ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಸನ್ರೈಸ್ ಆಸ್ಪತ್ರೆಯಲ್ಲಿ ನ.14ರಂದು ಮಕ್ಕಳ ದಿನಾಚರಣೆ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮದ ಸಂಪ್ರದಾಯ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಅಗಡಿ ಸಂಸ್ಥೆಯ ಅಧ್ಯಕ್ಷ ಹರ್ಷವರ್ಧನ ವೆಂಕಪ್ಪ ಅಗಡಿ ಮಾತನಾಡಿ, ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬಂತೆ ಮಹಿಳೆಯರಲ್ಲಿ ಅಪಾರವಾದ ಶಕ್ತಿ ಅಡಗಿರುತ್ತದೆ. ಜಗದ ಸೃಷ್ಟಿಯೇ ಹೆಣ್ಣಾಗಿದ್ದು, ತಾಯಿ, ಪತ್ನಿ, ಸ್ನೇಹಿತೆ, ಮಗಳು ಎಲ್ಲವನ್ನೂ ನಿಭಾಯಿಸುತ್ತಾಳೆ. ತಾಯಂದಿರ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ತಾಯಿ ಆರೋಗ್ಯದಿಂದಿದ್ದರೆ ಮಗು ಆರೋಗ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ತಂದೆಯವರಾದ ದಿ. ವೆಂಕಪ್ಪನವರು ಪಟ್ಟಣದಲ್ಲಿ ಶಿಕ್ಷಣ ಸೇವೆಯ ಜತೆಗೆ ಆಸ್ಪತ್ರೆ, ದೇವಸ್ಥಾನ ನಿರ್ಮಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಭಾಗದ ಜನರ ಸಹಕಾರ ಸ್ಮರಣೀಯ ಎಂದರು.
ಅಗಡಿ ಸಂಸ್ಥೆಯ ಉಪಾಧ್ಯಕ್ಷರಾದ ಗೀತಾ ಹರ್ಷವರ್ಧನ ಅಗಡಿ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಉಡಿ ತುಂಬಿ ಶುಭ ಹಾರೈಸಿದರು. ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಡಾ. ರಾಜಶೇಖರ ಮೂಲಿಮನಿ, ವೈದ್ಯಕೀಯ ಅಧಿಕಾರಿ ಡಾ. ಸುಜಾತಾ ಸಂಗೂರ, ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ರೇಷ್ಮಾ ರಾಠೋಡ, ಚಿಕ್ಕ ಮಕ್ಕಳ ತಜ್ಞ ಡಾ. ಶಶಿಕಿರಣ ಹೊಸಮನಿ, ಶಸ್ತ್ರ ಚಿಕಿತ್ಸಾ ತಜ್ಞ ಡಾ. ಕೃಷ್ಣಾರೆಡ್ಡಿ ನಾವಳ್ಳಿ, ಚರ್ಮರೋಗ ತಜ್ಞ ಡಾ. ಎಂ.ಎಸ್. ಪಾಟೀಲ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಡಾ. ಶೃತಿ ಹೂವಿನ ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.


