Home Blog Page 4

ಲಕ್ನೋದಲ್ಲಿ ತಂದೆ ಹತ್ಯೆ: ಗುಂಡಿಕ್ಕಿ ಕೊಂದು ಶವ ತುಂಡರಿಸಿದ ಪುತ್ರ ಬಂಧನ

0

ಲಕ್ನೋ: ಹೃದಯ ಕಲುಕುವ ಘಟನೆಯೊಂದರಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತುಂಡರಿಸಿ ವಿಲೇವಾರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಔಷಧ ಮತ್ತು ಮದ್ಯ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಮನೆಗೆ ಭೇಟಿ ನೀಡಿದ ಪೊಲೀಸರಿಗೆ ಬ್ಯಾರೆಲ್‌ನಲ್ಲಿ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿವೆ. ಅನುಮಾನಾಸ್ಪದ ಸ್ಥಿತಿಯಲ್ಲಿ ಪುತ್ರ ಅಕ್ಷತ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮನ್ವೇಂದ್ರ ಸಿಂಗ್ ತಮ್ಮ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿ ಮುಂದುವರಿಸಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಅಕ್ಷತ್ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ವಿಷಯವಾಗಿ ತಂದೆ-ಮಗನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು.

ಇತ್ತೀಚೆಗೆ ಮತ್ತೆ ಉಂಟಾದ ಜಗಳದ ವೇಳೆ ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಮೂರನೇ ಮಹಡಿಯಿಂದ ಕೆಳಮಹಡಿಗೆ ಕೊಂಡೊಯ್ದು ಖಾಲಿ ಕೋಣೆಯಲ್ಲಿ ತುಂಡರಿಸಿದ್ದಾನೆ.

ಸಹೋದರಿಯ ಮುಂದೆಯೇ ತಂದೆಯ ದೇಹವನ್ನು ತುಂಡರಿಸಿದ್ದು, ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿ ವಿಲೇವಾರಿ ಮಾಡಿದ್ದಾನೆ. ಮುಂಡ ಸೇರಿದಂತೆ ಕೆಲವು ಅಂಗಾಂಗಗಳನ್ನು ಮನೆಯಲ್ಲಿ ಇಟ್ಟಿದ್ದ ನೀಲಿ ಡ್ರಮ್‌ನಲ್ಲಿ ಸಂಗ್ರಹಿಸಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.

ದಾವಣಗೆರೆ: 15 ವರ್ಷದ ಬಾಲಕ ಹೃದಯಾಘಾತದಿಂದ ಸಾವು

0

ದಾವಣಗೆರೆ:  ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 15 ವರ್ಷದ ಮುಜಾಮಿಲ್ ಎಂಬ 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಚಮನ್ ಸಾಬ್ ಮತ್ತು ಫಾತೀಮಾ ದಂಪತಿಯ ಪುತ್ರನಾಗಿದ್ದ ಮುಜಾಮಿಲ್, ಹನುಮಂತಪುರದ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ ಓದುತ್ತಿದ್ದ. ರಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಬಾಲಕ ಬೆಳಗಿನ ಜಾವ ಹೊರಗೆ ಹೋಗಿದ್ದಾಗ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಪೋಷಕರಿಗೆ ಮಗನ ಮೃತ್ಯು ತುಂಬಾ ದುಃಖ ತಂದಿದ್ದು, ಸ್ಥಳೀಯ ಜಗಳೂರು ಪೊಲೀಸ್ ಠಾಣೆ ಪ್ರಕರಣದ ತನಿಖೆ ನಡೆಸುತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ; ಆರೋಗ್ಯಕ್ಕೆ ಅಪಾಯ

0

ಬೆಂಗಳೂರು: ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸಾ (ಲೆಡ್) ಮತ್ತು ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತೋರಿಸಿದೆ. 72 ಮಾದರಿಗಳ ಪರಿಶೀಲನೆೆಯಲ್ಲಿ 10 ಮಾದರಿಗಳಲ್ಲಿ ಕೀಟನಾಶಕ ಅವಶೇಷಗಳು ಕಂಡುಬಂದಿದ್ದು, ಕೆಲ ತರಕಾರಿಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚು 1.75 ಎಂಜಿ/ಕೆಜಿ ತಲುಪಿದೆ.

ಮಣ್ಣು ಕೂಡ ಪರಿಶೀಲನೆಗೆ ಒಳಪಟ್ಟಿದ್ದು, ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಹೊಲಗಳಿಂದ ಸಂಗ್ರಹಿಸಿದ 23 ಮಾದರಿ ಮಣ್ಣು ಕಲುಷಿತವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜನರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಿತ್ತು.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಜಂಟಿ ಸಮಿತಿ ಸಲ್ಲಿಸಿದ ವರದಿ ಹೇಳಿದ್ದು, ನಗರದಲ್ಲಿ ಮಾರಾಟವಾಗುತ್ತಿರುವ ಕೆಲವು ತರಕಾರಿಗಳು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಸಾರ್ವಜನಿಕರು ಎಚ್ಚರಿಕೆಯಿಂದ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸುವಂತೆ ಸೂಚಿಸಲಾಗಿದೆ.

ನರೇಗಲ್ಲಿಗೆ ಬಂತು ವರ್ಷದ ಮೊದಲ ಮಳೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈ ವರ್ಷದ ಮಳೆಗಾಲವಿನ್ನೂ ಪ್ರಾರಂಭವಾಗಿಲ್ಲ. ಆದರೂ ಸೋಮವಾರ ಸಂಜೆ ನರೇಗಲ್ಲದಲ್ಲಿ 15-20 ನಿಮಿಷಗಳ ಕಾಲ ಅಕಾಲಿಕ ಮಳೆ ಸುರಿದು ರೈತರಲ್ಲಿ ಆತಂಕ ಮೂಡಿಸಿತು. ಮಳೆ ಸ್ವಲ್ಪ ಬಿರುಸಾಗಿಯೆ ಸುರಿಯಿತು. ರಸ್ತೆಯ ಮೇಲೆಲ್ಲ ನೀರು ಹರಿಯಿತು. ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಕ್ಕಳು ಮಳೆಯಿಂದ ತೊಂದರೆಗೊಳಗಾದರು.

ಚಳಿಗಾಲ ಸರಿದು ಈಗಿನ್ನೂ ಬೇಸಿಗೆ ಪ್ರಾರಂಭವಾಗುತ್ತಿದೆ. ಶಿವರಾತ್ರಿಯ ನಂತರ ಬಿಸಿಲಿಗೆ ಜನ ಶಿವಶಿವ ಎನ್ನುತ್ತಾರಂತೆ. ಆದರೆ ಶಿವರಾತ್ರಿ ಮುಗಿದು ಎಂಟು ದಿನಗಳು ಕಳೆದರೂ ಅಷ್ಟೊಂದು ಪರಿಯ ಬಿಸಿಲು ಜನರನ್ನು ಬಾಧಿಸಿಲ್ಲ. ಹೀಗಾಗಿ ಬೇಸಿಗೆ ಕಾಲದ ಪ್ರಾರಂಭವಿಲ್ಲದೆ ಸುರಿದ ಅಕಾಲಿಕ ಮಳೆ ಜನತೆಯಲ್ಲಿ ಸೋಜಿಗದ ಜೊತೆಗೆ ಆತಂಕವನ್ನುಂಟುಮಾಡಿತು.

ಜೋಳದ ಕಟಾವು ಆಗದೆ ಮಳೆಯಾದರೆ ಜೋಳದ ತೆನೆ ಕಪ್ಪಾಗುತ್ತದೆ. ಕಾಳುಗಳು ಕಪ್ಪಾಗುತ್ತವೆ. ಕುಶಿಬಿಯ ತೆನೆಯಲ್ಲಿ ನೀರು ಹೊಕ್ಕರೆ ಅದರ ಕಾಳೂ ಕಪ್ಪಾಗುತ್ತದೆ. ಹೊಲದಲ್ಲಿ ರಾಶಿ ಮಾಡಲು ಬಿಟ್ಟಿರುವ ಬೆಳೆಯೆಲ್ಲವೂ ಹಾಳಾಗುತ್ತದೆ. ನೀರಿನಿಂದ ತೊಯ್ದ ಹೊಟ್ಟನ್ನು ಒಯ್ಯಲು ಯಾರೂ ಇಚ್ಛೆ ಪಡುವುದಿಲ್ಲ. ಹೀಗೆ ರೈತರಿಗೆ ಅನೇಕ ತೊಂದರೆಗಳಾಗುತ್ತವೆ ಎಂದು ರೈತರಾದ ಬಾಳಪ್ಪ ಸೋಮಗೊಂಡ, ಕೆ.ಎಸ್. ಕಳಕಣ್ಣವರ, ಎಸ್.ಕೆ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಪೂರ್ಣ ರಾಮಾಯಣ’ದಲ್ಲಿ ಕಳೆದುಹೋದ ಪ್ರೇಕ್ಷಕ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಸಹಕಾರದಲ್ಲಿ ಭಾರತೀಯ ವಿದ್ಯಾಭವನ ಆಯೋಜಿಸಿರುವ ಪುಲಿಗೆರೆ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ವಿದುಷಿ ಗಾಯತ್ರಿ ಚಂದ್ರಶೇಖರ ಅವರ ನೇತೃತ್ವದ ತಂಡ ಪ್ರಸ್ತುತಪಡಿಸಿದ ಭರತನಾಟ್ಯ ಪ್ರದರ್ಶನ ಸೇರಿದ್ದ ಸಾವಿರಾರು ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ ಈ ತಂಡದ ಕಲಾವಿದೆಯರು ಸಂಪೂರ್ಣ ರಾಮಾಯಣದ ಸನ್ನಿವೇಶಗಳನ್ನೇ ಪ್ರೇಕ್ಷಕರ ಕಣ್ತುಂಬಿಸಿದರು. ರಾಮ, ಸೀತೆ, ಲಕ್ಷ್ಮಣ, ರಾವಣ, ವಿಭೀಷಣ, ಶಬರಿ, ಜಟಾಯು, ಹನುಮಂತ ಇತ್ಯಾದಿ ಪಾತ್ರಗಳನ್ನು ಸೀತಾಪಹರಣ, ಶ್ರೀರಾಮಪಟ್ಟಾಭಿಷೇಕದಂತಹ ಪ್ರಸಂಗಗಳನ್ನು ಪರಕಾಯ ಪ್ರವೇಶ ಮಾಡಿದವರಂತೆ ಲೀಲಾಜಾಲವಾಗಿ ಅಭಿನಯಿಸಿದ್ದು ಪ್ರೇಕ್ಷಕರ ಆಕರ್ಷಣೆಗೆ ಕಾರಣವಾಗಿತ್ತು.

ನಂತರ ಬೆಂಗಳೂರಿನ ವಿದುಷಿ ಲತಾ ಲಕ್ಷ್ಮೀಶ್ ಮತ್ತು ತಂಡದವರು ಪ್ರಸ್ತುತಪಡಿಸಿದ ಭರತನಾಟ್ಯ ನೃತ್ಯ ವೈವಿಧ್ಯ ಗಮನ ಸೆಳೆಯುವಂತಿತ್ತು. ಈ ತಂಡದ ಕಲಾವಿದರು ಪುಷ್ಪಾಂಜಲಿ ನೃತ್ಯವನ್ನು ಪ್ರಸ್ತುತಪಡಿಸುವ ಮೂಲಕ ನೃತ್ಯ ಪ್ರದರ್ಶನವನ್ನು ಪ್ರಾರಂಭಿಸಿದರು. ಪ್ರಥಮ ಪೂಜಿತ ವಿಘ್ನನಿವಾರಕ ಗಣೇಶ ಪಂಚರತ್ನ, ಶುದ್ಧ ನೃತ್ಯ ಬಂಧವಾಗಿರುವ ಜತಿಸ್ವರದಲ್ಲಿ ಪ್ರಸ್ತುತಪಡಿಸಿದರು. ಅರ್ಧನಾರೀಶ್ವರನ ನೃತ್ಯ ವೈಭವ ಎಲ್ಲರ ಗಮನ ಸೆಳೆಯಿತು. ನಂತರದಲ್ಲಿ ಅಭಂಗಗಳು, ತರುವಾಯ ಮಹಿಷ ಮರ್ದಿನಿ ನೃತ್ಯ ರೂಪಕ ಅತ್ಯಂತ ಸುಂದರವಾಗಿ ಮೂಡಿ ಬಂದಿತು. ನಿರಂತರವಾಗಿ ನೃತ್ಯ ಪ್ರದರ್ಶಿಸಿದ ಈ ಕಲಾವಿದೆಯರು ಪ್ರೇಕ್ಷಕರ ಕರತಾಡನದಿಂದ ಪುಲಕಿತರಾದರು.

ತಂಡದ ಸದಸ್ಯರಾದ ಲಾಸ್ಯ, ಅಂಜನಾ, ಗೌತಮಿ, ತೇಜಸ್ವಿನಿ, ಪೂಜಿತಾ, ಸುಖದಾ ಭಟ್, ರಿಶಿತಾ, ತನ್ಮಯಿ, ಯಶಸ್ವಿನಿ ಅವರ ನೃತ್ಯಗಳು ಎಲ್ಲರ ಮೆಚ್ಚುಗೆ ಗಳಿಸಿದವು. ನಂತರ 3 ದಿನಗಳ ಸಂಗೀತ, ನೃತ್ಯ, ಚಿತ್ರ ಸಂಭ್ರಮಗಳ ಪುಲಿಗೆರೆ ಉತ್ಸವದ ವೈಭವಕ್ಕೆ ಸಹಕರಿಸಿದ ಹಿರಿಯರನ್ನು ಭಾರತೀಯ ವಿದ್ಯಾಭವನದ ವತಿಯಿಂದ ಅಭಿನಂದಿಸಲಾಯಿತು.

ಅಪರೂಪದ ಕಲಾ ಪ್ರತಿಭೆಯಾಗಿರುವ ವಿದುಷಿ ಗಾಯತ್ರಿ ಚಂದ್ರಶೇಖರ ಅವರ ಹಾವ-ಭಾವ, ರೌದ್ರಾವತಾರದ ಭಂಗಿ, ಯುದ್ಧದ ಸನ್ನಿವೇಶ, ಕೊನೆಗೆ ಪಟ್ಟಾಭಿಷೇಕದ ದೃಶ್ಯಗಳು ಸಂಪೂರ್ಣ ರಾಮಾಯಣದ ಚಿತ್ರಣವನ್ನು ತೆರೆದಿಟ್ಟಂತಿತ್ತು. ವಿಶೇಷವಾಗಿ ಶಬರಿಯು ರಾಮನಿಗಾಗಿ ಕಾಯುತ್ತಿರುವ ವೃದ್ಧೆಯ ಪಾತ್ರವಂತೂ ಅದ್ಭುತವಾಗಿ ಮೂಡಿಬಂದಿತು. ಸುಮಾರು ಒಂದುವರೆ ಗಂಟೆಗೂ ಅಧಿಕ ಕಾಲ ಭರತನಾಟ್ಯವನ್ನು ಪ್ರದರ್ಶಿಸಿದ ಈ ತಂಡ ಕೊನೆಗೆ ರಾಮನ ಪಟ್ಟಾಭಿಷೇಕ ನೆರವೇರಿಸಿದಾಗ ಇಡೀ ಆವರಣದಲ್ಲಿದ್ದ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

ನಾಳೆ ಕೊಪ್ಪಳ ಬಂದ್: ಖಾಸಗಿ ಶಾಲೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ!

0

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಾಳೆ (ಮಂಗಳವಾರ) ಜಿಲ್ಲೆಯಾದ್ಯಾಂತ ಬಂದ್ ಘೋಷಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟವು ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ. ಇದೊಂದಿಗೆ, ಕೊಪ್ಪಳ ವಿವಿಯ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಕೂಡ ಮುಂದೂಡಲು ಆದೇಶ ಹೊರಡಿಸಲಾಗಿದೆ.

ನಾಳೆ ನಡೆಯಲಿರುವ ಬೃಹತ್ ಪ್ರತಿಭಟನೆ ಹಿನ್ನೆಲೆ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಯಾವುದೇ ಅಪಾಯಕ್ಕೆ ಒಳಗಾಗದಂತೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮಂಡ್ಯ: ಡಿಂಕಾ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ – 14 ಆರೋಪಿಗಳ ವಿರುದ್ಧ FIR ದಾಖಲು

0

ಮಂಡ್ಯ: ಮಂಡ್ಯ ಜಿಲ್ಲಾ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಭೀಕರ ದೌರ್ಜನ್ಯ ಘಟನೆ ನಡೆದಿದೆ.

ಫೆಬ್ರವರಿ 22ರಂದು ಮಧ್ಯಾಹ್ನ 3 ಗಂಟೆಗೆ, ಸ್ಥಳೀಯ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಚಿನಕುರಳಿ ಕಡೆ ಸಾಗುತ್ತಿದ್ದಾಗ ಗಿರೀಶ್, ಮಂಜು (ಅಲಿಯಾಸ್ ಪ್ಲಗ್), ಜೀವನ್, ಶಶಿಕುಮಾರ, ಅಯ್ಯಪ್ಪ, ಮದನ್, ಮಾದಪ್ಪ, ರವಿ, ನಿಂಗಣ್ಣ ಮತ್ತು ಗಣೇಶ ಸೇರಿದಂತೆ ಹತ್ತಾರು ಮಂದಿ ಕೈಯಲ್ಲಿ ಕಲ್ಲು ಮತ್ತು ದೊಣ್ಣೆ ಹಿಡಿದು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ.

ಘಟನೆಯ ವೇಳೆ, ವ್ಯಕ್ತಿಯ ಕಾಲು ಮತ್ತು ತಲೆಗೆ ಗಂಭೀರ ಗಾಯಗಳು ಸಂಭವಿಸಿದ್ದು, ಹಲ್ಲೆ ಮಾಡುವ ಕಿಡಿಗೇಡಿಗಳು ಈ ಕ್ರೌರ್ಯವನ್ನು ವಿಡಿಯೋದಲ್ಲಿ ದಾಖಲಿಸಿದ್ದರು. ಸ್ಥಳೀಯರು ಹಾಗೂ ಆಂಬ್ಯುಲೆನ್ಸ್ ಮೂಲಕ ಹಲ್ಲೆಗೀಡಾದ ವ್ಯಕ್ತಿಯನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ತರುವ ಮೂಲಕ ಚಿಕಿತ್ಸೆ ನೀಡಲಾಗಿತ್ತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ 14 ಆರೋಪಿಗಳ ವಿರುದ್ಧ FIR ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪೋಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

 

ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಕಸ್ಟಡಿಗೆ | ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಶನಿವಾರ ಮಧ್ಯರಾತ್ರಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದರಿಂದ ಬಹುತೇಕ ಕಾರ್ಯಕರ್ತರಲ್ಲಿ ಅಸಮಾಧಾನ ಮಡುಗಟ್ಟಿದೆ.

ಪ್ರತಿನಿತ್ಯ ನೂರಾರು ಜನ ಕಾರ್ಯಕರ್ತರು ಮನೆ ಬಳಿ ಬರುತ್ತಿದ್ದರು. ಅನೇಕ ಕೆಲಸ ಕಾರ್ಯಗಳ ಬೇಡಿಕೆಯನ್ನು ಹೊತ್ತು ತರುವ ಸಾರ್ವಜನಿಕರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮನೆ ಮುಂದೆ ತುಂಬಿರುತ್ತಿದ್ದರು. ಆದರೆ ರವಿವಾರ ಮನೆಯ ಸುತ್ತಲೂ ಖಾಲಿ ಖಾಲಿ ಆಗಿದೆ. ಮನೆಯ ಕೆಲಸಗಾರರನ್ನು ಹೊರತುಪಡಿಸಿ ಕುಟುಂಬಸ್ಥರು ಬೇರೆಕಡೆ ಸ್ಥಳಾಂತರವಾಗಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಶಾಸಕರ ಪತ್ನಿ ಸರೋಜಾ ಮಾನಸಿಕ ಖಿನ್ನತೆಗೆ ಒಳಗಾಗಿ ಊಟವಿಲ್ಲದೆ, ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ಶಾಸಕ ಚಂದ್ರು ಲಮಾಣಿ ಎಂದಿನಂತೆ ನಿಗದಿತ ಕಾರ್ಯಕ್ರಮಗಳ ಪ್ರಕಾರ ಶನಿವಾರ ಮುಂಜಾನೆ 7.30ರಿಂದಲೇ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸುಮಾರು 1 ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ಆಲಿಸಿದ ಅವರು ನಂತರ ಮನೆಗೆ ತೆರಳಿ 10 ಗಂಟೆಯ ಹೊತ್ತಿಗೆ ದೇವಸ್ಥಾನಕ್ಕೆ ಮರಳಿ ಬಂದು ಪುಲಿಗೆರೆ ಉತ್ಸವದ ನಿಮಿತ್ತ ನಡೆದ ಸೋಮೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸ್ವತಃ ಪಲ್ಲಕ್ಕಿಯನ್ನು ಹೊತ್ತು ಸೇವೆ ಸಲ್ಲಿಸಿದ್ದರು. ನಂತರ ಅಲ್ಲಿಂದ ತೆರಳಿದ ಅವರು ಆಸ್ಪತ್ರೆಯಲ್ಲಿ ವಿ.ಜಿ. ರಾಮ್‌ಜಿ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿದ್ದರು.

ಶನಿವಾರ ಮಧ್ಯಾಹ್ನ 1.30ರಿಂದ 2 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿದ್ದಾಗಲೇ ಲೋಕಾಯುಕ್ತ ದಾಳಿ ನಡೆದಿದ್ದು, ಏಕಾಏಕಿ ನಡೆದ ದಾಳಿಯಿಂದ ಅವರು ಆಪ್ತ ಕಾರ್ಯದರ್ಶಿಗಳಾದ ಮಂಜುನಾಥ ವಾಲ್ಮೀಕಿ ಮತ್ತು ಗುರು ಅವರು ಸಹ ಈ ಘಟನೆಯಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿಂದ ಪ್ರಾರಂಭವಾದ ಲೋಕಾಯುಕ್ತ ತನಿಖೆ ಸುಮಾರು 12 ಗಂಟೆಗಳ ಕಾಲ, ಮಧ್ಯರಾತ್ರಿ 2 ಗಂಟೆಯವರೆಗೂ ನಡೆದು ಅಲ್ಲಿಂದ ಶಾಸಕ ಡಾ. ಚಂದ್ರು ಲಮಾಣಿಯವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಗದುಗಿಗೆ ತೆರಳಿದರು.

ಶನಿವಾರ ಮಧ್ಯಾಹ್ನ ಶಾಸಕರ ಮೇಲೆ ಲೋಕಾಯುಕ್ತ ದಾಳಿ ನಡೆದ ಸುದ್ದಿ ಹರಡುತ್ತಿದ್ದಂತೆ ಸುದ್ದಿ ತಿಳಿದ ಬಿಜೆಪಿಯ ನೂರಾರು ಕಾರ್ಯಕರ್ತರು, ಮುಖಂಡರು ಜಮಾಯಿಸಿ ಶಾಸಕರ ಮೇಲೆ ಷಡ್ಯಂತ್ರದಿಂದ ಅವರನ್ನು ಸಿಲುಕಿಸುವ ಕಾರ್ಯವನ್ನು ಮಾಡಲಾಗಿದೆ, ದಲಿತ ಮುಖಂಡರನ್ನು ತುಳಿಯುವ ಕಾರ್ಯ ಇದಾಗಿದೆ, ಶಾಸಕರು ಅಮಾಯಕರು ಎಂದು ಆಕ್ರೋಶ ಹೊರಹಾಕಿದರು.

ಸಚಿವ ಎಚ್.ಕೆ. ಪಾಟೀಲರೇ ಇದಕ್ಕೆ ಕಾರಣ, ಅವರಿಂದಲೇ ಈ ಹೇಯ ಕೃತ್ಯ ನಡೆದಿದೆ, ಕಾನೂನು ಸಚಿವರಿಂದಲೇ ಕಾನೂನು ಉಲ್ಲಂಘನೆಯಾಗುತ್ತಿದೆ, ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೋರಾಗಿ ಕೂಗುತ್ತಿದ್ದರು. ಇದು ಬಂಜಾರ ಸಮಾಜದ ಯುವ ಮುಖಂಡ ಬೆಳೆಯುತ್ತಿರುವದನ್ನು ಸಹಿಸಲಾಗದವರ ಕಾರ್ಯ ಎಂದು ಆಕ್ರೋಶದಿಂದ ಕೂಗಿದರು. ಮಧ್ಯರಾತ್ರಿ ಶಾಸಕರನ್ನು ಹೊರಕ್ಕೆ ಕರೆತರುತ್ತಿದ್ದಂತೆ ಕಾರ್ಯಕರ್ತರ ಅಕ್ರೋಶ ಮುಗಿಲುಮುಟ್ಟಿತ್ತು. ಪೊಲೀಸ್ ಅಧಿಕಾರಿಗಳು, ನೂರಾರು ಪೊಲೀಸ್ ಸಿಬ್ಬಂದಿಗಳು ಪರಿಸ್ಥಿತಿ ನಿಭಾಯಿಸಿದರು.

ಸಹಕಾರಿ ಸಂಘದ ನೂತನ ನ್ಯಾಯಬೆಲೆ ಅಂಗಡಿ, ಕಡಲೆ ಖರೀದಿ ಕೇಂದ್ರ ಪ್ರಾರಂಭ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗ್ರಾಮದಿಂದ ದೂರವಿರುವ ಮಾರುತಿ ನಗರ ಕುಟುಂಬಗಳ ಬೇಡಿಕೆಯಂತೆ ನ್ಯಾಯಬೆಲೆ ಅಂಗಡಿಯ ಪರವಾನಿಗೆಯ ನಂತರ ತಡವಾಗಿಯಾದರೂ ಆರಂಭವಾಗಿದ್ದು, ಆ ಭಾಗದ ಬಡವರಿಗೆ ಅನುಕೂಲವಾಗಲಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2ರ ನೂತನ ಅಧ್ಯಕ್ಷ ಮಹೇಶ ಮುಸ್ಕಿನಭಾವಿ ಹೇಳಿದರು.

ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2ರ ನೂತನ ನ್ಯಾಯಬೆಲೆ ಅಂಗಡಿ ಹಾಗೂ ಸರ್ಕಾರದಿಂದ ಬೆಂಬಲ ಬೆಲೆಯ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ ತಿಂಗಳಿನಿಂದ ಮಾರುತಿ ನಗರದ ಸಾರ್ವಜನಿಕ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಲಾಗುವುದು. ಈ ಹಿಂದೆ ಗ್ರಾಮ ಸಭೆಯ ನಿರ್ಣಯದಂತೆ ಅಭಿವೃದ್ಧಿ ಅಧಿಕಾರಿಗಳು ಖಾಲಿ ಇರುವ ನಿವೇಶನವನ್ನು ನಮ್ಮ ಸಂಘಕ್ಕೆ ಒದಗಿಸಿಕೊಡಬೇಕು. ಕಡಲೆ ಖರೀದಿಗೆ ಪ್ರತಿ ಕ್ವಿಂಟಲ್‌ಗೆ ಸರ್ಕಾರ 5875 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ಒಂದು ಖಾತೆಗೆ 10 ಎಕರೆವರೆಗೆ 40 ಕ್ವಿಂಟಲ್ ಖರೀದಿ ಮಾಡಲಾಗುತ್ತಿದ್ದು, ರೈತರು ಸಹಕಾರ ನೀಡಬೇಕು ಎಂದರು.

ಪಿ.ಡಿ.ಒ ಅಮೀರನಾಯಕ ಮಾತನಾಡಿ, ರೈತರ ಧ್ವನಿಯಾಗಿರುವ ಸಹಕಾರ ಸಂಘವು ಇನ್ನು ಮುಂದೆ ಬಡವರಿಗೆ ಸರ್ಕಾರ ಉಚಿತವಾಗಿ ನೀಡುವ ಆಹಾರ ಧಾನ್ಯವನ್ನು ಪೂರೈಕೆ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವುದು ಶ್ಲಾಘನೀಯ. ಗ್ರಾಮಸಭೆಯ ನಿರ್ಣಯದಂತೆ ಸಂಘಕ್ಕೆ ಗ್ರಾಮ ಪಂಚಾಯಿತಿಯಿಂದ ನಿವೇಶನ ಒದಗಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಪರಸಪ್ಪ ಕರಿಯಲ್ಲಪ್ಪನವರ, ಲಕ್ಕುಂಡಿ ಬಿ.ಜೆ.ಪಿ ಮಂಡಲದ ಅಧ್ಯಕ್ಷ ಪ್ರಕಾಶ ಅರಹುಣಶಿ ಮಾತನಾಡಿದರು. ಹಿರಿಯರಾದ ಎ.ಬಿ. ಬಿರಾದಾರ, ನಿರ್ದೇಶಕರಾದ ಅಶೋಕ ಮುಸ್ಕಿನಭಾವಿ, ಮಲ್ಲಪ್ಪ ಹಗರಿ, ನಿಂಗಪ್ಪ ಮಂಗಳೂರು, ವಿರೂಪಾಕ್ಷಪ್ಪ ಕಮತರ, ಪಂಚಾಕ್ಷರಯ್ಯ ನಾಗಾವಿಮಠ, ಅನ್ನಪೂರ್ಣ ಹಡಗಲಿ, ಗಂಗವ್ವ ಮುಕ್ಕಣ್ಣವರ, ಕಲ್ಲಪ್ಪ ಬಣವಿ ವೇದಿಕೆಯಲ್ಲಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ. ಬೆಣಕಲ್ ಸ್ವಾಗತಿಸಿದರು. ಬಸವರಾಜ ಮುಳ್ಳಾಳ ನಿರೂಪಿಸಿದರು. ಶಿವು ಭಜಂತ್ರಿ ವಂದಿಸಿದರು.

ಸಂಘದ ಹಿರಿಯ ಸದಸ್ಯ ಅಜ್ಜಣ್ಣ ಪಾಟೀಲ ಮಾತನಾಡಿ, ಮಾರುತಿ ನಗರದ ಜನರ ಅನುಕೂಲಕ್ಕಾಗಿಯೇ ಕಳೆದ 4 ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗಳು ನಮ್ಮ ಸಂಘಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡಿದ್ದರು. ಆದರೆ ಆಹಾರ ಇಲಾಖೆಯ ಅಧಿಕಾರಿಗಳ ನಿಷ್ಕಾಳಜಿಯಿಂದ ಇಲ್ಲಿಯವರೆಗೂ ಮುಂದೂಡುತ್ತಾ ಬಂದಿದ್ದು ವಿಷಾದನೀಯ. ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಗ್ರಾಮದ ಜನರ ಕುಂದುಕೊರತೆಗಳ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ವಿ.ವಿ ಬ್ಲೂ ಆಗಿ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ರೇಖಾ ಗೋಕಾವಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಮಹಿಳಾ ಖೋಖೋ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.

ಏಪ್ರಿಲ್ 4ರಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಂತರ ವಿಶ್ವವಿದ್ಯಾಲಯಗಳ ದಕ್ಷಿಣ ವಲಯ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾನೂನು ಹಾಗೂ ಸಂಸದಿ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಾಚಾರ್ಯರು ಆರ್.ಎಂ. ಕಲ್ಲನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!