Home Blog Page 6

ಗದಗ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ಇಬ್ಬರು ಮಹಿಳೆಯರ ಮೇಲೆ ಹರಿದ ಬಸ್; ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

0

ಗದಗ: ನಗರದ ಗದಗ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಇಂದು ನಡೆದ ಭೀಕರ ಅಪಘಾತ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಇಬ್ಬರು ಮಹಿಳೆಯರ ಮೇಲೆ ಸಾರಿಗೆ ಸಂಸ್ಥೆಯ ಬಸ್ ಹರಿದ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಘಟನೆ ವಿವರ:

ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಮಹಿಳೆಯರು ಬಸ್ ನಿಲ್ದಾಣದಿಂದ ಹೊರಬರುತ್ತಿದ್ದ ವೇಳೆ ಪ್ಲಾಟ್‌ಫಾರಂ ಕಡೆಗೆ ಬರುತ್ತಿದ್ದ ಬಸ್ ಏಕಾಏಕಿ ವೇಗವಾಗಿ ಅವರತ್ತ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಮಹಿಳೆಯರು ಬಸ್ ಮುಂಭಾಗದಲ್ಲಿ ಸಿಲುಕುವ ಭೀಕರ ಕ್ಷಣಗಳು ದಾಖಲಾಗಿರುವುದು ಗಮನಕ್ಕೆ ಬಂದಿದೆ.

ಗಾಯಾಳುಗಳ ಸ್ಥಿತಿ:

ಅಪಘಾತದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ಅವರಲ್ಲಿ ಓರ್ವ ಮಹಿಳೆಗೆ ಕಾಲಿನಲ್ಲಿ ಗಂಭೀರ ಗಾಯವಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ತಕ್ಷಣವೇ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಗಾಯಾಳುಗಳಿಗೆ ಗದಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (GIMS)ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಗಮನಾರ್ಹವಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಕ್ರಮ:

ಈ ಘಟನೆ ಗದಗ–ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗುತ್ತಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕನ ವಿರುದ್ಧ ನಿರ್ಲಕ್ಷ್ಯ ಚಾಲನೆ ಸಂಬಂಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಸುರಕ್ಷತೆ ಕುರಿತ ಆತಂಕ:

ಗದಗ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಿರುವ ಸಂದರ್ಭಗಳಲ್ಲಿ ವಾಹನ ಸಂಚಾರ ನಿಯಂತ್ರಣದ ಕೊರತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾರ್ಚ್‌ 3ರಂದು ಗದಗ–ಬೆಟಗೇರಿ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ!

0

ಗದಗ: ಗದಗ–ಬೆಟಗೇರಿ ನಗರಸಭೆಯ 10ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಯು ದಿನಾಂಕ 03-03-2026ರಂದು ನಡೆಯಲಿದೆ.

ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ–1964ರ ಕಲಂ 42(2)ರಂತೆ ಹಾಗೂ ಸರ್ಕಾರದ ಪ್ರಕಟಣೆ ಸಂಖ್ಯೆ ಯುಡಿಡಿ/10/ಎಮ್‌ಎಲ್‌ಆರ್/2024(1) ದಿನಾಂಕ 05-08-2024 ಮತ್ತು ಗದಗ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ಈ ಚುನಾವಣೆ ನಡೆಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಸಭೆ ಕಾರ್ಯಾಲಯದಲ್ಲಿ ದಿನಾಂಕ 03-03-2026ರಂದು ಮಧ್ಯಾಹ್ನ 2.00 ಗಂಟೆಗೆ ಚುನಾವಣಾ ಸಭೆ ನಡೆಯಲಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತರಾದ ಅಭ್ಯರ್ಥಿಗಳು ಅದೇ ದಿನ ಬೆಳಿಗ್ಗೆ 10.00ರಿಂದ ಮಧ್ಯಾಹ್ನ 12.00 ಗಂಟೆಯೊಳಗೆ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದು.

ಮಧ್ಯಾಹ್ನ 2.00 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಪರಿಶೀಲನೆಯ ತಕ್ಷಣ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ಮತದಾನವನ್ನು ಕೈ ಎತ್ತುವ ಮೂಲಕ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಚುನಾವಣಾ ಸಭೆ ಆರಂಭವಾಗುವ 15 ನಿಮಿಷಗಳ ಮುಂಚಿತವಾಗಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಸರ್ಕಾರದ ಆದೇಶದಂತೆ ವರ್ಗವಾರು ಮೀಸಲಾತಿ ವಿವರಗಳನ್ನು ಈ ಚುನಾವಣಾ ನೋಟೀಸ್‌ಗೆ ಲಗತ್ತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿದಿನ ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ? ಇದನ್ನೊಮ್ಮೆ ಓದಿ!

0

ನೈರ್ಮಲ್ಯದ ದೃಷ್ಟಿಯಿಂದ ಪ್ರತಿದಿನ ಸ್ನಾನ ಮಾಡುವುದು ಅತ್ಯಂತ ಉತ್ತಮ ಅಭ್ಯಾಸ. ಹೀಗಾಗಿ ಬಹುತೇಕ ಜನರು ದಿನವೂ ತಪ್ಪದೆ ಸ್ನಾನ ಮಾಡುತ್ತಾರೆ.

ಕೆಲವರು ತಣ್ಣೀರಿನಲ್ಲಿ, ಇನ್ನೂ ಕೆಲವರು ಉಗುರುಬೆಚ್ಚಗಿನ ನೀರಲ್ಲಿ, ಮತ್ತಷ್ಟು ಮಂದಿ ಚಳಿಗಾಲ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಸುಡು ಬಿಸಿ ನೀರಿನಿಂದಲೇ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ.

ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹಕ್ಕೆ ರಿಲ್ಯಾಕ್ಸ್‌ ಸಿಗುತ್ತದೆ, ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ತಜ್ಞರ ಪ್ರಕಾರ, ಅತಿಯಾಗಿ ಬಿಸಿ ನೀರನ್ನು ಬಳಸುವುದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹಾಗಾದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂಬುದನ್ನು ನೋಡೋಣ.

ಚರ್ಮ ಒಣಗುವುದು:

ಬಿಸಿನೀರಿನ ಸ್ನಾನ ಚರ್ಮದ ನೈಸರ್ಗಿಕ ತೇವಾಂಶ ಮತ್ತು ರಕ್ಷಣಾತ್ಮಕ ತೈಲಗಳನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮ ಒಣಗುವುದು, ತುರಿಕೆ, ಕಿರಿಕಿರಿ ಹಾಗೂ ಚರ್ಮದ ಅಲರ್ಜಿ ಸಮಸ್ಯೆಗಳು ಉಂಟಾಗಬಹುದು.

ಕೂದಲು ಮತ್ತು ನೆತ್ತಿಗೆ ಹಾನಿ:

ಬಿಸಿನೀರು ಕೂದಲಿನ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ನೆತ್ತಿ ಒಣಗುವುದು, ತಲೆಹೊಟ್ಟು ಹೆಚ್ಚಾಗುವುದು ಹಾಗೂ ಕೂದಲು ಉದುರುವಿಕೆ ಸಮಸ್ಯೆ ತೀವ್ರವಾಗಬಹುದು.

ರಕ್ತದೊತ್ತಡದಲ್ಲಿ ಏರಿಳಿತ:

ಸುಡು ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ದೇಹದ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ರಕ್ತದೊತ್ತಡ ಹಠಾತ್‌ವಾಗಿ ಕಡಿಮೆಯಾಗಿ ತಲೆತಿರುಗುವಿಕೆ, ಆಯಾಸ ಅಥವಾ ದುರ್ಬಲತೆ ಕಾಣಿಸಿಕೊಳ್ಳಬಹುದು.

ಕಣ್ಣುಗಳಿಗೆ ತೊಂದರೆ:

ಬಿಸಿ ನೀರಿನ ಆವಿಯ ನೇರ ಸಂಪರ್ಕ ಕಣ್ಣುಗಳ ನೈಸರ್ಗಿಕ ತೇವಾಂಶವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಕಣ್ಣುಗಳು ಕೆಂಪಾಗುವುದು, ಉರಿ ಮತ್ತು ತುರಿಕೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ದೇಹದ ತಾಪಮಾನ ಅಸಮತೋಲನ:

ನಿರಂತರವಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ದೇಹದ ನೈಸರ್ಗಿಕ ತಾಪಮಾನ ನಿಯಂತ್ರಣ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಚಳಿ ಹವಾಮಾನವನ್ನು ಎದುರಿಸುವ ಶಕ್ತಿ ಕಡಿಮೆಯಾಗಬಹುದು.

ತಜ್ಞರ ಸಲಹೆ:

ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಇದರಿಂದ ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದು, ನೈಸರ್ಗಿಕ ಎಣ್ಣೆಗಳು ಉಳಿಯುತ್ತವೆ ಹಾಗೂ ಕೂದಲು ಮತ್ತು ನೆತ್ತಿಗೆ ಹಾನಿಯಾಗುವುದಿಲ್ಲ.

ಮನರೇಗಾ ಉಳಿಸಿ, ಹಳ್ಳಿಗಳು, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮಾ ಗಾಂಧಿ ಹೆಸರು ರಕ್ಷಿಸಬೇಕು: ಡಿ.ಕೆ. ಶಿವಕುಮಾರ್

0

ಬೆಂಗಳೂರು: ದೀಪ ಆರುವಾಗ ಜೋರಾಗಿ ಉರಿಯುತ್ತದೆಯಂತೆ. ಅದೇ ರೀತಿ ಬಿಜೆಪಿಯ ಅಂತಿಮ ದಿನಗಳು ಸಮೀಪಿಸಿರುವ ಕಾರಣ, ಮಹಾತ್ಮಾ ಗಾಂಧಿ ಅವರ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆದ ಮನರೇಗಾ ಬಚಾವೋ ಸಂಗ್ರಾಮ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಈ ದೇಶ ಉಳಿಸಲು ಇಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತಾ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ 20 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಉದ್ಯೋಗ ಖಾತರಿ ಕಾರ್ಯಕ್ರಮ ನೀಡಿತ್ತು. ಇದು ದೇಶದ ಪಾಲಿಗೆ ಕ್ರಾಂತಿಕಾರಿ ಕಾರ್ಯಕ್ರಮ” ಎಂದು ತಿಳಿಸಿದರು.

ಮನರೇಗಾ ಉಳಿಸಿ, ಹಳ್ಳಿಗಳು, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮಾ ಗಾಂಧಿ ಹೆಸರು ರಕ್ಷಿಸಬೇಕು

“ಈ ಕಾರ್ಯಕ್ರಮದಲ್ಲಿ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ಮಾಡಬೇಕು ಎಂಬ ತೀರ್ಮಾನ ಮಾಡುವ ಅಧಿಕಾರ ಹೊಂದಿದ್ದವು. ಹಸಿದ ಹೊಟ್ಟೆ, ಖಾಲಿ ಜೇಬಿನ ನೋವು ಏನು ಎಂಬುದು ನಮಗೆ ಅರಿವಿದೆ. 60% ಗ್ರಾಮೀಣ ಭಾಗದ ಮಹಿಳೆಯರು ಕೂಲಿ ಮಾಡುತ್ತಿದ್ದಾರೆ.

ರಾಜ್ಯದಲ್ಲಿರುವ 5900 ಪಂಚಾಯ್ತಿಗಳಲ್ಲಿ, ಕನಿಷ್ಠ 1-2 ಕೋಟಿಯಷ್ಟು ಹಣವನ್ನು ಪಂಚಾಯಿತಿಗಳಲ್ಲಿ ನೀಡಿ ಅಲ್ಲಿ ಶಾಶ್ವತ ಆಸ್ತಿ ಸೃಷ್ಟಿಸಿ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿತ್ತು. ಮನರೇಗಾ ಉಳಿಸುವ ಮೂಲಕ, ಹಳ್ಳಿಗಳು, ಈ ದೇಶ, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮ ಗಾಂಧಿ ಅವರ ಹೆಸರು ಉಳಿಸಬೇಕಾಗಿದೆ” ಎಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನ

“ನೋಟಿನ ಮೇಲಿರುವ ಗಾಂಧಿ ಫೋಟೋವನ್ನು ತೆಗೆದು ನಿಮ್ಮ ಫೋಟೋ ಹಾಕಿಕೊಳ್ಳುವಂತೆ ನಾನು ಸವಾಲು ಹಾಕಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದೇವೆ.

ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ದೇಶದ ಬಡವರು, ಕೂಲಿ ಕಾರ್ಮಿಕರ ಕಾರ್ಯಕ್ರಮ. ಗ್ರಾಮೀಣ ಭಾಗದ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ. ಮತ್ತೊಮ್ಮೆ ಮನರೇಗಾ ಯೋಜನೆ ಮರುಸ್ಥಾಪಿಸಿ, ಉದ್ಯೋಗದ ಹಕ್ಕು ಹಾಗೂ ಗ್ರಾಮಗಳ ಸ್ವಯಂ ಆಡಳಿತ ಹಕ್ಕನ್ನು ಪುನರ್ ಸ್ಥಾಪಿಸಬೇಕಾಗಿದೆ” ಎಂದು ಸಂದೇಶ ನೀಡಿದರು.

ಕೇಂದ್ರ ಸರ್ಕಾರದ ನೂತನ ಕಾನೂನು ಮರಣ ಶಾಸನ

“ಕನ್ನಡಿಗರ ಮೇಲೆ, ಬಡವರ ಮೇಲೆ ಅನ್ಯಾಯ ನಡೆಯುತ್ತಿದೆ. ಈಗ ಹೊಸ ಯೋಜನೆಯಲ್ಲಿ ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಬಿಜೆಪಿ ಆಡಳಿತ ಯಾವುದೇ ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗುವುದಿಲ್ಲ. ನೆರೆ ರಾಜ್ಯ ಚಂದ್ರಬಾಬು ನಾಯ್ಡು ಅವರು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಸರ್ಕಾರ ಬಿದ್ದು ಹೋಗುವ ಭಯದಿಂದ ಅವರಿಗೆ ಓಲೈಕೆ ಮಾಡುತ್ತಿದ್ದಾರೆ.

ಈ ಬಡವರ ರಕ್ಷಣೆಗೆ ನಾವು ಹೋರಾಟ ಮಾಡಬೇಕಿದೆ. ಮರದಿಂದ ಬಿದ್ದ ಹೂವು ಯಾವತ್ತು ಅರಳುವುದಿಲ್ಲ. ನಮ್ಮ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮ ನೀಡಿದ್ದು ಕಾರ್ಮಿಕರ ಪ್ರತಿನಿತ್ಯದ ಬದುಕಿಗಾಗಿ. ಅವರ ಹೊಟ್ಟೆ ತುಂಬಿಸಲು. ಆದರೆ ಕೇಂದ್ರ ಸರ್ಕಾರದ ಈ ನೂತನ ಕಾನೂನು ಮರಣ ಶಾಸನವಾಗಿದೆ” ಎಂದು ಕಿಡಿಕಾರಿದರು.

ನೀವು ಇಂದು ಈ ಹೋರಾಟಕ್ಕೆ ಹೆಜ್ಜೆ ಹಾಕಿದ್ದು, ಬಡತನದ ಅನುಭವವಿರುವವರಿಗೆ ಮಾತ್ರ ಅನ್ನದ ಬೆಲೆ ಗೊತ್ತಿದೆ. ಮನರೇಗಾ ಕೂಡ ಉದ್ಯೋಗ ಗ್ಯಾರಂಟಿ ನೀಡುವ ಯೋಜನೆಯಾಗಿತ್ತು. ಬಡವರಿಗೆ ಆರ್ಥಿಕ ಶಕ್ತಿ ತುಂಬಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ತಂದಿದೆ. ಇದರ ಮೂಲಕ ನಿಮ್ಮ ಮನೆಯನ್ನು ಉಚಿತವಾಗಿ ಬೆಳಗಿಸಲಾಗುತ್ತಿದೆ. ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಮುಂದೆ 5 ಕೆ.ಜಿ ಅಕ್ಕಿ ಉಳಿದ ಐದು ಕೆ.ಜಿ ವಿವಿಧ ದಿನಸಿ ಪದಾರ್ಥ ನೀಡಲು ಸರ್ಕಾರ ಮುಂದಾಗಿದೆ. ಬಡ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ನೀಡಲಾಗುತ್ತಿದೆ. ಇದು ನಮ್ಮ ಸರ್ಕಾರದ ಐತಿಹಾಸಿಕ ತೀರ್ಮಾನ” ಎಂದರು.

ಗ್ಯಾರಂಟಿ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ

“ನಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಆದರೆ ಈ ಗ್ಯಾರಂಟಿ ಯೋಜನೆಗಳು ದೇಶದ ಯೋಜನೆಯಾಗಿದೆ. ಈ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಹೋರಾಟ ಮಾಡುವವನು ಗೆದ್ದೇ ಗೆಲ್ಲುತ್ತಾನೆ. ಯಾವ ಕಾರಣಕ್ಕೂ ಅವನಿಗೆ ಸೋಲಿನ ಭಯ ಇರುವುದಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಅದೇ ರೀತಿ ನಾವು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಹೆಜ್ಜೆ ಗುರುತು ಉಳಿಸಿಕೊಂಡು ಹೋಗಬೇಕು.

ದೇಶದಲ್ಲಿ ಮಹಾತ್ಮಾ ಗಾಂಧಿ ಹೆಸರು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ನೂರು ವರ್ಷವಾಗಿದೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದೆ. ಮನರೇಗಾ ನಾಶವಾಗಲು ಬಿಡುವುದಿಲ್ಲ, ರೈತರ ಉದ್ಯೋಗ ಕಿತ್ತುಕೊಳ್ಳಲು ಅವಕಾಶ ಕೊಡುವುದಿಲ್ಲ” ಎಂದು ಭರವಸೆ ನೀಡಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಹಕ್ಕು ಕಸಿಯುವ ಪ್ರಯತ್ನದಂತೆ, ಉದ್ಯೋಗದ ಹಕ್ಕನ್ನು ಕಸಿಯಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ವರ್ಷಕ್ಕೆ 5 ಕೋಟಿಯಷ್ಟು ಅನುದಾನ ಬಳಸಿಕೊಂಡು ಕೆಲಸ ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ.

ಬಡವರ ಬದುಕಿಗೆ ಉದ್ಯೋಗ ಖಾತ್ರಿ ಮೂಲಕ ಹೊಸ ರೂಪ ನೀಡಿದ್ದೇವೆ. 60 ಸಾವಿರ ಇಂಗು ಗುಂಡಿ, 54 ಸಾವಿರ ಕೊಟ್ಟಿಗೆ ನಿರ್ಮಾಣ ಮಾಡಿದ್ದೇವೆ. ನಿಮ್ಮದೇ ಜಮೀನಿನಲ್ಲಿ ಕೂಲಿ ಮಾಡಿಕೊಳ್ಳಲು, ಜಮೀನು ಮಟ್ಟ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂತಹ ಕಾರ್ಯಕ್ರಮವನ್ನು ಬದಲಾಯಿಸಲು ಅವಕಾಶ ನೀಡುವುದು ಬೇಡ. ನಮ್ಮ ಹೋರಾಟಕ್ಕೆ ನಿಮ್ಮ ಸಹಕಾರ ಬೇಕು” ಎಂದು ತಿಳಿಸಿದರು.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಶ್ವಾರಾಧ್ಯರ ಭವ್ಯ ರಥೋತ್ಸವ: ಅಬ್ಬೆತುಮಕೂರಿನಲ್ಲಿ ಭಕ್ತಿ ಸಾಗರ

0

ಯಾದಗಿರಿ: ಜಿಲ್ಲೆ ಮತ್ತೊಮ್ಮೆ ಭಕ್ತಿಭಾವದಲ್ಲಿ ತೇಲಿತು. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಅಬ್ಬೆತುಮಕೂರುನಲ್ಲಿ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ನೆರವೇರಿತು.

ಬೆಳಿಗ್ಗೆ ರಥಾಂಗ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಾ. ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದವು. ನಂತರ ನಂದಿಕೋಲು ನೃತ್ಯ ಹಾಗೂ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಜಾತ್ರೆಗೆ ವಿಶೇಷ ಮೆರುಗು ತಂದವು.

ಸಂಜೆ ನಡೆದ ರಥೋತ್ಸವದಲ್ಲಿ ಭಕ್ತರ ಜಯಘೋಷ ಗಗನಮುಟ್ಟಿತು. ಭಕ್ತರು ಕಾರಿಕಾ, ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿ ವ್ಯಕ್ತಪಡಿಸಿದರು.

ಜಾತ್ರೆಯಲ್ಲಿ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ, ರಾಮಲಿಂಗಾರೆಡ್ಡಿ, ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಅಪಾರ ಭಕ್ತರು ಆಗಮಿಸಿದ್ದು, ಅಬ್ಬೆತುಮಕೂರು ಕ್ಷೇತ್ರ ಭಕ್ತ ಸಾಗರವಾಗಿ ಮಾರ್ಪಟ್ಟಿತ್ತು.

ಹುಲಿ ದಾಳಿ ಬಳಿಕ ಸ್ಥಗಿತಗೊಂಡಿದ್ದ ಸಫಾರಿ ಮತ್ತೆ ಚಾಲು: ಬಂಡೀಪುರದಲ್ಲಿ ಬಿಗಿ ಬಂದೋಬಸ್ತ್

0

ಚಾಮರಾಜನಗರ: ಹುಲಿಗಳ ದಾಳಿಗೆ ಮೂವರು ರೈತರು ಬಲಿಯಾದ ಘಟನೆಗಳ ಬಳಿಕ ಸ್ಥಗಿತಗೊಂಡಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಸೇವೆ ಇದೀಗ ಪುನರಾರಂಭಗೊಂಡಿದೆ. ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಆರಂಭಿಸಲಾಗಿದೆ.

ಸಫಾರಿ ಅವಧಿಯನ್ನು ಎಂಟು ಗಂಟೆಯಿಂದ ಐದು ಗಂಟೆಗೆ ಇಳಿಸಲಾಗಿದೆ. ಬೆಳಿಗ್ಗೆ 6:30–9 ಮತ್ತು ಸಂಜೆ 3:30–6ರವರೆಗೆ ಮಾತ್ರ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ವಾಹನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿ 50% ಮಾತ್ರ ಕಾರ್ಯನಿರ್ವಹಣೆಗೆ ಇಡಲಾಗಿದೆ.

ಮೇಲುಕಾಮನಹಳ್ಳಿ ಕೇಂದ್ರದಿಂದ ಅರಣ್ಯ ಪ್ರವೇಶ ದ್ವಾರದವರೆಗೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೂ ಹುಲಿ ದಾಳಿ ಪ್ರಕರಣಗಳು ನಡೆದ ಹಿನ್ನೆಲೆ ಮಾನವ-ವನ್ಯಜೀವಿ ಸಂಘರ್ಷ ಮತ್ತೆ ಚರ್ಚೆಗೆ ಕಾರಣವಾಗಿದೆ.

ಚಾಮರಾಜನಗರದಲ್ಲಿ ರೈತ ಸಂಘಟನೆಗಳು ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ. ಸಫಾರಿ ಪುನಾರಂಭದಿಂದ ಸಂಘರ್ಷ ಹೆಚ್ಚಾಗಲಿದೆ ಎಂದು ಆರೋಪಿಸಿರುವ ರೈತರು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಫೆಬ್ರವರಿ 25ರಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಪ್ರವಾಸೋದ್ಯಮ ಚಟುವಟಿಕೆ ಪುನಶ್ಚೇತನ, ಇನ್ನೊಂದೆಡೆ ರೈತರ ಜೀವಭದ್ರತೆ — ಈ ಎರಡರ ನಡುವೆ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಶಾಸಕ ಸ್ಥಾನದಿಂದ ಅಮಾನತುಗೊಳಿಸಿ: ಡಾ. ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

0

ಗದಗ: ಶಾಸಕ ಡಾ. ಚಂದ್ರು ಲಮಾಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಹಟ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ‌ ಡಾ.ಚಂದ್ರು ಲಮಾಣಿ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಡಾ. ಚಂದ್ರು ಲಮಾಣಿಗೆ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದ್ದು,

ಶಿರಹಟ್ಟಿ ಪೇಟೆ ಆಂಜನೇಯ ದೇವಸ್ಥಾನದಿಂದ ತಹಶಿಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರುಗಳಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರಕರಣದ ಹಿನ್ನೆಲೆ

ಶಾಸಕ ಚಂದ್ರು ಲಮಾಣಿ, 1 ಕೋಟಿ ರೂಪಾಯಿ ಮೌಲ್ಯದ ಕಾಂಟ್ರಾಕ್ಟ್​ಗಾಗಿ ಗುತ್ತಿಗೆದಾರರಿಂದ 11 ಲಕ್ಷ ರೂಪಾಯಿ ಕಮಿಷನ್ ಕೇಳಿದ್ದರು. ಈ ಸಂಬಂಧ ಶಾಸಕ ಚಂದ್ರು ಲಮಾಣಿ, ಆಪ್ತ ಸಹಾಯಕರಾದ ಗುರು ಮತ್ತು ಮಂಜುನಾಥ್ ಅವರನ್ನು ಕೂಡ ಹಣ ಸ್ವೀಕರಿಸಿದ್ದಕ್ಕಾಗಿ ವಶಕ್ಕೆ ಪಡೆಯಲಾಗಿತ್ತು.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ವಿಜಯ ಪೂಜಾರ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿರುವ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿರುವಾಗಲೇ ದಾಳಿ ನಡೆದಿತ್ತು.

ಕಮಿಷನ್​ಗೆ ಬೇಡಿಕೆ ಇಟ್ಟ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಕಾರ್ಯಾಚರಣೆ ನಡೆದಿದ್ದು, ಪ್ಲಾನ್​ ಪ್ರಕಾರ ಪೂಜಾರ ಕಮಿಷನ್ ಕೊಡಲು ಒಪ್ಪಿಕೊಂಡಿದ್ದರು. ಅದರಂತೆ, ಆಸ್ಪತ್ರೆಯಲ್ಲಿ ಶಾಸಕರ ಪಿಎಗಳಿಗೆ ಮೊದಲ ಕಂತಿನ 5 ಲಕ್ಷ ರೂ.ಗಳನ್ನು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು.

ಗದಗ ಜಿಲ್ಲೆಯ ಸಂಕದಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ 1% ಕಮಿಷನ್ (ಲಂಚ) ಬೇಡಿಕೆ ಇಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

ವೈರಲ್ ವಿಡಿಯೋ ಬಯಲು ಮಾಡಿದ ಏರ್ ಫೈರ್ ಪ್ರಕರಣ: ಯಲಬುರ್ಗಾದ ಅಡ್ಡಪಲ್ಲಕ್ಕಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ ಜೈಲು ಪಾಲು

0

ಕೊಪ್ಪಳ: ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಅಡ್ಡಪಲ್ಲಕ್ಕಿ ಮೆರವಣಿಗೆ ಸಂಭ್ರಮ ಇದೀಗ ಕಾನೂನು ಗಂಭೀರತೆಯತ್ತ ತಿರುಗಿದೆ. ಗಾಳಿಯಲ್ಲಿ ಪಿಸ್ತೂಲು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಅವರನ್ನು ಬಂಧಿಸಲಾಗಿದೆ.

ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್ ದಾಖಲಿಸಲಾಗಿದೆ.

ಈ ಕುರಿತು ಮಾತನಾಡಿದ ಕೊಪ್ಪಳ ಎಸ್‌ಪಿ ರಾಮ್ ಎಲ್ ಅರಸಿದ್ದಿ, “ನಾವು ಸೋಶಿಯಲ್ ಮೀಡಿಯಾವನ್ನು ಸತತವಾಗಿ ಮಾನಿಟರಿಂಗ್ ಮಾಡುತ್ತೇವೆ. ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸುವುದು ಕಾನೂನುಬಾಹಿರ” ಎಂದು ಎಚ್ಚರಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ

ಜನವರಿ 28ರಂದು ಯಲಬುರ್ಗಾದ ಪ್ರಸಿದ್ಧ **ಶ್ರೀಧರ ಮುರಡಿ ಮಠ**ದಿಂದ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುತ್ತಿತ್ತು. ಈ ವೇಳೆ ಸಂಭ್ರಮದ ಭರದಲ್ಲಿ ಬಸನಗೌಡ ಪಾಟೀಲ್ ಪಿಸ್ತೂಲು ತೆಗೆಯುವ ಮೂಲಕ ಎರಡು ಸುತ್ತು ಏರ್ ಫೈರ್ ಮಾಡಿದ್ದಾರೆ.

ವೆಪನ್ ಲೈಸೆನ್ಸ್ ವಿಜಯಪುರ ಜಿಲ್ಲೆಗೆ ಮಾತ್ರ ಮಾನ್ಯವಾಗಿದ್ದರೂ, ಕೊಪ್ಪಳದಲ್ಲಿ ಬಳಸಿರುವುದು ಕಾನೂನು ಉಲ್ಲಂಘನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಸ್ತೂಲು ಹಾಗೂ ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ: ತಿರುಪತಿ ದೇವಸ್ಥಾನದಿಂದ ರಾಯರಿಗೆ ಶೇಷವಸ್ತ್ರ ಸಮರ್ಪಣೆ, HDK ದಂಪತಿ ಭಾಗಿ

0

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮದಿಂದ ನಡೆಯಿತು. ತಿರುಮಲ ತಿರುಪತಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ತರಲಾದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರ ಬೃಂದಾವನಕ್ಕೆ ಭಕ್ತಿಭಾವದಿಂದ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಭಾಗವಹಿಸಿದ್ದರು.

ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳನ್ನು ರಾಯರ ಮಠದ ಆಡಳಿತ ಮಂಡಳಿ ಸಾಂಪ್ರದಾಯಿಕವಾಗಿ ಸ್ವಾಗತಿಸಿತು. ಬಳಿಕ ಮೆರವಣಿಗೆಯ ಮೂಲಕ ಶೇಷವಸ್ತ್ರವನ್ನು ಮಠಕ್ಕೆ ತರಲಾಗಿದ್ದು, ರಾಯರ ಮೂಲ ಬೃಂದಾವನದಲ್ಲಿ ಸಮರ್ಪಣೆ ನೆರವೇರಿಸಲಾಯಿತು.

ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಶೇಷವಸ್ತ್ರವನ್ನು ಸಮರ್ಪಿಸಿದರು. ಈ ವೇಳೆ ಅನೇಕ ಭಕ್ತರು ಉಪಸ್ಥಿತರಿದ್ದು, ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು.

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

0

ಚಿಕ್ಕಬಳ್ಳಾಪುರ: ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದು ದೇಶಾದ್ಯಂತ ‘ಮನರೇಗಾ ವನ್ನು ಉಳಿ’ ಅಭಿಯಾನ ಪ್ರಾರಂಭಿಸಲಾಗಿದೆ. ಚಳಿಗಾಲದ ಅಧಿವೇಶನ್ಲದಲಿ ಕೇಂದ್ರ ಭಾಜಪ ಸರ್ಕಾರ ಮನರೆಗಾ ವನ್ನು ರದ್ದುಪಡಿಸಿ, ವಿಬಿಜಿರಾಮ್ ಜಿ ಕಾಯ್ದೆಯನ್ನು ಜಾರಿ ಮಾಡಿದೆ. ಮನರೇಗಾದ ರದ್ದು ಅಗತ್ಯವಿರಲಿಲ್ಲ. ಕೂಲಿಕಾರರು, ಆದಿವಾಸಿಗಳು, ಸಣ್ಣರೈತರಿಗೆ, ಮಹಿಳೆಯರಿಗೆ ಉದ್ಯೋಗದ ಅನುಕೂಲ ಕಲ್ಪಿಸುವ ದಿಸೆಯಲ್ಲಿ 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ,

ನಾಯಕಿ ಸೋನಿಯಾ ಗಾಂಧಿಅವರ ನೇತೃತ್ವದಲ್ಲಿ ಈ ಕಾಯ್ದೆ ಜಾರಿಯಾಯಿತು. ಇದೇ ಕಾಯ್ದೆಯಲ್ಲದೇ, ಶಿಕ್ಷಣ, ಆಹಾರ, ಮಾಹಿತಿ ಹಕ್ಕು ಸೇರಿದಂತೆ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರು.ಆದರೆ ಈ ಎಲ್ಲ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿಯವರ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದರು.

ಮನರೇಗಾ ಅಡಿ 12.16 ಕೋಟಿ ಜನರಿಗೆ ಉದ್ಯೋಗ:

ಸದನದಲ್ಲಿ ಕೇವಲ 8 ಗಂಟೆಗಳ ಕಾಲ ಚರ್ಚೆ ಮಾಡಿದ ಕೇಂದ್ರ ಸರ್ಕಾರ, ನಂತರ ಹೊಸ ಕಾಯ್ದೆಯನ್ನು ಜಾರಿಗೆ ತಂದರು. ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಜೀವಿಕ ಮಿಷನ್ ಗ್ರಾಮೀಣ ಕಾಯ್ದೆ , 12.16 ಕೋಟಿ ಜನರು ಕೆಲಸ ಪಡೆಯುತ್ತಿದ್ದರು. ಇದರಲ್ಲಿ ಸುಮಾರು 53 % ಉದ್ಯೋಗ ಪಡೆಯುತ್ತಿದ್ದರು. ಅಲ್ಲದೇ ಪರಿಶಿಷ್ಟ ಜಾತಿಯ 17% ಮತ್ತು ಪರಿಶಿಷ್ಟ ವರ್ಗದ 11 % ಜನರು ಉದ್ಯೋಗ ಪಡೆಯುತ್ತಿದ್ದರು. ಈ ಎಲ್ಲ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದರು.

ಮನರೇಗಾ ಕಾಯ್ದೆಗೆ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮಾಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು. 100 ದಿನಗಳ ಉದ್ಯೋಗದ ಖಾತ್ರಿ ನೀಡುತ್ತಿದ್ದ ಮನರೇಗಾ ಕಾಯ್ದೆಯಡಿ, ಕೂಲಿಕಾರರು ತಮ್ಮ ಸ್ಥಳೀಯ ಮಟ್ಟದಲ್ಲಿಯೇ ಕೆಲಸ ಮಾಡಬಹುದಿತ್ತು. ಗ್ರಾಮಪಂಚಾಯತಿ ಮತ್ತು ಗ್ರಾಮಸಭೆಗಳು ನಿರ್ಧರಿಸುವ ಅಧಿಕಾರವಿತ್ತು. ಆದರೀಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ. ಕೇಂದ್ರದ ಅನುದಾನ ,

ಅನುಮತಿ ಇಲ್ಲದೇ , ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕೆಲಸವಾಗಲು ಸಾಧ್ಯ. ಆದ್ದರಿಂದ ಮನರೇಗಾ ವನ್ನು ಮುಂದುವರೆಸಬೇಕೆಂಬುದು ಕಾಂಗ್ರೆಸ್ ಸರ್ಕಾರದ ಒತ್ತಾಯವಾಗಿದೆ. ಮನರೇಗಾ ದಲ್ಲಿ 100 ದಿನ ಭತ್ಯೆಯನ್ನು ತಪ್ಪದೇ ಕೊಡಲಾಗುತ್ತಿತ್ತು. ಹೊಸ ಕಾಯ್ದೆಯಂತೆ ಕೇಂದ್ರ 60% ಅನುದಾನ ಮತ್ತು ರಾಜ್ಯಗಳು 40% ಅನುದಾನ ಕೊಡಬೇಕಾಗಿದೆ. ರಾಜ್ಯದ ಹಿತವನ್ನು ಕಾಪಾಡುವಲ್ಲಿ ಕೇಂದ್ರ ಸೋತಿದೆ. ಅದ್ದರಿಂದ ವಿಬಿಜಿರಾಮ್ ಜಿ ರದ್ದುಪಡಿಸಿ, ಮನರೇಗಾ ವನ್ನು ಮರುಸ್ಥಾಪಿಸಲು ದೇಶಾದ್ಯಂತ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ ಎಂದರು.

error: Content is protected !!