ವಿಶಾಖಪಟ್ಟಣಂ: ಪೂಜೆ ಮುಗಿದ ನಂತರ ಕಸದ ಜೊತೆಗೆ ತಿಳಿಯದೇ ಚರಂಡಿಗೆ ಎಸೆದಿದ್ದ ಸುಮಾರು 5 ಗ್ರಾಂ ಚಿನ್ನದ ಆಭರಣಗಳು ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಮರಳಿ ಸಿಕ್ಕಿರುವ ರೋಚಕ ಘಟನೆ ವಿಶಾಖಪಟ್ಟಣಂನ ಶ್ರೀನಗರದಲ್ಲಿ ನಡೆದಿದೆ.
ಗಾಜುವಾಕ ಶ್ರೀನಗರದ ನಿವಾಸಿಗಳಾದ ಉಡುಮುಲ ರಮೇಶ್ ಹಾಗೂ ದಿವ್ಯಾ ದಂಪತಿ ಈ ತಿಂಗಳ 21ರಂದು ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ದೇವಿಗೆ ಸುಮಾರು 8 ತೊಲ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿದ್ದರು. ಮೂರು ದಿನಗಳ ನಂತರ ರಮೇಶ್ ದೇವಿಯ ಮೇಲಿದ್ದ 3 ತೊಲದ ಹಾರ ಮತ್ತು ಕಾಸನ್ನು ಮಾತ್ರ ತೆಗೆದುಕೊಂಡಿದ್ದು, ಹೂವುಗಳ ನಡುವೆ ಇದ್ದ 1 ಬ್ರೇಸ್ಲೆಟ್, 2 ಚೈನ್ಗಳು ಹಾಗೂ 3 ಉಂಗುರಗಳು ಸೇರಿದಂತೆ ಉಳಿದ 5 ತೊಲ ಚಿನ್ನದ ಆಭರಣಗಳನ್ನು ಗಮನಿಸದೇ ಪೂಜೆಗೆ ಬಳಸಿದ್ದ ಹೂವು-ಸಾಮಗ್ರಿಗಳ ಜೊತೆಗೆ ಡ್ರೈನೇಜ್ಗೆ ಎಸೆದು ಮನೆಗೆ ಮರಳಿದ್ದರು.
ಮನೆಗೆ ಬಂದ ನಂತರ ಚಿನ್ನದ ಆಭರಣಗಳು ಇಲ್ಲದಿರುವುದನ್ನು ಗಮನಿಸಿದ ದಿವ್ಯಾ, ಪತಿಗೆ ತಿಳಿಸಿದ್ದರು. ತಕ್ಷಣವೇ ಕಾಲುವೆ ಬಳಿ ಹೋಗಿ ಹುಡುಕಿದರೂ ಚಿನ್ನ ಸಿಗದ ಕಾರಣ ತೀವ್ರ ಆತಂಕಗೊಂಡ ದಂಪತಿ ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಘಟನೆಯ ಗಂಭೀರತೆ ಅರಿತ ಸಿಐ ಕೇಶವರಾವ್, ತಕ್ಷಣವೇ ಕಾನ್ಸ್ಟೇಬಲ್ ಮತ್ತು ಹೋಂ ಗಾರ್ಡ್ಗಳನ್ನು ಸ್ಥಳಕ್ಕೆ ಕಳುಹಿಸಿ, ಜೆಸಿಬಿ ಸಹಾಯದಿಂದ ಡ್ರೈನೇಜ್ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸಿ ತೀವ್ರ ಶೋಧ ನಡೆಸಿದರು.
ನೀರು ಕಡಿಮೆಯಾಗುತ್ತಿದ್ದಂತೆ ಸ್ವಲ್ಪ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಭರಣಗಳು ಒಂದೊಂದಾಗಿ ಪತ್ತೆಯಾಗಿದ್ದು, ಪೊಲೀಸರು ಎಲ್ಲಾ 5 ಗ್ರಾಂ ಆಭರಣಗಳನ್ನು ಸುರಕ್ಷಿತವಾಗಿ ಹೊರತೆಗೆದು ದಂಪತಿಗೆ ಹಸ್ತಾಂತರಿಸಿದರು. ಹಬ್ಬ ಹಾಗೂ ಪೂಜೆಗಳ ಸಂದರ್ಭದಲ್ಲಿ ಬೆಲೆಬಾಳುವ ಆಭರಣ ಮತ್ತು ವಸ್ತುಗಳ ವಿಷಯದಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆ ಸಿಐ ಕೇಶವರಾವ್ ಹೇಳಿದ್ದಾರೆ.



