ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮತ್ತು ವಿದುಥಲೈ ಚಿರುತ್ತೈಗಲ್ ಕಚ್ಚಿ (VCK) ಪಕ್ಷಗಳ ನಾಯಕರನ್ನು ಸಚಿವರಾಗಿ ಸೇರಿಸಿಕೊಳ್ಳಲಾಗಿದೆ.
ಚೆನ್ನೈನ ಲೋಕ ಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಹಾಗೂ ಪಾಪನಾಶಂ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಂ. ಶಾಹಜಹಾನ್ ಮತ್ತು ವಿಸಿಕೆ ಪಕ್ಷದ ನಾಯಕ, ಟಿಂಡಿವನಂ ಕ್ಷೇತ್ರದ ಶಾಸಕ ವನ್ನಿ ಅರಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಚಿವ ಸಂಪುಟ ಹಂಚಿಕೆಯಂತೆ ಎ.ಎಂ. ಶಾಹಜಹಾನ್ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ನೀಡಲಾಗಿದ್ದು, ವಕ್ಫ್ ಬೋರ್ಡ್ನ ಜವಾಬ್ದಾರಿಯನ್ನೂ ವಹಿಸಲಾಗಿದೆ. ಇನ್ನು ವನ್ನಿ ಅರಸು ಅವರಿಗೆ ಸಾಮಾಜಿಕ ನ್ಯಾಯ ಖಾತೆ ನೀಡಲಾಗಿದ್ದು, ಅದರ ಅಡಿಯಲ್ಲಿ ಆದಿ ದ್ರಾವಿಡರ ಕಲ್ಯಾಣ ಹಾಗೂ ಹಿಲ್ ಟ್ರೈಬ್ಸ್ ವೆಲ್ಫೇರ್ ಇಲಾಖೆಗಳು ಸೇರಿವೆ.
ಈ ಹೊಸ ವಿಸ್ತರಣೆಯೊಂದಿಗೆ ಟಿವಿಕೆ ಸರ್ಕಾರದಲ್ಲಿ ಮೈತ್ರಿ ಪಕ್ಷಗಳ ಪ್ರಾತಿನಿಧ್ಯ ಮತ್ತಷ್ಟು ಬಲಗೊಂಡಿದೆ. ಇದಕ್ಕೂ ಮೊದಲು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ 23 ಮಂದಿಯನ್ನು ಸಚಿವರಾಗಿ ನೇಮಕ ಮಾಡಲಾಗಿತ್ತು. ಆ ವೇಳೆ ಕಾಂಗ್ರೆಸ್ ಪಕ್ಷವು ಸುಮಾರು 59 ವರ್ಷಗಳ ಬಳಿಕ ತಮಿಳುನಾಡು ಸರ್ಕಾರದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿತ್ತು.



