Home Blog Page 267

ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಮತ್ತಿಕೆರೆ ಗ್ರಾಮಸ್ಥರು

0

ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕಳೆದ ಮೂರು ವರ್ಷಗಳಿಂದ ಚಿರತೆ ಹಾವಳಿಯಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಹಲವು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಜಮೀನಿಗೆ ತೆರಳಲು ಹಾಗೂ ಹೊರಗೆ ಓಡಾಡಲು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿತ್ತು.

ಇದೀಗ ಚಿರತೆ ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳು ಇರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಉಳಿದ ಚಿರತೆಗಳನ್ನೂ ಕೂಡ ಶೀಘ್ರವಾಗಿ ಸೆರೆಹಿಡಿದು ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕು ಎಂದು ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮತ್ತೊಂದು ಭೀಕರ ಮರ್ಡರ್: ಕತ್ತು ಕೊಯ್ದು ಜಯದೇವ ಆಸ್ಪತ್ರೆಯ ಸ್ಟಾಫ್ ನರ್ಸ್ ಹತ್ಯೆ!

0

ಬೆಂಗಳೂರು: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಸ್ಟಾಫ್ ನರ್ಸ್‌ನ್ನು ಆಕೆಯ ಪ್ರಿಯಕರ ಭೀಕರವಾಗಿ ಹತ್ಯೆಗೈದ ಘಟನೆ ಡಿಸೆಂಬರ್ 24ರ ರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಸುಧಾಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಮತಾ (39) ಮದುವೆಯಾಗದೆ ಒಂಟಿಯಾಗಿ ವಾಸಿಸುತ್ತಿದ್ದರು. ಅವರು ಕುಮಾರಸ್ವಾಮಿ ಲೇಔಟ್‌ನಲ್ಲಿ ಸ್ನೇಹಿತೆಯೊಂದಿಗೆ ಬಾಡಿಗೆ ಮನೆ ಮಾಡಿಕೊಂಡಿದ್ದು, ಡಿಸೆಂಬರ್ 24ರಂದು ಸ್ನೇಹಿತೆ ಊರಿಗೆ ತೆರಳಿದ್ದ ಕಾರಣ ಮಮತಾ ಆ ದಿನ ರಾತ್ರಿ ಒಬ್ಬರೇ ಮನೆಯಲ್ಲಿದ್ದರು.

ಈ ಸಂದರ್ಭವನ್ನು ಬಳಸಿಕೊಂಡು ಮನೆಗೆ ನುಗ್ಗಿದ ಪ್ರಿಯಕರ ಸುಧಾಕರ್, ಮಮತಾಳ ಕತ್ತು ಕತ್ತರಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 25ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಹತ್ಯೆಯ ವಿಷಯ ಬೆಳಕಿಗೆ ಬಂದಿದ್ದು, ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸ್ ತನಿಖೆಯ ಪ್ರಕಾರ, ಸುಧಾಕರ್ ಮತ್ತು ಮಮತಾ ಕಳೆದ ಒಂದು ವರ್ಷದಿಂದ ಪ್ರೀತಿಯಲ್ಲಿದ್ದರು. ಮಮತಾ ತನ್ನಿಗಿಂತ ವಯಸ್ಸಿನಲ್ಲಿ ಹಿರಿಯವಳೆಂಬ ವಿಚಾರ ಸುಧಾಕರ್‌ಗೆ ಆರಂಭದಲ್ಲಿ ತಿಳಿದಿರಲಿಲ್ಲ. ಇತ್ತೀಚೆಗೆ ಸುಧಾಕರ್ ಕುಟುಂಬಸ್ಥರು ಅವನಿಗೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ವಿಷಯ ತಿಳಿದ ಮಮತಾ ಕೋಪಗೊಂಡು ತನ್ನನ್ನೇ ಮದುವೆಯಾಗಬೇಕೆಂದು ಒತ್ತಾಯಿಸಿದ್ದರು.

ಅಷ್ಟೇ ಅಲ್ಲದೆ, ಸುಧಾಕರ್ ಬೇರೆ ಮದುವೆಯಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡು ಅವನ ಹಾಗೂ ಕುಟುಂಬವನ್ನು ಸಂಕಷ್ಟಕ್ಕೆ ಒಳಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಒತ್ತಡದಿಂದ ಆತಂಕಕ್ಕೊಳಗಾದ ಸುಧಾಕರ್, ಮಮತಾಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 24ರಂದು ಮಮತಾ ಒಬ್ಬರೇ ಇದ್ದ ಸಂದರ್ಭ ಮನೆಗೆ ತೆರಳಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಪತಿಯ ಪೋಷಕರ ವಿರುದ್ಧ ನಿಂದನೆ: ಸಹಾಯಕ ಪ್ರಾಧ್ಯಾಪಕಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

0

ಬೆಂಗಳೂರು: ಪತಿಯ ಪೋಷಕರನ್ನು ಪಿಶಾಚಿಗಳು, ಮೂರ್ಖರು ಹಾಗೂ ದುಷ್ಟರು ಎಂದು ನಿಂದಿಸಿದ್ದಲ್ಲದೆ, ಹೆತ್ತ ಮಗಳನ್ನು ಹಲವು ತಿಂಗಳುಗಳ ಕಾಲ ದೂರವಿಟ್ಟಿದ್ದ ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯೊಬ್ಬರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ವಿಚ್ಛೇದನ ಕೋರಿ ಪತಿ ಅರ್ಜಿ ಸಲ್ಲಿಸಿದ ನಂತರ ಗಂಡ ಮತ್ತು ಮಗಳ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದ ಪತ್ನಿಯ ಮನವಿಯನ್ನು ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ.

ಪತಿ ಮತ್ತು ಮಗುವನ್ನು ತ್ಯಜಿಸಿದ ಬಳಿಕ ನಡೆದ ಹಲವು ಸುತ್ತಿನ ರಾಜಿ ಸಂಧಾನ ಸಭೆಗಳಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಪತಿಯೊಂದಿಗೆ ತೆರಳಲು ಪತ್ನಿ ಮುಂದಾಗಿಲ್ಲ. ಅಲ್ಲದೆ, ಮಗು ತನ್ನ ವಶಕ್ಕೆ ಪಡೆಯಲು ಸಹ ಯಾವುದೇ ಪ್ರಯತ್ನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ವಿಚ್ಛೇದನ ಮಂಜೂರು ಮಾಡಿರುವ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಚ್ಛೇದನ ಮಂಜೂರು ಮಾಡಿರುವುದನ್ನು ರದ್ದುಗೊಳಿಸುವುದು ಹಾಗೂ ಮಗಳ ಮೇಲಿನ ಪಾಲನೆಯ ಹಕ್ಕು ತನ್ನಿಗೆ ನೀಡಬೇಕು ಎಂದು ಕೋರಿ ಸಹಾಯಕ ಪ್ರಾಧ್ಯಾಪಕಿ (ಪತ್ನಿ) ಸಲ್ಲಿಸಿದ್ದ ಅರ್ಜಿ ಹಾಗೂ ಪತಿ ಸಲ್ಲಿಸಿದ್ದ ಪ್ರತಿಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಕೆ.ವಿ. ಅವಿಂದ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸಿತು.

ವಿಚಾರಣೆ ವೇಳೆ, ಪತ್ನಿ ಸಾರ್ವಜನಿಕವಾಗಿ ಪತಿಯನ್ನು ಆಶ್ಲೀಲ ಭಾಷೆಯಲ್ಲಿ ನಿಂದಿಸಿರುವುದು ಹಾಗೂ ಪತಿಯ ಪೋಷಕರನ್ನು ‘ಪಿಶಾಚಿಗಳು’ ಎಂದು ಉಲ್ಲೇಖಿಸಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ. ಅಲ್ಲದೆ, ದಂಪತಿ 2014ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುದೂ ದಾಖಲೆಗಳಿಂದ ತಿಳಿದುಬಂದಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪತ್ನಿಯ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪತ್ನಿ ಪತಿಯಿಂದ ದೂರವಾದ ನಂತರ ನಡೆದ ಹಲವು ರಾಜಿ ಸಂಧಾನ ಸಭೆಗಳಲ್ಲಿ ಪತಿಯೊಂದಿಗೆ ಹಿಂದಿರುಗಲು ನಿರಾಕರಿಸಿದ್ದಲ್ಲದೆ, ಮಗುವಿನ ಪಾಲನೆ ವಹಿಸಿಕೊಳ್ಳುವುದಕ್ಕೂ ನಿರಾಸಕ್ತಿ ತೋರಿಸಿದ್ದಾಳೆ. ಆದರೆ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುತ್ತಿದ್ದಂತೆಯೇ ಮಗುವಿನ ಪಾಲನೆಯ ಹಕ್ಕು ಕೋರಿರುವುದು ಪತ್ನಿಯ ನಡೆಯಲ್ಲಿ ಪ್ರಾಮಾಣಿಕತೆ ಕೊರತೆಯಿದೆ ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಗು ಜನಿಸಿದ ದಿನದಿಂದ ಸರಿಯಾಗಿ ನೋಡಿಕೊಳ್ಳದೆ, ಎರಡು ವರ್ಷ ವಯಸ್ಸಿನಲ್ಲಿಯೇ ಮಗುವನ್ನು ತ್ಯಜಿಸಿರುವ ಪತ್ನಿ, ಇದೀಗ ಮಗು 13 ವರ್ಷ ವಯಸ್ಸಿಗೆ ಬಂದ ಬಳಿಕ ಪಾಲನೆಯ ಹಕ್ಕು ಕೇಳುತ್ತಿರುವುದು ಸಮಂಜಸವಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಸ್ತುತ ಮಗು ಪತಿಯ ಪೋಷಕರೊಂದಿಗೆ ವಾಸಿಸುತ್ತಿದ್ದು, ಅವರು ಮಗುವನ್ನು ನೋಡಿಕೊಳ್ಳಲು ಅಸಮರ್ಥರು ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರಗಳನ್ನು ಪತ್ನಿ ಸಲ್ಲಿಸಿಲ್ಲ. ಆದ್ದರಿಂದ ಮಗು ಪತಿಯ ಪೋಷಕರೊಂದಿಗೆ ಇರುವುದರಲ್ಲಿ ಯಾವುದೇ ದೋಷವಿಲ್ಲ. ಮಗುವಿನ ಪೋಷಣೆಯನ್ನು ತಂದೆ ವಹಿಸಿಕೊಳ್ಳುವುದರಿಂದ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಆದರೆ, ಪತ್ನಿಗೆ ಮಾಸಿಕ ನಿರ್ವಹಣಾ ವೆಚ್ಚವಾಗಿ 20 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ 100 ನಾಯಿಗಳ ನಿರ್ವಹಣೆಗೆ ಮಾಸಿಕ ₹3.33 ಲಕ್ಷ ಖರ್ಚು

0

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೆಂಗಳೂರಿನ ನಾಗರಿಕ ಅಧಿಕಾರಿಗಳು ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಸಿದ್ಧತೆ ಆರಂಭಿಸಿದ್ದಾರೆ. ಈ ಸಂಬಂಧ ವಿವರವಾದ ವೆಚ್ಚದ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಅನುಸಾರ, ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಲು ನಗರ ಪುರಸಭೆಗಳು ನಿರ್ಧರಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧೀನದಲ್ಲಿರುವ ಸಂಬಂಧಿತ ಏಜೆನ್ಸಿಗಳು ಪ್ರತಿ ನಾಯಿಗೆ ಮಾಸಿಕ ₹3,035 ನಿರ್ವಹಣಾ ವೆಚ್ಚ ನಿಗದಿಪಡಿಸಿವೆ. ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರೇತರ ಸಂಸ್ಥೆಗಳು ಹಾಗೂ ಖಾಸಗಿ ಏಜೆನ್ಸಿಗಳಿಂದ ಟೆಂಡರ್‌ ಆಹ್ವಾನಿಸುವ ಪ್ರಕ್ರಿಯೆ ಆರಂಭವಾಗಿದೆ.

ಯೋಜನೆಯಡಿಯಲ್ಲಿ ಆಯ್ಕೆಯಾಗುವ ಏಜೆನ್ಸಿಗಳಿಗೆ ಬೀದಿ ನಾಯಿಗಳನ್ನು ಹಿಡಿಯುವುದು, ಲಸಿಕೆ ಹಾಕುವುದು ಮತ್ತು ಗುರುತಿಸಲಾದ ಆಶ್ರಯತಾಣಗಳಿಗೆ ಸ್ಥಳಾಂತರಿಸುವ ಜವಾಬ್ದಾರಿ ನೀಡಲಾಗುತ್ತದೆ. ಸ್ಥಳಾಂತರಿಸಿದ ನಂತರ ನಾಯಿಗಳಿಗೆ ದಿನಕ್ಕೆ ಎರಡು ಬಾರಿ ಆಹಾರ ನೀಡಲಾಗುತ್ತದೆ ಹಾಗೂ ಮೂಲಭೂತ ಪಶುವೈದ್ಯಕೀಯ ಆರೈಕೆಯನ್ನು ಒದಗಿಸಲಾಗುತ್ತದೆ.

ವೆಚ್ಚದ ಅಂದಾಜಿನಲ್ಲಿ ಆಹಾರ, ಸಿಬ್ಬಂದಿ ವೇತನ, ಪಶುವೈದ್ಯಕೀಯ ಚಿಕಿತ್ಸೆ, ನೈರ್ಮಲ್ಯ ಹಾಗೂ ಆಡಳಿತಾತ್ಮಕ ವೆಚ್ಚಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 2.79 ಲಕ್ಷ ಬೀದಿ ನಾಯಿಗಳಿವೆ. ಅಧಿಕಾರಿಗಳು ಸಿದ್ಧಪಡಿಸಿರುವ ವೆಚ್ಚದ ವಿವರಗಳಂತೆ, 100 ಬೀದಿ ನಾಯಿಗಳನ್ನು ನಿರ್ವಹಿಸಲು ತಿಂಗಳಿಗೆ ಸರಾಸರಿ ₹3.33 ಲಕ್ಷ ವೆಚ್ಚವಾಗಲಿದೆ.

ಇದರಲ್ಲಿ ಆಹಾರಕ್ಕಾಗಿ ₹1.50 ಲಕ್ಷ, ಮೇಲ್ವಿಚಾರಕರು ಮತ್ತು ಸಿಬ್ಬಂದಿಯ ಸಂಬಳಕ್ಕಾಗಿ ₹1.18 ಲಕ್ಷ, ವೈದ್ಯಕೀಯ ಚಿಕಿತ್ಸೆ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ತಲಾ ₹10,000 ಮತ್ತು ನಾಯಿಗಳನ್ನು ಹಿಡಿದು ಸಾಗಿಸಲು ಸುಮಾರು ₹30,000 ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆಯಡಿ ಪ್ರತಿದಿನ ಪ್ರತಿ ನಾಯಿಗೆ ಸರಾಸರಿ ₹111 ವೆಚ್ಚವಾಗಲಿದೆ. ಪ್ರತಿ ನಾಯಿಗೆ ದಿನಕ್ಕೆ ಸುಮಾರು 600 ಗ್ರಾಂ ಆಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯ್ ರಾಜಕೀಯ ಭಾಷಣಕ್ಕೆ ಬ್ರೇಕ್: ‘ಜನ ನಾಯಗನ್’ ಆಡಿಯೋ ಲಾಂಚ್‌ಗೆ ಮಲೇಷ್ಯಾ ಪೊಲೀಸರ ತಡೆ

ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಮಾನವಾಗಿ ಹೆಜ್ಜೆ ಇಡುತ್ತಿರುವ ದಳಪತಿ ವಿಜಯ್, ತಮ್ಮ ನಟನಾ ಪಯಣಕ್ಕೆ ‘ಜನ ನಾಯಗನ್’ ಮೂಲಕ ತೆರೆ ಎಳೆಯಲಿದ್ದಾರೆ ಎಂಬ ಮಾತು ಜೋರಾಗಿದೆ. ಈ ಸಿನಿಮಾ ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಎಂಬ ಚರ್ಚೆ ಕೂಡ ನಡೆಯುತ್ತಲೇ ಇದೆ. ಆದರೆ ಈಗ ಅದೇ ರಾಜಕೀಯ ಅಜೆಂಡಾಕ್ಕೆ ವಿದೇಶದಲ್ಲಿ ಅಡ್ಡಿ ಎದುರಾಗಿದೆ.

‘ಜನ ನಾಯಗನ್’ ಚಿತ್ರದ ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮಲೇಷ್ಯಾದ ಕೌಲಾಲಂಪುರದಲ್ಲಿ ಆಯೋಜಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಜಯ್ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ರಾಜಕೀಯ ಸಂದೇಶ ನೀಡುವುದು ಹೊಸದಲ್ಲ. ಇದೇ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವೂ ರಾಜಕೀಯ ಅರ್ಥ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಇದಕ್ಕೆ ಮಲೇಷ್ಯಾ ಪೊಲೀಸರು ಸ್ಪಷ್ಟವಾಗಿ ಬ್ರೇಕ್ ಹಾಕಿದ್ದಾರೆ.

“ಕಾರ್ಯಕ್ರಮ ಸಂಪೂರ್ಣವಾಗಿ ಮನೋರಂಜನೆಗೆ ಸೀಮಿತವಾಗಿರಬೇಕು. ಯಾವುದೇ ರಾಜಕೀಯ ಹೇಳಿಕೆ, ಘೋಷಣೆ ಅಥವಾ ಭಾಷಣಕ್ಕೆ ಅವಕಾಶ ಇರುವುದಿಲ್ಲ” ಎಂದು ಮಲೇಷ್ಯಾ ಪೊಲೀಸರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಇದರಿಂದಾಗಿ ವಿಜಯ್ ಅವರು ವಿದೇಶದಲ್ಲಿ ತಮ್ಮ ರಾಜಕೀಯ ಅಜೆಂಡಾ ಪ್ರಚಾರ ಮಾಡುವ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.

‘ಜನ ನಾಯಗನ್’ ಸಿನಿಮಾ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಇದರ ನಂತರ ಅವರು ಸಂಪೂರ್ಣವಾಗಿ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಬಲವಾಗಿವೆ. ಎಚ್ ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಮಿತಾ ಬಿಜು, ಪ್ರಿಯಾಮಣಿ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರಲಿದೆ.

ಫ್ಯಾಮಿಲಿ ವೀಕ್‌ನಲ್ಲೇ ಕಾವ್ಯಗೆ ಬಿಗ್‌ ಬಾಸ್‌ ಶಾಕ್: ಸ್ಟ್ರಾಟಜಿ ಮಾತಿಗೆ ಶಿಕ್ಷೆ, ಕಣ್ಣೀರಿಟ್ಟ ಸ್ಪರ್ಧಿ

‘ಬಿಗ್‌ ಬಾಸ್ ಕನ್ನಡ’ ಫ್ಯಾಮಿಲಿ ವೀಕ್‌ನಲ್ಲಿ ಸಂಭ್ರಮಕ್ಕಿಂತ ಹೆಚ್ಚು ನೋವು ಕಂಡುಬಂದಿದೆ. ಕಾವ್ಯ ಅವರು ತಮ್ಮ ತಾಯಿ ಮತ್ತು ಸಹೋದರರೊಂದಿಗೆ ನಡೆಸಿದ ಮಾತುಕತೆ ಇದೀಗ ದೊಡ್ಡ ಯಡವಟ್ಟಾಗಿ ಪರಿಣಮಿಸಿದೆ.

ಮನೆಯೊಳಗೆ ಕಾವ್ಯ, ಆಟದ ತಂತ್ರ, ನಾಮಿನೇಷನ್ ಪ್ಲಾನ್, ಗಿಲ್ಲಿಯ ಜೊತೆಗಿನ ಸ್ನೇಹ ಮತ್ತು ಸೋಷಿಯಲ್ ಮೀಡಿಯಾ ಇಮೇಜ್ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದ್ದಾರೆ.
‘ಎಲ್ಲಾ ಚೆನ್ನಾಗೇ ಇದೆ, ನೀನು ತಲೆ ಕೆಡಿಸಿಕೊಳ್ಳಬೇಡ. ಗಿಲ್ಲಿಯಿಂದಲೇ ನಿನಗೆ ಗುರುತು ಬಂದಿದೆ. ನಾಮಿನೇಷನ್‌ನಿಂದ ಅವನ ಹೆಸರನ್ನು ತೆಗೆದುಹಾಕು’ ಎಂದು ಸಹೋದರ ಸಲಹೆ ನೀಡಿದ್ದು, ತಾಯಿ ಕೂಡ ಬೆಂಬಲಿಸಿದ್ದಾರೆ.

ಆದರೆ ಈ ಮಾತುಗಳು ಬಿಗ್‌ ಬಾಸ್‌ ಮನೆಯ ಮೂಲ ನಿಯಮಗಳಿಗೆ ವಿರುದ್ಧವಾಗಿದ್ದರಿಂದ ಬಿಗ್‌ ಬಾಸ್‌ ತಕ್ಷಣವೇ ಕಠಿಣ ಕ್ರಮ ಕೈಗೊಂಡಿದ್ದಾರೆ. ಮನೆಯ ಮುಖ್ಯದ್ವಾರ ತೆರೆಯಿಸಿ, ಕಾವ್ಯ ಅವರ ಕುಟುಂಬದವರನ್ನು ಹೊರಗೆ ಕಳುಹಿಸುವಂತೆ ಆದೇಶ ನೀಡಿದ್ದಾರೆ.

ಕಾವ್ಯ ಎಷ್ಟೇ ಕ್ಷಮೆ ಕೇಳಿದರೂ ಬಿಗ್‌ ಬಾಸ್‌ ಮೃದುವಾಗಲಿಲ್ಲ. ಕುಟುಂಬದವರನ್ನು ಕಳೆದುಕೊಂಡ ನೋವಿನಲ್ಲಿ ಕಾವ್ಯ ಕಣ್ಣೀರಿಟ್ಟರು. ಫ್ಯಾಮಿಲಿ ವೀಕ್‌ನಲ್ಲೇ ಈ ಅಪ್ರತೀಕ್ಷಿತ ಘಟನೆ ಪ್ರೇಕ್ಷಕರಲ್ಲಿ ಶಾಕ್ ಮೂಡಿಸಿದೆ.

25ನೇ ಸಿನಿಮಾ ಮೈಲಿಗಲ್ಲು: ‘ನಯನ ಮನೋಹರ’ ಮೂಲಕ ಹೊಸ ಶೇಡ್‌ನಲ್ಲಿ ಧರ್ಮ ಕೀರ್ತಿರಾಜ್

ಬಿಗ್ ಬಾಸ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ನಟ ಧರ್ಮ ಕೀರ್ತಿರಾಜ್ ಅವರ ಸಿನಿಮಾ ಪಯಣಕ್ಕೆ ಮತ್ತೊಂದು ಮಹತ್ವದ ಅಧ್ಯಾಯ ಸೇರ್ಪಡೆಯಾಗಿದೆ. ತಮ್ಮ 25ನೇ ಸಿನಿಮಾವಾಗಿ ‘ನಯನ ಮನೋಹರ’ ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಇತ್ತೀಚೆಗೆ ಟೈಟಲ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.

ವೇದಿಕೆಯಲ್ಲಿ ಮಾತನಾಡಿದ ಧರ್ಮ ಕೀರ್ತಿರಾಜ್, “ಅಪ್ಪ, ಅಮ್ಮ, ಅಕ್ಕ ಇಲ್ಲಿ ಇದ್ದಿರುವುದು ನನಗೆ ದೊಡ್ಡ ಶಕ್ತಿ. 25ನೇ ಸಿನಿಮಾ ನನ್ನ ಜೀವನದ ಮೈಲಿಗಲ್ಲು. ನಿಜವಾದ ಹೀರೋ ಎಂದರೆ ನಿರ್ಮಾಪಕರು. ನಿರ್ದೇಶಕರು ಕಥೆ ಹೇಳಿದ ಕ್ಷಣದಲ್ಲೇ ನನಗೆ ತುಂಬಾ ಸಂತೋಷ ಆಯಿತು. ಈ ಸಿನಿಮಾದಲ್ಲಿ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ಭಾವನಾತ್ಮಕವಾಗಿ ಹೇಳಿದರು.

ನಿರ್ದೇಶಕ ಪುನೀತ್ ಕೆಜಿಆರ್, “ಈ ಸಿನಿಮಾ ಧರ್ಮ ಕೀರ್ತಿರಾಜ್ ಅವರಿಗೆ ಖಂಡಿತ ಗೆಲುವು ಕೊಡುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಸಂಗೀತ ಚಿತ್ರದ ಪ್ರಮುಖ ಪ್ಲಸ್ ಆಗಲಿದೆ ಎಂಬ ನಿರೀಕ್ಷೆ ಇದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, “ಈ ಸಿನಿಮಾ 100 ದಿನ ಪೂರೈಸಿ ಇದೇ ಜಾಗದಲ್ಲಿ ಸಂಭ್ರಮಿಸೋಣ” ಎಂದು ಶುಭ ಹಾರೈಸಿದರೆ, ವಿನೋದ್ ಪ್ರಭಾಕರ್ “ಟೀಸರ್ ತುಂಬಾ ಚೆನ್ನಾಗಿ ಬಂದಿದೆ. ಪಾತ್ರ ಪರಿಚಯ ಗಮನಸೆಳೆದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಲೂನ್ ವ್ಯಾಪಾರಿ ಸಲೀಂ ಸಾವು: ಹೀಲಿಯಂ ಸಿಲಿಂಡರ್ ಸ್ಪೋಟದ ಅಸಲಿ ಕಾರಣ ಬಹಿರಂಗ

0

ಮೈಸೂರು: ಮೈಸೂರು ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಫೋಟಗೊಂಡು ಬಲೂನ್ ವ್ಯಾಪಾರಿ ಸಲೀಂ ಸಾವನ್ನಪ್ಪಿದ ಪ್ರಕರಣದ ಹಿಂದಿನ ನಿಜವಾದ ಕಾರಣ ಇದೀಗ ಬೆಳಕಿಗೆ ಬಂದಿದೆ.

ಸಲೀಂ ನಿರಂತರವಾಗಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುತ್ತಿದ್ದು, ಸಿಲಿಂಡರ್ ಅನ್ನು ಪದೇಪದೇ ವೇಗವಾಗಿ ಆನ್–ಆಫ್ ಮಾಡಿದ ಪರಿಣಾಮ ಒಳಭಾಗದಲ್ಲಿ ತಾಪಮಾನ ಹೆಚ್ಚಾಗಿ ಒತ್ತಡ ಉಂಟಾಗಿದೆ. ಇದರ ಪರಿಣಾಮವಾಗಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೈಸೂರು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ ಮೂಲದ ಸಲೀಂ, ಕಳೆದ ವಾರ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ. ಒಂದು ವಾರದಿಂದ ಮೈಸೂರು ಅರಮನೆ ಸುತ್ತಮುತ್ತ, ವಿಶೇಷವಾಗಿ ವಸ್ತುಪ್ರದರ್ಶನ ಆವರಣದ ಬಳಿ ಸೈಕಲ್ ಮೇಲೆ ಹೀಲಿಯಂ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಬಲೂನ್ ಮಾರಾಟ ಮಾಡುತ್ತಿದ್ದ. ಘಟನೆ ನಡೆದ ದಿನ ರಾತ್ರಿ ಸುಮಾರು 8.30ರ ವೇಳೆಗೆ ವರಾಹ ಗೇಟ್ ಬಳಿ ಬಲೂನ್ ಮಾರಾಟ ಮುಗಿಸಿ, ದೊಡ್ಡಕೆರೆ ಮೈದಾನದ ಎದುರಿನ ಜಯಮಾರ್ತಾಂಡ ಗೇಟ್ ಕಡೆಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆ ಸಮಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಲೂನ್ ಖರೀದಿಗೆ ಸೇರಿದ್ದರಿಂದ ಸಲೀಂ ನಿರಂತರವಾಗಿ ಗ್ಯಾಸ್ ತುಂಬುತ್ತಿದ್ದ. ಈ ವೇಳೆ ಸಿಲಿಂಡರ್ ಅನ್ನು ಮರುಮರು ವೇಗವಾಗಿ ಆನ್–ಆಫ್ ಮಾಡಿದ್ದರಿಂದ ಒಳಭಾಗದಲ್ಲಿ ತೀವ್ರ ತಾಪಮಾನ ಏರಿಕೆಗೊಂಡು ಒತ್ತಡ ಹೆಚ್ಚಾಗಿದೆ. ಪರಿಣಾಮವಾಗಿ ಸಿಲಿಂಡರ್ ಸ್ಫೋಟಗೊಂಡು ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಲೀಂ ಪಕ್ಕದಲ್ಲೇ ಇದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಲ್ಲಿ ಒಬ್ಬರಿಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಹಾಗೂ ಮೂವರಿಗೆ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟವು ವರಾಹ ಗೇಟ್ ಬಳಿ ಸಂಭವಿಸದೆ ಜಯಮಾರ್ತಾಂಡ ಗೇಟ್ ಬಳಿ ನಡೆದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವರಾಹ ಗೇಟ್ ಬಳಿ ಹೆಚ್ಚಿನ ಜನಸಂದಣಿ ಇದ್ದುದರಿಂದ ಅಲ್ಲಿ ಸ್ಫೋಟವಾಗಿದ್ದರೆ ಹೆಚ್ಚಿನ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತಿದೆ.

ಈ ಘಟನೆ ಸಂಬಂಧ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಲಿಂಡರ್ ಬಳಕೆಯಲ್ಲಿನ ಸುರಕ್ಷತಾ ಕ್ರಮಗಳ ಉಲ್ಲಂಘನೆ, ವ್ಯಾಪಾರಕ್ಕೆ ಅಗತ್ಯ ಪರವಾನಗಿಗಳಿದ್ದವೆಯೇ ಎಂಬ ಅಂಶಗಳ ಕುರಿತು ಪೊಲೀಸರು ಮುಂದುವರಿದ ತನಿಖೆ ಕೈಗೊಂಡಿದ್ದಾರೆ.

ನಿಂಬೆ ನೀರು ಕುಡಿಯುವುದರಿಂದ ಹೈ ಬಿಪಿಯನ್ನು ಕಂಟ್ರೋಲ್ʼಗೆ ತರಬಹುದೇ? ಇಲ್ಲಿದೆ ಉತ್ತರ

0

ಹೆಚ್ಚಿನವರಿಗೆ ಅಧಿಕ ರಕ್ತದೊತ್ತಡ ಸಾಮಾನ್ಯ ಸಮಸ್ಯೆಯಂತೆ ಕಾಣಬಹುದು. ಆದರೂ, ಇದು ಹೃದಯ, ಮೂತ್ರಪಿಂಡ, ರಕ್ತನಾಳಗಳ ಆರೋಗ್ಯಕ್ಕೆ ನೇರವಾಗಿ ಹಾನಿ ಮಾಡುತ್ತದೆ. ಕ್ರಮೇಣ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಕೆಲವರು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕಾಗಿ ನಿಂಬೆ ನೀರು ಕುಡಿಯುತ್ತಾರೆ. ನಿಂಬೆಹಣ್ಣಿನಲ್ಲಿ ವಿಟಮಿನ್ C ಮತ್ತು ಉತ್ಕರ್ಷಣ ನಿರೋಧಕಗಳು ಇವೆ. ಆದರೆ, ಇದು ನಿಜವಾಗಿಯೂ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ ಎಂಬ ಪ್ರಶ್ನೆ ಬರಬಹುದು.

ಎನ್‌ಸಿಬಿಐ ಅಧ್ಯಯನಗಳ ಪ್ರಕಾರ, ನಿಂಬೆ ನೀರು ತನ್ನ ಸಿಟ್ರಿಕ್ ಆಮ್ಲ (Citric Acid) ಮತ್ತು ವಿಟಮಿನ್ C ಅಂಶಗಳಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇವು ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಸುಧಾರಿಸುತ್ತವೆ ಮತ್ತು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತವೆ.

ಆಷ್ಯನ್ ಜರ್ನಲ್ ಆಫ್ ನರ್ಸಿಂಗ್ ಎಜುಕೇಶನ್ ಅಂಡ್ ರಿಸರ್ಚ್ ಪ್ರಕಾರ, ನಿಂಬೆಹಣ್ಣಿನ ವಿಟಮಿನ್ C ರಕ್ತನಾಳಗಳ ಆರೋಗ್ಯಕ್ಕೆ ಪೋಷಕವಾಗಿದೆ ಮತ್ತು ಹೃದಯದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಂಬೆ ನೀರು ಕುಡಿಯುವ ಪ್ರಯೋಜನಗಳು

  1. ರಕ್ತಪರಿಚಲನೆಯನ್ನು ಸುಧಾರಿಸುತ್ತದೆ:
    ನಿಂಬೆಹಣ್ಣಿನಲ್ಲಿ ವಿಟಮಿನ್ C ಮತ್ತು ಸಿಟ್ರಸ್ ಫ್ಲೇವನಾಯ್ಡ್‌ಗಳು ರಕ್ತನಾಳಗಳನ್ನು ಸಡಿಲಗೊಳಿಸಿ, ರಕ್ತಪರಿಚಲನೆಯನ್ನು ಸುಧಾರಿಸುತ್ತವೆ.

  2. ಜಲಸಂಚಯನವನ್ನು ಹೆಚ್ಚಿಸುತ್ತದೆ:
    ದೇಹದಲ್ಲಿ ಜಲಸಂಚಯನ ಹೆಚ್ಚುವುದರಿಂದ ಅಧಿಕ ರಕ್ತದೊತ್ತಡದಿಂದ ಹೃದಯದ ಮೇಲೆ ಬರುವ ಒತ್ತಡ ಕಡಿಮೆಯಾಗುತ್ತದೆ.

ರಕ್ತದೊತ್ತಡ ನಿಯಂತ್ರಣಕ್ಕಾಗಿ ನಿಂಬೆ ನೀರು ಸಹಾಯಕರ ಆಗಿದೆಯಾದರೂ, ಇದು standalone ಚಿಕಿತ್ಸೆಯಲ್ಲ. ನೀವು ನಿಯಮಿತವಾಗಿ ನಿಂಬೆ ನೀರು ಸೇವಿಸಬಹುದು, ಆದರೆ ವೈದ್ಯರ ಸಲಹೆ ಪಡೆದು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ.

‘ಗಿಲ್ಲಿಯನ್ನು ಬಿಟ್ಟುಕೊಡಬೇಡ!’: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯಾ ತಾಯಿಯ ಸರ್ಪ್ರೈಸ್ ಮಾತು

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫ್ಯಾಮಿಲಿ ವೀಕ್‌ನಲ್ಲಿ ಕಾವ್ಯಾ ಶೈವ–ಗಿಲ್ಲಿ ನಟ ಜೋಡಿ ಮತ್ತೊಮ್ಮೆ ಪ್ರೇಕ್ಷಕರ ಹೃದಯ ಗೆದ್ದಿದೆ. ಆರಂಭದಿಂದಲೂ ಕ್ಲೋಸ್ ಆಗಿರುವ ಈ ಜೋಡಿ, ಇದೀಗ ಮದುವೆ ಮಾತುಕತೆ ಮೂಲಕ ಹೊಸ ಚರ್ಚೆಗೆ ಕಾರಣವಾಗಿದೆ.

ಕಾವ್ಯಾ ಪೋಷಕರು ದೊಡ್ಮನೆಗೆ ಬಂದಾಗ ಮದುವೆ ವಿಷಯವೇ ಚರ್ಚೆಯಾಗಬೇಕು ಎಂಬ ಆಸೆಯನ್ನು ಗಿಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. “ನಾಳೆ ನಿಶ್ಚಿತಾರ್ಥಕ್ಕೆ ಯಾರು ಬರುತ್ತಾರೋ?” ಎಂದು ಗಿಲ್ಲಿ ಕಾವ್ಯಾವನ್ನು ರೇಗಿಸಿದರೆ, ಕಾವ್ಯಾ ಕೂಡ ತಿರುಗೇಟು ನೀಡಿ ಫನ್ನಿ ವಾತಾವರಣ ಸೃಷ್ಟಿಸಿದ್ದಾರೆ.

ಈ ವೇಳೆ ಕಾವ್ಯಾ ತಾಯಿ ಸಾವಿತ್ರಿ ಅವರು ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಗಿಲ್ಲಿಯನ್ನು ಎಂದಿಗೂ ಬಿಟ್ಟುಕೊಡಬೇಡ. ಅವನು ನಿನ್ನನ್ನು ಯಾವಾಗಲೂ ಬಿಟ್ಟುಕೊಟ್ಟಿಲ್ಲ. ಹಣ್ಣು, ಮೊಟ್ಟೆ ಕೇಳಿದರೆ ಕೊಡು” ಎಂದು ಹೇಳಿದ್ದು ಮನೆಯಲ್ಲಿದ್ದ ಎಲ್ಲರನ್ನೂ ನಗಿಸಿದೆ.

ಪ್ರೇಕ್ಷಕರಿಗೂ ಗಿಲ್ಲಿ ನಟ ಸಖತ್ ಫೇವರಿಟ್ ಆಗಿದ್ದಾರೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್ ಮನೆಯವರಿಗೆ ಗಿಲ್ಲಿ ಆಟ ಮೆಚ್ಚುಗೆಯಾಗಿದೆ. ಈಗಾಗಲೇ ನಾಲ್ಕು ವೋಟ್ ಪಡೆದುಕೊಂಡಿರುವ ಗಿಲ್ಲಿ ಈ ವಾರದ ಕ್ಯಾಪ್ಟನ್ ಆಗುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.

error: Content is protected !!