಾರೆ. ಅವರನ್ನ ಖಾಯಂ ನೌಕರರನ್ನಾಗಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಧ್ಯ ಶಾಂತಪ್ಪ ಅವರ ಸ್ಥಿತಿ ಗಂಭೀರ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸಾವಿರಾರು ಹಗರಣಗಳ ಸರಮಾಲೆ ಸಿಎಂ ಕುತ್ತಿಗೆಯಲ್ಲಿ ಸುತ್ತಿಕೊಂಡಿದೆ; ಆರ್ ಅಶೋಕ್

0

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರ ಕುತ್ತಿಗೆಯಲ್ಲಿ ಸಾವಿರಾರು ಹಗರಣಗಳ ಸರಮಾಲೆ ಸುತ್ತಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಾವಿರ ದಿನದಲ್ಲಿ ಸಾವಿರಾರು ಹಗರಣಗಳ ಸರಮಾಲೆ ಸಿಎಂ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯರಿಂದ ಮುಡಾ ಹಗರಣ ನಡೆದಿದೆ. ಮುಡಾ ಹಗರಣದ ಮೂಲ ಪುರುಷ ಸಿದ್ದರಾಮಯ್ಯ ಆಗಿದ್ದು, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಣ ನುಂಗಿದ್ದಾರೆ. ಈ ವೇಳೆ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಸಲ್ಲಿಸಿ, ಜೈಲಿಗೆ ಹೋಗಿದ್ದರು. ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಹಗರಣ ನಡೆದಿದ್ದು, ಇನ್ಸ್‌ಪೆಕ್ಟರ್‌ ಸೇರಿ ವಿವಿಧ ಹುದ್ದೆಗಳಿಗೆ ಹಣ ಫಿಕ್ಸ್ ಮಾಡಿ, ಈ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಗೃಹಲಕ್ಷ್ಮೀ ಹಣ ಕೊಡುವುದಾಗಿ ಹಣ ಲೂಟಿ ಹೊಡೆಯುತ್ತಿರುವ ಸರ್ಕಾರವು ಒಂದು ತಿಂಗಳ ಹಣ ನೀಡದೆ, ಅನ್ನಭಾಗ್ಯ ಹಣದಲ್ಲೂ ಲೂಟಿ ಹೊಡೆಯುತ್ತಿದೆ. ರೈತರ ರಸಗೊಬ್ಬರ ಸಹ ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿದೆ, ಹೆಣ್ಣು ಮಕ್ಕಳ ಸಾವು ನಡೀತಿದೆ. ರಾಜ್ಯದಲ್ಲಿ ಬ್ಯಾಂಕ್‌ಗಳ ಲೂಟಿ ನಡೆಯುತ್ತಿದೆ. ಪೊಲೀಸರೇ ಕಳ್ಳರಾದರೆ ರಾಜ್ಯದಲ್ಲಿ ಯಾವ ಸ್ಥಿತಿಯಿದೆ. ಅಧಿಕಾರಿಗಳು ಕೆಲಸ ಮಾಡುವ ಮೂಡ್‌ನಲ್ಲಿಲ್ಲ. ಒತ್ತಡದಲ್ಲಿ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಕೆಲವರು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗ್ತಿದ್ದು, ಸರ್ಕಾರದ ಕಿರುಕುಳದಿಂದ ಸಾವುಗೀಡಾದ ಅಧಿಕಾರಿಗಳ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇದನ್ನು ಗೃಹ ಸಚಿವ ಪರಮೇಶ್ವರ್‌ಗೆ ಕೇಳಿದ್ರೆ ಗೊತ್ತಿಲ್ಲ ಅಂತಾರೆಂದು ಕಿಡಿಕಾರಿದ್ದಾರೆ.

ಈ ಕಾಂಗ್ರೆಸ್ ಸರ್ಕಾರಕ್ಕೆ ಮರಳು ದಂಧೆ ಎಟಿಎಂ ಆಗಿದ್ದು, ದೇವದುರ್ಗ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಗಲಾಟೆ ನಡೆಸಲಾಗಿದೆ. ಅಧಿಕಾರಿ ವರ್ಗ ಕಾಪಾಡಿ ಕಾಪಾಡಿ ಎಂಬ ಸ್ಥಿತಿಯಲ್ಲಿದೆ. ಆದ್ರೆ ಈ ಸರ್ಕಾರದಲ್ಲಿ ನಾನ್ ಸಿಎಂ, ನೀನ್ ಸಿಎಂ ಎಂದು ಇಬ್ಬರ ಜಗಳ ನಡೆದಿದೆ. ಇವ್ರೇ ಇರ್ತಾರಾ ನಾಳೆ ಹೋಗ್ತಾರಾ ಎಂಬ ಅತಂತ್ರ ಸ್ಥಿತಿಯಲ್ಲಿರುವ ಅಧಿಕಾರಿಗಳು ಲೂಟಿಗೆ ನಿಂತಿದ್ದಾರೆ. ನಾಳೆ ನಡೆಯುವ ಸಾವಿರ ದಿನದ ಕಾರ್ಯಕ್ರಮ ಸಹ ಲೂಟಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಲೂಟಿ ಮಂತ್ರಿಗಳು ಬರ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿದ್ಧರಾಮಯ್ಯಗೆ ಲೂಟಿ ಹಣ ನೀಡುವರು. ಇದು ಅಲಿಬಾಬಾ ಮತ್ತು ಮೂವತ್ತು ಜನ ಕಳ್ಳರ ಸರ್ಕಾರವಾಗಿದೆ. ಇವರದ್ದು ಸಾವಿರ ದಿನದ ಸಾಧನೆ ಶೂನ್ಯ, ಬರೀ ಲೂಟಿ ಲೂಟಿ ಎಂದು ಹರಿಹಾಯ್ದರು.

ಮಂಡ್ಯ| ವಿದ್ಯುತ್ ತಂತಿ ಸ್ಪರ್ಶಿಸಿ ಹೊತ್ತಿ ಉರಿದ ಲಾರಿ; ಅದೃಷ್ಟವಶಾತ್ ಚಾಲಕ ಪಾರು!

0

ಮಂಡ್ಯ:- ವಿದ್ಯುತ್ ತಂತಿ ಸ್ಪರ್ಶಿಸಿ ಲಾರಿಯೊಂದು ಹೊತ್ತಿ ಉರಿದಿರುವ ಘಟನೆ ಮಂಡ್ಯ ತಾಲ್ಲೂಕು ದೊಡ್ಡ ಬಾಣಸವಾಡಿ ಗೇಟ್ ಬಳಿ ಜರುಗಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೆರಗೋಡು ಮುಖ್ಯ ರಸ್ತೆಯಲ್ಲಿ ಮಂಡ್ಯ ಕಡೆಗೆ ಕಬ್ಬಿನ ತರಗುತುಂಬಿ ಬರುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಏಕಾಏಕಿ ಬೆಂಕಿ ಹೊತ್ತುಕೊಂಡು ಉರಿದಿದೆ.

ಘಟನೆಯಿಂದ ಲಾರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ| ಅನುಮತಿ ಇಲ್ಲದೆ ಸಾಗುವ ಕಲ್ಲು ಗಣಿಗಾರಿಕೆ; ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ

0

ಯಾದಗಿರಿ:- ಜಿಲ್ಲೆಯಲ್ಲಿ ಶಿರವಾಳ ಹಾಗೂ ಅಣಬಿ ಗ್ರಾಮಗಳಲ್ಲಿ ಪರವಾನಗಿ ಪಡೆಯದೇ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕೆಲವು ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಯ ನಷ್ಟವಾಗುತ್ತಿದೆ. ರಸ್ತೆ ಪಕ್ಕದಲ್ಲಿಯೇ ಜೆಸಿಬಿ ಬಳಸಿ ನೂರಾರು ಅಡಿ ಭೂಗರ್ಭ ಅಗ್ಗವಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಸೈಲೆಂಟ್ ಆಗಿದ್ದಾರೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯನ್ನು ಬಳಸುತ್ತಿದ್ದು, ಯಾವುದೇ ಅಪಘಾತ ಸಂಭವಿಸಿದರೆ ಜನರ ಜೀವಕ್ಕೆ ಹಾನಿ ಸಂಭವಿಸಬಹುದು.

ಅಕ್ರಮ ಗಣಿಗಾರಿಕೆಯಿಂದ ಉಂಟಾದ ಕಲ್ಲು ಕಲಬುರಗಿ, ಯಾದಗಿರಿ ಮತ್ತು ಇತರ ಭಾಗಗಳಲ್ಲಿ ಮಾರಾಟವಾಗುತ್ತಿದೆ ಮತ್ತು ಮನೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ನಿರ್ಮಾಣ ಕಾರ್ಯಗಳಲ್ಲಿ ಬಳಸಲಾಗುತ್ತಿದೆ. ತಹಶೀಲ್ದಾರ್ ಸಿದ್ಧಾರೂಢರು ಈ ಬಗ್ಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

13 ಮಂದಿಗೆ ಲಾಡ್ಲೆ ಮಶಾಕ್ ದರ್ಗಾ ಶಿವಲಿಂಗ ಪೂಜೆ ಮಾಡಲು ಅವಕಾಶ ನೀಡಿದ ಕಲಬುರಗಿ ಹೈಕೋರ್ಟ್

0

ಕಲಬುರಗಿ: ಲಾಡ್ಲೆ ಮಶಾಕ್ ದರ್ಗಾದ ಶಿವಲಿಂಗದಲ್ಲಿ ಪೂಜೆ ಸಲ್ಲಿಸಲು 13 ಜನರಿಗೆ ಕಲಬುರಗಿ ಹೈಕೋರ್ಟ್ ಇಂದು ಅವಕಾಶ ಕಲ್ಪಿಸಿದೆ.

ಹಿಂದೂ ಮುಖಂಡ ಗುರುಶಾಂತ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಏಕಸದಸ್ಯ ಪೀಠ ವಿಚಾರಣೆ ನಡೆಸಿದ ನಂತರ, ನ್ಯಾಯಮೂರ್ತಿ ಇಂದ್ರೀಶ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಈ 13 ಮಂದಿಗೆ ಮಧ್ಯಾಹ್ನ 2ರಿಂದ ಸಂಜೆ 8 ಗಂಟೆಯವರೆಗೆ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ನಿನ್ನೆ ಜಿಲ್ಲಾಡಳಿತ ಹಿಂದೂ ಮುಖಂಡರಿಂದ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದು, ಹೈಕೋರ್ಟ್ ಮೊರೆ ಹೋಗಿ ಅವಕಾಶ ಪಡೆಯಲು ಮುಂದಾದರು. ಇದೀಗ ಹೈಕೋರ್ಟ್ ಆದೇಶದಿಂದ ಪೂಜೆ ಜಾರಿಗೆ ಬರುವ ಮೂಲಕ ಹಿಂದೂ ಸಮುದಾಯಕ್ಕೆ ನ್ಯಾಯಮೂಲಕ ಹಕ್ಕು ದೊರಕಿದೆ.

error: Content is protected !!