ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಪತ್ತೆಯಾದ ದಂಧೆ……
ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ಕ್ಯಾಂಟರ್ ವಾಹನವೊಂದರಲ್ಲಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದಾಗ ಗಜೇಂದ್ರಗಡ ಇಳಕಲ್ ಕ್ರಾಸ್ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು 140 ಕ್ವಿಂಟಲ್ ಅಕ್ಕಿಯೊಂದಿಗೆ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಏ.20ರಂದು ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಗಜೇಂದ್ರಗಡ ರಸ್ತೆಯ ಇಳಕಲ್ ಕ್ರಾಸ್ ಚೆಕ್ಪೋಸ್ಟ್ನಲ್ಲಿ ಕ್ಯಾಂಟರ್ ವಾಹದಲ್ಲಿ 280 ಪ್ಲಾಸ್ಟಿಲ್ ಚೀಲಗಳಲ್ಲಿ ತುಂಬಿದ ಅಂದಾಜು 3.22 ಲಕ್ಷ ರೂ. ಬೆಲೆಬಾಳುವ 140 ಕ್ವಿಂಟಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು.
ಚೆಕ್ಪೋಸ್ಟ್ನ ಅಧಿಕಾರಿಗಳು ವಾಹನದ ಪರಿಶೀಲನೆ ನಡೆಸಿ, ವಾಹನದ ಚಾಲಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ದೇವನೂರಿನ ಕುಮಾರ್ ವೆಂಕಟೇಶನನ್ನು ಅಕ್ಕಿಯ ದಾಖಲೆಗಳನ್ನು ಕೇಳಿದಾಗ ಸಮರ್ಪಕ ಉತ್ತರ ನೀಡಲಿಲ್ಲ.
ಸದರಿ ಪಡಿತರ ಅಕ್ಕಿಯನ್ನು ಅನಧಿಕೃತವಾಗಿ, ಸ್ವಂತ ಲಾಭದ ಉದ್ದೇಶದಿಂದ ಹೆಚ್ಚಿನ ಬೆಲೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಬಗ್ಗೆ ಗಜೇಂದ್ರಗಡ ತಾಲೂಕಾ ಆಹಾರ ನಿರೀಕ್ಷಕರಾದ ಪವಾಡಗೌಡ ಬಸನಗೌಡ ಮಾಲಿಪಾಟೀಲರು ಸಲ್ಲಿಸಿದ ದೂರಿನನ್ವಯ ಇ.ಸಿ ಕಾಯ್ದೆ-1955, ಪಿಡಿಎಸ್ ಆರ್ಡರ್-2016ರ ಪ್ರಕಾರ ಗಜೇಂದ್ರಗಡ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.