Home Blog Page 48

ಹೊಸ ಕನಸುಗಳೊಂದಿಗೆ ಶಾಲೆಯತ್ತ ಮಕ್ಕಳ ಹೆಜ್ಜೆ

“ವಿದ್ಯೆಯೇ ಬದುಕಿನ ಬೆಳಕು” ಎಂಬ ಮಾತು ಪ್ರತಿಯೊಬ್ಬರ ಜೀವನದಲ್ಲಿಯೂ ಸತ್ಯವಾಗಿದೆ. ಶಿಕ್ಷಣವು ಮಕ್ಕಳ ಬದುಕಿಗೆ ದಾರಿ ತೋರಿಸುವ ಮಹಾಶಕ್ತಿ. ಅದು ಕೇವಲ ಓದು-ಬರಹ ಕಲಿಸುವುದಲ್ಲ; ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿ ಸಮಾಜದಲ್ಲಿ ಗೌರವದಿಂದ ಬದುಕಲು ಸಹಾಯ ಮಾಡುತ್ತದೆ. ಈ ಶಿಕ್ಷಣದ ಮೊದಲ ಹೆಜ್ಜೆ ಶಾಲೆಯಲ್ಲಿಯೇ ಆರಂಭವಾಗುತ್ತದೆ. ಆದ್ದರಿಂದ ಶಾಲೆ ಎನ್ನುವುದು ಕೇವಲ ಕಟ್ಟಡವಲ್ಲ, ಅದು ಮಕ್ಕಳ ಕನಸುಗಳು ಅರಳುವ ತೋಟ, ಜ್ಞಾನ ಬೆಳಗುವ ನಂದಾದೀಪ ಹಾಗೂ ಉತ್ತಮ ಭವಿಷ್ಯವನ್ನು ನಿರ್ಮಿಸುವ ಪವಿತ್ರ ಸ್ಥಳವಾಗಿದೆ.
ಎರಡು ತಿಂಗಳ ಬೇಸಿಗೆ ರಜೆಯನ್ನು ಸಂತೋಷದಿಂದ ಕಳೆಯುವ ಮಕ್ಕಳು ಹೊಸ ಉತ್ಸಾಹ, ಹೊಸ ನಿರೀಕ್ಷೆ ಮತ್ತು ಹೊಸ ಕನಸುಗಳೊಂದಿಗೆ ಮತ್ತೆ ಶಾಲೆಯತ್ತ ಹೆಜ್ಜೆ ಇಡುವ ದಿನವೇ “ಶಾಲಾ ಪ್ರಾರಂಭೋತ್ಸವ”. ಈ ದಿನ ಮಕ್ಕಳ ಪಾಲಿಗೆ ಹಬ್ಬದ ಸಂಭ್ರಮವನ್ನು ಉಂಟುಮಾಡುತ್ತದೆ. ಸ್ನೇಹಿತರನ್ನು ಮತ್ತೆ ಭೇಟಿಯಾಗುವ ಸಂತೋಷ, ಹೊಸ ಪಠ್ಯಪುಸ್ತಕಗಳ ಪರಿಮಳ, ಹೊಸ ತರಗತಿ, ಹೊಸ ಶಿಕ್ಷಕರು ಮತ್ತು ಹೊಸ ಪಾಠಗಳು ಮಕ್ಕಳ ಮನದಲ್ಲಿ ವಿಶೇಷ ಉಲ್ಲಾಸ ಮೂಡಿಸುತ್ತವೆ. ಶಾಲಾ ಪ್ರಾರಂಭೋತ್ಸವವು ಕೇವಲ ಒಂದು ಕಾರ್ಯಕ್ರಮವಲ್ಲ; ಅದು ಹೊಸ ಶೈಕ್ಷಣಿಕ ವರ್ಷದ ಭರವಸೆಯ ಆರಂಭವಾಗಿದೆ.
ತಾಯಿ ಮಕ್ಕಳಿಗೆ ಜನ್ಮ ನೀಡಿದರೆ, ಶಾಲೆ ಅವರಿಗೆ ಉತ್ತಮ ಸಂಸ್ಕಾರ ಮತ್ತು ಬದುಕಿನ ದಾರಿಯನ್ನು ತೋರಿಸುತ್ತದೆ. ಮನೆಯ ನಂತರ ಮಕ್ಕಳು ಹೆಚ್ಚು ಸಮಯ ಕಳೆಯುವ ಸ್ಥಳವೇ ಶಾಲೆ. ಅಲ್ಲಿ ಮಕ್ಕಳು ಕೇವಲ ಓದು-ಬರಹವಲ್ಲದೆ, ಬದುಕನ್ನು ಹೇಗೆ ನಡೆಸಬೇಕು ಎಂಬುದನ್ನೂ ಕಲಿಯುತ್ತಾರೆ.
ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಜ್ಞಾನದ ಜೊತೆಗೆ ಶಿಸ್ತು, ಸಂಸ್ಕಾರ, ಗೌರವ, ಸಹನೆ ಮತ್ತು ಸಹಕಾರದಂತಹ ಮೌಲ್ಯಗಳು ಬೆಳೆದು ಬರುತ್ತವೆ. ಸ್ನೇಹದ ಮಹತ್ವ ತಿಳಿಯುತ್ತದೆ. ಹಿರಿಯರನ್ನು ಗೌರವಿಸುವ ಮನೋಭಾವ ಮೂಡುತ್ತದೆ. ಒಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಶಾಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯಲ್ಲಿ ಕಲಿತ ಒಳ್ಳೆಯ ಗುಣಗಳು ಜೀವನಪೂರ್ತಿ ಜೊತೆಯಾಗಿರುತ್ತವೆ.
ಶಾಲಾ ಪ್ರಾರಂಭೋತ್ಸವದ ದಿನ ಶಾಲಾ ಆವರಣವು ಬಣ್ಣಬಣ್ಣದ ತೋರಣಗಳು, ಹೂವಿನ ಅಲಂಕಾರ, ಸ್ವಾಗತ ಫಲಕಗಳು ಮತ್ತು ಮಕ್ಕಳ ನಗುಮುಖಗಳಿಂದ ಕಂಗೊಳಿಸುತ್ತಿರುತ್ತದೆ. ಪೋಷಣ್ ಅಭಿಯಾನದಡಿ ಬಿಸಿಯೂಟ, ಹಾಲು, ಮೊಟ್ಟೆ ಹಾಗೂ ಬಾಳೆಹಣ್ಣುಗಳ ವಿತರಣೆ ಮಕ್ಕಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಪುಟ್ಟ ಮಕ್ಕಳು ಹೊಸ ಉಡುಪು ಧರಿಸಿ, ಹೊಸ ಬ್ಯಾಗ್ ಹೊತ್ತು ಶಾಲೆಗೆ ಬರುತ್ತಾರೆ. ಕೆಲವರು ಸಂತೋಷದಿಂದ ಓಡಾಡುತ್ತಿದ್ದರೆ, ಇನ್ನು ಕೆಲವರು ಹೊಸ ಶಾಲೆ ಎಂಬ ಭಯದಿಂದ ತಾಯಿಯ ಕೈ ಹಿಡಿದು ನಿಂತು ಅಳುತ್ತಾರೆ. ಅಂತಹ ಮಕ್ಕಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡಾಗ ಅವರ ಭಯ ದೂರವಾಗಿ ಆತ್ಮವಿಶ್ವಾಸ ಮೂಡುತ್ತದೆ.
ಪ್ರಾರ್ಥನೆ, ನಾಡಗೀತೆ, ಸ್ವಾಗತ ಭಾಷಣ, ಅತಿಥಿಗಳ ಸಂದೇಶ, ಪಠ್ಯಪುಸ್ತಕ ವಿತರಣೆ, ಸಿಹಿ ವಿತರಣೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ ಹಾಗೂ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುತ್ತವೆ.
ಕಲಿಕೆ ಎನ್ನುವುದು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸಲು ಮಾತ್ರವಲ್ಲ; ಅದು ಬದುಕನ್ನು ಸುಂದರಗೊಳಿಸುವ ಶಕ್ತಿ. ಶಿಕ್ಷಣವಿಲ್ಲದ ಜೀವನ ಕತ್ತಲೆಯಂತಿದ್ದರೆ, ಶಿಕ್ಷಣವು ದಾರಿದೀಪದಂತಿದೆ.
ಕಲಿಕೆಯ ಮೂಲಕ ಜ್ಞಾನ ಹೆಚ್ಚುತ್ತದೆ, ಯೋಚನಾ ಶಕ್ತಿ ಬೆಳೆಯುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬರುತ್ತದೆ. ರೈತನಿಗೆ ಕೃಷಿ ಜ್ಞಾನ, ವೈದ್ಯನಿಗೆ ವೈದ್ಯಕೀಯ ಜ್ಞಾನ, ಶಿಕ್ಷಕನಿಗೆ ಬೋಧನಾ ಜ್ಞಾನ ಅಗತ್ಯವಿರುವಂತೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ.
ಶಾಲೆಯಲ್ಲಿ ಪುಸ್ತಕದ ಪಾಠ ಮಾತ್ರ ಕಲಿಯುವುದು ಸಾಕಾಗುವುದಿಲ್ಲ. ಶಿಸ್ತು, ಗೌರವ, ಸ್ವಚ್ಛತೆ, ಸಹಕಾರ ಮತ್ತು ಪರಿಸರ ಕಾಳಜಿ ಮುಂತಾದ ಮೌಲ್ಯಗಳನ್ನು ಮಕ್ಕಳು ಕಲಿಯಬೇಕು.
ಹಿರಿಯರನ್ನು ಗೌರವಿಸುವುದು, ತಂದೆ-ತಾಯಿ ಹಾಗೂ ಗುರುಗಳಿಗೆ ನಮಸ್ಕರಿಸುವುದು, ಸ್ನೇಹಿತರೊಂದಿಗೆ ಪ್ರೀತಿಯಿಂದ ವರ್ತಿಸುವುದು ಉತ್ತಮ ಸಂಸ್ಕಾರದ ಲಕ್ಷಣಗಳು. ದೇಶಪ್ರೇಮ ಮತ್ತು ಮಾನವೀಯತೆ ಕೂಡ ಮಕ್ಕಳಲ್ಲಿ ಬೆಳೆಯಬೇಕು. ಬಡವರಿಗೆ ಸಹಾಯ ಮಾಡುವುದು, ಸತ್ಯವಾಗಿ ಬದುಕುವುದು ಮತ್ತು ಪ್ರಾಣಿಗಳ ಮೇಲೆ ದಯೆ ತೋರಿಸುವುದು ಜೀವನದ ಮಹತ್ವದ ಮೌಲ್ಯಗಳಾಗಿವೆ.
ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಚಟುವಟಿಕೆಗಳು ಮಕ್ಕಳಲ್ಲಿ ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ.
“ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ” ಎಂದು ನಮ್ಮ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ತಾಯಿ ಮಕ್ಕಳಿಗೆ ಜೀವ ನೀಡಿದರೆ, ಗುರುಗಳು ಬದುಕಿನ ದಾರಿಯನ್ನು ತೋರಿಸುತ್ತಾರೆ.
ಶಿಕ್ಷಕರು ಮಕ್ಕಳಿಗೆ ಜ್ಞಾನ ನೀಡುತ್ತಾರೆ, ತಪ್ಪುಗಳನ್ನು ತಿದ್ದುತ್ತಾರೆ ಮತ್ತು ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಗುರುಗಳನ್ನು ಗೌರವದಿಂದ ಕಾಣಬೇಕು. ವಿನಯ ಮತ್ತು ಗೌರವ ವಿದ್ಯಾರ್ಥಿಯ ನಿಜವಾದ ಆಭರಣಗಳಾಗಬೇಕು.
ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸ್ನೇಹಿತರು ಸಿಗುತ್ತಾರೆ. ಒಳ್ಳೆಯ ಸ್ನೇಹಿತನು ಬದುಕಿನಲ್ಲಿ ಪ್ರೇರಣೆ ನೀಡುತ್ತಾನೆ. ಸ್ನೇಹಿತರೊಂದಿಗೆ ಪ್ರೀತಿಯಿಂದ ಇರಬೇಕು, ಜಗಳ, ಹಗೆ ಮತ್ತು ದ್ವೇಷದಿಂದ ದೂರ ಇರಬೇಕು ಎಂಬ ಪಾಠವೂ ಶಾಲೆಯಲ್ಲಿಯೇ ಸಿಗುತ್ತದೆ.
ಪುಸ್ತಕಗಳು ಜ್ಞಾನದ ಭಂಡಾರ. ಕಥೆಗಳು, ಜೀವನಚರಿತ್ರೆಗಳು ಮತ್ತು ವಿಜ್ಞಾನ ಪುಸ್ತಕಗಳು ಮಕ್ಕಳ ಯೋಚನೆಗೆ ಹೊಸ ದಿಕ್ಕು ನೀಡುತ್ತವೆ. ಮೊಬೈಲ್ ಮತ್ತು ಟಿವಿಯಲ್ಲಿ ಸಮಯ ಕಳೆಯುವುದಕ್ಕಿಂತ ಪುಸ್ತಕ ಓದುವುದು ಅತ್ಯುತ್ತಮ ಹವ್ಯಾಸವಾಗಿದೆ.
ಶಾಲೆಯಲ್ಲಿ ಓದಿನ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಕ್ರೀಡೆ ಆರೋಗ್ಯ ಕಾಪಾಡುವುದರ ಜೊತೆಗೆ ತಂಡಭಾವನೆ ಬೆಳೆಸುತ್ತದೆ. ಹಾಡು, ನೃತ್ಯ, ಭಾಷಣ, ಕವನ ಮತ್ತು ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಹೊರತರುತ್ತವೆ.
ಮಕ್ಕಳ ಶಿಕ್ಷಣದಲ್ಲಿ ತಂದೆ-ತಾಯಿಯರ ಪಾತ್ರ ಅತ್ಯಂತ ಮುಖ್ಯವಾಗಿದೆ. ಮಕ್ಕಳು ಶಾಲೆಗೆ ನಿಯಮಿತವಾಗಿ ಹೋಗುವಂತೆ ನೋಡಿಕೊಳ್ಳಬೇಕು ಮತ್ತು ಓದಿಗೆ ಪ್ರೋತ್ಸಾಹ ನೀಡಬೇಕು.
ಮಕ್ಕಳ ಮುಂದೆ ಕೆಟ್ಟ ಮಾತು, ಜಗಳ ಅಥವಾ ಸುಳ್ಳು ಹೇಳಬಾರದು. ಏಕೆಂದರೆ ಮಕ್ಕಳು ದೊಡ್ಡವರನ್ನು ನೋಡಿ ಅನುಕರಿಸುತ್ತಾರೆ.
ಒಳ್ಳೆಯ ವಿದ್ಯಾರ್ಥಿಯು ಸಮಯಪಾಲನೆ ಮಾಡುತ್ತಾನೆ, ಸತ್ಯ ಹೇಳುತ್ತಾನೆ, ಗುರುಗಳನ್ನು ಗೌರವಿಸುತ್ತಾನೆ, ಪರಿಶ್ರಮದಿಂದ ಓದುತ್ತಾನೆ ಮತ್ತು ಸಹಾಯ ಮಾಡುವ ಮನಸ್ಸು ಹೊಂದಿರುತ್ತಾನೆ.
ವಿದ್ಯಾರ್ಥಿ ಎಂದರೆ ಕೇವಲ ಹೆಚ್ಚು ಅಂಕ ಗಳಿಸುವವನಲ್ಲ, ಉತ್ತಮ ನಡತೆ ಮತ್ತು ಶಿಕ್ಷಕರಿಗೆ ಗೌರವ ಕೊಡುವವನೇ ನಿಜವಾದ ವಿದ್ಯಾರ್ಥಿ.
ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಹಸಿರು. ನಮ್ಮ ನಾಡಿನ ಶಾಲಾ-ಕಾಲೇಜುಗಳಲ್ಲಿ ಕನ್ನಡದ ಕಂಪನ್ನು ಪಸರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
ಕನ್ನಡ ಶಾಲೆಗಳು ಸದೃಢವಾದರೆ ಮಾತ್ರ ನಮ್ಮ ಭಾಷೆಯ ಬೇರುಗಳು ಗಟ್ಟಿಯಾಗುತ್ತವೆ. ನಮ್ಮ ಮಕ್ಕಳು ಕನ್ನಡದ ಅಕ್ಷರಗಳೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿಯಲಿ, ಮಾತೃಭಾಷೆಯ ಹೆಮ್ಮೆಯನ್ನು ಸಾರಲಿ.
ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಸಂಕುಚಿತ ಮನೋಭಾವವಲ್ಲ; ಅದು ನಮ್ಮ ಮೂಲವನ್ನು, ನಮ್ಮ ಅಸ್ಮಿತೆಯನ್ನು ಪ್ರೀತಿಸುವ ಹೆಮ್ಮೆಯ ಸಂಕೇತ. ಸರ್ಕಾರ, ಶಿಕ್ಷಕರು, ಪೋಷಕರು ಮತ್ತು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿದರೆ ಕನ್ನಡ ಶಾಲೆಗಳು ಜ್ಞಾನದ ದೇಗುಲಗಳಾಗಿ ಮರುಜನ್ಮ ಪಡೆಯುತ್ತವೆ.
ಈ ಶೈಕ್ಷಣಿಕ ವರ್ಷವು ಕನ್ನಡದ ಜ್ಯೋತಿಯನ್ನು ಎಲ್ಲೆಡೆ ಬೆಳಗಿಸಲಿ.
ಶಾಲಾ ಪ್ರಾರಂಭೋತ್ಸವವು ಕೇವಲ ಶಾಲೆ ಆರಂಭವಾಗುವ ದಿನವಲ್ಲ; ಅದು ಹೊಸ ಕನಸುಗಳ ಹಬ್ಬವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯನ್ನು ಪ್ರೀತಿಸಬೇಕು. ಕಲಿಕೆಯನ್ನು ಹೊರೆ ಎಂದು ಭಾವಿಸದೆ, ಜೀವನದ ಬೆಳಕು ಎಂದು ಅರ್ಥಮಾಡಿಕೊಳ್ಳಬೇಕು.
“ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು” ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಪ್ರತಿಯೊಂದು ಮಗು ಉತ್ತಮ ಶಿಕ್ಷಣ ಪಡೆದು ದೇಶದ ಹೆಮ್ಮೆಯಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.
– ಎಸ್.ಕೆ. ಆಡಿನ
ಶಿಕ್ಷಕರು, ಹೊಳೆಆಲೂರು

ಹಿಂದೂ ಸಮಾವೇಶಕ್ಕೆ ತೋಂಟದಾರ್ಯ ಶ್ರೀಗಳಿಗೆ ಆಹ್ವಾನ

ವಿಜಯಸಾಕ್ಷಿ ಸುದ್ದಿ, ಗದಗ: ಗದಗದಲ್ಲಿ ವಿವಿಧ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಮೇ 31ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅವರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದರು.
ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ ಕಾರ್ಯಕರ್ತರು ಸಮಾವೇಶದ ಉದ್ದೇಶ ಹಾಗೂ ಕಾರ್ಯಕ್ರಮದ ಕುರಿತು ಶ್ರೀಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಡಾ. ತೋಂಟದ ಸಿದ್ಧರಾಮ ಶ್ರೀಗಳು, ಮೇ 30ರಿಂದ ಎರಡು ದಿನಗಳ ಕಾಲ ಪೂರ್ವನಿಯೋಜಿತ ಕಾರ್ಯಕ್ರಮಗಳಿರುವುದರಿಂದ ಸಮಾವೇಶದಲ್ಲಿ ಭಾಗವಹಿಸಲು ಅನಾನುಕೂಲವಾಗುತ್ತಿದೆ ಎಂದು ತಿಳಿಸಿದರು. ಜೊತೆಗೆ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಯಶಸ್ವಿಯಾಗಿ ನೆರವೇರಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಅರವಿಂದ ಹುಲ್ಲೂರ, ಉಡಚಪ್ಪ ಹಳ್ಳಿಕೇರಿ, ಶ್ರೀನಿವಾಸ ಹುಬ್ಬಳ್ಳಿ, ಶ್ರೀಧರ ಕುಲಕರ್ಣಿ, ಮಾರುತಿ ಪವಾರ, ಡಾ. ಗಣೇಶ ಸುಲ್ತಾನಪುರ, ಶಿವಯೋಗಿ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೈಬರ್ ಅಪರಾಧ ತಡೆಗೆ ಗ್ರಾಮೀಣ ಪೊಲೀಸರಿಂದ ಜಾಗೃತಿ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿನ ಮಾರುತಿ ದೇವಸ್ಥಾನದ ಆವರಣದಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಸೈಬರ್ ಅಪರಾಧ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಲಕ್ಕುಂಡಿ ಬೀಟ್ ಪೊಲೀಸ್ ಪೇದೆ ಪ್ರವೀಣ ಶಾಂತಪ್ಪನವರ ರೈತರು ಹಾಗೂ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.
ರೈತರು ಪರಿಚಯವಿಲ್ಲದ ಖರೀದಿದಾರರಿಗೆ ಕೃಷಿ ದಾಸ್ತಾನು ಮಾರಬಾರದು. ಸರ್ಕಾರದ ಮಾನ್ಯತೆ ಹೊಂದಿರುವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಸರಿಯಾದ ಬೆಲೆ ಪಡೆಯಬೇಕು ಎಂದು ಸಲಹೆ ನೀಡಿದರು.
ಆನ್‌ಲೈನ್ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆ ವಿವರಗಳು ಹಾಗೂ ಮೊಬೈಲ್‌ಗೆ ಬರುವ OTP ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಸಿದರು. ಮೋಸಕ್ಕೊಳಗಾದರೆ ತಕ್ಷಣವೇ 1930 ಹಾಗೂ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.
ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಬಳಸಬೇಕು. ಟ್ರ್ಯಾಕ್ಟರ್ ಟ್ರೈಲರ್‌ಗಳಿಗೆ ರೇಡಿಯಂ ಅಳವಡಿಸುವ ಮೂಲಕ ಅಪಘಾತ ತಡೆಗಟ್ಟಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ.ಎಸ್.ಐ. ವಿ.ಎಸ್. ಭಿಕ್ಷಾವತಿಮಠ ಉಪಸ್ಥಿತರಿದ್ದರು.

ತ್ಯಾಗದ ಮೌಲ್ಯ ಸಾರಿದ ಪವಿತ್ರ ಬಕ್ರೀದ್

ವಿಜಯಸಾಕ್ಷಿ ಸುದ್ದಿ, ಗದಗ: ತ್ಯಾಗ, ಬಲಿದಾನ, ದಾನ-ಧರ್ಮ ಮತ್ತು ಸಹೋದರತ್ವದ ಮೌಲ್ಯಗಳನ್ನು ಸಾರುವ ಪವಿತ್ರ ಈದ್-ಉಲ್-ಅಝ್ಹಾ (ಬಕ್ರೀದ್) ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಗುರುವಾರ ಬೆಳಿಗ್ಗೆಯೇ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಜಿಲ್ಲೆಯ ಗದಗ, ಲಕ್ಷ್ಮೇಶ್ವರ, ರೋಣ, ಶಿರಹಟ್ಟಿ, ಮುಂಡರಗಿ, ನರಗುಂದ, ಗಜೇಂದ್ರಗಡ, ನರೇಗಲ್ಲ, ಡಂಬಳ, ಲಕ್ಕುಂಡಿ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಹಬ್ಬ ಆಚರಿಸಿದರು. ಈದ್ಗಾ ಮೈದಾನಗಳಲ್ಲಿ ಹಾಗೂ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೇಶದಲ್ಲಿ ಸುಖ, ಶಾಂತಿ, ಸೌಹಾರ್ದತೆ, ಉತ್ತಮ ಮಳೆ ಹಾಗೂ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ರೋಣ ತಾಲೂಕಿನ ಮಾರನಬಸರಿ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದ ಮೌಲಾನ ಮಲೀಕ ಮಾತನಾಡಿ, ಧಾರ್ಮಿಕ ಚಿಂತನೆಯ ಜೊತೆಗೆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೂ ಮುಸ್ಲಿಂ ಸಮುದಾಯ ಹೆಚ್ಚಿನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಅಕ್ಷರಜ್ಞಾನ ನೀಡುವುದು ಧರ್ಮದ ಭಾಗವಾಗಿದೆ. ಇಸ್ಲಾಂ ಧರ್ಮವು ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದು, ಮಕ್ಕಳು ವಿದ್ಯಾವಂತರಾದರೆ ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಕೆಟ್ಟ ಆಲೋಚನೆಗಳು, ದುಶ್ಚಟಗಳು ಮತ್ತು ಮೋಸ-ವಂಚನೆಗಳಿಂದ ದೂರವಿದ್ದು ಉತ್ತಮ ಮೌಲ್ಯದ ಬದುಕು ಕಟ್ಟಿಕೊಳ್ಳಬೇಕು. ಯುವಕರು ಸಮಾಜಕ್ಕೆ ಉಪಯುಕ್ತ ನಾಗರಿಕರಾಗುವಂತೆ ಶಪಥ ಮಾಡಬೇಕು ಎಂದು ತಿಳಿಸಿದರು.
ರೋಣದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ
ರೋಣ ಪಟ್ಟಣದ ಈದ್ಗಾ ಮೈದಾನದಲ್ಲಿ ಮಳೆ ನೀರು ನಿಂತ ಹಿನ್ನೆಲೆ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ನಿಡಗುಂದಿ, ಕಳಕಾಪುರ, ಇಟಗಿ, ಮುಗುಳಿ, ಕೊತಬಾಳ, ಹಿರೇಹಾಳ, ಸವಡಿ, ಬೆಳವಣಕಿ, ಅಬ್ಬಿಗೇರಿ, ಜಕ್ಕಲಿ, ಬಸರಕೊಡ, ಯರೇಬೇಲೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭಕ್ತಿಭಾವದಿಂದ ಬಕ್ರೀದ್ ಆಚರಣೆ ನಡೆಯಿತು.
ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಣೆ
ತ್ಯಾಗ, ಬಲಿದಾನ ಹಾಗೂ ಸಮಾನತೆಯ ಸಂದೇಶ ಸಾರುವ ಪವಿತ್ರ ಈದ್-ಉಲ್-ಅಝ್ಹಾ (ಬಕ್ರೀದ್) ಹಬ್ಬವನ್ನು ಲಕ್ಷ್ಮೇಶ್ವರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆ ಹೊಸ ಉಡುಪು ಧರಿಸಿದ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ವಿಶೇಷ ನಮಾಜ್ ಸಲ್ಲಿಸಿದರು. ಬಳಿಕ ಪಟ್ಟಣದ ಮುಕ್ತಿಮಂದಿರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೇಶದ ಸುಖ, ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಮೌಲಾನಾ ಹಾಪೀಜ್ ಶಕೀಲ್ ಧರ್ಮೋಪದೇಶ ನೀಡಿ, ಎಲ್ಲ ಧರ್ಮಗಳ ಸಾರ ಮನುಷ್ಯತ್ವವೇ ಆಗಿದೆ ಎಂದು ಹೇಳಿದರು.
ಸಮಾಜದಲ್ಲಿನ ಬಡವರು, ಅಶಕ್ತರು ಹಾಗೂ ವಯೋವೃದ್ಧರಿಗೆ ಕೈಲಾದಷ್ಟು ಸಹಾಯ-ಸಹಕಾರ ನೀಡಬೇಕು. ಜಾತಿ-ಭೇದ ಮರೆತು ಎಲ್ಲ ಧರ್ಮೀಯರೊಂದಿಗೆ ಪ್ರೀತಿ, ವಿಶ್ವಾಸ, ಸೌಹಾರ್ದತೆ ಮತ್ತು ಸಮರ್ಪಣಾ ಮನೋಭಾವದಿಂದ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಪ್ರಾರ್ಥನೆ, ವ್ರತಾಚರಣೆ ಮತ್ತು ಧಾರ್ಮಿಕ ಮೌಲ್ಯಗಳು ವ್ಯಕ್ತಿಯನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಜಗತ್ತಿನ ಶಾಂತಿ ಮತ್ತು ನೆಮ್ಮದಿಗಾಗಿ ಎಲ್ಲರೂ ಅಲ್ಲಾನನ್ನು ಪ್ರಾರ್ಥಿಸೋಣ ಎಂದು ತಿಳಿಸಿದರು.
ಈ ವೇಳೆ ಅಂಜುಮನ್ ಹಾಗೂ ಆಸಾರ ಕಮಿಟಿಯ ಪ್ರಮುಖರು, ಸಮಾಜದ ಹಿರಿಯರು, ಯುವಕರು ಮತ್ತು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಬಳಿಕ ಪರಸ್ಪರ ಆಲಿಂಗಿಸಿಕೊಂಡು ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪಟ್ಟಣ ಸೇರಿದಂತೆ ತಾಲೂಕಿನ ಮಂಜಲಾಪುರ, ಶಿಗ್ಲಿ, ಹುಲ್ಲೂರ, ಸೂರಣಗಿ, ಬಾಲೇಹೊಸೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಮುಸ್ಲಿಂ ಬಾಂಧವರು ಭಕ್ತಿಭಾವದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಲಕ್ಕುಂಡಿಯಲ್ಲಿ ಸಾಮೂಹಿಕ ಪ್ರಾರ್ಥನೆ
ಲಕ್ಕುಂಡಿಯಲ್ಲಿ ಮುಸ್ಲಿಂ ಬಾಂಧವರು ಹಿರೇಮಸೀದಿಯಿಂದ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಾಫೀಜ್ ಸಲೀಂ ಅವರು ತ್ಯಾಗ, ದಾನ ಹಾಗೂ ಧರ್ಮದ ಮಹತ್ವದ ಕುರಿತು ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಜಮಾತ್ (ಆಡಳಿತ) ಅಂಜುಮನ್-ಎ-ಇಸ್ಲಾಂ ಕಮಿಟಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ರಿಯಾಜ್ ಕದಡಿ, ರಾಜಾಭಕ್ಷಿ ಮಾಲ್ದಾರ, ಮಿರಾಜಖಾನ್ ಮಸೂತಿಮನಿ ಹಾಗೂ ಜಂದಿಸಾಬ ಗುಂಗಳಕರ್ ಅವರನ್ನು ಸನ್ಮಾನಿಸಲಾಯಿತು.
ಡಂಬಳದಲ್ಲಿ ರೈತರ ಒಳಿತಿಗೆ ವಿಶೇಷ ದುಆ
ಡಂಬಳ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಧರ್ಮಗುರು ಖಾದರಸಾಬ ಮುಲ್ಲಾ ಧರ್ಮಗ್ರಂಥ ಪಠಿಸಿ ಧರ್ಮ ಸಂದೇಶ ನೀಡಿದರು.
ತ್ಯಾಗ, ದಾನ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಿಸಬೇಕು ಎಂದು ಕರೆ ನೀಡಿದರು.
ಉತ್ತಮ ಮಳೆ, ರೈತರಿಗೆ ಸಮೃದ್ಧ ಬೆಳೆ, ಯುವಕರಿಗೆ ಆತ್ಮಸ್ಥೈರ್ಯ ಹಾಗೂ ಕಾರ್ಮಿಕರಿಗೆ ಉತ್ತಮ ಆರೋಗ್ಯ ಕರುಣಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನರೇಗಲ್ಲದಲ್ಲಿ ಹಬ್ಬದ ಭಕ್ತಿ ವೈಭವ
ನರೇಗಲ್ಲ ಪಟ್ಟಣ ಸೇರಿದಂತೆ ಅಬ್ಬಿಗೇರಿ, ಕೊಚಲಾಪುರ, ತೋಟಗಂಟಿ, ಜಕ್ಕಲಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಹಾಲಕೆರೆ, ಹಾಗೂ ನಿಡಗುಂದಿಕೊಪ್ಪ ಸೇರಿದಂತೆ ಹಲವೆಡೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಜರತ್ ಮಂಜೂರ ಹುಸೇನ ಶಾವಲಿ, ಫಕ್ರುಸಾಬ್ ರೇವಡಿಗಾರ, ಎ.ಎ. ನವಲಗುಂದ, ಅಲ್ಲಾಬಕ್ಷಿ ನದಾಫ್, ಖಾದರಬಾಷಾ ಹೂಲಗೇರಿ, ಕಾಸಿಂ ಗಡಾದ, ನಜೀರ್‌ಸಾಬ್ ಇಟಗಿ ಸೇರಿದಂತೆ ಅನೇಕ ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.
“ಬಕ್ರೀದ್ ಹಬ್ಬವು ಕೇವಲ ಆಚರಣೆ ಅಲ್ಲ, ಅದು ತ್ಯಾಗ, ದಾನ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಪವಿತ್ರ ಸಂದೇಶವಾಗಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಸಮಾಜಕ್ಕೆ ಮಾದರಿಯಾಗಬೇಕು”
ಮೌಲಾನ ಮಲೀಕ
ಶಿಕ್ಷಣ ಮತ್ತು ಸಂಸ್ಕಾರಕ್ಕೆ ಆದ್ಯತೆ
ಬಕ್ರೀದ್ ಆಚರಣೆಯಲ್ಲಿ ವಿವಿಧ ಧರ್ಮಗುರುಗಳು ಶಿಕ್ಷಣ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ವಿಶೇಷವಾಗಿ ಒತ್ತಿ ಹೇಳಿದರು. ಇಸ್ಲಾಂ ಧರ್ಮದಲ್ಲಿ ಶಿಕ್ಷಣ, ದಾನ, ಪ್ರಾಮಾಣಿಕ ದುಡಿಮೆ ಹಾಗೂ ಮಾನವೀಯ ಮೌಲ್ಯಗಳಿಗೆ ವಿಶೇಷ ಸ್ಥಾನವಿದ್ದು, ಯುವಪೀಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಲಾಯಿತು.
 “ಬಕ್ರೀದ್ ಹಬ್ಬವು ತ್ಯಾಗ, ದಾನ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ”
ಹಾಪೀಜ್ ಶಕೀಲ್, ಮೌಲಾನಾ

ತ್ಯಾಗ–ಸೌಹಾರ್ದದ ಬಕ್ರೀದ್ ಆಚರಣೆ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ತ್ಯಾಗ ಮತ್ತು ಬಲಿದಾನದ ಸಂದೇಶ ಸಾರುವ ಈ ಪವಿತ್ರ ಹಬ್ಬದ ಅಂಗವಾಗಿ ಮುಂಜಾನೆಯೇ ಮುಸ್ಲಿಂ ಬಾಂಧವರು ಹೊಸ ಉಡುಪು ಧರಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಪಟ್ಟಣದ ಬಲಹುಣಸಿ ರಸ್ತೆ ಹಾಗೂ ಹಳೆ ಊರಿನ ತಂಬ್ರಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ವಿಶೇಷ ನಮಾಜ್ ಸಲ್ಲಿಸಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನೆಲ್ಲು ಇಸ್ಮಾಯಿಲ್ ಸಾಬ್, ಕೆಜಿಎನ್ ಅಲ್ಲಾಭಕ್ಷಿ, ಯು. ಬಾಬುಬಲಿ, ಇಂತಿಯಾಜ್, ಸಿಕಂದರ್ ಜಂದಿಸಾಬ್, ರಜಾಕ್, ಶೇಕ್ ಅಹಮದ್, ಪೀರ್ ಸಾಬ್, ಜಿನ್ನಾ ಸಾಬ್, ಸಾಹುಲ್ ಸಾಬ್, ಎಣ್ಣೆ ಭಾಷಾ ಸಾಬ್, ಮೂಸ ಸಾಬ್, ದೊಡ್ಮನಿ ಇಬ್ರಾಹಿಂ, ಬಶೀರ್ ಸಾಬ್ ಹಾಗೂ ಹಿರಿಯರಾದ ಮುತ್ತ ವಲಿಗಳು ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಬಾಂಧವರು ಭಾಗವಹಿಸಿದ್ದರು.

ಅಂಬಾಭವಾನಿ ಸನ್ನಿಧಿಯಲ್ಲಿ ಭಕ್ತಿಯ ಮಹಾಸಂಗಮ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಅಧಿಕ ಮಾಸದ ಪುಣ್ಯಕಾಲದ ಅಂಗವಾಗಿ ಇಲ್ಲಿನ ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ ಹಾಗೂ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮವು ಭಕ್ತಿಭಾವದಿಂದ ಜರುಗಿತು.

ಶ್ರೀ ಜಗದಂಬಾ ದೇವಿಯ 111ನೇ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ 111 ಮುತ್ತೈದೆಯರು ಕೆಂಪು ಸೀರೆ ಧರಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಿಗೆ ಕುಂಕುಮಾರ್ಚನೆ ಸಲ್ಲಿಸಿದರು.

ಅರ್ಚಕರು ದೇವಿಯ ಸಹಸ್ರನಾಮ ಪಠಿಸುತ್ತಿದ್ದ ವೇಳೆ ಮುತ್ತೈದೆಯರು ಏಕಕಾಲದಲ್ಲಿ ಕುಂಕುಮಾರ್ಚನೆ ಸಲ್ಲಿಸಿದ ದೃಶ್ಯ ಭಕ್ತರ ಗಮನ ಸೆಳೆಯಿತು. ದೇವಸ್ಥಾನದ ಆವರಣ ಭಜನೆ, ದೇವಿಯ ನಾಮಸ್ಮರಣೆ ಹಾಗೂ ಜಯಘೋಷಗಳಿಂದ ಭಕ್ತಿಮಯ ವಾತಾವರಣದಲ್ಲಿ ಕಂಗೊಳಿಸಿತು.

ಮುಂಜಾನೆ ದೇವಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಅಲಂಕಾರ ಕಾರ್ಯಕ್ರಮಗಳು ನೆರವೇರಿದವು. ಶ್ರೀ ಅಂಬಾಭವಾನಿ ದೇವಿಗೆ ಕುಂಕುಮ ಹಾಗೂ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿದ್ದು, ದೇವಿಯ ದರ್ಶನಕ್ಕಾಗಿ ಭಕ್ತರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 111 ಮುತ್ತೈದೆಯರಿಗೆ ಶ್ರೀ ಅಂಬಾಭವಾನಿ ದೇವಿಯ ಪಂಚಲೋಹ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಯಿತು. ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

“ಅಧಿಕ ಮಾಸದಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸುತ್ತವೆ. ದೇವಿಯ ಆರಾಧನೆಯಿಂದ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ”

ಲೋಕನಾಥ ಕಬಾಡಿ, ಪಂಚ ಕಮಿಟಿ ಅಧ್ಯಕ್ಷ

ಗುಂಡಿಗಳ ಗೂಡಾದ ಪಾಲಾ–ಬದಾಮಿ ರಸ್ತೆ!

ವಿಜಯಸಾಕ್ಷಿ ಸುದ್ದಿ, ರೋಣ: ಪಾಲಾ–ಬದಾಮಿ ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಳೆಆಲೂರು ಕ್ರಾಸ್‌ನಿಂದ ಹಿರೇಹಾಳವರೆಗೆ ರಸ್ತೆಯುದ್ದಕ್ಕೂ ಭಾರೀ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪ್ರತಿದಿನ ಜೀವ ಪಣಕ್ಕಿಟ್ಟು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ಬೈಕ್ ಸವಾರರು ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ಮಳೆ ಬಂದರೆ ಕೆಸರಿನ ಕೆರೆ, ಬಿಸಿಲು ಬಂದರೆ ಧೂಳಿನ ಸುಂಟರಗಾಳಿ ಎದ್ದುಕೊಳ್ಳುತ್ತಿದ್ದು, ಶಾಲಾ ಮಕ್ಕಳು, ರೈತರು, ರೋಗಿಗಳು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ರಸ್ತೆಯುದ್ದಕ್ಕೂ ಕಿತ್ತುಹೋದ ಡಾಂಬರು, ಆಳವಾದ ಗುಂಡಿಗಳು ಮತ್ತು ಧೂಳಿನ ರಾಶಿ ಕಾಣಿಸುತ್ತಿದೆ. ಮಳೆಗಾಲದಲ್ಲಿ ರಸ್ತೆ ಕೆಸರಿನ ಹಳ್ಳವಾಗಿ ಮಾರ್ಪಡುತ್ತಿದ್ದು, ಬೇಸಿಗೆಯಲ್ಲಿ ಧೂಳಿನ ಮೋಡ ಆವರಿಸುತ್ತಿದೆ. ವಾಹನ ಸವಾರರು ರಸ್ತೆ ಮೇಲೆ ಅಲ್ಲ, ಅಪಘಾತದ ಹಾದಿಯಲ್ಲಿ ಸಂಚರಿಸುತ್ತಿರುವ ಅನುಭವ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪ್ರತಿಕ್ಷಣವೂ ಆತಂಕದಲ್ಲೇ ಓಡಾಡುವಂತಾಗಿದೆ.
ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಬಿದ್ದು ಗಾಯಗೊಳ್ಳುವ ಘಟನೆಗಳು ಹೆಚ್ಚುತ್ತಿವೆ. ಶಾಲಾ ವಾಹನಗಳು ಗುಂಡಿಗಳಲ್ಲಿ ಜಿಗಿಯುತ್ತಿದ್ದು, ಗರ್ಭಿಣಿಯರು ಆಸ್ಪತ್ರೆಗೆ ತೆರಳುವಾಗ ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಪರದಾಡುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಸಮಯಕ್ಕೆ ಆಸ್ಪತ್ರೆಗೆ ತಲುಪುವುದೇ ಕಷ್ಟಕರವಾಗಿದೆ.
ರಾಜ್ಯದ ಹೆಮ್ಮೆಯ ಪ್ರವಾಸಿ ತಾಣಗಳಾದ ಬನಶಂಕರಿ ದೇವಿ ದೇವಸ್ಥಾನ, ಚಾಲುಕ್ಯರ ದೇವಾಲಯಗಳು ಹಾಗೂ ಗುಹೆಗಳಿಗೆ ತೆರಳುವ ಸಾವಿರಾರು ಪ್ರವಾಸಿಗರು ಇದೇ ರಸ್ತೆಯಲ್ಲಿ ನರಳುತ್ತಿದ್ದಾರೆ. ಇದು ಪ್ರವಾಸಿ ಮಾರ್ಗವೇ ಅಥವಾ ಅಪಘಾತದ ಹಾದಿಯೇ ಎಂದು ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಪ್ರಶ್ನಿಸುವಂತಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ವೇದಿಕೆ ಮೇಲೆ ಭಾಷಣ ಮಾಡುವ ಸರ್ಕಾರ, ಪ್ರವಾಸಿಗರು ಸಂಚರಿಸುವ ರಸ್ತೆಯನ್ನು ಸುಧಾರಿಸಲು ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಒಂದು ಪ್ರದೇಶದ ಅಭಿವೃದ್ಧಿಯನ್ನು ಅಲ್ಲಿನ ರಸ್ತೆ ಸ್ಥಿತಿ ತೋರಿಸುತ್ತದೆ ಎನ್ನಲಾಗುತ್ತದೆ. ಆದರೆ ಗದಗ–ಪಾಲಾ–ಬದಾಮಿ ರಸ್ತೆಯ ದುಸ್ಥಿತಿ ನೋಡಿದರೆ ಅಭಿವೃದ್ಧಿಯ ಘೋಷಣೆಗಳು ಕೇವಲ ಮಾತುಗಳಾಗಿಯೇ ಉಳಿದಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಹಿಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆಗೆ ಕಳುಹಿಸಿದ್ದ ಬದಾಮಿ ಕ್ಷೇತ್ರದ ರಸ್ತೆ ಸ್ಥಿತಿಯೇ ಇಂದು ದಯನೀಯವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತದ ವಿರುದ್ಧವೂ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. “ಪ್ರವಾಸೋದ್ಯಮ ಬೆಳೆಸುವ ಮೊದಲು ರಸ್ತೆ ಉಳಿಸಿ” ಎಂಬ ಕೂಗು ಗ್ರಾಮೀಣ ಭಾಗದಲ್ಲಿ ಕೇಳಿ ಬರುತ್ತಿದೆ.
ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಬದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ವಿರುದ್ಧವೂ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ವೇಳೆ ಮಾತ್ರ ಜನರ ಮನೆ ಬಾಗಿಲಿಗೆ ಬರುವ ನಾಯಕರು, ರಸ್ತೆ ಹಾಳಾದಾಗ ಎಲ್ಲಿಗೆ ಹೋಗುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ.
ಲೋಕೋಪಯೋಗಿ ಇಲಾಖೆ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಕೋಟಿ ಕೋಟಿ ಅನುದಾನ ಬಿಡುಗಡೆಯಾದರೂ ರಸ್ತೆ ಕೆಲವೇ ತಿಂಗಳಲ್ಲಿ ಹಾಳಾಗುತ್ತಿದೆ. ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಯುತ್ತಿದೆಯೇ? ಗುತ್ತಿಗೆದಾರರು ಮತ್ತು ಅಧಿಕಾರಿಗಳ ಹೊಂದಾಣಿಕೆಯಲ್ಲಿ ಜನರ ತೆರಿಗೆ ಹಣ ಮಣ್ಣಾಗುತ್ತಿದೆಯೇ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಹೆಚ್ಚಾಗಿವೆ.
 “ಅಪಘಾತ ಸಂಭವಿಸಿದ ಬಳಿಕ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಪರಿಪಾಠ ಮುಂದುವರಿದಿದೆ. ರಸ್ತೆ ಸಂಪೂರ್ಣ ಹಾಳಾದರೂ ತಾತ್ಕಾಲಿಕ ಗುಂಡಿ ಮುಚ್ಚುವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಈಗಾದರೂ ಸರ್ಕಾರ ಎಚ್ಚೆತ್ತು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ”
ದ್ವಿಚಕ್ರ ವಾಹನ ಸವಾರರು
“ದೊಡ್ಡ ಹುದ್ದೆಗಳ ಆಸೆಯಲ್ಲಿ ರಾಜಕೀಯ ಮಾಡುವ ನಾಯಕರೇ, ಮೊದಲು ರಸ್ತೆ ಸುಧಾರಿಸಿ. ಜನರು ಕೇಳುತ್ತಿರುವುದು ಅಧಿಕಾರದ ಅಹಂಕಾರವಲ್ಲ; ಸುರಕ್ಷಿತ ರಸ್ತೆ ಮತ್ತು ಬದುಕಿನ ಭರವಸೆ. ಪ್ರತಿದಿನ ಜನರ ಜೀವ ಅಪಾಯದಲ್ಲಿದ್ದರೂ ಮೌನವಾಗಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಪರಮಾವಧಿಯಾಗಿದೆ”
 ಪ್ರಜ್ಞಾವಂತ ನಾಗರಿಕರು

ಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹಲವು ದಶಕಗಳಿಂದ ಮುಂದುವರಿದಿರುವ ಅಗಸರ ಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಜಕ್ಕಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರೈತರೊಂದಿಗೆ ದುರ್ವರ್ತನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಕಳೆದ ರವಿವಾರ ಸುರಿದ ಭಾರೀ ಮಳೆಯಿಂದ ಅಗಸರ ಹಳ್ಳ ತುಂಬಿ ಹರಿದ ಪರಿಣಾಮ ರೋಣ–ಜಕ್ಕಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ನೀರು ಸರಾಗವಾಗಿ ಹರಿಯಬೇಕಾದ ಸ್ಥಳದಲ್ಲಿ ಖಾಸಗಿ ವಿಂಡ್ ಕಂಪನಿಯವರು ತಾತ್ಕಾಲಿಕ ರಸ್ತೆ ಹಾಗೂ ಸೇತುವೆ ನಿರ್ಮಿಸಿರುವುದರಿಂದ ಮಳೆ ನೀರು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಹಲವು ಬಾರಿ ತಹಶೀಲ್ದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಯ ನೀರು ರೈತ ಶೇಖಣ್ಣ ಮೇಟಿ ಅವರ ಜಮೀನಿಗೆ ನುಗ್ಗಿ ಬೆಳೆ ಹಾನಿಯಾಗಿದ್ದರಿಂದ ಅವರು ಸೋಮವಾರ ಸ್ವಂತ ಖರ್ಚಿನಲ್ಲಿ ಜೆಸಿಬಿ ತರಿಸಿ ಅಕ್ರಮ ರಸ್ತೆ ತೆರವುಗೊಳಿಸಿದ್ದಾರೆ. ಈ ಕ್ರಮಕ್ಕೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್ ನಾಗರಾಜ ಕೆ. ಅವರು ಸಮಸ್ಯೆ ಆಲಿಸುವ ಬದಲು ರೈತರನ್ನೇ ಗದರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೇಲ್ಸೇತುವೆ ನಿರ್ಮಾಣ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂಬ ಅಧಿಕಾರಿಗಳ ಉತ್ತರಕ್ಕೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
 “ಅಗಸರ ಹಳ್ಳಕ್ಕೆ ಶಾಶ್ವತ ಸೇತುವೆ ನಿರ್ಮಾಣ ಮಾಡದಿದ್ದರೆ ರಸ್ತೆ ತಡೆ ಸೇರಿದಂತೆ ಉಗ್ರ ಹೋರಾಟ ಅನಿವಾರ್ಯ. ಚುನಾವಣೆ ಬಹಿಷ್ಕಾರಕ್ಕೂ ನಾವು ಸಿದ್ಧ”
ಎಂದು ಗ್ರಾಮಸ್ಥರು ಹೇಳಿದ್ದಾರೆ.
ರೈತ ಮುಖಂಡ ಸಿದ್ದಲಿಂಗೇಶ ಹಡಪದ ಮಾತನಾಡಿ, “ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಜನ್ಮಭೂಮಿಯಲ್ಲೇ ಮೂಲಭೂತ ಸೌಕರ್ಯಕ್ಕಾಗಿ ಜನ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಹಳ್ಳದಲ್ಲಿ ಹಿಂದೆ ವೃದ್ಧೆಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದ್ದರೂ ಆಡಳಿತ ಎಚ್ಚೆತ್ತುಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ರೈತ ಮುಖಂಡ ಶೇಖಣ್ಣ ಮೇಟಿ ಮಾತನಾಡಿ, “ವಿಂಡ್ ಕಂಪನಿಯ ತಾತ್ಕಾಲಿಕ ರಸ್ತೆ ನೀರಿನ ಹರಿವಿಗೆ ಅಡ್ಡಿಯಾಗಿದ್ದು ನಮ್ಮ ಜಮೀನುಗಳಿಗೆ ಹಾನಿಯಾಗಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಸ್ವಂತ ಖರ್ಚಿನಲ್ಲಿ ಜೆಸಿಬಿ ತರಿಸಿ ಅಕ್ರಮ ರಸ್ತೆ ತೆರವುಗೊಳಿಸಿದ್ದೇನೆ” ಎಂದು ಹೇಳಿದರು.
 “ಅಗಸರ ಹಳ್ಳದ ಸಮಸ್ಯೆ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದ ಜನ ಜೀವಭಯದಲ್ಲಿ ಸಂಚರಿಸುತ್ತಿದ್ದಾರೆ. ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈಗಾದರೂ ಮೇಲ್ಸೇತುವೆ ನಿರ್ಮಿಸದಿದ್ದರೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಸೇರಿದಂತೆ ಉಗ್ರ ಹೋರಾಟಕ್ಕೆ ಮುಂದಾಗುವುದು ಖಚಿತ”
ಸಿದ್ದಲಿಂಗೇಶ ಹಡಪದ

ಬೀಜೋಪಚಾರದಿಂದಲೇ ಉತ್ತಮ ಇಳುವರಿ ಸಾಧ್ಯ: ಐ.ಎಸ್. ಪಾಟೀಲ

ವಿಜಯಸಾಕ್ಷಿ ಸುದ್ದಿ, ರೋಣ: ಬಿತ್ತನೆ ಸಂದರ್ಭದಲ್ಲಿನ ಬೀಜೋಪಚಾರವನ್ನು ರೈತರು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಬೀಜೋಪಚಾರ ಮಾಡಿದರೆ ಬೆಳೆಗಳಿಗೆ ರೋಗ ಬಾಧೆ ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ರಿಯಾಯಿತಿ ದರದ ಮುಂಗಾರು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿರುವುದರಿಂದ ರೈತರಲ್ಲಿ ಹರ್ಷ ಮೂಡಿದೆ. ರೈತರು ಜಮೀನುಗಳನ್ನು ಹದಗೊಳಿಸಿ ರೋಹಿಣಿ ಮಳೆಯ ನಿರೀಕ್ಷೆಯಲ್ಲಿದ್ದು, ಕೃಷಿ ಇಲಾಖೆ ಸಹ ಬೀಜ ವಿತರಣೆಗೆ ಸಜ್ಜಾಗಿದೆ ಎಂದು ಹೇಳಿದರು.
ಸಾವಯವ ಗೊಬ್ಬರ ಬಳಕೆಗೆ ರೈತರು ಹೆಚ್ಚು ಒತ್ತು ನೀಡಬೇಕು. ಸಾವಯವ ಗೊಬ್ಬರದಿಂದ ಜಮೀನು ಫಲವತ್ತತೆ ಹೆಚ್ಚುವುದರ ಜೊತೆಗೆ ಉತ್ತಮ ಗುಣಮಟ್ಟದ ಬೆಳೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜೊತೆಗೆ ಬಿತ್ತನೆ ಬೀಜಗಳ ಕೊರತೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಉಪನಿರ್ದೇಶಕ ಬಿ.ಆರ್. ಪಾಲಾಕ್ಷಗೌಡ ಮಾತನಾಡಿ, ತಾಲೂಕಿನಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆ ಬಿತ್ತನೆಯಾಗುವ ನಿರೀಕ್ಷೆ ಇದೆ ಎಂದರು. ಈ ಹಿನ್ನೆಲೆಯಲ್ಲಿ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಬಾರಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು, ಜಮೀನುಗಳ ತಂಪು ಕಾಪಾಡಲು ಸಹಕಾರಿಯಾಗಿದೆ. ರೈತರು ಗದ್ದಲ ಸೃಷ್ಟಿಸದೇ ಸಮರ್ಪಕವಾಗಿ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯಚ್ಚರಗೌಡ ಗೋವಿಂದಗೌಡ್ರ, ಬಸವರಾಜ ನವಲಗುಂದ, ಶಿವಪ್ಪ ಅರಹುಣಸಿ, ಸಂಜಯ ದೊಡ್ಡಮನಿ, ಎಸ್.ಎಫ್. ತಹಶೀಲ್ದಾರ ಸೇರಿದಂತೆ ರೈತರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ವೇಳೆ ಐ.ಎಸ್. ಪಾಟೀಲರು ರೈತರಿಗೆ ಸಾಂಕೇತಿಕವಾಗಿ ಬಿತ್ತನೆ ಬೀಜ ವಿತರಿಸಿದರು.
“ಬೀಜೋಪಚಾರ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಾವಯವ ಗೊಬ್ಬರ ಬಳಕೆ ಮಾಡಿದರೆ ಜಮೀನು ಫಲವತ್ತತೆ ಉಳಿಯುತ್ತದೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳತ್ತ ಗಮನ ಹರಿಸಬೇಕು”
ಐ.ಎಸ್. ಪಾಟೀಲ
ಮಾಧ್ಯಮಗಳಿಗೆ ಮಾಹಿತಿ ಇಲ್ಲದೆ ಬೀಜ ವಿತರಣೆ!
ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ರೈತರಿಗೆ ನೇರವಾಗಿ ಸಂಬಂಧಿಸಿದ ಮಹತ್ವದ ಕಾರ್ಯಕ್ರಮವಾಗಿದ್ದರೂ, ಅದರ ಬಗ್ಗೆ ಮಾಧ್ಯಮಗಳಿಗೆ ಪೂರ್ವ ಮಾಹಿತಿ ನೀಡದೇ ಕಾರ್ಯಕ್ರಮ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ರೋಣ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವೇ ರೈತರ ಸಮ್ಮುಖದಲ್ಲಿ ಬೀಜ ವಿತರಣೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ಮಾಹಿತಿ ಹಂಚಿಕೆಯಲ್ಲಿ ಕೃಷಿ ಇಲಾಖೆ ನಿರ್ಲಕ್ಷ್ಯ ತೋರಿದೆಯೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ವಿಷಯ ಕುರಿತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಫ್. ತಹಶೀಲ್ದಾರರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಮಂತ್ರಿಗಿರಿ ಸಿಗದಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧ!

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವುದಾಗಿ ದಲಿತ ಮುಖಂಡ ಮೌನೇಶ ಹಾದಿಮನಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿ.ಎಸ್. ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರೂ ಸಚಿವ ಸ್ಥಾನ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪ್ರತಿ ಬಾರಿಯೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಪಕ್ಷದ ವರಿಷ್ಠರು ನಮ್ಮ ತಾಳ್ಮೆಯ ಹೋರಾಟಕ್ಕೆ ಕಣ್ಣು ತೆರೆಯುತ್ತಿಲ್ಲ. ಪ್ರಾಮಾಣಿಕ ಕಾರ್ಯಕರ್ತರ ಕೂಗಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಈ ಬಾರಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ” ಎಂದು ಅವರು ಎಚ್ಚರಿಸಿದರು.
ರೋಣದ ಪ್ರತಿಷ್ಠಿತ ಪಾಟೀಲರ ಕುಟುಂಬ ಇತಿಹಾಸದುದ್ದಕ್ಕೂ ಕಾಂಗ್ರೆಸ್ ಪಕ್ಷದ ನಿಷ್ಠೆಯನ್ನು ಉಳಿಸಿಕೊಂಡು ಬಂದಿದೆ. ಮಾಜಿ ಸಂಸದ ಆರ್.ಎಸ್. ಪಾಟೀಲ ಕೂಡ ಪಕ್ಷವನ್ನು ಬಲಿಷ್ಠಗೊಳಿಸಲು ಶ್ರಮಿಸಿದ್ದಾರೆ. ಕುಟುಂಬದ ಪ್ರತಿಯೊಬ್ಬರೂ ಜಾತ್ಯಾತೀತ ಮನೋಭಾವ ಹೊಂದಿದ್ದು, ಪಕ್ಷ ಸಂಘಟನೆಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶಾಸಕ ಜಿ.ಎಸ್. ಪಾಟೀಲರು ಪಕ್ಷದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂದ ಹಿರಿಯ ನಾಯಕರಾಗಿದ್ದು, ಅವರ ಹಿರಿತನಕ್ಕೆ ಗೌರವ ನೀಡಿ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಮೌನೇಶ ಹಾದಿಮನಿ ಆಗ್ರಹಿಸಿದ್ದಾರೆ.
“ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ನಾಯಕರನ್ನು ನಿರ್ಲಕ್ಷಿಸಿದರೆ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಳ್ಳಲಿದೆ. ಜಿ.ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸ್ಥಾನ ಸಿಗಲೇಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ”
ಮೌನೇಶ ಹಾದಿಮನಿ
error: Content is protected !!