Home Blog Page 5

ಗ್ರಾಮೀಣ ಪ್ರತಿಭೆಗಳಿಗೆ ಹೊಸ ವೇದಿಕೆ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳಿಗಾಗಿ ಉಚಿತ ಅಧ್ಯಯನ ಕೇಂದ್ರವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥೆ ಶಂಷಾದ್ ಬೇಗಂ ತಿಳಿಸಿದರು.

ಪಟ್ಟಣದ ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಭಾನುವಾರದಿಂದ ಅಧ್ಯಯನ ಕೇಂದ್ರ ಆರಂಭಿಸುವ ಯೋಜನೆ ಹೊಂದಿದ್ದು, ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್, ಪಿಡಿಒ, ಪೊಲೀಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರ (ಕೋಚಿಂಗ್ ಸೆಂಟರ್) ಆರಂಭಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಬಾಬು ಮಾತನಾಡಿ, ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್‌ಗೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 25ರಂದು ಪಟ್ಟಣದ ಗ್ರಾಮೀಣ ಬ್ಯಾಂಕ್ ಎದುರಿನ ನೂತನ ಕಟ್ಟಡದಲ್ಲಿ ಡ್ರೀಮ್ ಇಂಡಿಯಾ ಸೂಪರ್ ಮಾರ್ಕೆಟ್ ಆರಂಭಿಸಲಾಗುವುದು ಎಂದು ಹೇಳಿದರು. ಮಹಿಳಾ ಸಬಲೀಕರಣ, ಬ್ಯಾಂಕಿಂಗ್ ಹಾಗೂ ಇತರೆ ಸಾಮಾಜಿಕ-ಆರ್ಥಿಕ ಚಟುವಟಿಕೆಗಳನ್ನೂ ಸಂಸ್ಥೆ ಕೈಗೊಳ್ಳಲಿದೆ ಎಂದರು.

ಸಂಸ್ಥೆಯ ಸಿಬ್ಬಂದಿ ಮದನ್ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಸಂಸ್ಥೆ 1.25 ಕೋಟಿ ರೂ. ಮೌಲ್ಯದ ಬಹುಮಾನಗಳನ್ನು ಗ್ರಾಹಕರಿಗೆ ವಿತರಿಸಿದ್ದು, ಬಂಗಾರ, ಬುಲೆಟ್ ಬೈಕ್, ಕಾರು ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಹಲವು ಬಹುಮಾನಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉದ್ಯೋಗಿಗಳಾದ ಅಶ್ವಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

“ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅನುಕೂಲವಾಗುವಂತೆ ಉಚಿತ ಅಧ್ಯಯನ ಕೇಂದ್ರ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರವೂ ಆರಂಭಿಸುವ ಗುರಿ ಹೊಂದಿದ್ದೇವೆ.”

– ಶಂಷಾದ್ ಬೇಗಂ, ಮುಖ್ಯಸ್ಥೆ, ಎಬಿಎಸ್ ಡ್ರೀಮ್ ಇಂಡಿಯಾ ಗ್ರೂಪ್

ಗೊಬ್ಬರಕ್ಕಾಗಿ ರೈತರ ಗೋಳಾಟ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಬಿತ್ತನೆ ಹಂಗಾಮಿನ ಸಂದರ್ಭದಲ್ಲಿ ತಾಲೂಕಿನ ಕೆಲವು ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ರೈತರಿಂದ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ ಯೂರಿಯಾ ಖರೀದಿಸುವ ರೈತರಿಗೆ ನ್ಯಾನೋ ಯೂರಿಯಾ ಬಾಟಲಿಯನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸಲಾಗುತ್ತಿದ್ದು, ಇದರಿಂದ ರೈತರು ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುವಂತಾಗಿದೆ ಎಂದು ಕರುನಾಡ ವಿಜಯಸೇನೆ ಆರೋಪಿಸಿದೆ.

ಈ ಕುರಿತು ತಾಲೂಕು ಕೃಷಿ ಅಧಿಕಾರಿ ಎಸ್.ವಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷ ಪ್ರಕಾಶ್ ಆರ್. (ವಕೀಲರು) ಮಾತನಾಡಿ, ತಾಲೂಕಿನ ರೈತರು ಎದುರಿಸುತ್ತಿರುವ ಗೊಬ್ಬರ ವಿತರಣೆಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಕೆಲವು ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಎಂಆರ್‌ಪಿ ದರ ಉಲ್ಲಂಘಿಸಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಯೂರಿಯಾ ಖರೀದಿಸಲು ತೆರಳುವ ರೈತರಿಗೆ ನ್ಯಾನೋ ಯೂರಿಯಾ ಬಾಟಲ್‌ನ್ನು ಕಡ್ಡಾಯವಾಗಿ ಜೋಡಣೆ ಮಾಡಿ ಮಾರಾಟ ಮಾಡುತ್ತಿರುವುದು ರೈತರ ಮೇಲಿನ ಅನ್ಯಾಯವಾಗಿದೆ ಎಂದು ಅವರು ದೂರಿದರು.

ಇದರ ಜೊತೆಗೆ, ಗೊಬ್ಬರ ಖರೀದಿ ವೇಳೆ ಎಫ್‌ಐಡಿ (FID) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವುದರಿಂದ ಹಾಗೂ ತಾಂತ್ರಿಕ ದೋಷಗಳ ಕಾರಣದಿಂದ ಗ್ರಾಮೀಣ ಭಾಗದ ಸಾಮಾನ್ಯ ಮತ್ತು ಅವಿದ್ಯಾವಂತ ರೈತರು ಗೊಬ್ಬರ ಪಡೆಯಲು ಪರದಾಡುವಂತಾಗಿದೆ. ಸರ್ವರ್ ಸಮಸ್ಯೆ, ತಾಂತ್ರಿಕ ಅಡಚಣೆ ಮತ್ತು ದಾಖಲೆ ಪರಿಶೀಲನೆಯ ವಿಳಂಬದಿಂದ ರೈತರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಾಲೂಕಿನ ಎಲ್ಲಾ ರಸಗೊಬ್ಬರ ಮಳಿಗೆಗಳ ಮೇಲೆ ವಿಶೇಷ ಪರಿಶೀಲನೆ ನಡೆಸಬೇಕು. ಎಂಆರ್‌ಪಿ ಮೀರಿದ ದರ ವಸೂಲಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನ್ಯಾನೋ ಯೂರಿಯಾ ಕಡ್ಡಾಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು. ಎಫ್‌ಐಡಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ಸುಲಭವಾಗಿ ಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರುನಾಡ ವಿಜಯಸೇನೆ ಆಗ್ರಹಿಸಿದೆ.

ಮನವಿ ಸ್ವೀಕರಿಸಿದ ತಾಲೂಕು ಕೃಷಿ ಅಧಿಕಾರಿ ಎಸ್.ವಿ. ಪಾಟೀಲ್, ರೈತರ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತಂದಿರುವುದು ಸ್ವಾಗತಾರ್ಹ. ತಾಲೂಕಿನ ಯಾವುದೇ ಗೊಬ್ಬರ ಅಂಗಡಿಯಲ್ಲಿ ಎಂಆರ್‌ಪಿ ಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಕಂಡುಬಂದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ನಾಗಾರ್ಜುನ, ಉಪಾಧ್ಯಕ್ಷ ಹಿಟ್ನಾಳ್ ವಿಶ್ವನಾಥ್, ಪೂಜಾರಿ ಬಸವರಾಜ್, ಗುರುನಾಯ್ಕ, ಖಜಾಂಚಿ ಶಿವಕುಮಾರ್ ಎಂ., ಜಂಟಿ ಕಾರ್ಯದರ್ಶಿಗಳಾದ ಗಾಳೆಪ್ಪ, ಪ್ರಕಾಶ್ ಕಿತ್ತನೂರು, ದೊಡ್ಡಬಸಪ್ಪ, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಗುರುಸ್ವಾಮಿ ಎಂ., ಯುವ ಘಟಕದ ಕಾರ್ಯಾಧ್ಯಕ್ಷ ಸ್ವಾಮಿ ಹೆಚ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ರೈತರು ಗೊಬ್ಬರಕ್ಕಾಗಿ ಅಂಗಡಿಗಳಿಗೆ ಹೋದಾಗ ಹೆಚ್ಚುವರಿ ಹಣ ವಸೂಲಿ ಮಾಡುವುದು ಹಾಗೂ ನ್ಯಾನೋ ಯೂರಿಯಾವನ್ನು ಕಡ್ಡಾಯವಾಗಿ ಖರೀದಿಸಲು ಒತ್ತಾಯಿಸುವುದು ಸರಿಯಲ್ಲ. ರೈತರ ಹಿತಾಸಕ್ತಿಗೆ ಧಕ್ಕೆ ತರುವ ಇಂತಹ ಕ್ರಮಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಇಲ್ಲವಾದರೆ ರೈತರ ಪರವಾಗಿ ಉಗ್ರ ಹೋರಾಟ ನಡೆಸಲಾಗುವುದು.”

– ಪ್ರಕಾಶ್ ಆರ್., ತಾಲೂಕು ಅಧ್ಯಕ್ಷರು, ಕರುನಾಡ ವಿಜಯಸೇನೆ

ಕೆಎಲ್‌ಇ ಶಾಲೆಯಲ್ಲಿ ಶಾಲಾ ಸಂಸತ್ ರಚನೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಚುನಾವಣೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಕೆಎಲ್‌ಇ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್‌ ರಚನೆ ಮಾಡಲಾಯಿತು.

ಶಾಲಾ ಆಡಳಿತ ವ್ಯವಸ್ಥೆ ಹಾಗೂ ಸರ್ಕಾರಿ ಆಡಳಿತದ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಹಿತದೃಷ್ಟಿಯಿಂದ ಆಯೋಜಿಸಲಾದ ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚುನಾವಣೆಗಳ ಮಾದರಿಯಲ್ಲಿಯೇ ಗುಪ್ತ ಮತದಾನ ಪದ್ಧತಿ ಅನುಸರಿಸಿ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಸಮರ್ಥ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಲಾಯಿತು.

ಶಾಲಾ ಪ್ರಧಾನಿಯಾಗಿ ಧೃತಿ ಪಿ. ವಾರಕರ್ ಹಾಗೂ ಉಪ ಪ್ರಧಾನಿಯಾಗಿ ಬಸವರಾಜ ಎಂ. ಗೊಳಗೊಳಕಿ ಆಯ್ಕೆಯಾದರು. ಕ್ರೀಡಾ ಮಂತ್ರಿಯಾಗಿ ಕಾರ್ತಿಕ ಲಮಾಣಿ, ಉಪ ಮಂತ್ರಿಯಾಗಿ ಕಿರಣ್ ತುಪ್ಪದ, ಶಿಸ್ತು ವಿಭಾಗದ ಮಂತ್ರಿಯಾಗಿ ಮನೋಜ ಮೆಣಸಗಿ, ಉಪ ಮಂತ್ರಿಯಾಗಿ ತನ್ವಿ ಚೆನ್ನಳ್ಳಿ ಆಯ್ಕೆಯಾದರು.

ಸಾಂಸ್ಕೃತಿಕ ಮಂತ್ರಿಯಾಗಿ ಚಿನ್ಮಯಿ ಹಿರೇಮಠ, ಉಪ ಮಂತ್ರಿಯಾಗಿ ಅನ್ವಿ ಭೂಸ್ತ ಆಯ್ಕೆಯಾಗಿದ್ದು, ನೀಲಿ ಪಡೆಯ ನಾಯಕಿಯಾಗಿ ಪ್ರತೀಕ್ಷಾ ಪಾಟೀಲ ಹಾಗೂ ಉಪ ನಾಯಕಿಯಾಗಿ ವಿರಾಲಿ ಬನ್ಸಾಲಿ, ಹಸಿರು ಪಡೆಯ ನಾಯಕಿಯಾಗಿ ಪೂರ್ವಿ ರಾಮನಕೊಪ್ಪ ಹಾಗೂ ಉಪ ನಾಯಕಿಯಾಗಿ ಸೇಜಲ್ ಮೇರವಾಡೆ ಆಯ್ಕೆಯಾದರು.

ಕೆಂಪು ಪಡೆಯ ನಾಯಕನಾಗಿ ಸುಭಾಷ್ ಹಾದಿ, ಉಪ ನಾಯಕಿಯಾಗಿ ಹಾರ್ದಿಕಾ ಬೆಳವಡಿ, ಹಳದಿ ಪಡೆಯ ನಾಯಕಿಯಾಗಿ ದಿವಿಜಾ ಹೊಸೂರ ಹಾಗೂ ಉಪ ನಾಯಕನಾಗಿ ಅಭಿನವ್ ಕುಂಬಾರ ಆಯ್ಕೆಯಾಗಿದ್ದಾರೆ.

ಕಿರಿಯರ ವಿಭಾಗದಲ್ಲಿ ಬಾಲಕರ ಪ್ರಧಾನಿಯಾಗಿ ಸಿದ್ದಾರ್ಥ್ ಕಬಾಡರ ಹಾಗೂ ಬಾಲಕಿಯರ ಪ್ರಧಾನಿಯಾಗಿ ಪ್ರಾರ್ಥನಾ ಕೊಪ್ಪದ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಶಾಲಾ ಸಂಸತ್ತಿನ ಎಲ್ಲಾ ಸದಸ್ಯರನ್ನು ಸಂಸ್ಥೆಯ ಕಾರ್ಯಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಶಾಲೆಯ ಪ್ರಾಂಶುಪಾಲರು, ಸಂಯೋಜಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿ ಶುಭ ಹಾರೈಸಿದರು.

“ಶಾಲಾ ಸಂಸತ್‌ ಚುನಾವಣೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಇಂತಹ ಪ್ರಕ್ರಿಯೆಗಳು ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುತ್ತವೆ.”

– ಶಾಲಾ ಆಡಳಿತ ಮಂಡಳಿ

ಮಳೆಗಾಗಿ ಕಪ್ಪೆಗಳ ಕಲ್ಯಾಣೋತ್ಸವ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ಬಿತ್ತನೆಯಾದ ಬೆಳೆಗಳು ಒಣಗುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಕದರಗೇರಿ ಓಣಿಯ ನಾಗರಿಕರು ವರುಣ ದೇವನ ಕೃಪೆಗಾಗಿ ಸಾಂಪ್ರದಾಯಿಕವಾಗಿ ಕಪ್ಪೆ ಮದುವೆ ಹಾಗೂ ನೀರೆರಚುವ ಹಬ್ಬ ಆಚರಿಸಿ ಮಳೆಯಿಗಾಗಿ ಪ್ರಾರ್ಥಿಸಿದರು.

ಮೇ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿರುವ ಬೆಳೆಗಳಿಗೆ ಇದೀಗ ಮಳೆಯ ಅಗತ್ಯತೆ ಇದ್ದರೂ ಕಳೆದ ಎಂಟು ದಿನಗಳಿಂದ ಮಳೆಯ ಸುಳಿವಿಲ್ಲದೆ ಬಿರು ಬಿಸಿಲು ಮುಂದುವರಿದಿದೆ. ಇದರಿಂದ ಮೊಳಕೆಯೊಡೆದ ಬೆಳೆಗಳು ಬಾಡುವ ಭೀತಿ ಎದುರಾಗಿದ್ದು, ರೈತ ಸಮುದಾಯ ಆತಂಕಕ್ಕೆ ಒಳಗಾಗಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ಕದರಗೇರಿ ಓಣಿಯ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯಬದ್ಧವಾಗಿ ಕಪ್ಪೆಗಳ ಮದುವೆ ನೆರವೇರಿಸಲಾಯಿತು. ದೇವಸ್ಥಾನವನ್ನು ರಂಗೋಲಿ, ತಳಿ-ತೋರಣಗಳಿಂದ ಅಲಂಕರಿಸಲಾಗಿದ್ದು, ನೂರಾರು ಭಕ್ತರು ಕಪ್ಪೆಗಳಿಗೆ ಅಕ್ಷತೆ ಹಾಕಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.

ವಿಶೇಷವಾಗಿ ಪುಟ್ಟ ಮಕ್ಕಳಿಬ್ಬರನ್ನು ಮದುಮಕ್ಕಳ ವೇಷದಲ್ಲಿ ಸಿಂಗರಿಸಿ ಅರಿಶಿನ ಶಾಸ್ತ್ರ, ಮದುವೆ ಶಾಸ್ತ್ರ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಪರಸ್ಪರ ನೀರೆರಚಿಕೊಂಡು ಸಂಭ್ರಮಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕಪ್ಪೆಗಳಿಗೆ ಮದುವೆ ಮಾಡಿದರೆ ವರುಣ ದೇವ ಪ್ರಸನ್ನನಾಗಿ ಮಳೆ ಸುರಿಸುತ್ತಾನೆ ಎಂಬ ಜನನಂಬಿಕೆ ಇಂದಿಗೂ ಜೀವಂತವಾಗಿದ್ದು, ಮಳೆ ಕೊರತೆಯ ಸಂದರ್ಭಗಳಲ್ಲಿ ಕಪ್ಪೆ ಅಥವಾ ಕತ್ತೆಗಳ ಮದುವೆ, ಗುರ್ಜಿ ಆಟ, ಭಜನೆ ಮೊದಲಾದ ಆಚರಣೆಗಳನ್ನು ನಡೆಸುವ ಸಂಪ್ರದಾಯ ಮುಂದುವರಿದಿದೆ.

ಕಾರ್ಯಕ್ರಮದ ಬಳಿಕ ಸಿದ್ಧಪಡಿಸಿದ್ದ ಸಂಗಟಿ–ಸಾರು ಸೇರಿದಂತೆ ಸಾಂಪ್ರದಾಯಿಕ ಊಟವನ್ನು ಎಲ್ಲರೂ ಸವಿದರು.

ಈ ಸಂದರ್ಭದಲ್ಲಿ ಲಕ್ಷ್ಮವ್ವ ಗಿಡಿಬಿಡಿ, ದೀಪಾ ಗಿಡಿಬಿಡಿ, ರೇವತಿ ಉಪನಾಳ, ವಾಣಿ ಹತ್ತಿ, ನಿಂಗವ್ವ ಟೋಕಾಳಿ, ಗದಿಗೆವ್ವ ಟೋಕಾಳಿ, ಮಂಜವ್ವ ಗಿಡಿಬಿಡಿ, ಬಸಮ್ಮ ಗಿಡಿಬಿಡಿ, ಗಂಗಮ್ಮ ಗಡೆಪ್ಪನವರ, ಸಾವಿತ್ರಿ ಗಡೆಪ್ಪನವರ, ಶಾಂತಾ ಡಂಬಳ, ಅನ್ನಪೂರ್ಣ ಲಿಂಗಶೆಟ್ಟಿ, ಲಕ್ಷ್ಮವ್ವ ಹುರಕನವರ, ರೇಣುಕಾ ಅಡರಕಟ್ಟಿ, ನೀಲಪ್ಪ ಹತ್ತಿ, ಸೋಮೇಶ ಉಪನಾಳ, ಮಹಾದೇವಪ್ಪ ಗಿಡಿಬಿಡಿ, ಮಂಜುನಾಥ ಲಿಂಗಶೆಟ್ಟಿ, ಸೋಮಣ್ಣ ಚಂದರಗಿ, ಅಜ್ಜಪ್ಪ ಬಡಿಗೇರ, ಗಂಗಾಧರ ಶಿರಿಗಣ್ಣವರ, ಶಿವಪ್ಪ ಗಿಡಿಬಿಡಿ ಸೇರಿದಂತೆ ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

“ಮಳೆ ಕೊರತೆಯಿಂದ ರೈತರು ಆತಂಕದಲ್ಲಿದ್ದಾರೆ. ವರುಣ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ ಎಂಬ ನಂಬಿಕೆಯಿಂದ ಕಪ್ಪೆ ಮದುವೆ ಮತ್ತು ನೀರೆರಚುವ ಹಬ್ಬ ಆಚರಿಸಿದ್ದೇವೆ.”

– ಸ್ಥಳೀಯರು

ಉಂಡೆ ಬೀಜಗಳ ಮೂಲಕ ಪ್ರಕೃತಿಯನ್ನು ಹಸಿರಾಗಿಸೋಣ

0

ಜೂನ್ ತಿಂಗಳು ಎಂದರೆ ಪ್ರಕೃತಿ ಪ್ರಿಯರ ಮನದಲ್ಲಿ ಹೊಸ ಉತ್ಸಾಹ ಮತ್ತು ನಿರೀಕ್ಷೆಯ ಸಂಭ್ರಮ. ಬೇಸಿಗೆಯ ಬಿಸಿಲಿಗೆ ಕಂಗೆಟ್ಟ ಭೂಮಿಗೆ ತಂಪೆರೆಯುವ ಮುಂಗಾರು ಮಳೆಯ ಆಗಮನ ಇದೇ ತಿಂಗಳಲ್ಲಿ ಆಗುತ್ತದೆ. ಕೃಷಿಕರು ನೇಗಿಲು ಹಿಡಿದು ಹೊಲಕ್ಕೆ ಇಳಿಯುವ ಸಮಯವೂ ಇದೇ. ಕರ್ನಾಟಕದಲ್ಲಿ ಮುಂಗಾರು ಮಳೆ ಎಂದರೆ ಕೇವಲ ಋತು ಬದಲಾವಣೆ ಅಲ್ಲ; ಅದು ಪ್ರಕೃತಿಯ ಪುನರ್ಜನ್ಮದ ಹಬ್ಬ.

ಮಳೆ ಹನಿಗಳ ಸ್ಪರ್ಶದಿಂದ ಒಣಗಿದ್ದ ಭೂಮಿ ಮತ್ತೆ ಚಿಗುರೊಡೆಯುತ್ತದೆ. ಮರಗಳು, ಗಿಡಗಳು, ಪ್ರಾಣಿ-ಪಕ್ಷಿಗಳು ಸೇರಿದಂತೆ ಸಮಸ್ತ ಜೀವಸಂಕುಲಕ್ಕೆ ಹೊಸ ಜೀವ ತುಂಬುತ್ತದೆ. ಇಂತಹ ಸಮಯದಲ್ಲಿ ಪ್ರಕೃತಿಗೆ ನಾವು ಮರಳಿ ನೀಡಬಹುದಾದ ಅತ್ಯುತ್ತಮ ಕೊಡುಗೆ ಎಂದರೆ ಹಸಿರು ಪರಿಸರ ನಿರ್ಮಾಣ.

ಪ್ರಕೃತಿ ನಮ್ಮ ಬದುಕಿನ ಆಧಾರ

ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ವಾಸಿಸುವ ಪರಿಸರ ಎಲ್ಲವೂ ಪ್ರಕೃತಿಯ ಕೊಡುಗೆ. ಮರಗಳು ನಮಗೆ ಆಮ್ಲಜನಕ ನೀಡುತ್ತವೆ. ಮಣ್ಣು, ನೀರು, ಕಾಡುಗಳು ಹಾಗೂ ಜೀವ ವೈವಿಧ್ಯತೆ ಭೂಮಿಯ ಸಮತೋಲನ ಕಾಪಾಡುತ್ತವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶ, ನಗರೀಕರಣ ಹಾಗೂ ಪರಿಸರ ಹಾನಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಕೃತಿಯ ಅಸ್ತಿತ್ವವೇ ಸವಾಲಿನಲ್ಲಿದೆ.

ಪ್ರಕೃತಿಯನ್ನು ಉಳಿಸುವ ಹೊಣೆಗಾರಿಕೆ ಕೇವಲ ಸರ್ಕಾರದದ್ದಲ್ಲ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಈ ನಿಟ್ಟಿನಲ್ಲಿ ಉಂಡೆ ಬೀಜಗಳ ಬಳಕೆ ಸರಳ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ.

ಏನಿದು ಉಂಡೆ ಬೀಜ?

ಉಂಡೆ ಬೀಜ ಅಥವಾ ‘ಸೀಡ್ ಬಾಲ್’ ಎಂದರೆ ಫಲವತ್ತಾದ ಮಣ್ಣು, ಸಾವಯವ ಗೊಬ್ಬರ ಹಾಗೂ ದೇಶಿ ಮರಗಳ ಬೀಜಗಳನ್ನು ಸೇರಿಸಿ ತಯಾರಿಸುವ ಮಣ್ಣಿನ ಉಂಡೆ. ಕಪ್ಪು ಮಣ್ಣು ಅಥವಾ ಕೆಮ್ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಬೆರೆಸಿ ಅದರೊಳಗೆ ಬೀಜವನ್ನು ಇಟ್ಟು ಸಣ್ಣ ಉಂಡೆಯಾಗಿ ತಯಾರಿಸಲಾಗುತ್ತದೆ. ನಂತರ ಅವುಗಳನ್ನು ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿಡಲಾಗುತ್ತದೆ.

ಮಳೆಗಾಲ ಆರಂಭವಾದಾಗ ಈ ಉಂಡೆಗಳನ್ನು ಖಾಲಿ ಜಾಗಗಳು, ಗುಡ್ಡಗಾಡು ಪ್ರದೇಶಗಳು, ಬಂಜರು ಭೂಮಿ ಅಥವಾ ರಸ್ತೆ ಬದಿಗಳಲ್ಲಿ ಎಸೆದರೆ ಸಾಕು. ಮಳೆಯ ನೀರು ಸಿಗುತ್ತಿದ್ದಂತೆ ಬೀಜ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ.

ಸೀಡ್ ಬಾಲ್‌ಗಳ ವಿಶೇಷತೆ

ಸಾಮಾನ್ಯವಾಗಿ ಬೀಜಗಳನ್ನು ನೆಲದ ಮೇಲೆ ಬಿತ್ತಿದರೆ ಪಕ್ಷಿಗಳು, ಇರುವೆಗಳು ಅಥವಾ ಇತರೆ ಜೀವಿಗಳು ಅವುಗಳನ್ನು ತಿಂದುಬಿಡುವ ಸಾಧ್ಯತೆ ಹೆಚ್ಚು. ಆದರೆ ಮಣ್ಣಿನ ಕವಚದಲ್ಲಿರುವ ಉಂಡೆ ಬೀಜಗಳು ಸುರಕ್ಷಿತವಾಗಿರುತ್ತವೆ. ಮಳೆಯ ನೀರು ಹೀರಿಕೊಂಡ ನಂತರ ಮಣ್ಣಿನ ಉಂಡೆ ಮೃದುವಾಗಿ ಬೀಜ ಮೊಳಕೆಯೊಡೆಯಲು ಅನುಕೂಲವಾಗುತ್ತದೆ. ಜೊತೆಗೆ ಗೊಬ್ಬರದ ಪೋಷಕಾಂಶಗಳು ಗಿಡದ ಬೆಳವಣಿಗೆಗೆ ನೆರವಾಗುತ್ತವೆ.

ಹಸಿರು ಪರಿಸರಕ್ಕೆ ಉಂಡೆ ಬೀಜಗಳ ಕೊಡುಗೆ

ಇತ್ತೀಚಿನ ವರ್ಷಗಳಲ್ಲಿ ಅರಣ್ಯ ನಾಶ, ಕಾಡ್ಗಿಚ್ಚು ಮತ್ತು ನಗರೀಕರಣದಿಂದ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಉಂಡೆ ಬೀಜಗಳು ಪರಿಸರ ಪುನಶ್ಚೇತನಕ್ಕೆ ಸಹಕಾರಿಯಾಗುತ್ತವೆ.

ಆಲ, ಅರಳಿ, ಬೇವು, ನೇರಳೆ, ಹೊಂಗೆ ಸೇರಿದಂತೆ ದೇಶಿ ಜಾತಿಯ ಮರಗಳ ಬೀಜಗಳನ್ನು ಬಳಸುವುದರಿಂದ ಪರಿಸರಕ್ಕೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಇವುಗಳು ಆಮ್ಲಜನಕ ಉತ್ಪಾದನೆ, ಮಣ್ಣಿನ ಸಂರಕ್ಷಣೆ ಹಾಗೂ ಹಕ್ಕಿ-ಪಕ್ಷಿಗಳಿಗೆ ಆಶ್ರಯ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯಗಳ ಸವಾಲು ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಉಂಡೆ ಬೀಜಗಳ ಬಳಕೆ ಅತ್ಯಂತ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ಪರಿಸರ ಸಂರಕ್ಷಣಾ ಕ್ರಮವಾಗಿದೆ.

ಮನೆಯಲ್ಲೇ ತಯಾರಿಸಬಹುದು

ರಜಾದಿನಗಳಲ್ಲಿ ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿ ಉಂಡೆ ಬೀಜಗಳನ್ನು ತಯಾರಿಸಬಹುದು. ಇದು ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸಲು ಸಹಕಾರಿಯಾಗುತ್ತದೆ.

ಪ್ರವಾಸ ಅಥವಾ ಲಾಂಗ್ ಡ್ರೈವ್‌ಗೆ ತೆರಳುವಾಗ ಕೆಲವು ಉಂಡೆ ಬೀಜಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ, ದಾರಿಯಲ್ಲಿ ಸಿಗುವ ಖಾಲಿ ಪ್ರದೇಶಗಳಲ್ಲಿ ಎಸೆಯುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬಹುದು.

ನಮ್ಮಿಂದ ಒಂದು ಹಸಿರು ಹೆಜ್ಜೆ

ಪ್ರಕೃತಿ ನಮಗೆ ಬದುಕಲು ಬೇಕಾದ ಎಲ್ಲವನ್ನೂ ನೀಡಿದೆ. ಅದಕ್ಕೆ ಪ್ರತಿಯಾಗಿ ನಾವು ನೀಡಬೇಕಾಗಿರುವುದು ಒಂದು ಸಣ್ಣ ಪ್ರಯತ್ನ ಮಾತ್ರ. ಈ ಮುಂಗಾರಿನಲ್ಲಿ ನಾವು ಬಿತ್ತುವ ಪ್ರತಿಯೊಂದು ಉಂಡೆ ಬೀಜವೂ ನಾಳಿನ ಹಸಿರು ಕರ್ನಾಟಕದ ಕನಸಿಗೆ ಅಡಿಗಲ್ಲಾಗಬಹುದು.

ಬನ್ನಿ, ಈ ಮಳೆಗಾಲದಲ್ಲಿ ಉಂಡೆ ಬೀಜಗಳನ್ನು ಬಿತ್ತೋಣ. ಪ್ರಕೃತಿಗೆ ಹಸಿರು ಸೀರೆಯುಡಿಸೋಣ. ಭೂಮಿಯನ್ನು ಉಳಿಸೋಣ.

ವೆಂಕಟೇಶ ಭಂಡಾರಿ
ತರಬೇತಿ ನಿರತರು, ರಾಜ್ಯ ಸಮಾಚಾರ ಕೇಂದ್ರ, ಹುಬ್ಬಳ್ಳಿ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಲಿ: ಯೂಸುಫ್ ಕಣವಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದಲ್ಲಿ ಬಡತನ, ನಿರುದ್ಯೋಗ, ರಾಷ್ಟ್ರೀಯ ಭದ್ರತೆ ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಗಂಭೀರ ವಿಷಯಗಳ ಕುರಿತು ಚರ್ಚೆಯಾಗಬೇಕಾದ ಸಂದರ್ಭದಲ್ಲಿ ಎಸ್‌ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ವಿಷಯವೇ ರಾಷ್ಟ್ರಮಟ್ಟದ ಚರ್ಚೆಯಾಗಿ ಪರಿಣಮಿಸಿರುವುದು ವಿಷಾದನೀಯ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯೂಸುಫ್ ಕಣವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀಮಂತರು ಮತ್ತು ಪ್ರಭಾವಿ ವರ್ಗದವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಸಾರ್ವತ್ರಿಕವಾಗಿದ್ದು, ಇಂದು ಕೋಟ್ಯಂತರ ಜನರು ಮತದಾರರಾಗಿದ್ದಾರೆ ಎಂದು ತಿಳಿಸಿದರು.

ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ನುಸುಳುಕೋರರನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಈ ವಿಷಯದಲ್ಲಿ ಸ್ಪಷ್ಟ ಮಾಹಿತಿ ನೀಡದೆ ಸಾಮಾನ್ಯ ಮತದಾರರ ಪಟ್ಟಿಯನ್ನೇ ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವರದಿಗಳು ಬರುತ್ತಿವೆ. ಈ ಪ್ರಕ್ರಿಯೆಯಲ್ಲಿ ಎಷ್ಟು ಮಂದಿ ಅಕ್ರಮ ನುಸುಳುಕೋರರು ಹಾಗೂ ಎಷ್ಟು ಮಂದಿ ಸಾಮಾನ್ಯ ನಾಗರಿಕರು ಎಂಬುದನ್ನು ಚುನಾವಣಾ ಆಯೋಗ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಪ್ರಕ್ರಿಯೆಯಲ್ಲಿ ಬಡವರು, ದಲಿತರು ಮತ್ತು ವಂಚಿತ ಸಮುದಾಯದ ಜನರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಅದರ ರಕ್ಷಣೆಗೆ ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.

ಯುವ ಮುಖಂಡ ಸರೋವರ ಬೆಂಕಿಕೇರಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸ್ವಾಗತಾರ್ಹವಾದರೂ, ಇತ್ತೀಚೆಗೆ ಜಾರಿಗೆ ತರಲಾಗುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಸಾರ್ವಜನಿಕರಲ್ಲಿ ಗೊಂದಲ ಮತ್ತು ಆತಂಕ ಮೂಡಿಸುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಲಾಲ್ ಗೋಕಾವಿ, ಜುನೈದ್ ಉಮಚಗಿ, ಆರಾಧನಾ ಬಣಕಾರ, ಆರೀಫ್ ಉಲ್ಲಾ, ಮುತ್ತು ಬಿಳೆಯಲಿ, ಅನ್ವರ್ ಬಾಗೇವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ದೇಶದಲ್ಲಿ ಬಡತನ, ಭದ್ರತೆ ಹಾಗೂ ಉದ್ಯೋಗದಂತಹ ಗಂಭೀರ ವಿಷಯಗಳು ಚರ್ಚೆಯಾಗಬೇಕಾದ ಸಂದರ್ಭದಲ್ಲಿ ಎಸ್‌ಐಆರ್ ವಿಚಾರವೇ ಪ್ರಮುಖ ಚರ್ಚೆಯಾಗಿರುವುದು ಆತಂಕಕಾರಿ ಬೆಳವಣಿಗೆ.”

– ಯೂಸುಫ್ ಕಣವಿ, ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್

ಹಕ್ಕೊತ್ತಾಯಗಳು

  • ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಸಾಫ್ಟ್‌ವೇರ್ ಅನ್ನು ಕರ್ನಾಟಕದಲ್ಲಿ ಬಳಸಬಾರದು.
  • ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕ ಪರಿಶೀಲನೆಗೆ ಲಭ್ಯಗೊಳಿಸಬೇಕು.
  • ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳ ಮೂಲಕ ಸಾರ್ವಜನಿಕ ಪರಿಶೀಲನೆ ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು.
  • ಅಪೀಲು ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು.

ಪಂಚಾಯಿತಿ ಅಖಾಡಕ್ಕೆ ಮೀಸಲಾತಿ ಮುನ್ನುಡಿ: ಚಾಕಲಬ್ಬಿ, ರೊಟ್ಟಿಗವಾಡ ಸ್ಥಾನ ಹಂಚಿಕೆ ಪ್ರಕಟ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಗ್ರಾಮ ಪಂಚಾಯಿತಿ ವ್ಯಾಪ್ತಿ ಬದಲಾವಣೆಯ ಹಿನ್ನೆಲೆಯಲ್ಲಿ ಪುನರ್‌ರಚನೆಗೊಂಡಿರುವ ಚಾಕಲಬ್ಬಿ ಹಾಗೂ ರೊಟ್ಟಿಗವಾಡ ಗ್ರಾಮ ಪಂಚಾಯಿತಿಗಳ ಕ್ಷೇತ್ರವಾರು ಸ್ಥಾನಗಳು ಮತ್ತು ಮೀಸಲಾತಿ ವಿವರಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.

ಪುನರ್‌ರಚನೆಯಾದ ಚಾಕಲಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 9 ಸ್ಥಾನಗಳಿದ್ದು, ಚಾಕಲಬ್ಬಿ-1 ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ‘ಅ’, ಸಾಮಾನ್ಯ ತಲಾ ಒಂದು ಸ್ಥಾನ ಹಾಗೂ ಚಾಕಲಬ್ಬಿ-2 ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ, ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ತಲಾ ಒಂದು ಸ್ಥಾನ ಮೀಸಲಿರಿಸಲಾಗಿದೆ. ಹೊಸಳ್ಳಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ತಲಾ ಒಂದು ಸ್ಥಾನ ನಿಗದಿಪಡಿಸಲಾಗಿದೆ.

ಇದೇ ರೀತಿ, ರೊಟ್ಟಿಗವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 10 ಸ್ಥಾನಗಳಿದ್ದು, ರೊಟ್ಟಿಗವಾಡ-1 ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ಹಿಂದುಳಿದ ವರ್ಗ ‘ಬ’, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ತಲಾ ಒಂದು ಸ್ಥಾನ ಮೀಸಲಿರಿಸಲಾಗಿದೆ. ರೊಟ್ಟಿಗವಾಡ-2 ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ‘ಅ’ ಮಹಿಳೆ ಹಾಗೂ ಸಾಮಾನ್ಯ ಒಂದು ಸ್ಥಾನ ಮೀಸಲಾಗಿದೆ. ಕೊಂಕಣಕುರಹಟ್ಟಿ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ಎರಡು ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ಧಾರವಾಡ ತಾಲೂಕಿನ ಗುಳೇದಕೊಪ್ಪ, ತೇಗೂರ ಹಾಗೂ ಕುಂದಗೋಳ ತಾಲೂಕಿನ ಬರದ್ವಾಡ, ಚಾಕಲಬ್ಬಿ ಮತ್ತು ರೊಟ್ಟಿಗವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಈ ಕುರಿತು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ ಜೂನ್ 25ರ ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಗೆ ಖುದ್ದಾಗಿ ಸಲ್ಲಿಸಬಹುದಾಗಿದೆ.

ನಿಗದಿತ ಅವಧಿಯ ನಂತರ ಸಲ್ಲಿಕೆಯಾಗುವ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ. ಸ್ವೀಕೃತ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರಿಗೆ ಸಂತಸದ ಸುದ್ದಿ: ಮುಂದಿನ ವಾರ ರಾಜ್ಯಾದ್ಯಂತ ಮಳೆ ಮುನ್ಸೂಚನೆ!

ಬೆಂಗಳೂರು: ಮುಂಗಾರು ಮಳೆಯ ಕೊರತೆಯಿಂದ ರಾಜ್ಯದ ಹಲವು ಭಾಗಗಳಲ್ಲಿ ಆತಂಕ ಮೂಡಿದ್ದರೂ, ಮುಂದಿನ ಒಂದು ವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 21ರಿಂದ 25ರವರೆಗೆ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನೊಂದೆಡೆ, ಒಳನಾಡಿನ ಜಿಲ್ಲೆಗಳಲ್ಲೂ ಮಳೆಯ ಚಟುವಟಿಕೆ ಚುರುಕುಗೊಳ್ಳಲಿದ್ದು, ಜೂನ್ 22 ಮತ್ತು 23ರಂದು ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಹಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯ ಜೊತೆಗೆ ಬಿಸಿ ಮತ್ತು ತೇವಾಂಶಯುಕ್ತ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳವರೆಗೆ ಇದೇ ರೀತಿಯ ಹವಾಮಾನ ಪರಿಸ್ಥಿತಿ ಮುಂದುವರಿಯಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆ ಸಲಹೆ ನೀಡಿದೆ.

ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಮಳೆ ಕೊರತೆ ಕಂಡುಬಂದಿದ್ದರಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತ್ತು. ಆದರೆ ಇದೀಗ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿರುವುದು ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಳೆಗಾಗಿ ಗುರ್ಜಿ ಮೊರೆ… ರೈತರ ಕಣ್ಣಲ್ಲಿ ಭರವಸೆಯ ಹೊಳೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಗುರ್ಜಿ… ಗುರ್ಜಿ… ಎಲ್ಲಾಡಿ ಬಂದೆ… ಹಳ್ಳ-ಕೊಳ್ಳ ತಿರುಗಾಡಿ ಬಂದೆ… ಕಾರ ಮಳೆಯೇ, ಕಪ್ಪತ್ತ ಮಳೆಯೇ… ಸುರಿ ಮಳೆಯೋ ಸುರಿ ಮಳೆಯೋ…” ಎಂಬ ಜನಪದ ಗೀತೆಯ ನಿನಾದದೊಂದಿಗೆ ಪಟ್ಟಣದ ಸಾಲಗೇರಿ ಓಣಿಯ ರೈತ ಮಹಿಳೆಯರು ಶುಕ್ರವಾರ ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿ ಮಳೆರಾಯನಿಗೆ ಮೊರೆ ಹೋದರು.

ಮಳೆಯನ್ನೇ ನಂಬಿ ಹೆಸರು, ಶೇಂಗಾ, ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿರುವ ರೈತರು ಕಳೆದ ಹದಿನೈದು ದಿನಗಳಿಂದ ಮಳೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೇವಾಂಶದ ಅಭಾವದಿಂದ ಮೊಳಕೆಯೊಡೆದ ಬೆಳೆಗಳು ಒಣಗತೊಡಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಕೃಷಿಯನ್ನೇ ಬದುಕಾಗಿಸಿಕೊಂಡ ರೈತರು ಹಾಗೂ ರೈತ ಮಹಿಳೆಯರು ಮಳೆಗಾಗಿ ಸಂಪ್ರದಾಯದ ಮೊರೆ ಹೋಗಿದ್ದಾರೆ. ಗ್ರಾಮೀಣ ಜಾನಪದ ಸಂಸ್ಕೃತಿಯ ವಿಶಿಷ್ಟ ಆಚರಣೆಯಾದ ಗುರ್ಜಿ ಪೂಜೆಯಲ್ಲಿ ಆಕಳ ಸಗಣಿಯಿಂದ ತಯಾರಿಸಿದ ಗುರ್ಜಿ ಮೂರ್ತಿಯನ್ನು ಹಂಚಿನ ಮೇಲೆ ಪ್ರತಿಷ್ಠಾಪಿಸಿ ಹಸಿರು ಹುಲ್ಲು ಹಾಗೂ ಹೂಗಳಿಂದ ಅಲಂಕರಿಸಲಾಗುತ್ತದೆ.

ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ ಓಣಿಯಿಂದ ಓಣಿಗೆ ಸಂಚರಿಸುತ್ತಾರೆ. ಮನೆಗಳ ಮುಂದೆ ತೆರಳಿದಾಗ ಮನೆಯವರು ಗುರ್ಜಿ ಹೊತ್ತ ಮಹಿಳೆಯರ ಮೇಲೆ ನೀರು ಸುರಿದು ಪೂಜೆ ಸಲ್ಲಿಸುತ್ತಾರೆ. ಐದು ದಿನಗಳ ಕಾಲ ನಡೆಯುವ ಈ ಆಚರಣೆಯ ಅಂತ್ಯದಲ್ಲಿ ಸಂಗ್ರಹಿಸಿದ ಧಾನ್ಯಗಳಿಂದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ.

ಮಳೆಯಿಲ್ಲದೆ ಕಂಗಾಲಾಗಿರುವ ರೈತ ಸಮುದಾಯಕ್ಕೆ ಗುರ್ಜಿ ಪೂಜೆ ಕೇವಲ ಸಂಪ್ರದಾಯವಾಗಿಯೇ ಉಳಿದಿಲ್ಲ. ಅದು ರೈತರ ಬದುಕಿನ ಭರವಸೆ, ನಂಬಿಕೆ ಮತ್ತು ಆಶಾವಾದದ ಸಂಕೇತವಾಗಿ ಬೆಳೆದಿದೆ.

“ಗುರ್ಜಿ ಪೂಜೆ ನಮ್ಮ ಪಾಲಿಗೆ ಕೇವಲ ಆಚರಣೆಯಲ್ಲ; ಅದು ರೈತರ ಬದುಕಿನ ಭರವಸೆಯ ಸಂಕೇತ. ಮಳೆರಾಯ ಕೃಪೆ ತೋರಿ ಬೆಳೆಗಳನ್ನು ಉಳಿಸಲಿ ಎಂಬುದು ನಮ್ಮ ಪ್ರಾರ್ಥನೆ.”

– ಸಾವಿತ್ರಮ್ಮ ಹಂಪಣ್ಣವರ ಹಾಗೂ ಹಂಪಮ್ಮ ಹಂಪಣ್ಣವರ, ರೈತ ಮಹಿಳೆಯರು

ಭಟ್ಕಳದಲ್ಲಿ ಯುವತಿ ಮೇಲೆ ದೌರ್ಜನ್ಯ ಆರೋಪ: ಯುವಕ ಬಂಧನ, ಠಾಣೆ ಎದುರು ಪ್ರತಿಭಟನೆ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಆರೋಪ ಸಂಬಂಧ ಯುವಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಪ್ರಕರಣದ ವಿಚಾರವಾಗಿ ಎರಡು ಕಡೆಯಿಂದ ದೂರುಗಳು ದಾಖಲಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮಾಹಿತಿಯ ಪ್ರಕಾರ, ಯುವತಿಯೊಬ್ಬಳು ತನ್ನ ಮೇಲೆ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದೇ ವೇಳೆ, ಆರೋಪಿತ ಯುವಕ ತನ್ನ ಮೇಲೆ ಕೆಲ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಸಂಬಂಧ ನಾಲ್ವರು ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಯುವತಿಯ ದೂರನ್ನು ಆರಂಭದಲ್ಲಿ ಸ್ವೀಕರಿಸದೆ ಯುವಕನ ದೂರು ಮಾತ್ರ ದಾಖಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ಖಂಡಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಯುವತಿಯ ದೂರನ್ನೂ ದಾಖಲಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!