Home Blog Page 173

ICC Rankings: 1736 ದಿನಗಳ ಬಳಿಕ ಸಿಂಹಾಸನ ವಾಪಸ್: ಕಿಂಗ್ ಕೊಹ್ಲಿ ಮತ್ತೆ ನಂ.1!

0

ಏಕದಿನ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿಯಿಂದ ಭರ್ಜರಿ ಗೌರವ ಲಭಿಸಿದೆ. ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ನಿರಂತರವಾಗಿ 50 ಪ್ಲಸ್ ರನ್ ಗಳಿಸಿರುವ ಕೊಹ್ಲಿ, ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

ಬುಧವಾರ ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 785 ರೇಟಿಂಗ್ ಅಂಕಗಳೊಂದಿಗೆ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಇದೊಂದು ಖುಷಿಯ ಸಂಗತಿಯಾಗಿದ್ದರೆ, ಇದೇ ವೇಳೆ ಈವರೆಗೆ ಅಗ್ರಸ್ಥಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹ.

ವಿರಾಟ್ ಕೊಹ್ಲಿ ಸುಮಾರು 4 ವರ್ಷ 9 ತಿಂಗಳು (1736 ದಿನಗಳ) ದೀರ್ಘ ಕಾಯುವಿಕೆಯ ಬಳಿಕ ಮತ್ತೆ ಏಕದಿನ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಹಿಂದೆ ಅವರು 2021ರ ಏಪ್ರಿಲ್ 13ರವರೆಗೆ ಅಗ್ರಸ್ಥಾನದಲ್ಲಿದ್ದರು. ಅದರ ಬಳಿಕ ಪಾಕಿಸ್ತಾನದ ಬಾಬರ್ ಆಝಂ ಆ ಸ್ಥಾನವನ್ನು ವಶಪಡಿಸಿಕೊಂಡಿದ್ದರು.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಶತಕ ಮತ್ತು 1 ಅರ್ಧಶತಕ ಸಿಡಿಸಿದ್ದ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ಗಳಿಸಿ ತಮ್ಮ ಫಾರ್ಮ್‌ನ್ನು ಮುಂದುವರೆಸಿದ್ದಾರೆ. ಈ ಅದ್ಭುತ ಪ್ರದರ್ಶನವೇ ಅವರನ್ನು ಮತ್ತೆ ಶ್ರೇಯಾಂಕದ ಶಿಖರಕ್ಕೆ ಕೊಂಡೊಯ್ದಿದೆ.

ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ (ಟಾಪ್):

  1. ವಿರಾಟ್ ಕೊಹ್ಲಿ – 785

  2. ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) – 784

  3. ರೋಹಿತ್ ಶರ್ಮಾ – 775

  4. ಶುಭಮನ್ ಗಿಲ್

  5. ಶ್ರೇಯಸ್ ಅಯ್ಯರ್

ಆದರೆ ಕೊಹ್ಲಿಗೆ ಈ ಸ್ಥಾನವನ್ನು ಉಳಿಸಿಕೊಳ್ಳುವುದು ಸುಲಭವಾಗಿಲ್ಲ. ಏಕೆಂದರೆ ಡ್ಯಾರಿಲ್ ಮಿಚೆಲ್ ಕೇವಲ ಒಂದು ರೇಟಿಂಗ್ ಅಂಕ ಹಿಂದಿದ್ದು, ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿನ ಪ್ರದರ್ಶನವೇ ಮುಂದಿನ ವಾರದ ಶ್ರೇಯಾಂಕವನ್ನು ನಿರ್ಧರಿಸಲಿದೆ. ಕೊಹ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ಕನ್ನಡದಲ್ಲೇ ಪತ್ರ ಬರೆದು ಮೋದಿ ಸಂಕ್ರಾಂತಿ ಶುಭಾಶಯ: ಕರ್ನಾಟಕಕ್ಕೆ ವಿಶೇಷ ಗೌರವ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ್ದು, ವಿಶೇಷವಾಗಿ ಕನ್ನಡದಲ್ಲೇ ಪತ್ರ ಬರೆದು ಶುಭಹಾರೈಸಿರುವುದು ಗಮನ ಸೆಳೆದಿದೆ. ಈ ಪತ್ರವನ್ನು ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೋದಿ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪತ್ರ ಬರೆದು ಆಯಾ ರಾಜ್ಯದ ಜನತೆಗೆ ಸಂಕ್ರಾಂತಿ / ಪೊಂಗಲ್ ಶುಭಾಶಯ ಕೋರಿದ್ದಾರೆ. ಅದರಲ್ಲೂ ಕನ್ನಡದಲ್ಲಿ ನೇರವಾಗಿ ಸಂದೇಶ ನೀಡಿರುವುದು ಕರ್ನಾಟಕದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.

ಪತ್ರದಲ್ಲಿ ಮೋದಿ, “ಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಈ ಹಬ್ಬ ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ” ಎಂದು ಬರೆದಿದ್ದಾರೆ.

ದೇಶಾದ್ಯಂತ ವಿಭಿನ್ನ ರೂಪಗಳಲ್ಲಿ ಆಚರಿಸಲ್ಪಡುವ ಸಂಕ್ರಾಂತಿ, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತಿಬಿಂಬವಾಗಿದ್ದು, ಒಗ್ಗಟ್ಟಿನ ಭಾವನೆಯನ್ನು ಬಲಪಡಿಸುವ ಹಬ್ಬ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಸಂಕ್ರಾಂತಿ ರೈತರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದೆ ಎಂದು ಹೇಳಿದ ಮೋದಿ, “ಇದು ಅನ್ನದಾತರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭ. ಸಂಕ್ರಾಂತಿ ನಮ್ಮನ್ನು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುಂದಕ್ಕೆ ಸಾಗಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ.

“ನಿಮ್ಮ ಜೀವನದಲ್ಲಿ ಸಮೃದ್ಧಿ, ಆರೋಗ್ಯ, ಸಂತೋಷ ನೆಲೆಸಲಿ. ನಿಮ್ಮ ಮನೆಗಳಲ್ಲಿ ಸಂತೋಷ, ಸಮಾಜದಲ್ಲಿ ಸಾಮರಸ್ಯ ಮೂಡಲಿ” ಎಂದು ಪ್ರಧಾನಿ ಹಾರೈಸಿದ್ದಾರೆ.

ಟ್ವಿಟ್ಟರ್ ಪೋಸ್ಟ್‌ನಲ್ಲೂ ಮೋದಿ, “ಎಳ್ಳು-ಬೆಲ್ಲದ ಮಾಧುರ್ಯದಂತೆ ಈ ಹಬ್ಬ ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತರಲಿ. ಸೂರ್ಯ ದೇವರು ಎಲ್ಲರನ್ನೂ ಆಶೀರ್ವದಿಸಲಿ” ಎಂದು ಹೇಳಿದ್ದಾರೆ.

ಮಹಿಳಾ ಆಯುಕ್ತೆಗೆ ಫೋನ್‌ನಲ್ಲಿ ನಿಂದನೆ: ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ FIR

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಫೋನ್ ಮೂಲಕ ಅಶ್ಲೀಲ ನಿಂದನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.

ಪೌರಾಯುಕ್ತೆ ಅಮೃತಾ ಗೌಡ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿ, BNS 79, 132, 352, 199, 54 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರಿನಲ್ಲಿ, ತಮಗೆ ಮಾನಸಿಕವಾಗಿ ಭಾರೀ ಆಘಾತ ಉಂಟಾಗಿದ್ದು, ತಾವು ಕೇಂದ್ರ ಸ್ಥಾನದಲ್ಲಿ ಒಬ್ಬರೇ ವಾಸಿಸುತ್ತಿರುವುದರಿಂದ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಯ ಅಮೃತಾ ಗೌಡ, “ಬ್ಯಾನರ್ ತೆರವುಗೊಳಿಸುವ ಪ್ರಕ್ರಿಯೆ ಸಂಪೂರ್ಣವಾಗಿ ನಿಯಮಾನುಸಾರವಾಗಿತ್ತು. ಕೌನ್ಸಿಲರ್‌ಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಸಾರ್ವಜನಿಕ ತೊಂದರೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನೋವು ತಂದಿದೆ” ಎಂದಿದ್ದಾರೆ.

ಆರೋಪಕ್ಕೆ ರಾಜೀವ್ ಗೌಡ ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಡಿಯೋ ಕುರಿತು ಪ್ರತಿಕ್ರಿಯಿಸಿದ ರಾಜೀವ್ ಗೌಡ,
“ನಾನು ಅಧಿಕಾರಿಗೆ ಬೆದರಿಕೆ ಹಾಕಿಲ್ಲ. ಫ್ಲೆಕ್ಸ್‌ಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದೇನೆ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ಯಾವುದೇ ಕಾನೂನು ಕ್ರಮಕ್ಕೂ ಸಿದ್ಧ” ಎಂದು ಹೇಳಿದ್ದಾರೆ.

ಈ ಘಟನೆಯ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜೀವ್ ಗೌಡನ ಬಂಧನಕ್ಕೆ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಮಹಿಳಾ ಅಧಿಕಾರಿಗಳ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಯ ಹಿನ್ನೆಲೆ

‘ಕಲ್ಟ್’ ಸಿನಿಮಾ ಪ್ರಚಾರದ ವೇಳೆ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾನರ್ ಹಾಕಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದ್ದರು. ಇದಕ್ಕೆ ಸಂಬಂಧಿಸಿ ರಾಜೀವ್ ಗೌಡ ಪೌರಾಯುಕ್ತೆಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: “ನಮ್ಮ ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

“ನಾನು ಕೆಪಿಸಿಸಿ ಅಧ್ಯಕ್ಷ, ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ. ಶಿಷ್ಟಾಚಾರದ ಮೂಲಕ ಅವರನ್ನು ನಾನು ಸ್ವಾಗತಿಸಿ, ಭೇಟಿ ಮಾಡಿದ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವೇ? ನೀವುಗಳು ನಿಮಗೆ ಇಚ್ಛೆ ಬಂದಂತೆ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದೀರಿ.

ನಾವು ಯಾವ ಸಂದೇಶವನ್ನು ಕೊಟ್ಟಿಲ್ಲ. ನಮಗೂ ಯಾವ ಸಂದೇಶವನ್ನೂ ಕೊಟ್ಟಿಲ್ಲ. ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ಇದನ್ನೇ ಮುಂದುವರಿಸಿಕೊಂಡು ಹೋಗಿ ಎಂದು ನಮ್ಮ ನಾಯಕರು ಹೇಳಿದ್ದಾರೆ. ನರೇಗಾ ವಿಚಾರವಾಗಿ ನಾವು ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ರಾಜಕಾರಣ ಚರ್ಚೆ ಮಾಡಿದ್ದೇವೆ.

“ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ” ಎಂಬ ಟ್ವೀಟ್ ವಿಚಾರವಾಗಿ ಕೇಳಿದಾಗ, “ನಾನು ಹೊಸದಾಗಿ ಈ ಮಾತನ್ನು ಹೇಳುತ್ತಿಲ್ಲ. ಒಕ್ಕಲಿಗ ಉದ್ಯಮಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಾನು ಅಲ್ಲಿನ ಉದ್ಯಮಿಗಳ ಜೊತೆ ನನ್ನ ಅನುಭವದ ಮಾತುಗಳನ್ನು ಹೇಳಿಕೊಂಡಿದ್ದೇನೆ” ಎಂದರು. ದೆಹಲಿಗೆ ತೆರಳುತ್ತಿದ್ದೀರಾ ಎಂದು ಕೇಳಿದಾಗ, “16 ರಂದು ದೆಹಲಿಗೆ ತೆರಳುತ್ತಿದ್ದೇನೆ” ಎಂದು ತಿಳಿಸಿದರು.

ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

0

ಬೆಂಗಳೂರು: ವಿವೇಕನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಂಜಿತ್ ಬಾಗ್ (35) ಮತ್ತು ಮಿಥುನ್ ಕುಂಭಾರ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಓಡಿಸ್ಸಾದಿಂದ ತರಲಾಗುತ್ತಿದ್ದ ಗಾಂಜಾವನ್ನು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ವಾಟ್ಸ್‌ಆಪ್ ಮೂಲಕ ಡ್ರಗ್ ಡೀಲಿಂಗ್ ನಡೆಸುತ್ತಿದ್ದು, ರಾಜಸ್ಥಾನದ ಪ್ರಮುಖ ಆರೋಪಿ ರಾಕೇಶ್ ಎಂಬಾತ ಈ ಇಬ್ಬರನ್ನು ಸಂಪರ್ಕಿಸಿ ಗಾಂಜಾ ಮಾರಾಟ ಮಾಡುವಂತೆ ಸೂಚನೆ ನೀಡುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ. ರಾಕೇಶ್ ವಾಟ್ಸ್‌ಆಪ್ ಮೂಲಕಲೇ ಡ್ರಗ್ ಡೀಲ್‌ಗಳನ್ನು ಆಪರೇಟ್ ಮಾಡುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಕೇಶ್ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಮೊದಲು ಈ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 21 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ರಾಕೇಶ್ ಹಾಗೂ ಸುಕ್ರ ವರ್ಮಾ ಎಂಬುವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ವಿವೇಕನಗರ ಪೊಲೀಸರ ಮುಂದುವರೆದ ತನಿಖೆ ನಡೆಯುತ್ತಿದೆ.

 

ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ: ಬಿ.ವೈ.ವಿಜಯೇಂದ್ರ

0

ಚಿತ್ರದುರ್ಗ: ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ; ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ನಿನ್ನೆ ಜರ್ಮನಿಯ ಚಾನ್ಸೆಲರ್ ಕರ್ನಾಟಕಕ್ಕೆ ಬಂದಿದ್ದರು. ಜರ್ಮನಿಯು ಉತ್ಪಾದನಾ ಹಬ್ ಆಗಿರುವ ತಂತ್ರಜ್ಞಾನದ ದೇಶ. ಅಂಥ ದೇಶದ ಚಾನ್ಸೆಲರ್ ಕರ್ನಾಟಕಕ್ಕೆ ಬಂದರೆ, ಇವರಲ್ಲಿ ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಅದೇ ಕುರ್ಚಿ ಕಸಿದುಕೊಳ್ಳಲು ಹೋಗಿ ರಾಹುಲ್ ಗಾಂಧಿ ಜೊತೆ ನಿಂತುಕೊಂಡಿದ್ದಾರೆ. ಇದರಂದ ರಾಜ್ಯದ ಪರಿಸ್ಥಿತಿ ಏನಾಗಬೇಕು ಎಂದು ಕೇಳಿದರು.

ಇದೆಲ್ಲವನ್ನೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಉತ್ತರ ನೀಡುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ಸಿನಲ್ಲಿ ಆಂತರಿಕ ಕಚ್ಚಾಟ ಇದೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಕಾತುರದಲ್ಲಿದ್ದಾರೆ. ನನ್ನ ತಾಳ್ಮೆ ಕೆಣಕಬೇಡಿ; ನಾನು ಸಿಎಂ ಆಗಬೇಕೆಂದು ಉಳಿದವರು ರೆಡಿ ಆಗಿದ್ದಾರೆ ಎಂದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಷ್ಟೇ ಅಲ್ಲ; ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದಾಗ ನಾವೆಲ್ಲರೂ ಬಳ್ಳಾರಿ ಪಾದಯಾತ್ರೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ಬಹುತೇಕ ಎಲ್ಲರದೂ ಆಗಿದೆ. ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸಬೇಕಾಗಿದೆ ಎಂದು ನುಡಿದರು. ನಾನು ಈಗಾಗಲೇ ಈ ಕುರಿತು ಪಕ್ಷದ ದೆಹಲಿ ವರಿಷ್ಠರಿಗೆ ಮಾತನಾಡಿದ್ದೇನೆ. ಇವತ್ತು, ನಾಳೆಯೊಳಗೆ ಅದರ ಬಗ್ಗೆ ಸಂದೇಶವುಳ್ಳ ಮಾಹಿತಿ ಬರಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಸರ್ಕಾರಿ ವೈದ್ಯರ ಮನೆಯಲ್ಲಿ ಗಾಂಜಾ ಪತ್ತೆ: ಆರೋಗ್ಯ ಇಲಾಖೆ ನೋಟಿಸ್

0

ಬೆಳಗಾವಿ: ಬೆಳಗಾವಿಯ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರ ಮನೆಯಲ್ಲಿ ಗಾಂಜಾ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಗಾಂಜಾ ಪತ್ತೆ ಹಾಗೂ ಸೇವನೆ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಂಬಂಧಪಟ್ಟ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.

ನಾಲ್ಕು ದಿನಗಳ ಹಿಂದೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೈದ್ಯ ಡಾ. ರಾಹುಲ್ ಬಂತಿ ಅವರ ನಿವಾಸದಲ್ಲಿ ಸುಮಾರು 134 ಗ್ರಾಂ ಗಾಂಜಾ ಪತ್ತೆಯಾಗಿದೆ. ನಂತರ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತಾಗ, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಡಾ. ರಾಹುಲ್ ಬಂತಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಡಾ. ರಾಹುಲ್ ಬಂತಿ ಅವರು ಪ್ರಸ್ತುತ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಕ್ಕಳ ತಜ್ಞ ವೈದ್ಯರಾಗಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಡಾ. ಈಶ್ವರ ಗಡಾದ ಡಾ. ರಾಹುಲ್ ಬಂತಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ – ದಿವ್ಯಜ್ಯೋತಿ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರು

0

ತಿರುವನಂತಪುರಂ: ಮಕರ ಸಂಕ್ರಾಂತಿ ಎಂದರೆ ದೇಶಾದ್ಯಂತ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳ ಪ್ರತಿಧ್ವನಿ. ಮಾಲಾಧಾರಿಗಳಾಗಿ ಇಡುಮುರಿ ಕಟ್ಟಿಕೊಂಡು, ಕಠಿಣ ವೃತಗಳನ್ನು ಪಾಲಿಸಿ, ಶಬರಿಮಲೆಗೆ ಹೊರಡುವ ಲಕ್ಷಾಂತರ ಭಕ್ತರ ದೃಶ್ಯವೇ ಒಂದು ಭಕ್ತಿ ಹಬ್ಬ.

ಇಂದು ಮಕರ ಸಂಕ್ರಾಂತಿ. ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಪವಿತ್ರ ಮಕರ ಜ್ಯೋತಿ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಶಬರಿಮಲೆಯಲ್ಲಿ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು, ಇನ್ನೂ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಅಯ್ಯಪ್ಪನ ತತ್ವವೇ “ತತ್ವಮಸಿ” — ನೀನೇ ಆ ದೇವರು ಎಂಬ ವೇದ ಮಹಾವಾಕ್ಯದ ಸಾರ. ಅಜ್ಞಾನದಿಂದ ಜ್ಞಾನಕ್ಕೆ ದಾರಿ ತೋರಿಸುವ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಲಕ್ಷಾಂತರ ಭಕ್ತರು ಮಾಲೆ ಧರಿಸಿ ವೃತಾಚರಣೆ ನಡೆಸುತ್ತಾರೆ. ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದು ಪುನೀತರಾಗುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಭಕ್ತರ ಸಂಖ್ಯೆಯ ಭಾರೀ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ವ್ಯವಸ್ಥೆ ಭಾರೀ ಮುನ್ನೆಚ್ಚರಿಕೆ ವಹಿಸಿದೆ.  1,000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ, ಬಿಗಿ ಪೊಲೀಸ್ ಬಂದೋಬಸ್ತ್, ಆರೋಗ್ಯ ಮತ್ತು ತುರ್ತು ಸೇವೆಗಳ ವ್ಯವಸ್ಥೆ

ಆದರೆ ಈ ಭಕ್ತಿ ಸಂಭ್ರಮದ ನಡುವೆ, ಕೇರಳದಲ್ಲಿ ವಿವಾದವೂ ಭುಗಿಲೆದ್ದಿದೆ. ಎರೆಮಲೆಯಲ್ಲಿ ಮಾಲಾಧಾರಿಗಳ ವಾಹನಗಳನ್ನು ನಿಲ್ಲಿಸಿ, “ಖಾಸಗಿ ವಾಹನ ಬಿಡುವುದಿಲ್ಲ, ಕೇರಳ ಸರ್ಕಾರಿ ಬಸ್‌ಲ್ಲೇ ಹೋಗಬೇಕು” ಎಂದು ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

“ನಾವು ಈಗಾಗಲೇ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ. ಈಗ ಮತ್ತೆ ಸರ್ಕಾರಿ ಬಸ್‌ಗೆ ಹಣ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ನಮ್ಮ ಭಕ್ತಿ ಮತ್ತು ಶ್ರದ್ಧೆಗೆ ಅವಮಾನ” ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರ ಭಕ್ತರ ಮೇಲೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ.

ಕೊಡಲಿಯಿಂದ ಕೊಚ್ಚಿ ಮಹಿಳೆ ಹತ್ಯೆ ಪ್ರಕರಣ: ಕೊಲೆ ಆರೋಪಿ ಆತ್ಮಹತ್ಯೆಗೆ ಶರಣು

0

ಬೆಂಗಳೂರು ಗ್ರಾಮಾಂತರ: ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

ಆರೋಪಿ ವೀರಭದ್ರಪ್ಪ ಜನವರಿ 12 ರಂದು ಬೆಂಗಳೂರು ಉತ್ತರ ತಾಲೂಕಿನ ಕುದುರೆಗೆರೆ ಗ್ರಾಮದಲ್ಲಿ 55 ವರ್ಷದ ದ್ರಾಕ್ಷಾಯಿಣಿ ಎಂಬ ಮಹಿಳೆಯನ್ನು ಹಾಡಹಗಲೇ ಕೊಲೆ ಮಾಡಿದ್ದ. ಈ ಕೃತ್ಯದ ನಂತರ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.

ತಡರಾತ್ರಿ ತನ್ನೂರಿನ ಮನೆಯಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹೃದಯಾಘಾತದಿಂದ ಮಂಡ್ಯದ ಯೋಧ ಸಾವು: ಪೊಲೀಸರಿಂದ ಗೌರವ ಸಮರ್ಪಣೆ

0

ಮಂಡ್ಯ: ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಗಡಿ ಭದ್ರತಾ ಪಡೆ (BSF) ಯೋಧನೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯೋಧರನ್ನು ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಎಂದು ಗುರುತಿಸಲಾಗಿದೆ.

ಮೃತ ಯೋಧ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಚಾಕೋರುದಲ್ಲಿರುವ BSF ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 2000ರಲ್ಲಿ ಮೈಸೂರಿನಲ್ಲಿ ನಡೆದ BSF ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಆಯ್ಕೆಯಾಗಿ BSF ಸೇರಿದ್ದ ಮಾದೇಗೌಡ, ಕಳೆದ 25 ವರ್ಷಗಳಿಂದ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು.

ಮೃತ ಯೋಧರಿಗೆ ಪತ್ನಿ ಎಸ್. ಶಿಲ್ಪಾ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಮೃತ ಯೋಧರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪುಷ್ಪಗುಚ್ಛ ಇಟ್ಟು ಗೌರವ ನಮನ ಸಲ್ಲಿಸಿದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮ ಯೋಧರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ಜಿಲ್ಲಾಡಳಿತದ ವತಿಯಿಂದ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಇದೇ ವೇಳೆ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ ಹಾಗೂ ಎಸ್ಪಿ ಶೋಭಾರಾಣಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಧ್ಯಾಹ್ನದ ನಂತರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

error: Content is protected !!