ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಎಐಎಡಿಎಂಕೆ ಪಕ್ಷದ ಎಸ್.ಪಿ. ವೇಲುಮಣಿ ಹಾಗೂ ಸಿ.ವಿ. ಷಣ್ಮುಗಂ ಬಣಕ್ಕೆ ಸೇರಿದ ಮೂವರು ಶಾಸಕರು ತಮ್ಮ ಸ್ಥಾನಗಳಿಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಮಧುರಾಂತಕಂ ಕ್ಷೇತ್ರದ ಶಾಸಕ ಮರಗತಂ ಕುಮಾರ್ವೇಲ್, ಪೆರುಂದುರೈ ಕ್ಷೇತ್ರದ ಶಾಸಕ ಜಯಕುಮಾರ್ ಹಾಗೂ ಧಾರಾಪುರಂ ಕ್ಷೇತ್ರದ ಶಾಸಕಿ ಸತ್ಯಭಾಮಾ ಅವರು ತಮಿಳುನಾಡು ವಿಧಾನಸಭೆ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.
ರಾಜೀನಾಮೆ ನೀಡಿದ ಬಳಿಕ ಈ ಮೂವರು ಶಾಸಕರು ಸಚಿವ ಆಧವ್ ಅರ್ಜುನ್ ಅವರನ್ನು ಭೇಟಿ ಮಾಡಿ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಈ ಬೆಳವಣಿಗೆಯೊಂದಿಗೆ ತಮಿಳುನಾಡು ವಿಧಾನಸಭೆಯಲ್ಲಿ ಖಾಲಿ ಸ್ಥಾನಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮುಖ್ಯಮಂತ್ರಿ ವಿಜಯ್ ರಾಜೀನಾಮೆ ನೀಡಿದ ಬಳಿಕ ತಿರುಚ್ಚಿ ಪೂರ್ವ ಕ್ಷೇತ್ರ ಈಗಾಗಲೇ ಖಾಲಿಯಾಗಿದ್ದು, ಇದೀಗ ಇನ್ನೂ ಮೂರು ಸ್ಥಾನಗಳು ತೆರವಾಗಿವೆ.
ಇತ್ತೀಚಿನ ವಿಧಾನಸಭಾ ಚುನಾವಣೆಯ ಬಳಿಕ ಎಐಎಡಿಎಂಕೆ ಪಕ್ಷದೊಳಗೆ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿರುದ್ಧ ಅಸಮಾಧಾನಗೊಂಡಿರುವ ಎಸ್.ಪಿ. ವೇಲುಮಣಿ ಹಾಗೂ ಸಿ.ವಿ. ಷಣ್ಮುಗಂ ನೇತೃತ್ವದ ಸುಮಾರು 30 ಶಾಸಕರ ಗುಂಪು, ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿತ್ತು.
ಈ ರಾಜಕೀಯ ಬೆಳವಣಿಗೆ ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಎಐಎಡಿಎಂಕೆಯಲ್ಲಿ ಇನ್ನಷ್ಟು ಬದಲಾವಣೆಗಳ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಜೋರಾಗಿವೆ.



