ಲಕ್ಷ್ಮೇಶ್ವರ: ತಾಲೂಕಿನ ಅಕ್ಕಿಗುಂದ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಚಂದ್ರಪ್ಪ ಹೆಗ್ಗಪ್ಪ ದೊಡ್ಡಮನಿ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ನೇಮಕ ಮಾಡಿ ಆದೇಶಪತ್ರ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ಸುಜಾತಾ ದೊಡ್ಡಮನಿ ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ: 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಶಾಲಾ ಬಾಲಕನ ಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಮೃತ ಬಾಲಕನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ, ಶಾಲಾ ವಿದ್ಯಾರ್ಥಿಯನ್ನು ಥಳಿಸಿ ಹತ್ಯೆಗೈದಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಅಗತ್ಯ ನೆರವು ಒದಗಿಸುವುದರ ಜೊತೆಗೆ, ಈ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು. ಬಾಲಕನ ಸಾವಿಗೆ ನ್ಯಾಯ ಒದಗಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಹತ್ಯೆಯಲ್ಲಿ ಭಾಗಿಯಾದವರು ಅಪ್ರಾಪ್ತ ವಯಸ್ಸಿನ ಹುಡುಗರಾಗಿದ್ದಾರೆ ಎಂಬ ಮಾಹಿತಿ ತೀವ್ರ ಆಘಾತ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ. ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಬೇಕಾದ ಮಕ್ಕಳು ದುಶ್ಚಟಗಳಿಗೆ ಒಳಗಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ದುರದೃಷ್ಟಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ಏನೇ ಇರಲಿ, ಅಪರಾಧ ಎಸಗಿದವರು ಯಾರೇ ಆಗಿರಲಿ, ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಬಾಲ್ಯದಲ್ಲೇ ದ್ವೇಷ, ಹಿಂಸೆ ಮತ್ತು ಅಪರಾಧ ಪ್ರವೃತ್ತಿ ಬೆಳೆಸಿಕೊಳ್ಳುವುದು ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ ಅವರು, ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂದಿದ್ದಾರೆ. ಮಕ್ಕಳು ತಪ್ಪು ಹಾದಿ ಹಿಡಿದರೆ ತಕ್ಷಣ ತಿದ್ದಿ ಬುದ್ದಿ ಹೇಳುವ ಜವಾಬ್ದಾರಿ ಪೋಷಕರದ್ದು ಎಂದು ಹೇಳಿದ್ದಾರೆ. ಅಲ್ಲದೆ ಶಾಲೆಗಳ ಸುತ್ತಮುತ್ತ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಆಡಳಿತ ಮಂಡಳಿಗಳು ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು, ಅಗತ್ಯವಿದ್ದರೆ ಪೊಲೀಸ್ ನೆರವು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬವನ್ನು ಸಾಂತ್ವನಪಡಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಮೃತ ಬಾಲಕನ ಪೋಷಕರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ಗರಿಷ್ಠ ಶಿಕ್ಷೆ ದೊರಕುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಆ ನೊಂದ ಕುಟುಂಬಕ್ಕೆ ನೀಡಿರುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ ಮತ್ತು ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ ಅವರು, ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
‘ಉತ್ಕರ್ಷತೆಯೆಡೆಗೆ’ ವಿದ್ಯಾರ್ಥಿ ಸ್ನೇಹಿ ಕಾರ್ಯಾಗಾರ
ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಕೃಷ್ಣಗೌಡ ಹೆಚ್. ಪಾಟೀಲ ಅವರ ವೈಯಕ್ತಿಕ ಆಸಕ್ತಿಯಿಂದ 10ನೇ ತರಗತಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ‘ಉತ್ಕರ್ಷತೆಯೆಡೆಗೆ’ ವಿದ್ಯಾರ್ಥಿ ಸ್ನೇಹಿ ಕಾರ್ಯಾಗಾರವನ್ನು 3 ದಿನಗಳ ಕಾಲ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಕುರಿತು ಸಲಹೆ-ಸೂಚನೆಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಲಾಯಿತು. ಜೊತೆಗೆ, ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸಹಕಾರಿ ಆಯಿತು.
ಈ ಕಾರ್ಯಾಗಾರದಿಂದ ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಭರವಸೆ ವ್ಯಕ್ತವಾಗಿದೆ. ಇದು ನಮ್ಮ ಯುವ ನಾಯಕರ ದೂರದೃಷ್ಟಿ ಹಾಗೂ ವಿದ್ಯಾರ್ಥಿಗಳ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಗದಗ ಬೆಟಗೇರಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅನ್ವರ್ ನದಾಫ್ ಹಾಗೂ ಅಭಿಷಯ್ ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವೀಣಾ ಹೇಮಂತಗೌಡ ಪಾಟೀಲ ಆಯ್ಕೆ
ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಫೌಂಡೇಶನ್ ವತಿಯಿಂದ ಮಾರ್ಚ್ ತಿಂಗಳಲ್ಲಿ ಆಯೋಜಿಸಿರುವ 5ನೇ ರಾಷ್ಟ್ರೀಯ ಮಹಿಳಾ ಸಮ್ಮೇಳನಕ್ಕೆ ಮುಂಡರಗಿಯ ವೀಣಾ ಹೇಮಂತಗೌಡ ಪಾಟೀಲ ಅವರು ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿದ್ದು, ಗದಗ ನಗರದಲ್ಲಿ ಮಾರ್ಚ್ 22ರಂದು ನಡೆಯುವ ಮಹಿಳಾ ಸಮ್ಮೇಳನಕ್ಕೆ ಅವರನ್ನು ಅಧಿಕೃತವಾಗಿ ಗೌರವಿಸಿ ಆಹ್ವಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಪ್ಪತ್ತಗಿರಿ ಫೌಂಡೇಶನ್ನ ಗದಗ ಜಿಲ್ಲಾ ಅಧ್ಯಕ್ಷರಾದ ಮಮತಾ ದೊಡ್ಡಮನಿ, ಶಿರಹಟ್ಟಿ ತಾಲೂಕು ಅಧ್ಯಕ್ಷರಾದ ಶಾಂತಾ ಅಂಗಡಿ, ಗೌರವ ಅಧ್ಯಕ್ಷರಾದ ಕಾವ್ಯ ಅಂಗಡಿ, ಗದುಗಿನ ಹಿರಿಯ ಸಾಹಿತಿಗಳಾದ ಎ.ಎಸ್. ಮಕಾನದಾರ, ಕಪ್ಪತ್ತಗಿರಿ ಫೌಂಡೇಶನ್ ನಿರ್ದೇಶಕರಾದ ತೋಟಯ್ಯ ಗುಡ್ಡಿಮಠ, ಹೇಮಂತ್ಗೌಡ ಪಾಟೀಲ್, ಕಾವೇರಿ ಬೋಲ, ಮಧುಮತಿ ಇಳಕಲ್ ಉಪಸ್ಥಿತರಿದ್ದರು ಎಂದು ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಚಂದ್ರಕಲಾ ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮಗೆ ಯಾವುದೇ ರಾಜಕೀಯ ಪಕ್ಷದ ಒಲವಿಲ್ಲ
ವಿಜಯಸಾಕ್ಷಿ ಸುದ್ದಿ, ಗದಗ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥರನ್ನು ನಗರದ ಪ್ರವಾಸಿ ಮಂದಿರದಲ್ಲಿ ಗದಗ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗದಗ ಜಿಲ್ಲಾ ಗುತ್ತಿಗೆದಾರರು ನನಗೆ ತೋರಿದ ಪ್ರೀತಿ, ವಿಶ್ವಾಸಕ್ಕೆ ಅಭಾರಿಯಾಗಿದ್ದೇನೆ. ಇವತ್ತು ಗುತ್ತಿಗೆದಾರರು ಬಹಳ ಆರ್ಥಿಕ ತೊಂದರೆಯಲ್ಲಿ ಸಿಲುಕಿಕೊಂಡಿದ್ದೇವೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಗುತ್ತಿಗೆದಾರರಿಗೆ ಸುಮಾರು 37 ಸಾವಿರ ಕೋಟಿ ರೂಪಾಯಿ ಹಣ ಬಾಕಿ ಉಳಿದಿದ್ದು, ಇಂದು ಅನೇಕ ಗುತ್ತಿಗೆದಾರರು ತಮ್ಮ ಮನೆಯಲ್ಲಿರುವ ಬಂಗಾರವನ್ನು ಅಡವಿಟ್ಟು ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ನೆರವೇರಿಸಿದ್ದಾರೆ. ಈಗ ಅದರ ಬಡ್ಡಿ ಕಟ್ಟುತ್ತಿದ್ದಾರೆ. ನಮಗೆ ಯಾವುದೇ ರಾಜಕೀಯ ಪಕ್ಷದ ಒಲವು ಇಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಥವಾ ಇತರೆ ಯಾವುದೇ ಪಕ್ಷಗಳನ್ನು ನಾವು ಹೊಗಳುವುದಿಲ್ಲ, ದೂಷಿಸುವುದಿಲ್ಲ ಎಂದು ಹೇಳಿದರು.
ಸರ್ಕಾರಗಳು ನೀಡಿದ ಕೆಲಸಗಳನ್ನು ನಾವು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇವೆ. ರಾಜ್ಯ ಸರ್ಕಾರ ಆದಷ್ಟು ಬೇಗ ನಮ್ಮ ಬಾಕಿ ಹಣವನ್ನು ಕೊಟ್ಟು ಗುತ್ತಿಗೆದಾರರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ. ದಿನಕಳೆದಂತೆ ಗುತ್ತಿಗೆದಾರರ ಆರ್ಥಿಕ ಸಂಕಷ್ಟ ದೊಡ್ಡ ಪ್ರಮಾಣದಲ್ಲಿ ಆಗಲಿದೆ. ರಾಜ್ಯದ ಮುಖ್ಯಮಂತ್ರಿಗಳು, ಸರ್ಕಾರದ ವಿವಿಧ ಇಲಾಖೆಯ ಸಚಿವರು ಮುತುವರ್ಜಿ ವಹಿಸಿ ಗುತ್ತಿಗೆದಾರರ ಹಣವನ್ನು ಪಾವತಿಸುವಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಿದ್ದು ಪಾಟೀಲ, ವಿ.ಜಿ. ಮುಲ್ಕಿಪಾಟೀಲ, ಏ.ಬಿ. ಕಟಗಿ, ಆರ್.ಡಿ. ರಂಗಪ್ಪನವರ್, ಬಿ.ವಾಯ್. ಶಿರಗುಂಪಿ, ಸುರೇಶ ತಿರ್ಲಾಪುರ, ಬಸವರಾಜ ಮೇಟಿ, ಎ.ಎಚ್. ಪಾಟೀಲ, ಬಿ.ಆರ್. ಹೊಸಮನಿ, ಬಸವರಡ್ಡಿ ಹಂಚಿನಾಳ, ಅನ್ನಪ್ಪ ದಾರಿಯನ್ನವರ, ಸಿ.ಎಸ್. ನಾಗಾವಿ, ಎಂ.ಎಸ್. ಮಾದನ್ನವರ, ಯುವರಾಜ ಬಳ್ಳಾರಿ, ವಿಶ್ವನಾಥ ಪಾಟೀಲ, ಬೆಳಹುಣಸಿ, ಹೊಸಂಗಡಿ, ಗುರನ್ನ ಕುರ್ತಕೋಟಿ, ದಾಯಮ್ಮನವರ, ಎಮ್.ವ್ಹಿ. ಗಾಣಿಗೇರ, ಎಸ್.ಎಚ್. ಪಾಟೀಲ್, ಬಿರಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸರಿಪಡಿಸಿದ ಪದಗಳ ಪಟ್ಟಿ:
ಮನವಿಗೆ ಸ್ಪಂದಿಸಿದ ಗೃಹ ಸಚಿವರು
ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಶಿರಹಟ್ಟಿ ತಾಲೂಕಿನ ಗ್ರಾಮಗಳನ್ನು ಶಿರಹಟ್ಟಿ ಪೊಲೀಸ್ ಠಾಣೆಗೆ ಹಾಗೂ ಲಕ್ಷೇಶ್ವರ ತಾಲೂಕಿನ ಗ್ರಾಮಗಳನ್ನು ಲಕ್ಷೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡಿಸುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿರೇಂದ್ರಗೌಡ ಪಾಟೀಲ ಮಾಡಿದ ಮನವಿಗೆ ಗೃಹ ಮಂತ್ರಿಗಳು ಸಹಮತ ಸೂಚಿಸಿದ್ದಾರೆ.
ಇದೀಗ ಶಿರಹಟ್ಟಿ ತಾಲೂಕಿನ ಗ್ರಾಮಗಳಾದ ನಾಗರಮಡುವು, ಅಂಕಲಿ, ಗೋವನಕೊಪ್ಪ, ಬಿಜ್ಜೂರ, ಕೊಗನೂರ, ಕೊಂಚಿಗೇರಿ, ಕೊಕ್ಕರಗುಂದಿ, ಬೂದಿಹಾಳ ಗ್ರಾಮಗಳು ಸದ್ಯ ಲಕ್ಷೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುತ್ತಿವೆ. ಅದರಂತೆ ಲಕ್ಷೇಶ್ವರ ತಾಲೂಕಿನ ಗ್ರಾಮಗಳಾದ ನಾದಿಗಟ್ಟಿ, ವಡ್ಡರಪಾಳ್ಯ, ನೇಲೋಗಲ್, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಕುಂದ್ರಳ್ಳಿ, ಕುಂದ್ರಳ್ಳಿ ತಾಂಡಾ, ಶೆಟ್ಟಿಕೇರಿ ಗ್ರಾಮಗಳು ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟಿವೆ.
ಲಕ್ಷೇಶ್ವರ ಸ್ವತಂತ್ರ ತಾಲೂಕು ಕೇಂದ್ರವಾಗಿ 8 ವರ್ಷಗಳೇ ಕಳೆದಿದ್ದರೂ ಇನ್ನೂ ಉಭಯ ತಾಲೂಕಿನ ಅನೇಕ ಗ್ರಾಮಗಳ ಪೊಲೀಸ್ ಠಾಣಾ ವ್ಯಾಪ್ತಿ ಮಾತ್ರ ಬದಲಾಗಿಲ್ಲ. ಇದರಿಂದ ಸಾರ್ವಜನಿಕರು ತಮ್ಮ ಸಣ್ಣಪುಟ್ಟ ವ್ಯಾಜ್ಯಗಳಿಗೆ ಹಾಗೂ ಇತರೆ ವ್ಯಾಜ್ಯಗಳ ಸಲುವಾಗಿ ಅಲೆದಾಡುವುದು ತಪ್ಪಿಲ್ಲ. ಇದರಿಂದ ತಹಸೀಲ್ದಾರ, ಪೊಲೀಸ್ ಅಧಿಕಾರಿಗಳಿಗೆ ಅಪರಾಧಗಳ ಪಂಚನಾಮ ಮಾಡಲು ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಕಾನೂನು ತೊಡಕು ಆಗುತ್ತಿದೆ.
ಆದ್ದರಿಂದ ಶಿರಹಟ್ಟಿ ತಾಲ್ಲೂಕಿನ ಗ್ರಾಮಗಳನ್ನು ಶಿರಹಟ್ಟಿ ಪೊಲೀಸ್ ಠಾಣೆಗೆ ಹಾಗೂ ಲಕ್ಷೇಶ್ವರ ತಾಲೂಕಿನ ಗ್ರಾಮಗಳನ್ನು ಲಕ್ಷೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಗೆ ವರ್ಗಾವಣೆ ಮಾಡಲು ಕಾನೂನು ಮಂತ್ರಿಗಳಾದ ಹೆಚ್.ಕೆ. ಪಾಟೀಲರ ಶಿಫಾರಸ್ಸಿನ ಮೇರೆಗೆ ಗೃಹ ಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಇದೀಗ ಗೃಹ ಮಂತ್ರಿಗಳು ಮನವಿಗೆ ಸ್ಪಂದಿಸಿರುವುದಕ್ಕೆ ಮತ್ತು ಲಕ್ಷೇಶ್ವರ ಠಾಣೆಯನ್ನು ಪಿಐ ಠಾಣೆಯಾಗಿಸಲು ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಸಾರ್ವಜನಿಕರ ಪರವಾಗಿ ವೀರೇಂದ್ರ ಪಾಟೀಲ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಶಾದಿ ಮಹಲ್ ಬಾಡಿಗೆ ಇಳಿಸಲು ಮನವಿ
ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ವತಿಯಿಂದ ಗದಗ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿಗಳಿಗೆ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಅನ್ವರ ಬಾಗೇವಾಡಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಶಾದಿ ಮಹಲ್ಗಳು ಮೇಲುಸ್ತುವಾರಿ ನಡೆಸುತ್ತಿರುವ ಸಂಸ್ಥೆಗಳ ಸ್ವಂತ ಆಸ್ತಿಗಳಾಗಿಬಿಟ್ಟಿವೆ. ಇದರಿಂದ ಬಡ ಜನರಿಗೆ ತಮ್ಮ ಮಕ್ಕಳ ಮದುವೆ ಹಾಗೂ ಇತರೆ ಕಾರ್ಯಕ್ರಮಗಳನ್ನು ಮಾಡಬೇಕಾದಲ್ಲಿ ಸದರಿ ಹಾಲ್ಗಳಿಗೆ ಹೆಚ್ಚಿನ ಬಾಡಿಗೆ ಕೊಡಲು ಕಷ್ಟಕರವೆನಿಸುತ್ತಿದೆ. ಹಾಲ್ಗಳನ್ನು ನಿರ್ಮಿಸಿದ ಜಾಗ ಸರಕಾರಿ ಆಸ್ತಿಯಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಸಮುದಾಯದ ಏಳಿಗೆ/ಉನ್ನತಿಗಾಗಿ ಮೀಸಲಿಟ್ಟ ಹಣ ಖರ್ಚು ಮಾಡಿದೆ.
ಇಂತಹ ಮದುವೆ ಹಾಲ್ಗಳು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಿಗುವಂತೆ ಮಾಡಿಕೊಡಬೇಕೆಂದು ಅಲ್ಪಸಂಖ್ಯಾತರ ಕಲ್ಯಾಣ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಅಲ್ತಾಫ ಕೊಪ್ಪಳ, ಸದಸ್ಯರುಗಳಾದ ಮಹಮ್ಮದಸೋಹಿಲ್ ನಾರಾಯಣಕೇರಿ, ಹಿದಾಯತ ಕಾಗದಗಾರ, ಮೆಹಬೂಬ ಕದಡಿ, ಮೈನುದ್ದಿನ ಬಿಜಾಪುರ, ಸಮಾಜದ ಮುಖಂಡರಾದ ಹಾಜಿಅಲಿ ಕೊಪ್ಪಳ, ಸಮೀರ ತಾಂಬೊಲಿ, ಜಿಲಾನಿ ಖಾಜಿ ಮುಂತಾದವರಿದ್ದರು.
ರಾಯರ ಗುರುವೈಭವೋತ್ಸವಕ್ಕೆ ಭಕ್ತನ ವಿಶೇಷ ಸೇವೆ!
ರಾಯಚೂರು: ಜಿಲ್ಲೆಯ ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ಅಂಗವಾಗಿ ಭಕ್ತನೊಬ್ಬರು ಕೋಟ್ಯಂತರ ರೂಪಾಯಿ ಮೌಲ್ಯದ ನವರತ್ನ ಕವಚವನ್ನು ಸಮರ್ಪಿಸಿದ್ದಾರೆ.
ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಿದ ನವರತ್ನ ಕವಚವನ್ನು ರಾಯರ ಮಠದ ೩೭ನೇ ಪೀಠಾಧಿಪತಿ ಸುಜಯೀಂದ್ರ ತೀರ್ಥರು ಅವರ ಮೂಲಬೃಂದಾವನಕ್ಕೆ ಅರ್ಪಿಸಲಾಗಿದೆ. ಗುರುವೈಭವೋತ್ಸವದ ವಿಶೇಷ ಸೇವೆಯಾಗಿ ಬೆಂಗಳೂರು ಮೂಲದ ಭಕ್ತ ಸಂಪತ್ ಕುಮಾರ್ ಅವರು ಈ ಕವಚವನ್ನು ಸಮರ್ಪಿಸಿದ್ದಾರೆ.
ಸ್ವಪ್ನ ಆದೇಶ ಹಾಗೂ ರಾಯರ ಮೇಲಿನ ಭಕ್ತಿಯಿಂದ ಈ ಸೇವೆಯನ್ನು ಸಲ್ಲಿಸುತ್ತಿರುವುದಾಗಿ ಭಕ್ತ ಸಂಪತ್ ಕುಮಾರ್ ತಿಳಿಸಿದ್ದಾರೆ. ಇದೇ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಅವರು ಬೃಂದಾವನಕ್ಕೆ ಕವಚವನ್ನು ಸಮರ್ಪಿಸಿದರು.
ಇದರ ಜೊತೆಗೆ ಬ್ರಹ್ಮಕರಾರ್ಚಿತ ಮೂಲ ರಾಮದೇವರ ಮೂರ್ತಿಯ ಪೂಜೆಗೆ ರಜತ ಶೇಷವಾಹನ ಪೀಠವನ್ನೂ ಸಮರ್ಪಿಸಲಾಯಿತು. ಅನೇಕ ಭಕ್ತರು ಸೇವಾ ರೂಪದಲ್ಲಿ ರಜತ ಶೇಷವಾಹನ ಪೀಠವನ್ನು ಮಠಕ್ಕೆ ಅರ್ಪಿಸಿದರು.
T20 World Cup: ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಪ್ರಕಟ!
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ 2026ರ ಪುರುಷರ ಟಿ20 ವಿಶ್ವಕಪ್ ಸೂಪರ್–8 ಹಂತ ತೀವ್ರ ಕುತೂಹಲದ ಘಟ್ಟ ತಲುಪಿರುವ ನಡುವೆಯೇ, ಮುಂಬರುವ ಮಹಿಳಾ ಟಿ20 ವಿಶ್ವಕಪ್ 2026ರ ಅಧಿಕೃತ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಪ್ರಕಟಿಸಿದೆ.
ಐಸಿಸಿ ಪ್ರಕಟಿಸಿರುವ ವೇಳಾಪಟ್ಟಿಯಂತೆ, ಮಹಿಳಾ ಟಿ20 ವಿಶ್ವಕಪ್ 2026 ಜೂನ್ 12ರಂದು ಆರಂಭವಾಗಿ ಜುಲೈ 5ರಂದು ಮುಕ್ತಾಯಗೊಳ್ಳಲಿದೆ. ಈ ಪಂದ್ಯಾವಳಿ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯಲಿದ್ದು, ಒಟ್ಟು 12 ತಂಡಗಳು ಭಾಗವಹಿಸಲಿವೆ. ಸೆಮಿಫೈನಲ್ ಹಾಗೂ ಫೈನಲ್ ಸೇರಿ ಒಟ್ಟು 33 ಪಂದ್ಯಗಳು ನಡೆಯಲಿವೆ.
ಗುಂಪುಗಳ ವಿವರ:
ಗುಂಪು–1
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್
ಗುಂಪು–2
ವೆಸ್ಟ್ ಇಂಡೀಸ್, ಇಂಗ್ಲೆಂಡ್ (ಆತಿಥೇಯರು), ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್
ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಜೂನ್ 30 ಮತ್ತು ಜುಲೈ 2ರಂದು ನಡೆಯಲಿದ್ದು, ಫೈನಲ್ ಪಂದ್ಯ ಜುಲೈ 5ರಂದು ಲಂಡನ್ ನಗರದಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ:
ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 14ರಂದು ಪಾಕಿಸ್ತಾನದ ವಿರುದ್ಧ ಎಡ್ಜ್ಬಾಸ್ಟನ್ನಲ್ಲಿ ಆಡಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಭಾರತದ ಉಳಿದ ಗುಂಪು ಹಂತದ ಪಂದ್ಯಗಳು:
- ಜೂನ್ 17 – ನೆದರ್ಲ್ಯಾಂಡ್ಸ್ ವಿರುದ್ಧ (ಹೆಡಿಂಗ್ಲೆ)
- ಜೂನ್ 25 – ಬಾಂಗ್ಲಾದೇಶ ವಿರುದ್ಧ (ಓಲ್ಡ್ ಟ್ರಾಫರ್ಡ್)
- ಜೂನ್ 28 – ಆಸ್ಟ್ರೇಲಿಯಾ ವಿರುದ್ಧ (ಲಾರ್ಡ್ಸ್)
ವಿಶೇಷವಾಗಿ ಲಾರ್ಡ್ಸ್ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿರಲಿದೆ.
ಮಹಿಳಾ ಟಿ20 ವಿಶ್ವಕಪ್ 2026 – ಪ್ರಮುಖ ಪಂದ್ಯಗಳು:
- ಜೂನ್ 12: ಇಂಗ್ಲೆಂಡ್ × ಶ್ರೀಲಂಕಾ – ಎಡ್ಜ್ಬಾಸ್ಟನ್
- ಜೂನ್ 14: ಭಾರತ × ಪಾಕಿಸ್ತಾನ – ಎಡ್ಜ್ಬಾಸ್ಟನ್
- ಜೂನ್ 21: ದಕ್ಷಿಣ ಆಫ್ರಿಕಾ × ಭಾರತ – ಓಲ್ಡ್ ಟ್ರಾಫರ್ಡ್
- ಜೂನ್ 28: ಆಸ್ಟ್ರೇಲಿಯಾ × ಭಾರತ – ಲಾರ್ಡ್ಸ್
- ಜೂನ್ 30: ಸೆಮಿಫೈನಲ್–1 – ದಿ ಓವಲ್
- ಜುಲೈ 2: ಸೆಮಿಫೈನಲ್–2 – ದಿ ಓವಲ್
- ಜುಲೈ 5: ಫೈನಲ್ – ಲಾರ್ಡ್ಸ್ ಕ್ರಿಕೆಟ್ ಮೈದಾನ.

