ಮುಂಬೈ: ಆಸ್ಪತ್ರೆ ಆವರಣದಲ್ಲಿ ಪಾಪರಾಜಿಗಳ ವರ್ತನೆಗೆ ಸಿಟ್ಟುಗೊಂಡು ತರಾಟೆಗೆ ತೆಗೆದುಕೊಂಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಆಸ್ಪತ್ರೆ ವಿವಾದದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅವರು, ಫೋಟೋಗ್ರಾಫರ್ಗಳ ಕ್ಷಮೆಯನ್ನು ಸ್ವೀಕರಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಮುಂಬೈನಲ್ಲಿ ನಡೆದ ‘ರಾಜಾ ಶಿವಾಜಿ’ ಚಿತ್ರದ ಸಕ್ಸಸ್ ಪಾರ್ಟಿಗೆ ಆಗಮಿಸಿದ್ದ ಸಲ್ಮಾನ್ ಖಾನ್ ಅವರನ್ನು ಕಂಡ ಪಾಪರಾಜಿಗಳು, ‘ಸಾರಿ ಭಾಯ್’ ಎಂದು ಒಟ್ಟಾಗಿ ಕ್ಷಮೆಯಾಚಿಸಿದರು. ಸಲ್ಮಾನ್ ಕೂಡ ಯಾವುದೇ ಅಸಮಾಧಾನ ತೋರದೆ, ನಗುಮುಖದಲ್ಲೇ ಪ್ರತಿಕ್ರಿಯಿಸಿದರು.
ಭದ್ರತಾ ಸಿಬ್ಬಂದಿ ಫೋಟೋಗ್ರಾಫರ್ಗಳನ್ನು ತಡೆಯಲು ಯತ್ನಿಸಿದಾಗ, ಸಲ್ಮಾನ್ ಸ್ವತಃ ಅವರನ್ನು ಹತ್ತಿರ ಬರಲು ಅವಕಾಶ ಮಾಡಿಕೊಟ್ಟರು. ಬಳಿಕ ‘ಏನಾಯ್ತು?’ ಎಂದು ಕೇಳಿದ ಅವರಿಗೆ ಪಾಪರಾಜಿಗಳು ಮತ್ತೆ ಕ್ಷಮೆ ಕೇಳಿದರು. ತಕ್ಷಣವೇ ‘ಎಲ್ಲವೂ ಸರಿ’ ಎಂಬಂತೆ ಕೈ ಸನ್ನೆ ಮಾಡಿದ ಸಲ್ಮಾನ್ ವಾತಾವರಣವನ್ನು ಸಾಮಾನ್ಯಗೊಳಿಸಿದರು.
ಈ ಸಂದರ್ಭ ಫೋಟೋಗ್ರಾಫರ್ ಒಬ್ಬ ‘ಲವ್ ಯೂ ಭಾಯ್’ ಎಂದು ಕೂಗಿದಾಗ, ಸಲ್ಮಾನ್ ನಗುತ್ತಾ ಪ್ರತಿಕ್ರಿಯಿಸಿದ ವಿಡಿಯೋ ಈಗ ವೈರಲ್ ಆಗಿದೆ. ಬಳಿಕ ‘ಸ್ವಲ್ಪ ಜೋರಾಗಿ ಹೇಳಿ… ಕೇಳಿಸಲಿಲ್ಲ’ ಎಂದು ತಮಾಷೆ ಮಾಡಿದ್ದೂ ಅಭಿಮಾನಿಗಳ ಗಮನ ಸೆಳೆದಿದೆ.
ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ, ಪಾಪರಾಜಿಗಳು ಆಸ್ಪತ್ರೆ ಹೊರಗಡೆ ಗದ್ದಲ ಸೃಷ್ಟಿಸಿ ‘ಮಾತೃಭೂಮಿ’ ಚಿತ್ರದ ಹೆಸರನ್ನು ಜೋರಾಗಿ ಕೂಗಿದ್ದರು. ಇದರಿಂದ ಕೋಪಗೊಂಡ ಸಲ್ಮಾನ್, ‘ನಿಮಗೆ ತಲೆ ಕೆಟ್ಟಿದೆಯಾ?’ ಎಂದು ಪ್ರಶ್ನಿಸಿ ಖಾಸಗಿತನದ ಮಹತ್ವದ ಬಗ್ಗೆ ಕಿಡಿಕಾರಿದ್ದರು.
ಆ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಹಾಕಿದ್ದ ಅವರು, ‘ನನ್ನ ನೋವಿನಿಂದ ಹಣ ಮಾಡಬೇಡಿ’ ಎಂದು ಪಾಪರಾಜಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಈಗ ಅದೇ ಪಾಪರಾಜಿಗಳೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸಿರುವ ಸಲ್ಮಾನ್ ಖಾನ್ ಅವರ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.



