ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಮಾಜದ ಒಳಿತಿಗಾಗಿ ಪ್ರಾಣವನ್ನೇ ಅರ್ಪಿಸಿದ ಮಹನೀಯರ ತ್ಯಾಗ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.
ನಗರದ ಜಕಣಿಬಾವಿ ರಸ್ತೆಯಲ್ಲಿರುವ ಹುತಾತ್ಮರ ವರ್ತುಲದ ಸ್ಮಾರಕಕ್ಕೆ ಬುಧವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, 1921ರ ಜುಲೈ 1ರಂದು ಸಾರಾಯಿ (ಮದ್ಯ) ಮಾರಾಟ ನಿಷೇಧಕ್ಕೆ ಆಗ್ರಹಿಸಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಮಲ್ಲಿಕಸಾಬ್ ಬಿನ್ ಮರ್ದಾನಸಾಬ್, ಗೌಸುಸಾಬ್ ಬಿನ್ ಖಾದರಸಾಬ್ ಹಾಗೂ ಅಬ್ದುಲ್ ಗಫಾರ್ ಚೌಕತಾಯಿ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿದ್ದರು ಎಂದು ಸ್ಮರಿಸಿದರು.
ಸಮಾಜದ ಹಿತಕ್ಕಾಗಿ ವೈಯಕ್ತಿಕ ಬದುಕಿಗಿಂತ ಜನರ ಕಲ್ಯಾಣವನ್ನೇ ಮುಖ್ಯವೆಂದು ಪರಿಗಣಿಸಿ ಹೋರಾಡಿದ ಈ ಮೂವರು ಮಹನೀಯರ ಬಲಿದಾನ ಇತಿಹಾಸದಲ್ಲಿ ಅಜರಾಮರವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಅನೇಕ ಜನರ ತ್ಯಾಗ ಮತ್ತು ಬಲಿದಾನ ಅಗತ್ಯ ಎಂಬುದನ್ನು ಅವರ ಜೀವನವೇ ಸಾರುತ್ತದೆ. ಆದ್ದರಿಂದ ಅವರ ತ್ಯಾಗದ ಸಂದೇಶವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ ಮಾತನಾಡಿ, ಮದ್ಯ ನಿಷೇಧಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಆದರ್ಶಗಳು ಇಂದಿಗೂ ಸಮಾಜಕ್ಕೆ ಸ್ಫೂರ್ತಿಯಾಗಿವೆ. ಅವರ ಬಲಿದಾನ ಮದ್ಯಮುಕ್ತ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಶಕ್ತಿಯಾಗಿದ್ದು, ಅವರ ಆದರ್ಶಗಳನ್ನು ಜೀವಂತವಾಗಿಡುವುದು ಅಗತ್ಯ ಎಂದು ಹೇಳಿದರು.
ಕಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ ಮಾತನಾಡಿ, ಸಮಾಜದ ಒಳಿತಿಗಾಗಿ ಹೋರಾಡಿ ಹುತಾತ್ಮರಾದ ಈ ಮಹನೀಯರ ಸ್ಮರಣಾರ್ಥ ಪ್ರತಿವರ್ಷ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ. ಅವರ ತ್ಯಾಗ ಮತ್ತು ಆದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಆಕಳವಾಡಿ, ಧಾರವಾಡ ವಾಣಿಜ್ಯೋದ್ಯಮ ಸಂಘದ ಕಾರ್ಯದರ್ಶಿ ಸಂಗಮೇಶ್ವರಯ್ಯ ಲಿಂಬೆಣ್ಣದೇವರಮಠ, ಪಂಡಿತ ಮುಂಜಿ, ವೀರಣ್ಣ ಪತ್ತಾರ, ಚಂದ್ರಶೇಖರ ಅಮಿನಗಡ, ಶಶಿಧರ ನರೇಂದ್ರ, ಮಲ್ಲಿಕಾರ್ಜುನ ಚಿಕ್ಕಮಠ, ಕಾರ್ಯಕ್ರಮ ಸಂಘಟಕ ಉದಯ ಯಂಡಿಗೇರಿ, ಮಹಾಂತೇಶ ಲಿಂಬೆಣ್ಣದೇವರಮಠ, ಬಸವರಾಜ ಅಕ್ಕಿ, ಈರಣ್ಣ ಆಕಳವಾಡಿ, ವಿಜಯಾ ಲಿಂಬೆಣ್ಣದೇವರಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಹುತಾತ್ಮರ ರಕ್ತದಿಂದ ಬರೆದ ಇತಿಹಾಸವನ್ನು ಮರೆಯಬಾರದು; ಅವರ ತ್ಯಾಗವೇ ಉತ್ತಮ ಸಮಾಜ ನಿರ್ಮಾಣದ ಅಡಿಪಾಯ.”
ಸ್ನೇಹಲ್ ಆರ್. ಜಿಲ್ಲಾಧಿಕಾರಿ



