Home Blog Page 184

ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣ: ರಿಹ್ಯಾಬ್ ಸೆಂಟರ್‌ʼನ 8 ಸಿಬ್ಬಂದಿ ಬಂಧನ

0

ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ರಿಹ್ಯಾಬ್ ಸೆಂಟರ್‌ಗೆ ಸಂಬಂಧಿಸಿದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ನವೀನ್, ಅಖಿಲ್, ನಾರಾಯಣ @ ನಾಣಿ, ಹಿತೇಶ್ ಕುಮಾರ್, ಮಂಜು, ಸಾಹಿಲ್ ಅಹಮದ್, ನವೀನ್ ಕುಮಾರ್ ಹಾಗೂ ಮೈಸೂರು ಮೂಲದ ರವಿ ಎಂದು ಗುರುತಿಸಲಾಗಿದೆ. ನವೀನ್ ರಿಹ್ಯಾಬ್ ಸೆಂಟರ್‌ನ ಇನ್‌ಚಾರ್ಜ್ ಆಗಿದ್ದರೆ, ಅಖಿಲ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ.

ನಾರಾಯಣ @ ನಾಣಿ ವಿದ್ಯಾರ್ಥಿಯಾಗಿದ್ದು ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಹಿತೇಶ್ ಕುಮಾರ್ ಹಾಗೂ ಮಂಜು ಮೊದಲು ರಿಹ್ಯಾಬ್ ಸೆಂಟರ್‌ಗೆ ಸೇರಿಕೊಂಡು ನಂತರ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು. ಸಾಹಿಲ್ ಅಹಮದ್, ನವೀನ್ ಕುಮಾರ್ ಮತ್ತು ರವಿ ರಿಹ್ಯಾಬ್ ಸೆಂಟರ್ ಸಿಬ್ಬಂದಿಯಾಗಿದ್ದರು ಎಂದು ಸಿಐಡಿ ತಿಳಿಸಿದೆ.

ಯುವಕ ದರ್ಶನ್ ಗೇಟ್ ಹೊಡೆದು ಹೋಗುತ್ತೇನೆ ಎಂದು ಹೇಳಿದ್ದ ಹಿನ್ನೆಲೆ ಆರೋಪಿಗಳು ಫೈಬರ್ ಲಾಠಿ, ಪ್ಲಾಸ್ಟಿಕ್ ಪೈಪ್ ಬ್ಯಾಟ್ ಮತ್ತು ಮರದ ತುಂಡುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಾದ ಮೂರು ದಿನಗಳ ಬಳಿಕ ದರ್ಶನ್ ಸಾವನ್ನಪ್ಪಿದ್ದಾನೆ.

ಕಳೆದ ನವೆಂಬರ್ 26ರಂದು ದರ್ಶನ್ ಮೃತಪಟ್ಟಿದ್ದ. ಡೆಲಿವರಿ ಬಾಯ್‌ಗೆ ಹಲ್ಲೆ ಮಾಡಿದ ಆರೋಪದ ಮೇರೆಗೆ ವಿವೇಕನಗರ ಪೊಲೀಸರು ದರ್ಶನ್‌ನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪೊಲೀಸರಿಂದಲೂ ಥಳಿತ ನಡೆದಿತ್ತು ಎಂಬ ಆರೋಪಗಳಿವೆ.
ಮೂರು ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟ ಬಳಿಕ, ಅಡಕಮಾರನಹಳ್ಳಿಯ ಯುನಿಟಿ ಫೌಂಡೇಶನ್ ಎಂಬ ರಿಹ್ಯಾಬ್ ಸೆಂಟರ್‌ಗೆ ದರ್ಶನ್‌ನನ್ನು ಪೊಲೀಸರು ಸೇರಿಸಿದ್ದರು.

ರಿಹ್ಯಾಬ್ ಸೆಂಟರ್‌ನಲ್ಲಿ ಲೋ ಬಿಪಿಯಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆದರೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮಗನ ಮೃತದೇಹ ಕಂಡ ತಾಯಿ ಆದಿಲಕ್ಷ್ಮಿ ವಿವೇಕನಗರ ಪೊಲೀಸರ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವೇಕನಗರ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು.

ಪರಿಣಾಮವಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ತನಿಖೆ ವೇಳೆ ರಿಹ್ಯಾಬ್ ಸೆಂಟರ್ ಸಿಬ್ಬಂದಿಗಳ ವಿರುದ್ಧ ಸಾಕ್ಷ್ಯ ಸಿಕ್ಕ ಹಿನ್ನೆಲೆಯಲ್ಲಿ ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.

‘ಜೈ ಬಾಂಗ್ಲಾ’ ಘೋಷಣೆ: ಮುಸ್ಲಿಂ ಮಹಿಳೆ ವಶಕ್ಕೆ ಪಡೆದ ಹೆಬ್ಬಗೋಡಿ ಪೋಲೀಸರು!

0

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಮುಸ್ಲಿಂ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತೆಯನ್ನು ಸರ್ಬಾನು ಖಾತುನ್ (25) ಎಂದು ಗುರುತಿಸಲಾಗಿದ್ದು, ಅವರು ಪಶ್ಚಿಮ ಬಂಗಾಳ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಬಾನು ಖಾತುನ್ ಹುಲಿಮಂಗಲದ ಪೋಡು ಪ್ರದೇಶ ಸಮೀಪದ ಶೆಡ್‌ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಪೊಲೀಸರ ಮಾಹಿತಿಯಂತೆ, ಮೂರು ದಿನಗಳ ಹಿಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸಿ ಶೆಡ್‌ಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ವಾಸವಾಗಿದ್ದಾರೆನ್ನಲಾದ ಜಹಿದುಲ್ ಇಸ್ಲಾಂ (35) ಮತ್ತು ಫಿರ್ದೋಸ್ (32) ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶೆಡ್‌ಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸಮೀಪದಲ್ಲೇ ವಾಸವಾಗಿದ್ದ ಸರ್ಬಾನು ಖಾತುನ್ ರಸ್ತೆ ಮೂಲಕ ನಡೆದುಕೊಂಡು ಬರುತ್ತಿದ್ದಾಗ ಘಟನೆ ನಡೆದಿದೆ.

ಆ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಮಹಿಳೆ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾರೆನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಹೆಬ್ಬಗೋಡಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ನಂತರ ದಾಖಲೆಗಳ ಪರಿಶೀಲನೆಗಾಗಿ ಮಹಿಳೆಯನ್ನು ಎಫ್‌ಆರ್‌ಆರ್‌ಒ (ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಷನ್ ಆಫೀಸ್) ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಈ ಕುರಿತು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Gold Rate Today; ಚಿನ್ನ-ಬೆಳ್ಳಿ ಮತ್ತೆ ಏರಿಕೆ; ಆಭರಣ ರೇಟ್ ಕೇಳಿದ್ರೆ ದಂಗಾಗ್ತೀರಾ! ಗ್ರಾಂ ಎಷ್ಟು ಗೊತ್ತಾ?

ಚಿನ್ನ, ಬೆಳ್ಳಿ ಬೆಲೆಗಳು ಮತ್ತೆ ಏರಿಕೆ ಕಂಡಿದ್ದು, ಆಭರಣ ಪ್ರಿಯರು ನಿಜಕ್ಕೂ ಕಂಗಾಲಾಗಿದ್ದಾರೆ.

ಇಂದು ಚಿನ್ನದ ಬೆಲೆ 35 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 5 ರೂ ಜಾಸ್ತಿಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,200 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 13ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,253 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,065 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,690 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,253 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,065 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವ ಅಭ್ಯಾಸವೇ ಕಿಡ್ನಿ ಸ್ಟೋನ್‌ಗೆ ಕಾರಣವೇ? ಇಲ್ಲಿದೆ ಉತ್ತರ

0

ಕೆಲವರಿಗೆ ನೀರು ಕುಡಿಯುವುದು ಎಂದರೆ ಅಸಹ್ಯ ಅಥವಾ ನಿರ್ಲಕ್ಷ್ಯ. ಒತ್ತಡದ ಜೀವನಶೈಲಿ, ಕೆಲಸದ ಚಿಂತೆ, ಬಾಯಾರಿಕೆ ಅನಿಸದಿರುವುದು ಮೊದಲಾದ ಕಾರಣಗಳಿಂದ ಹಲವರು ದಿನಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸುವುದಿಲ್ಲ.

ಆದರೆ ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಜ್ಞರು ಎಚ್ಚರಿಸುತ್ತಿದ್ದಾರೆ.

ನೀರು ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಪ್ರಮುಖ ಪಾತ್ರ ವಹಿಸುತ್ತದೆ. ನೀರಿನ ಪ್ರಮಾಣ ಕಡಿಮೆಯಾದಾಗ ದೇಹದ ಒಳ ಸಮತೋಲನ ಹದಗೆಡಲು ಪ್ರಾರಂಭಿಸುತ್ತದೆ. ಆರಂಭದಲ್ಲಿ ಸಣ್ಣ ಲಕ್ಷಣಗಳು ಕಾಣಿಸಿಕೊಂಡರೂ, ಅವುಗಳನ್ನು ನಿರ್ಲಕ್ಷಿಸಿದರೆ ಮುಂದೆ ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ನೀರು ಕಡಿಮೆ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಹೇಗೆ ಉಂಟಾಗುತ್ತದೆ?

ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಡಾ. ಹಿಮಾಂಶು ವರ್ಮಾ ಅವರ ಪ್ರಕಾರ, ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದಾಗ ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮೂತ್ರಪಿಂಡಗಳಲ್ಲಿ ಖನಿಜಗಳು ಮತ್ತು ಲವಣಗಳು ಸರಿಯಾಗಿ ಹೊರಹಾಕಲಾಗದೇ ಸಂಗ್ರಹವಾಗುತ್ತವೆ. ಈ ಸಂಗ್ರಹವೇ ಕ್ರಮೇಣ ಕಲ್ಲುಗಳಾಗಿ ರೂಪುಗೊಳ್ಳುತ್ತದೆ.

ನಿರಂತರವಾಗಿ ಕಡಿಮೆ ನೀರು ಕುಡಿಯುವುದರಿಂದ ಮೂತ್ರ ಹೆಚ್ಚು ಕೇಂದ್ರೀಕೃತವಾಗುತ್ತದೆ. ಇದರಿಂದ ಕಲ್ಲುಗಳ ನಿರ್ಮಾಣದ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಕಡಿಮೆ ಬೆವರು ಬರುವವರು, ಉಪ್ಪು ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸುವವರು, ದೀರ್ಘಕಾಲ ಮೂತ್ರವನ್ನು ಹಿಡಿದಿಟ್ಟುಕೊಳ್ಳುವವರು ಹಾಗೂ ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವವರಲ್ಲಿ ಈ ಅಪಾಯ ಹೆಚ್ಚು ಕಂಡುಬರುತ್ತದೆ.

ನೀರಿನ ಕೊರತೆಯ ಲಕ್ಷಣಗಳು

ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪದೇಪದೇ ದಣಿವು, ಒಣ ಬಾಯಿ, ತಲೆನೋವು ಸಾಮಾನ್ಯವಾಗಿವೆ. ಗಾಢ ಹಳದಿ ಬಣ್ಣದ ಮೂತ್ರ ಬರುವುದು ನಿರ್ಜಲೀಕರಣದ ಪ್ರಮುಖ ಸೂಚಕವಾಗಿದೆ.

ಕೆಲವರಿಗೆ ತಲೆತಿರುಗುವಿಕೆ, ಮಲಬದ್ಧತೆ, ಒಣ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಈ ಸ್ಥಿತಿ ದೀರ್ಘಕಾಲ ಮುಂದುವರಿದರೆ ಮೂತ್ರಪಿಂಡ ಸಂಬಂಧಿತ ತೊಂದರೆಗಳು ಮತ್ತು ಹೊಟ್ಟೆಯ ಕೆಳಭಾಗ ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

 ಕಿಡ್ನಿ ಸ್ಟೋನ್ ತಡೆಯುವುದು ಹೇಗೆ?

ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು

ಬಾಯಾರಿಕೆ ಆಗುವ ಮೊದಲು ನೀರು ಕುಡಿಯುವ ಅಭ್ಯಾಸ ಬೆಳೆಸಬೇಕು

ಚಳಿಗಾಲದಲ್ಲಿಯೂ ನೀರಿನ ಸೇವನೆಯನ್ನು ಕಡಿಮೆ ಮಾಡಬಾರದು

ಅತಿಯಾದ ಉಪ್ಪು ಮತ್ತು ಜಂಕ್ ಫುಡ್ ಸೇವನೆ ತಪ್ಪಿಸಬೇಕು

ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವನ್ನು ಬಿಡಬೇಕು

ಸಾಕಷ್ಟು ನೀರು ಕುಡಿಯುವ ಸರಳ ಅಭ್ಯಾಸವೇ ಮೂತ್ರಪಿಂಡದ ಕಲ್ಲುಗಳಂತಹ ಗಂಭೀರ ಸಮಸ್ಯೆಗಳಿಂದ ದೂರ ಇರಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

“ನಿಧಿ ಬೇಡ, ಬದುಕು ಬೇಕು” – ಸರ್ಕಾರದ ಮುಂದೆ ಲಕ್ಕುಂಡಿ ಕುಟುಂಬಸ್ಥರ ಮನವಿ

0

ಲಕ್ಕುಂಡಿ: ಇಂದು ಸಚಿವ ಎಚ್.ಕೆ.ಪಾಟೀಲ್ ಲಕ್ಕುಂಡಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ, ನಿಧಿ ಸಿಕ್ಕ ಕುಟುಂಬದ ಮಾತು ಈಗ ಜನರ ಮನಸ್ಸು ಕದಲಿಸಿದೆ. ತಾಯಿ ಕಸ್ತೂರವ್ವ ರಿತ್ತಿ ಮಾತನಾಡಿ, “ನಮಗೆ ನಿಧಿ ಬೇಡ. ಆ ಚಿನ್ನ ಬೇಡ. ಆ ಜಾಗ ಕೂಡ ಬೇಡ” ಎಂದು ಭಾವುಕರಾಗಿದ್ದಾರೆ.

“ನಮಗೆ ಬೇಕಾಗಿರುವುದು ಮನೆ. ಮಗನಿಗೆ ಶಿಕ್ಷಣ. ಮುಂದೆ ಸರ್ಕಾರಿ ಉದ್ಯೋಗ. ಇದಕ್ಕಿಂತ ಹೆಚ್ಚು ಏನೂ ಬೇಡ” ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

“ನಿಧಿ ಸಿಕ್ಕ ಜಾಗದಲ್ಲಿ ಭಯವಾಗುತ್ತದೆ. ಅಲ್ಲಿ ಉಳಿಯಲು ಸಾಧ್ಯವಿಲ್ಲ. ಬೇರೆ ಕಡೆ ಜಾಗ ಕೊಡಿ, ಮನೆ ಕಟ್ಟಿಸಿಕೊಡಿ” ಎಂದು ಕುಟುಂಬ ಸರ್ಕಾರಕ್ಕೆ ನೇರ ಮನವಿ ಮಾಡಿದೆ.

ಕುಟುಂಬದ ನಂಬಿಕೆಯ ಪ್ರಕಾರ, “ನಿಧಿ ಯಾರಿಗೂ ಒಳ್ಳೆಯದಾಗಿಲ್ಲ. ಕೊಟ್ಟವರು ಕೊಟ್ಟಿದ್ದಾರೆ, ಇಟ್ಟುಕೊಂಡವರು ನಷ್ಟ ಅನುಭವಿಸಿದ್ದಾರೆ. ನಿಧಿ ಅನ್ನೋದೇ ಅಪಶಕುನ. ನಮಗೆ ಅದು ದಕ್ಕೋದಿಲ್ಲ” ಎಂಬ ಭಾವನೆ ಮನೆಮಾತಾಗಿದೆ.

ಇಷ್ಟೆಲ್ಲಾ ಆತಂಕದ ನಡುವೆ, “ಸರ್ಕಾರದವರು ನಮ್ಮ ಮಗಳಿಗೆ ನೆರಳಾಗಿ ನಿಲ್ಲಬೇಕು. ನಮ್ಮ ಬದುಕಿಗೆ ಭದ್ರತೆ ಕೊಡಬೇಕು” ಎಂದು ರಿತ್ತಿ ಕುಟುಂಭಸ್ಥರು ಬೇಡಿಕೆ ಇಟ್ಟಿದ್ದಾರೆ.

‘ಇದೇನಾ ಫ್ಯಾಮಿಲಿ ಕಂಫರ್ಟ್?’ – ‘ಟಾಕ್ಸಿಕ್’ ಟೀಸರ್‌ಗೆ AAP ಮಹಿಳಾ ಘಟಕ ಗಂಭೀರ ಆಕ್ಷೇಪ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಬಳಿಕ ದೇಶಾದ್ಯಂತ ಚರ್ಚೆ ಸೃಷ್ಟಿಯಾಗಿದ್ದರೆ, ಇದೀಗ ಅದು ವಿವಾದದ ಕೇಂದ್ರಬಿಂದು ಆಗಿದೆ. ಟೀಸರ್‌ನಲ್ಲಿರುವ ಕೆಲ ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬ ಆರೋಪದೊಂದಿಗೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗದ ಮುಂದೆ ಅಧಿಕೃತ ದೂರು ದಾಖಲಿಸಿದೆ.

ಬೆಂಗಳೂರುದಲ್ಲಿರುವ ಮಹಿಳಾ ಆಯೋಗದ ಕಚೇರಿಗೆ ತೆರಳಿ ಟೀಸರ್‌ನಲ್ಲಿನ ವಿವಾದಾಸ್ಪದ ದೃಶ್ಯಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಆಗ್ರಹಿಸಲಾಗಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಗೈರಿನಲ್ಲಿ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ಸಲ್ಲಿಸಲಾಗಿದೆ. ಟೀಸರ್ ಕನ್ನಡ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿರುವ AAP, ರಾಜ್ಯ ಸರ್ಕಾರ ಟೀಸರ್ ರದ್ದುಪಡಿಸುವಂತೆ ನಿರ್ದೇಶನ ನೀಡಬೇಕು ಹಾಗೂ ಸೆನ್ಸಾರ್ ಮಂಡಳಿ ಕಡ್ಡಾಯವಾಗಿ ಈ ವಿಷಯ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದೆ.

ಈ ಕುರಿತು AAP ಮಹಿಳಾ ಘಟಕದ ಕಾರ್ಯದರ್ಶಿ ಉಷಾ ನೀಡಿದ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. “ಯಶ್ ಅವರು ‘ನಾನು ಮಾಡುವ ಸಿನಿಮಾ ಫ್ಯಾಮಿಲಿ ಜೊತೆ ಕುಳಿತು ನೋಡುವಂತಿರಬೇಕು’ ಎಂದು ಹೇಳುತ್ತಾರೆ. ಹಾಗಾದರೆ ಟೀಸರ್‌ನಲ್ಲಿರುವ ದೃಶ್ಯಗಳಲ್ಲಿ ಆ ಮೌಲ್ಯ ಎಲ್ಲಿದೆ? ಕನ್ನಡ ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದರೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಈ ರೀತಿಯ ಕಂಟೆಂಟ್ ಮೂಲಕ ಅಲ್ಲ” ಎಂದು ಅವರು ಕಟುವಾಗಿ ಹೇಳಿದ್ದಾರೆ.

‘ಟಾಕ್ಸಿಕ್’ ಹವಾ ನಡುವೆ ರಾಕಿಂಗ್ ಸ್ಟಾರ್ ಯಶ್ ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ – ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ

‘ಟಾಕ್ಸಿಕ್’ ಟೀಸರ್ ರಿಲೀಸ್ ಆದ ನಂತರ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್, ಸೋಮವಾರ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡು ಮತ್ತೆ ಗಮನ ಸೆಳೆದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಕಾರ್ ಕಡೆ ಸಾಗುವ ವೇಳೆ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದ ಯಶ್, ಕೆಲ ಕ್ಷಣ ನಿಂತು ಫೋಟೊಗಳಿಗೆ ಪೋಸ್ ನೀಡಿ ಬಳಿಕ ಕೈಮುಗಿದು ಗೌರವ ತೋರಿಸಿ ಕಾರ್ ಹತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯಶ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೇ ಲೋ-ಪ್ರೊಫೈಲ್‌ನಲ್ಲಿ ಇದ್ದರು. ಬಹಳ ದಿನಗಳ ನಂತರ ಮುಂಬೈನಲ್ಲಿ ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ‘ಟಾಕ್ಸಿಕ್’ ಟೀಸರ್‌ಗೆ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ, ಚಿತ್ರದ ಮೇಲಿನ ನಿರೀಕ್ಷೆ ಮಾತ್ರ ದಿನದಿಂದ ದಿನಕ್ಕೆ ಮತ್ತಷ್ಟು ಬಲವಾಗುತ್ತಿದೆ.

ಸದ್ಯ ಯಶ್ ‘ಟಾಕ್ಸಿಕ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ನಡೆಯುತ್ತಿರುವ ಪೋಸ್ಟ್ ಪ್ರೊಡಕ್ಷನ್ ಔಟ್‌ಪುಟ್‌ನ್ನು ಅವರು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಕೆಲವು ತಿಂಗಳಿಂದ ಮುಂಬೈನಲ್ಲೇ ಅವರು ವಾಸ್ತವ್ಯ ಮಾಡಿಕೊಂಡಿದ್ದಾರೆ. ಸದಾ ಕ್ಯಾಮೆರಾದಿಂದ ದೂರ ಉಳಿಯುವ ಯಶ್ ಈಗ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ವಿಶೇಷ ಕ್ಷಣವಾಗಿದೆ.

ಮೈಸೂರಿನಲ್ಲಿ ಖದೀಮರ ಹಾವಳಿ: ಪ್ರಾವಿಷನ್ ಸ್ಟೋರ್‌ನಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನ!

0

ಮೈಸೂರು:- ಮೈಸೂರಿನಲ್ಲಿ ಖದೀಮರ ಕಾಟ ದಿನೇದಿನೇ ಹೆಚ್ಚಾಗುತ್ತಿದ್ದು, ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಗ್ರಾಮದ ಕೆ.ಆರ್. ನಗರ ಮುಖ್ಯ ರಸ್ತೆಯಲ್ಲಿರುವ ಪ್ರಾವಿಷನ್ ಸ್ಟೋರ್‌ನಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ.

ಮೊಬೈಲ್ ಬ್ಯಾಟರಿ ಬೆಳಕು ಬಳಸಿ ಅಂಗಡಿಗೆ ನುಗ್ಗಲು ಯತ್ನಿಸಿದ ಕಳ್ಳನನ್ನು ಅಂಗಡಿ ಮಾಲೀಕ ಗಮನಿಸಿದ ತಕ್ಷಣವೇ ಆತ ಎಚ್ಚರಗೊಂಡು, ಮಾಲೀಕನನ್ನು ಕಂಡು ಬರಿಗೈಲಿ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಯತ್ನಿಸಿದ ಸಂಪೂರ್ಣ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಹುಣಸೂರಿನ ಚಿನ್ನದ ಅಂಗಡಿಯಲ್ಲಿ ಹಾಡುಹಗಲೇ ದರೋಡೆ ನಡೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಇದಲ್ಲದೆ ಮೈಸೂರು ನಗರದಲ್ಲಿ ಬೈಕ್ ಕಳ್ಳತನ, ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಅಡಿಕೆ ತೋಟ ಹಾಗೂ ಮೊಬೈಲ್ ಅಂಗಡಿಗೆ ಕನ್ನ, ನಂಜನಗೂಡಿನಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ನಿರಂತರ ಕಳ್ಳತನ–ದರೋಡೆಗಳಿಂದ ಜಿಲ್ಲೆಯ ಜನತೆ ಭಯಭೀತರಾಗಿದ್ದು, ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಕುರುಬ ಸಮಾಜ ಬಾಂಧವರಿಂದ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಕುರುಬ ಸಮಾಜದ ರಿತ್ತಿ ಕುಟುಂಬಕ್ಕೆ ಆಕಸ್ಮಿಕವಾಗಿ ದೊರೆತ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಹಾಗೂ ಕುಟುಂಬದವರನ್ನು ಕಂಬಳಿ ಹೊದೆಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡ ರಮೇಶ್ ಎನ್.ಸಜ್ಜಗಾರ, ಹಾಲುಮತ ಸಮಾಜಕ್ಕೆ ಭಾರತದಲ್ಲಿ ತನ್ನದೇ ಆದ ವಿಶೇಷತೆಯಿದೆ. ಹಿಂದಿನ ಕಾಲದಿಂದಲೂ ಕುರುಬರು ಕಂಬಳಿ ಬೀಸಿದರೆ ಮಳೆರಾಯ ಧರೆಗೆ ಬರುವನು ಎಂಬ ಪ್ರತೀತಿ ಇದೆ. ಇದೆಲ್ಲಕ್ಕೂ ನಿದರ್ಶನವಾದದ್ದು ಲಕ್ಕುಂಡಿ ಗ್ರಾಮದ ಕುರುಬ ಸಮಾಜದ ಕಡು ಬಡತನದಲ್ಲಿರುವ ಕುಟುಂಬದವರಿಗೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದು, ರಿತ್ತಿ ಕುಟುಂಬದ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆ ಶ್ಲಾಘನೀಯ ಎಂದರು.

ಪ್ರಾಮಾಣಿಕತೆ ಮೆರೆದ ಕುಟುಂಬವನ್ನು ದೆಹಲಿಗೆ ಕರೆಸಿ ಗೌರವಿಸಿ ಸಮಾಜಕ್ಕೆ ಪ್ರೇರಣಾ ಸಂದೇಶ ನೀಡಲು ಇದಕ್ಕೆ ಸಹಕಾರವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಇವರಿಗೆ ಈ ಸಂದರ್ಭದಲ್ಲಿ ಕುರುಬ ಸಮಾಜದ ಪರವಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಶಿವು ಡಂಬಳ, ಜಯಕುಮಾರ ಉಮಚಗಿ, ಚಂದ್ರಹಾಸ್ ಕಟ್ಟಿಗಾರ ಹಾಗೂ ಲಕ್ಕುಂಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಚಾಮರಾಜನಗರ: ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಹಸು ಬಲಿ, ಗ್ರಾಮಸ್ಥರಲ್ಲಿ ಆತಂಕ!

0

ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ಬಲಿ ಪಡೆದ ಘಟನೆ ನಡೆದಿದೆ.

ಗ್ರಾಮದ ಸಿದ್ದರಾಜು ಅವರಿಗೆ ಸೇರಿದ ಹಸುವೇ ಚಿರತೆ ದಾಳಿಗೆ ಬಲಿಯಾಗಿದ್ದು, ಘಟನೆ ಬಳಿಕ ಗ್ರಾಮದಲ್ಲಿ ಭೀತಿ ಆವರಿಸಿದೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಹುಲಿ ಕಾಟ ಹೆಚ್ಚಾಗಿದ್ದು, ಸುಮಾರು 15 ದಿನಗಳ ಹಿಂದಷ್ಟೇ ಹುಲಿ ಬೋನಿಗೆ ಬಿದ್ದಿತ್ತು. ಇದೀಗ ಮತ್ತೆ ಚಿರತೆ ದಾಳಿ ನಡೆದಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಹಸು ಕಳೆದುಕೊಂಡ ರೈತನಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!