Home Blog Page 7

ಹುಲಿ ಪ್ರತ್ಯಕ್ಷ: ಮಡುವಿನಹಳ್ಳಿ ಗ್ರಾಮದಲ್ಲಿ ಹೆಚ್ಚಿದ ಆತಂಕ!

ಮೈಸೂರು: ಭಾರೀ ಗಾತ್ರದ ಹುಲಿ ಕಾಣಿಸಿಕೊಂಡ ಹಿನ್ನೆಲೆ ಜನತೆ ಭಯಭೀತರಾಗಿರುವ ಘಟನೆ
ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಮಡುವಿನಹಳ್ಳಿ ಗ್ರಾಮದ ಸುತ್ತಮುತ್ತ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಈ ಹಿನ್ನಲೆ ಗ್ರಾಮದ ರೈತ ಮಲ್ಲಿಕ್ ಪ್ರಸಾದ್ ರವರ ಜಮೀನಿನ ತುಸು ದೂರದ ಹಳ್ಳ ಒಂದರಲ್ಲಿ ಅರಣ್ಯ ಇಲಾಖೆ ಕ್ಯಾಮರಾ ಟ್ರ್ಯಾಪ್ ಅಳವಡಿಸಿತ್ತು.

ಮುಂಜಾನೆ ಇಲಾಖೆ ಕ್ಯಾಮೆರಾದಲ್ಲಿ ಹುಲಿ ತಿರುಗಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಮಡುವಿನಹಳ್ಳಿ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಸಮೀಪದ ಹೊಸವೀಡುಹುಂಡಿ, ಚಿಲಕಹಳ್ಳಿ,

ಹೆಡಿಯಾಲ ಗ್ರಾಮಗಳಲ್ಲೂ ಹುಲಿ ತಿರುಗಾಡಿರುವ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿರುವ ಪರಿಣಾಮ ದಿನನಿತ್ಯ ರಾತ್ರಿ ವೇಳೆ ಜಮೀನುಗಳಿಗೆ ಬೆಳೆ ಕಾವಲು ಕಾಯಲು ತೆರಳುವ ರೈತರು ಭಯಭೀತರಾಗಿದ್ದು ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಸಿಲಿಂಡರ್ ಸೋರಿಕೆ: ಬೆಂಕಿಯಿಂದ ಕೂದಲೆಳೆ ಅಂತರದಲ್ಲಿ ಅತ್ತೆಸೊಸೆ ಪಾರು!

ಮೈಸೂರು: ಹುಣಸೂರು ತಾಲ್ಲೂಕಿನ ವಡ್ಡರಗುಡಿಯಲ್ಲಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಅತ್ತೆ-ಸೊಸೆ ಪವಾಡದ ರೀತಿ ಪಾರಾಗಿರುವ ಘಟನೆ ಜರುಗಿದೆ.

ಘಟನೆಯಲ್ಲಿ ಚಿನ್ನಾಭರಣ ಸೇರಿದಂತೆ ಪದಾರ್ಥಗಳು ನಾಶವಾಗಿದೆ. ಘಟನೆಯಿಂದ ಮನೆಯ ಮೇಲ್ಚಾವಣಿ ಹಾನಿಯಾಗಿದೆ. ಚಿನ್ನಾಭರಣ, ಆಹಾರ ಪದಾರ್ಥಗಳು, ವಸ್ತುಗಳು ಬೆಂಕಿಗಾಹುತಿಯಾಗಿದೆ.

ಘಟನೆಯಲ್ಲಿ 60 ಗ್ರಾಂ ಚಿನ್ನಾಭರಣ 3 ಲಕ್ಷ ರೂ. ನಗದು ಸೇರಿ ಮನೆಯಲ್ಲಿದ್ದ ವಸ್ತುಗಳು ಬೆಂಗಿಗಾಹುತಿಯಾಗಿದೆ. ಸಿಲಿಂಡರ್‌ನ ಜೋರು ಶಬ್ದ ಕೇಳಿ ನೆರೆಹೊರೆಯವರು ಬಂದು ಇಬ್ಬರನ್ನೂ ರಕ್ಷಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್’ನವರಿಗೆ ತಮಿಳುನಾಡು ಸರ್ಕಾರವನ್ನು ಧಿಕ್ಕರಿಸಿ ಮೇಕೆದಾಟು ಯೋಜನೆ ಮಾಡಲು ಸಾಧ್ಯವಿಲ್ಲ: HDK

ಮೈಸೂರು: ಕಾಂಗ್ರೆಸ್’​​ನವರಿಗೆ ತಮಿಳುನಾಡು ಸರ್ಕಾರವನ್ನು ಧಿಕ್ಕರಿಸಿ ಮೇಕೆದಾಟು ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್‌. ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಹಳೆಯ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಕಾಂಗ್ರೆಸ್​​ನವರಿಗೆ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿಯಿಲ್ಲ,

ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಸರ್ಕಾರವನ್ನು ಧಿಕ್ಕರಿಸಿ ಮೇಕೆದಾಟು ಯೋಜನೆ ಮಾಡಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇಂತಹ ಪರಿಸ್ಥಿತಿಯಲ್ಲಿ ಮೇಕೆದಾಟು ಯೋಜನೆ ಕಾಂಗ್ರೆಸ್​​ನಿಂದ ಜಾರಿಯಾಗಲು ಸಾಧ್ಯವಿಲ್ಲ ಎಂದರು.

ತಮಿಳುನಾಡು ಸರ್ಕಾರವನ್ನು ಒಪ್ಪಿಸದೇ ಮೇಕೆದಾಟು ಯೋಜನೆ ಜಾರಿ ಮಾಡಲು ಕಚೇರಿ ತೆರೆದರೆ ಏನೂ ಪ್ರಯೋಜನವಿಲ್ಲ. ಈಗ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್​​ನವರು. ಜಾರಿ ಮಾಡದೆ ಎರಡು ವರ್ಷದಿಂದ ಸುಮ್ಮನಿದ್ದು,

ಈಗ ನನ್ನ ಮೇಲೆ ಜವಾಬ್ಧಾರಿ ಹೊರಿಸುತ್ತಿದ್ದಾರೆ. ನಾನು ಹೇಗೆ ಮಾಡಲಿ. ಮೊದಲು ತಮ್ಮ ತಮಿಳುನಾಡಿನ ಮಿತ್ರಪಕ್ಷ ಒಪ್ಪಿಸಲಿ. ಐದೇ ನಿಮಿಷದಲ್ಲಿ ಪ್ರಧಾನ ಮಂತ್ರಿಗಳಿಂದ ಮೇಕೆದಾಟು ಯೋಜನೆಗೆ ನಾನು ಒಪ್ಪಿಗೆ ಕೊಡಿಸುತ್ತೇನೆ ಎಂದು ಹೆಚ್​ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಸರ್ಕಾರ ಐಸಿಯುನಲ್ಲಿದೆ: ರೇಣುಕಾಚಾರ್ಯ

ಬೆಂಗಳೂರು: ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಸರ್ಕಾರ ಐಸಿಯುನಲ್ಲಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಾನೇ ಸಿಎಂ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಎಲ್ಲಾ ದೇವರ ಮೊರೆ ಹೋಗುತ್ತಿದ್ದಾರೆ.

ಇವರಿಬ್ಬರ ಜಗಳದಲ್ಲಿ ಕೂಸು ಬಡವಾದಂತಾಗಿದೆ ರಾಜ್ಯದ ಸ್ಥಿತಿ. ಗುಂಡಿ ಮುಚ್ಚಲೂ ಇವರ ಬಳಿ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರೈತರ ಸಮಸ್ಯೆಗಳಿಗೋಸ್ಕರ ಶುಕ್ರವಾರ ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿದ್ದೆವು. 21ರಂದು ದಾವಣೆಗೆರೆಯಲ್ಲಿ ಪ್ರತಿಭಟನೆ ಮಾಡಿದಾಗ 1,000 ಪೊಲೀಸರನ್ನು ನಿಯೋಜಿಸಿ ನಮ್ಮನ್ನು ಬಂಧಿಸಿದ್ದರು. ಪೊಲೀಸರು ಸರ್ಕಾರದ ಏಜೆಂಟರಾಗಿ ಕೆಲಸ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಭದ್ರ ಬಲದಂಡೆ ನಾಲೆ ಸೀಳಿ ನೀರು ತೆಗೆದುಕೊಂಡು ಹೋಗಲು ಯಡಿಯೂರಪ್ಪ ಆದೇಶ ಮಾಡಿಲ್ಲ ಎಂದು ಕಾಂಗ್ರೆಸ್‌ನವರು ಈಗ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಇಂದು ಯಡಿಯೂರಪ್ಪನವರ ಗಮನಕ್ಕೆ ಕೂಡಾ ತಂದಿದ್ದೇವೆ. ದೊಡ್ಡ ದೊಡ್ಡ ನೀರಾವರಿ ಯೋಜನೆಗಳನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದಿದ್ದಾರೆ.

ಸ್ನೇಹಿತರಿಂದಲೇ ಸುಲಿಗೆ ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್!

ಬೆಂಗಳೂರು:- ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಪಬ್‌ಗೆ ಪಾರ್ಟಿಗೆ ಕರೆದ ಸ್ನೇಹಿತರೇ ಸುಲಿಗೆ ಮಾಡಿಸಿದ್ದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಪವನ್, ಪ್ರೇಮ್ ಶೆಟ್ಟಿ, ಅಚಲ್, ತರುಣ್ ಬಂಧಿತರು.

ಚಂದನ್ ಎನ್ನುವ ಯುವಕನಿಗೆ ಪವನ್ ಮತ್ತು ಅಚಲ್ ಎಂಬಿಬ್ಬರು ಸ್ನೇಹಿತರಿದ್ದರು. ಚಂದನ್ ಅರ್ಥಿಕವಾಗಿ ಚನ್ನಾಗಿದ್ದ. ಕಳೆದ ಮೇ 1 ರಂದು ಚಂದನ್‌ಗೆ ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್‌ಗೆ ಬರುವಂತೆ ಹೇಳಿದ್ದರು.

ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಪಾರ್ಟಿ ಮಾಡಿದ್ದರು. ನಂತರ ಜಾಲಿ ರೈಡ್ ಹೋಗೋಣ ಅಂತಾ ಚಂದನ್ ಕಾರಿನಲ್ಲೇ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ ಮೂರು ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಅಂತಾ ಚಂದನ್‌ಗೆ ಮನವೊಲಿಸಿದ್ದರು.

ಇದಾದ ಒಂದು ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಲಿಗೆಕೋರರಿಗೆ ಸುಪಾರಿ ನೀಡಿ ಸುಲಿಗೆ ಮಾಡಿರುವುದು ಗೊತ್ತಾಗಿತ್ತು. ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

5 ಬಸ್‌’ಗಳ ನಡುವೆ ಸರಣಿ ಅಪಘಾತ: ಅಮರನಾಥ ಯಾತ್ರೆಗೆ ತೆರಳುತ್ತಿದ್ದಾಗ ದುರಂತ – ಹಲವರು ಗಂಭೀರ!

ಶ್ರೀನಗರ: ಕಾಶ್ಮೀರದ ರಾಂಬನ್‌ನ ಚಂದರ್‌ಕೋಟ್ ಲಂಗರ್ ಪಾಯಿಂಟ್‌ನಲ್ಲಿ ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ ಐದು ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಜರುಗಿದೆ.

ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಮರನಾಥ ಯಾತ್ರೆಗಾಗಿ ಭಕ್ತರು ಐದು ಬಸ್‌ಗಳ ಮೂಲಕ ಪಹಲ್ಗಾಮ್‌ಗೆ ತೆರಳುತ್ತಿದ್ದರು. ಈ ವೇಳೆ ಲಂಗರ್ ಪಾಯಿಂಟ್‌ನಲ್ಲಿ ನಾಲ್ಕು ಬಸ್‌ಗಳು ನಿಂತಿದ್ದವು. ಇದೇ ಸಂದರ್ಭದಲ್ಲಿ ಯಾತ್ರೆಯ ಬೆಂಗಾವಲು ಪಡೆಯ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ಕಳೆದುಕೊಂಡು ಇನ್ನುಳಿದ ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಡಿಎಚ್ ರಾಂಬನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಯಾರಿಗೂ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಧನಂಜಯ ಫಸ್ಟ್‌ ಲುಕ್‌ ರಿಲೀಸ್: ಡಿಫರೆಂಟ್‌ ಲುಕ್‌ ನಲ್ಲಿ ಡಾಲಿ

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಹಾಗೂ ಡಾಲಿ ಧನಂಜಯ್‌ ನಟನೆಯ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಸದ್ಯ ಡಾಲಿ ಧನಂಜಯ್ ಅವರ ಫಸ್ಟ್‌ ಲುಕ್‌ ಅನಾವರಣ ಮಾಡಲಾಗಿದ್ದು ಫಸ್ಟ್‌ ಲುಕ್‌ ನಲ್ಲಿ ಡಾಲಿ ಧನಂಜಯ್‌ ಮಾಸ್‌ ಮತ್ತು ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ಧನಂಜಯ್‌ ಡಿಫರೆಂಟ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್‌ ಆಗಿರುವ ಪೋಸ್ಟರ್‌ ನಲ್ಲಿ ನಟ ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಧನಂಜಯ್‌ ನೋಡಿದರೆ ಹಳೇ ಕಾಲದ ನೆನಪು ಬರುವಂತಿದೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಡಾಲಿ ಧನಂಜಯ್‌, ‘ಒಬ್ಬ ನಟ ದೊಡ್ಡ ದೃಷ್ಟಿಕೋನ ಹಾಗೂ ಸಿನಿಮಾದ ಬಗ್ಗೆ ಉತ್ಸಾಹ ಹೊಂದಿರುವ ನಿರ್ದೇಶಕರನ್ನು ಕಂಡುಕೊಂಡಾಗ ಮಗುವಿನಂತೆ ನಟರು ನಟನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಆ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾನೆ. ತಂಡವು ತಮ್ಮ ಹೃದಯ ಮತ್ತು ಆತ್ಮವನ್ನು ಒಂದು ಯೋಜನೆಗೆ ಸೇರಿಸಿದಾಗ ಆ ನಟ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಾನೆ’ ಎಂದಿದ್ದಾರೆ.

‘ಹೇಮಂತ್ ಎಂ. ರಾವ್, ನಿರ್ಮಾಪಕ ವೈಶಾಕ್ ಜೆ. ಗೌಡ, ಸಂಗೀತ ನಿರ್ದೇಶಕ ಚರಣ್ ರಾಜ್, ಕ್ಯಾಮೆರಾ ಮ್ಯಾನ್ ಅದ್ವೈತ ಗುರುಮೂರ್ತಿ ಅವರಂತಹ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. 666 ಆಪರೇಷನ್ ಡ್ರೀಮ್ ಥಿಯೇಟರ್, ಪ್ರೇಕ್ಷಕರನ್ನು ಆರಂಭದಿಂದಲೇ ಹಿಡಿದಿಟ್ಟುಕೊಳ್ಳುವ ಸಿನಿಮಾ. ನಾನು ಖಚಿತವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಈ ಚಿತ್ರವು ವಿಭಿನ್ನ ಜಗತ್ತಿನಲ್ಲಿ ನಡೆಯುತ್ತದೆ ಮತ್ತು ನಾವು ಹಲವಾರು ಅಚ್ಚರಿಗಳನ್ನು ಜೋಡಿಸಿದ್ದೇವೆ’ ಎಂದು ಧನಂಜಯ ಹೇಳಿದ್ದಾರೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾವನ್ನು ಹೇಮಂತ್‌ ಎಂ ರಾವ್‌ ನಿರ್ದೇಶನ ಮಾಡುತ್ತಿದ್ದು ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

‘ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ’: ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ರಶ್ಮಿಕಾ ಮಂದಣ್ಣ

ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಟಿ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು ಎಂದು ಹೇಳುವ ಮೂಲಕ ನಟಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ಸಿನಿಮಾದಲ್ಲಿ ನಟಿಸಿ, ನನ್ನ ಮೊದಲ ಚೆಕ್ ಸಿಕ್ಕಾಗ, ಮನೆಯಲ್ಲಿ ಏನೆಲ್ಲಾ ಮಾತಾಡುತ್ತಿದ್ದರು ಅಂತ ನನಗೆ ನೆನಪಿದೆ. ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ ಕೂರ್ಗ್ ಸಮುದಾಯದಲ್ಲಿ, ಯಾರೂ ಸಿನಿಮಾ ಜಗತ್ತಿಗೆ ಬಂದಿರಲಿಲ್ಲ ಅಂತ ನನಗನಿಸುತ್ತೆ. ಇಡೀ ಕೂರ್ಗ್​ ಸಮುದಾಯದಲ್ಲಿ ನಾನೇ ಮೊದಲು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ನಮ್ಮ ಸಮುದಾಯದವರು ತುಂಬಾನೇ ಜಡ್ಜ್ ಮಾಡುತ್ತಾರೆ. ನಾನು ಆಡಿಷನ್ ಮಾಡುತ್ತೇನೆ ಎಂದು ನನ್ನ ಕುಟುಂಬದವರಿಗೆ ಹೇಳಿರಲಿಲ್ಲ. ಸಿನಿಮಾ ರಂಗಕ್ಕೆ ಹೋಗುತ್ತೇನೆ ಎಂದು ಕೂಡ ಅವರಿಗೆ ತಿಳಿಸಿರಲಿಲ್ಲ’ ಎಂದು ರಶ್ಮಿಕಾ ಹೇಳಿದ್ದಾರೆ.

ಸದ್ಯ ರಶ್ಮಿಕಾ ಹೇಳಿಕೆ ಸಾಕಷ್ಟು ಟೀಕೆಗೆ ಕಾರಣವಾಗಿದೆ. ನಟಿಗೆ ಚಿತ್ರರಂಗದ ಬಗ್ಗೆ ತಿಳುವಳಿಕೆಯೇ ಇಲ್ಲ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ. ಅಂದ ಹಾಗೆ ಭಾರತ ಚಿತ್ರರಂಗದಲ್ಲಿ ತುಂಬಾನೇ ಖ್ಯಾತಿ ಪಡೆದಿರೋ ಪ್ರೇಮಾ ಅವರು ಕೂಡ ಕೊಡವ ಸಮುದಾಯದವರೇ. ಅವರು ಗಳಿಸಿದ ಖ್ಯಾತಿ ತುಂಬಾನೇ ದೊಡ್ಡದು. ರಶ್ಮಿಕಾ ಹುಟ್ಟುವಾಗ ಪ್ರೇಮಾ ಅವರು ಚಿತ್ರರಂಗಕ್ಕೆ ಬಂದು ಒಂದು ವರ್ಷ ಕಳೆದಿತ್ತು. ಅವರ ಬಗ್ಗೆ ರಶ್ಮಿಕಾ ಗೊತ್ತಿಲ್ಲ ಅನ್ನೋದು ಹಾಸ್ಯಾಸ್ಪದ ಎಂದು ನಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ಎಲ್ಲಾ ತಾಲೂಕಿಗೂ ನೀರು ಒದಗಿಸಲು ಅಗತ್ಯ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ. ಎಲ್ಲಾ ತಾಲೂಕಿಗೂ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.

“ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಜನಪ್ರತಿನಿಧಿಗಳ ಸಭೆ ಕರೆದು, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಹಿಂದೆ ಶಾಸಕರು ತಾಂತ್ರಿಕ ಸಮಿತಿ ರಚಿಸಿ ಎಂದಿದ್ದರು. ತಾಂತ್ರಿಕ ಸಮಿತಿ ವರದಿ ನಂತರ ಕಾಮಗಾರಿಗೆ ಮುಂದಾದರೂ ಮತ್ತೆ ಪ್ರತಿಭಟನೆ ಮಾಡಿದ್ದರು. ಅವರು ಪೈಪ್ ಲೈನ್ ಹಾಕಬೇಡಿ ತೆರೆದ ಕಾಲುವೆಯಲ್ಲಿ ನೀರು ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಪೈಪ್ ಲೈನ್ ಮಾಡುವುದು ಸರ್ಕಾರದ ತೀರ್ಮಾನ” ಎಂದು ತಿಳಿಸಿದರು.

“ಕೇಂದ್ರ ಸಚಿವ ಸೋಮಣ್ಣ ಅವರು ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರಿಂದ ಪರಿಶೀಲನೆಗೆ ಶಿಫಾರಸ್ಸು ಮಾಡಿದ್ದು, ಇದಕ್ಕೆ ಒಪ್ಪಿಗೆ ನೀಡಲಾಗಿದೆ. ನಮಗೆ ಕೇವಲ ಕುಣಿಗಲ್ ತಾಲೂಕು ಮಾತ್ರವಲ್ಲ. ಇಡೀ ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಿದ್ದು, ಅದಕ್ಕೆ ಪೂರಕವಾಗಿ ನಾನು ಯೋಜನೆ ಸಿದ್ಧಪಡಿಸಿದ್ದೇನೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೀರನ್ನು ಹಂಚಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಿತಕಾಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

“ನಮ್ಮ ಸರ್ಕಾರ ಇದ್ದಾಗ ಯೋಜನೆ ಆರಂಭಿಸಿ ಕಾಮಗಾರಿ ನಡೆಸಿದ್ದೆವು. ಬಿಜೆಪಿ ಸರ್ಕಾರ ಇದನ್ನು ನಿಲ್ಲಿಸಿತ್ತು. ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ವಾಪಸ್ ಪಡೆದರು. ಈ ಯೋಜನೆ ಮುಂದುವರಿಸುವುದಾಗಿ ಯಡಿಯೂರಪ್ಪ ಹೇಳಿದರೂ ನಂತರ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದರು. ಇದೆಲ್ಲವೂ ಸರ್ಕಾರದ ತೀರ್ಮಾನ. ಮೆಡಿಕಲ್ ಕಾಲೇಜು ನಿರ್ಮಾಣದ ಯೋಜನೆ 600 ಕೋಟಿಯಿಂದ 900 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ಜವಾಬ್ದಾರಿ ಯಾರು?” ಎಂದರು.

ನಟ ಸೈಫ್‌ ಅಲಿ ಖಾನ್‌ ಗೆ ಭಾರಿ ಹಿನ್ನೆಡೆ: 15,000 ಕೋಟಿ ರೂಪಾಯಿ ಆಸ್ತಿ ಸರ್ಕಾರದ ಪಾಲು

ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಹಾಗೂ ತಾಯಿ ಶರ್ಮಿಳಾ ಪಟೌಡಿ, ಸೋದರಿಯರಾದ ಸೋಹಾ, ಸಬಾ ಅವರಿಗೆ ಕಾನೂನು ಹೋರಾಟದಲ್ಲಿ ತೀವ್ರ ಮುಖಭಂಗವಾಗಿದೆ. ನಟನ ಕುಟುಂಬಕ್ಕೆ ಸೇರಿದ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು  ಮಧ್ಯಪ್ರದೇಶದ ಹೈಕೋರ್ಟ್ ಮುಟ್ಟುಗೋಲು ಹಾಕಿದೆ.

ನಟ ಸೈಫ್ ಅಲಿ ಖಾನ್ ಹಾಗೂ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿದೆ. ಮಧ್ಯಪ್ರದೇಶದ ಭೋಪಾಲ್ ಹಾಗೂ ಸುತ್ತಮುತ್ತ ಪಟೌಡಿ ಫ್ಯಾಮಿಲಿಯು ಈ ಹಿಂದೆ ಭಾರಿ ಆಸ್ತಿಪಾಸ್ತಿ ಹೊಂದಿತ್ತು. ಈ ಆಸ್ತಿಗಳನ್ನೆಲ್ಲಾ ಮಧ್ಯಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎನಿಮಿ ಪ್ರಾಪರ್ಟಿ ಎಂದು ಘೋಷಿಸಿ ತನ್ನ ವಶಕ್ಕೆ ತೆಗೆದುಕೊಳ್ಳಲು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಸೈಫ್ ಅಲಿ ಖಾನ್ ಹಾಗೂ ಕುಟುಂಬಸ್ಥರು ಕೋರ್ಟ್‌ ಮೆಟ್ಟಿಲೇರಿದ್ದರು. ಸದ್ಯ ಸೈಫ್‌ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯ ಪ್ರದೇಶದ ಹೈಕೋರ್ಟ್‌ ವಜಾಗೊಳಿಸಿದೆ.

ಇದರ ಜೊತೆಗೆ 2000ನೇ ಇಸವಿಯಲ್ಲಿ ಕೆಳ ನ್ಯಾಯಾಲಯವು ಮಧ್ಯಪ್ರದೇಶದಲ್ಲಿರುವ ಪಟೌಡಿ ಕುಟುಂಬದ ಆಸ್ತಿಗೆ ಸೈಫ್ ಅಲಿಖಾನ್, ಸೋಹಾ, ಸಬಾ, ತಾಯಿ ಶರ್ಮಿಳಾ ಉತ್ತರಾಧಿಕಾರಿಗಳು ಎಂದು ಘೋಷಿಸಿದ್ದ ಆದೇಶ ರದ್ದುಪಡಿಸಿದೆ.

 

error: Content is protected !!