ಚೆನ್ನೈ ಸೂಪರ್ ಕಿಂಗ್ಸ್ ತಂಡವು 2025ರ ಐಪಿಎಲ್ನ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು. ಸ್ಯಾಮ್ ಕರನ್ ಅವರ 88 ರನ್ಗಳ ಅದ್ಭುತ ಇನ್ನಿಂಗ್ಸ್ನ ಹೊರತಾಗಿಯೂ, ಸಿಎಸ್ಕೆ 190 ರನ್ಗಳಿಗೆ ಸೀಮಿತವಾಯಿತು. ಪ್ರಭ್ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ಸುಲಭ ಗೆಲುವು ಸಾಧಿಸಿತು. ಚಾಹಲ್ ಅವರ ಅದ್ಭುತ ಬೌಲಿಂಗ್ ಕೂಡ ಪಂಜಾಬ್ ಗೆಲುವಿಗೆ ಕಾರಣವಾಯಿತು. ಈ ಸೋಲಿನೊಂದಿಗೆ ಸಿಎಸ್ಕೆ ಪ್ಲೇ ಆಫ್ನಿಂದ ಹೊರಬಿತ್ತು.
ಈ ಸೋಲಿನ ಬಳಿಕ ಮಾತನಾಡಿದ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೆವು. ಅದರಲ್ಲೂ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು. ಇದೇ ಮೊದಲ ಬಾರಿಗೆ ನಾವು ಸಾಕಷ್ಟು ರನ್ಗಳಿಸಲು ಯಶಸ್ವಿಯಾದೆವು.
ಆದರೆ ಇದು ಉತ್ತಮ ಸ್ಕೋರ್ ಆಗಿತ್ತೇ ಎಂದು ಕೇಳಿದರೆ, ಖಂಡಿತವಾಗಿಯೂ ಅಲ್ಲ. ಅಂತಿಮ ಹಂತದಲ್ಲಿ ಸ್ಕೋರ್ಗಳಿಸುವಲ್ಲಿ ನಾವು ಎಡವಿದೆವು. ಕೊನೆಯ ಓವರ್ಗಳ ವೇಳೆ ಮತ್ತಷ್ಟು ರನ್ಗಳಿಸಿದ್ದರೆ ಉತ್ತಮ ಪೈಪೋಟಿ ನೀಡಬಹುದಿತ್ತು ಎಂದು ಧೋನಿ ಹೇಳಿದ್ದಾರೆ.
ನಮ್ಮ ಪರ ಡೆವಾಲ್ಡ್ ಬ್ರೆವಿಸ್ ಮತ್ತು ಸ್ಯಾಮ್ ಕರನ್ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಆದರೆ ಕೊನೆಯ 4 ಎಸೆತಗಳಿರುವಾಗಲೇ ನಾವು ಆಲೌಟ್ ಆಗಿದ್ದು ದುಬಾರಿಯಾಯಿತು. ಅಂತಿಮ ಹಂತದಲ್ಲಿ ನಾಲ್ವರು ಬ್ಯಾಟರ್ಗಳು ವಿಕೆಟ್ ಒಪ್ಪಿಸಿದ್ದು ಸ್ಕೋರ್ ಕಡಿಮೆಯಾಗುವಂತೆ ಮಾಡಿತು.
ಇದಾಗ್ಯೂ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದವು. ಹೀಗಾಗಿ ಬೌಲರ್ಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಿದ್ದೆವು. ಆದರೆ ನಮ್ಮ ಫೀಲ್ಡರ್ಗಳು ಮಾಡಿದ ತಪ್ಪಿನಿಂದಾಗಿ ಸೋಲನುಭವಿಸಬೇಕಾಯಿತು. ನಾವು ಕೈ ಬಿಟ್ಟ ಕೆಲ ಕ್ಯಾಚ್ಗಳು ಇಡೀ ಪಂದ್ಯದ ಮೇಲೆ ಪರಿಣಾಮ ಬೀರಿತು. ಕೈಚೆಲ್ಲಿದ ಕ್ಯಾಚ್ಗಳಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಬೇಕಾಯಿತು ಎಂದು ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.