ಗದಗ: ಭಾರೀ ಗಾಳಿ ಸಹಿತ ಸುರಿದ ಮಳೆಯಿಂದ ಗದಗ ನಗರದಲ್ಲಿ ಮತ್ತೆ ಅವಾಂತರ ಸೃಷ್ಟಿಯಾಗಿದ್ದು, ನಗರದ ಗಂಗಿಮಡಿ ಬಡಾವಣೆಯಲ್ಲಿ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಶೀಟುಗಳು ಗಾಳಿಗೆ ಹಾರಿಹೋಗಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿ ಶೀಟುಗಳು ಒಮ್ಮೆಲೆ ಕಿತ್ತು ಹಾರಿಹೋಗಿದ್ದು, ಮನೆಯೊಳಗಿದ್ದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಲ್ಲಿ ಕೆಲಕಾಲ ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಸಂದರ್ಭದಲ್ಲಿ ತಾಯಿ, ಗರ್ಭಿಣಿ ಮಗಳು ಹಾಗೂ ಮೊಮ್ಮಕ್ಕಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸ್ಥಳೀಯರನ್ನು ಆತಂಕಗೊಳಿಸಿದೆ.

ಶೀಟುಗಳು ಹಾರುತ್ತಿದ್ದ ವೇಳೆ ಮನೆಗಳೊಳಗೆ ಕೂಗಾಟ–ಚೀರಾಟ ಕೇಳಿಬಂದಿದ್ದು, ಜನರು ಭಯಭೀತರಾಗಿ ತಕ್ಷಣವೇ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಮಳೆಯ ನೀರು ಮನೆಗಳೊಳಗೆ ನುಗ್ಗಿದ ಪರಿಣಾಮ ದಿನಸಿ ವಸ್ತುಗಳು, ಅಡುಗೆ ಸಾಮಗ್ರಿಗಳು, ಬಟ್ಟೆ ಸೇರಿದಂತೆ ಬಹುತೇಕ ಸಾಮಗ್ರಿಗಳು ನೀರುಪಾಲಾಗಿವೆ. ಹಲವು ಮನೆಗಳಲ್ಲಿ ಅಡುಗೆ ಮಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
30ಕ್ಕೂ ಹೆಚ್ಚು ಕುಟುಂಬಗಳು ರಾತ್ರಿ ಪೂರ್ತಿ ಮನೆಗಳನ್ನು ತೊರೆದು ಹೊರಗೇ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಚಳಿಯಲ್ಲಿ ಪರದಾಡಿದ್ದಾರೆ.
ಘಟನೆಯ ನಂತರವೂ ಸ್ಥಳಕ್ಕೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ಸದಸ್ಯ ರವಿ ಕಮತರ ವಿರುದ್ಧ ಕಿಡಿಕಾರಿದ ಮಹಿಳೆಯರು, ಚುನಾವಣೆಯ ವೇಳೆ ಮತ ಕೇಳಲು ಬರುತ್ತಾರೆ ಆದರೆ ಸಂಕಷ್ಟದ ಸಂದರ್ಭದಲ್ಲಿ ಯಾರೂ ಕಾಣಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ತಕ್ಷಣ ಕಾಳಜಿ ಕೇಂದ್ರ ತೆರೆಯಬೇಕು ಹಾಗೂ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಮತ್ತು ತುರ್ತು ನೆರವು ಒದಗಿಸಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



