ಚಿಕ್ಕಮಗಳೂರು: ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ವಿವಾದದ ಸರಣಿ ಮುಂದುವರಿದಿದೆ. ಟಿಪ್ಪು ಕಟೌಟ್ ವಿಡಿಯೋಗೆ ದೇಶವಿರೋಧಿ ಹಾಡು ಬಳಕೆ ಆರೋಪದ ಕುರಿತು ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ, ಟಿಪ್ಪು ನಗರದಲ್ಲಿ ‘ಐ ಲವ್ ಮೊಹಮ್ಮದ್’ ಬ್ಯಾನರ್ ಅಳವಡಿಸಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಸಲಾಗಿದ್ದು, ಕಳೆದ ವರ್ಷ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದೇ ಘೋಷವಾಕ್ಯದಿಂದ ಆರಂಭವಾಗಿದ್ದ ವಿವಾದವನ್ನು ಮತ್ತೆ ನೆನಪಿಸಿದೆ.
ಕಾನ್ಪುರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ‘ಐ ಲವ್ ಮೊಹಮ್ಮದ್’ ಬ್ಯಾನರ್ ಬಳಕೆಯಾದ ಬಳಿಕ ಘೋಷವಾಕ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರ ಮುಂಬೈ, ತೆಲಂಗಾಣ, ಹೈದರಾಬಾದ್, ನಾಗ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೇ ಹೆಸರಿನಲ್ಲಿ ರ್ಯಾಲಿಗಳು ನಡೆದಿದ್ದವು.
ರಾಜ್ಯದಲ್ಲೂ ‘ಐ ಲವ್ ಮೊಹಮ್ಮದ್’ ಬ್ಯಾನರ್ ಹಾಗೂ ಘೋಷಣೆ ವಿಚಾರ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿರುವುದಲ್ಲ. ಬೆಳಗಾವಿ, ದಾವಣಗೆರೆ, ಆಳಂದ ಸೇರಿದಂತೆ ವಿವಿಧೆಡೆ ಈ ಸಂಬಂಧ ವಿವಾದಗಳು ಉಂಟಾಗಿದ್ದವು. ಕೆಲವು ಸಂದರ್ಭಗಳಲ್ಲಿ ಪೊಲೀಸ್ ಪ್ರಕರಣಗಳೂ ದಾಖಲಾಗಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.
ಇದೀಗ ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದದ ಬೆನ್ನಲ್ಲೇ ಇದೇ ಘೋಷವಾಕ್ಯದ ಬ್ಯಾನರ್ ಕಾಣಿಸಿಕೊಂಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಘಟನೆಯ ಕುರಿತು ಮುಂದಿನ ಕ್ರಮ ಹಾಗೂ ಆಡಳಿತದ ಪ್ರತಿಕ್ರಿಯೆ ಏನು ಎಂಬುದು ಇದೀಗ ಕುತೂಹಲ ಮೂಡಿಸಿದೆ.



